" ಜನ್ಮಕುಂಡಲಿಯಲ್ಲಿರುವ ದ್ವಾದಶ ಭಾವಗಳು ಏನನ್ನು ಸೂಚಿಸುತ್ತವೆ ಗೊತ್ತಾ "
ನಿಮ್ಮ ಜನ್ಮಕುಂಡಲಿಯ ಆರನೇ ಸ್ಥಾನದಲ್ಲಿ ರಾಹುವಿದ್ದಾನೆ, ಪಂಚಮ ಭಾವದಲ್ಲಿ ಗುರುವಿದ್ದಾನೆ ಎನ್ನುವುದನ್ನು ಕೇಳಿರುತ್ತೀರಿ. ಈ ಜನ್ಮಕುಂಡಲಿಯಲ್ಲಿ ಭಾವಗಳು ಎಂದರೆ ಏನು ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ನಿಮ್ಮ ಜನ್ಮಕುಂಡಲಿಯಲ್ಲಿ ಶನಿಯು ಆರನೇ ಭಾವದಲ್ಲಿ ಇದ್ದರೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ. ಗುರುವು ಪಂಚಮ ಭಾವದಲ್ಲಿದ್ದರೆ ಸಂತಾನ ಪ್ರಾಪ್ತಿಯಾಗುವುದು ಎಂದು ಜ್ಯೋತಿಷಿಗಳು ಹೇಳಿರುವುದನ್ನು ಕೇಳಿರುತ್ತೀರಿ. ಈ ಪಂಚಮ ಭಾವ, ದಶಮ ಭಾವ ಎಂದರೆ ಏನು ಎನ್ನುವುದರ ಬಗ್ಗೆ ಸಂದೇಹವಿರಬಹುದು. ಈ ಸಂದೇಹಕ್ಕೆ ಉತ್ತರ ಇಲ್ಲಿದೆ ನೋಡಿ.
ಪ್ರತಿಯೊಬ್ಬರ ಜನ್ಮಕುಂಡಲಿಯಲ್ಲಿಯೂ ದ್ವಾದಶ ಮನೆಗಳು ಇರುತ್ತವೆ. ದ್ವಾದಶ ಅಂದರೆ ಹನ್ನೆರಡು. ನಿಮ್ಮ ಜಾತಕದಲ್ಲಿ ಲಗ್ನ ಎಂದು ಗುರುತಿಸಿರುತ್ತಾರೋ ಅದೇ ಪ್ರಥಮ ಭಾವವಾಗಿರುತ್ತದೆ. ಲಗ್ನ ಪ್ರಥಮ ಭಾವವಾದರೆ ಅದರ ಮುಂದಿನ ಮನೆ ದ್ವಿತೀಯ ಭಾವವಾಗಿರುತ್ತದೆ. ಹೀಗೆ ಲಗ್ನವು ಸೇರಿ ಒಟ್ಟು ಹನ್ನೆರಡು ಮನೆಗಳು ಕುಂಡಲಿಯಲ್ಲಿ ಇರುತ್ತವೆ. ಹೀಗೆ ಇರುವಂತಹ ಹನ್ನೆರಡು ಮನೆಗಳೂ ವ್ಯಕ್ತಿಯ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹನ್ನೆರಡೂ ಮನೆಗಳು ಯಾವ ಅಂಶವನ್ನು ಪ್ರತಿನಿಧಿಸುತ್ತವೆ ಎನ್ನುವುದನ್ನು ನೋಡೋಣ ಬನ್ನಿ.
ಪ್ರಥಮ ಭಾವ
ಪ್ರಥಮ ಸ್ಥಾನ ಅಂದರೆ ಪ್ರಥಮ ಭಾವವನ್ನು ತನು ಸ್ಥಾನ ಎಂದು ಕರೆಯುತ್ತಾರೆ. ಇದು ಶರೀರ ಸುಖ, ಆರೋಗ್ಯ, ವರ್ಣ, ಆಚರಣೆ, ಆಯುಷ್ಯ, ಸ್ವಭಾವ, ಗುಣ, ಧರ್ಮ, ಮನದ ಸ್ಥಿರತೆ ಇದು ಪ್ರಥಮ ಭಾವದ ಲಕ್ಷಣ. ಯಾವುದಾದರೂ ದೋಷ ಪೂರಿತ ಗ್ರಹಗಳು ಈ ಸ್ಥಾನದಲ್ಲಿದ್ದರೆ ಆರೋಗ್ಯದಲ್ಲಿ ಸಮಸ್ಯೆ, ಮಾನಸಿಕ ಒತ್ತಡದಂತಹ ಸಮಸ್ಯೆಗಳು ಕಂಡುಬರುವುದು, ಅದೇ ಉತ್ತಮ ಸ್ಥಾನದಲ್ಲಿದ್ದರೆ ಉತ್ತಮ ಆರೋಗ್ಯ, ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ, ಹೀಗೆ ಶುಭ ಫಲಗಳು ಕಂಡುಬರುತ್ತವೆ.
ದ್ವಿತೀಯ ಭಾವ
ಮನುಷ್ಯನ ಸಂಪತ್ತಿನ ಸ್ಥಿತಿ, ದ್ರವ್ಯ, ನೇತ್ರ, ಮುಖ, ವಾಕ್ ಸಿದ್ಧಿ, ಸಂಪತ್ತಿನಲ್ಲಿ ಏಳಿಗೆ ಇದು ದ್ವಿತೀಯ ಭಾವದ ಲಕ್ಷಣವಾಗಿದೆ.
ತೃತೀಯ ಭಾವ
ತೃತೀಯ ಸ್ಥಾನವನ್ನು ಸಹೋದರ ಸ್ಥಾನವೆಂದು ಕರೆಯುತ್ತಾರೆ. ಪರಾಕ್ರಮ, ವ್ಯಕ್ತಿಯ ಸೋದರಿ- ಸಹೋದರರೊಂದಿಗಿನ ಬಾಂಧವ್ಯ ಇದು ತೃತೀಯ ಭಾವವೆಂದು ಕರೆಯುತ್ತಾರೆ. ಇದನ್ನು ಸಹಜ ಸ್ಥಾನವೆಂದೂ ಕರೆಯುತ್ತಾರೆ.
ಚತುರ್ಥ ಭಾವ
ನಾಲ್ಕನೇ ಸ್ಥಾನವನ್ನು ಸುಖ ಸ್ಥಾನವೆಂದು ಕರೆಯಲಾಗುತ್ತದೆ. ಮನೆ, ಆಸ್ತಿ, ವಾಹನ, ತಾಯಿಯ ಸ್ವಭಾವ, ವಿದ್ಯೆ, ಆಯುಷ್ಯ ವಿಚಾರ ಈ ಭಾವದ ಲಕ್ಷಣವಾಗಿದೆ. ಶುಭ ಗ್ರಹಗಳಿದ್ದರೆ ಒಳ್ಳೆಯ ಫಲಗಳನ್ನೂ, ಪಾಪ ಗ್ರಹಗಳಿದ್ದರೆ ಕೆಟ್ಟಫಲವನ್ನೂ ಅನುಭವಿಸಬೇಕಾಗಬಹುದು.
ಪಂಚಮ ಭಾವ
ಪಂಚಮ ಭಾವ ಅಂದರೆ ಐದನೇ ಸ್ಥಾನವನ್ನು ಸುತಸ್ಥಾನವೆಂದು ಕರೆಯಲಾಗುತ್ತದೆ. ಸಂತತಿಯ ಸೌಖ್ಯ, ವಿದ್ಯೆ, ಬುದ್ಧಿ, ಧೋರಣೆ, ಚಾತುರ್ಯ ಇದು ಐದನೇ ಭಾವದ ಲಕ್ಷಣವಾಗಿದೆ. ಈ ಭಾವದಲ್ಲಿ ಗುರುವಿದ್ದರೆ ಪುತ್ರಯೋಗವೆಂದೂ, ಬುಧ, ಶನಿಗಳಿದ್ದರೆ ದತ್ತು ಪುತ್ರಯೋಗವೆಂದೂ ಹೇಳಲಾಗುತ್ತದೆ. ರಾಹುವಿದ್ದರೆ ಸರ್ಪದೋಷ ಕಂಡುಬರಬಹುದು.
ಷಷ್ಠಮ ಭಾವ
ಆರನೇ ಸ್ಥಾನವನ್ನು ರಿಪು ಭಾವವೆಂದು ಕರೆಯುತ್ತಾರೆ. ವ್ಯಕ್ತಿಗೆ ಬರುವ ನಾನಾ ರೋಗಗಳು, ಶತ್ರು ಪೀಡೆ, ಭಯ, ಸಂಕಟ, ಕಷ್ಟ, ಅಪಮಾನ, ಧಕ್ಕೆ, ವಿಚಾರ ಇದು ಆರನೇ ಭಾವದ ಲಕ್ಷಣ. ಈ ಸ್ಥಾನದಲ್ಲಿ ರಾಹುವಿದ್ದರೆ ಒಳ್ಳೆಯದೆಂದು ಹೇಳಲಾಗುತ್ತದೆ.
ಸಪ್ತಮ ಭಾವ
ಏಳನೇ ಸ್ಥಾನವನ್ನು ಜಾಯಾಸ್ಥಾನವಾಗಿದ್ದು, ವಿವಾಹ, ಸ್ತ್ರೀ ಸೌಖ್ಯ, ಪತಿಪತ್ನಿಯರಲ್ಲಿ ಪ್ರೇಮ, ವ್ಯಾಪಾರ, ಪತ್ನಿಯ ಸ್ವಭಾವ, ರೂಪ, ಲಾವಣ್ಯ, ವರ್ತನೆ, ಅಭಿಮಾನ, ಗರ್ವ, ಪ್ರವಾಸ, ಗರ್ಭಾಶಯದ ವಿಚಾರ ಇವು ಏಳನೇ ಭಾವದ ಲಕ್ಷಣ. ಸಪ್ತಮ ಭಾವದಲ್ಲಿ ಶುಕ್ರಗ್ರಹವಿದ್ದರೆ ಒಳ್ಳೆಯ ಸಂಗಾತಿಯನ್ನು ಪಡೆದು ಅದರ್ಶ ದಾಂಪತ್ಯವನ್ನು ನಡೆಸುತ್ತಾರೆಂದು ಹೇಳಲಾಗುತ್ತದೆ.
ಅಷ್ಟಮ ಭಾವ
ಎಂಟನೇ ಸ್ಥಾನವನ್ನು ಮೃತ್ಯು ಸ್ಥಾನವೆಂದು ಕರೆಯಲಾಗುತ್ತದೆ. ಮರಣ ಭಯ, ಆಕಸ್ಮಿಕವಾಗಿ ದ್ರವ್ಯಪ್ರಾಪ್ತಿ, ವಿಷಜಂತುಗಳ ಭಯ, ಶತ್ರು, ಅಪಮೃತ್ಯು, ಆತ್ಮಹತ್ಯೆ, ಅಪಘಾತ ಇವು ಎಂಟನೇ ಭಾವದ ಲಕ್ಷಣಗಳು. ಅಷ್ಟಮ ಸ್ಥಾನದಲ್ಲಿ ಶನಿಯಿದ್ದರೆ ಶತಾಯುಷಿಯೆಂದು ಹೇಳಲಾಗುತ್ತದೆ.
ನವಮ ಭಾವ
ಒಂಭತ್ತನೇ ಭಾವವನ್ನು ಧರ್ಮಸ್ಥಾನ ಎಂದು ಕರೆಯುತ್ತಾರೆ. ತೀರ್ಥಯಾತ್ರೆ, ಪ್ರವಾಸ, ಭಾಗ್ಯ, ಕರ್ಮಫಲ, ಧರ್ಮಾಚರಣೆ, ದೇವರ ದರ್ಶನ ಸೇವೆ ಇವು ಈ ಸ್ಥಾನದ ಲಕ್ಷಣಗಳು. ಈ ಸ್ಥಾನದಲ್ಲಿ ಗುರುವು ಬಲಿಷ್ಠನಾಗಿದ್ದರೆ ಅಥವಾ ಶುಭ ಗ್ರಹಗಳಿದ್ದರೆ ಅತ್ಯಂತ ಧಾರ್ಮಿಕನೂ, ಭಾಗ್ಯವಂತನೂ ಆಗುತ್ತಾನೆ. ಪಾಪ ಗ್ರಹಗಳಿದ್ದರೆ ವಿರುದ್ಧ ಫಲವನ್ನು ಅನುಭವಿಸಬೇಕಾಗಬಹುದು.
ದಶಮ ಭಾವ
ಹತ್ತನೇ ಸ್ಥಾನವನ್ನು ಕರ್ಮಸ್ಥಾನವೆಂದು ಕರೆಯುತ್ತಾರೆ. ಪಿತೃಸುಖ, ತಂದೆಯ ಸ್ವಭಾವ, ಗುಣ, ರೂಪ, ಉದ್ಯೋಗ, ಸಾಧನೆ, ಕೀರ್ತಿ, ವಿಚಾರ ಇದು ಹತ್ತನೇ ಭಾವದ ಲಕ್ಷಣವಾಗಿದೆ. ಹತ್ತನೇ ಭಾವದಲ್ಲಿ ಸೂರ್ಯನಿದ್ದರೆ ಸರ್ಕಾರಿ ಅಧಿಕಾರಿಯಾಗುವ ಯೋಗವಿರುತ್ತದೆ. ಪಾಪಗ್ರಹಗಳಿದ್ದರೆ ನಿರುದ್ಯೋಗಿಯೂ, ಆಲಸಿಯೂ ಆಗುತ್ತಾನೆ.
ಏಕಾದಶ ಭಾವ
ಹನ್ನೊಂದನೇ ಸ್ಥಾನವನ್ನು ಲಾಭ ಸ್ಥಾನವೆಂದು ಕರೆಯಲಾಗುತ್ತದೆ. ದ್ರವ್ಯ, ಸಂಪಾದನೆ, ಗೆಳೆಯರ ಸುಖ, ಆಪ್ತ, ಪರಿವಾರದವರ ಸುಖ ಇದು ಹನ್ನೊಂದನೇ ಭಾವದ ಲಕ್ಷಣವಾಗಿದೆ. ಇಲ್ಲಿ ಶುಭಗ್ರಹಗಳಿದ್ದರೆ ಜೀವನದಲ್ಲಿ ಒಳ್ಳೆಯ ಲಾಭವನ್ನು ಪಡೆಯುವಂತಹ ಲಕ್ಷಣಗಳಿವೆ.
ದ್ವಾದಶ ಭಾವ
ಹನ್ನೆರಡನೇ ಸ್ಥಾನವನ್ನು ವ್ಯಯಸ್ಥಾನವೆಂದು ಕರೆಯುತ್ತಾರೆ. ಶತ್ರು ಭಯ, ಮಾನಹಾನಿ, ಕ್ಲೇಶ, ಶಾರೀರಿಕ ಆಪತ್ತು, ಜೀವನದಲ್ಲಿ ಕಷ್ಟ, ಅಪಘಾತ, ಬಂಧನ, ಗೆಳೆಯನ ಸಲುವಾಗಿ ದ್ರವ್ಯ ನಾಶ ಇದು ಹನ್ನೆರಡನೇ ಭಾವದ ಲಕ್ಷಣವಾಗಿದೆ. ಇಲ್ಲಿ ಕೇತುವಿದ್ದರೆ ಒಳ್ಳೆಯ ಆಧ್ಯಾತ್ಮ ಜೀವಿಯೆಂದೂ, ಚಂದ್ರನು ಕ್ಷೀಣವಾಗಿದ್ದರೆ ಅತ್ಯಂತ ವಿಕಾರಿಯೂ, ಪಾತಕಿ ಎಂದು ಹೇಳಲಾಗುತ್ತದೆ.
ಪೋಸ್ಟ್ನ ಮೂಲಕ ನಿಮ್ಮ ಹಾಗೂ ನಿಮ್ಮ ಮಕ್ಕಳ ಜಾತಕ( ಜನ್ಮ ಕುಂಡಲಿ )ಯನ್ನು ಪಡೆಯಲು ಸಂಪರ್ಕಿಸಿ.
9108668047
ಜೋತಿಷ್ಯ ಸಲಹೆ ಹಾಗು ಪರಿಹಾರ whatsup ಕೂಡ ಮಾಡಿ 👏