ಸಂಕಷ್ಟ ಹರ ಚತುರ್ಥಿ ಮಹತ್ವ ಓದಿ ತಿಳಿಯಿರಿ .ತಿಳಿದು ಅಚರಿಸಿ .
ವಕ್ರತುಂಡ, ಗಜವದನ ಗಣೇಶ ವಿಘ್ನನಿವಾರಕನೆಂದೇ ಪ್ರಸಿದ್ಧ. ಇಂತಹ ವಿಘ್ನನಿವಾರಕನ ಆರಾಧನೆಗೆಗಾಗಿಯೇ ಪ್ರತಿ ತಿಂಗಳಲ್ಲಿ ಒಂದು ದಿನವನ್ನು ವಿಶೇಷವಾಗಿ ನಿಗದಿಪಡಿಸಲಾಗಿದ್ದು ಸಂಕಷ್ಟ ಹರ ಚತುರ್ಥಿ ಎಂದೇ ಹೆಚ್ಚು ಪರಿಚಿತ.
ಪ್ರತಿ ತಿಂಗಳ ಕೃಷ್ಣಪಕ್ಷದ 4 ನೆಯ ದಿನವನ್ನು(ಚತುರ್ಥಿ)ಯನ್ನು ಸಂಕಷ್ಟಹರ ಚತುರ್ಥಿ ಎಂದು ಆಚರಿಸಲಾಗುತ್ತದೆ. ಸಂಕಷ್ಟ ಹರ ಚತುರ್ಥಿಯ ಮತ್ತೊಂದು ವಿಶೇಷವೇನೆಂದರೆ ಮಂಗಳವಾರದಂದು ಸಂಕಷ್ಟಹರ ಚತುರ್ಥಿ ಬಂದರೆ ಆ ವ್ರತಕ್ಕೆ ಮತ್ತಷ್ಟು ಹೆಚ್ಚಿನ ಮಹತ್ವವಿದ್ದು, ಅದನ್ನು ಅಂಗಾರಕ (ಮಂಗಳ) ಚತುರ್ಥಿ ಎಂಬ ಹೆಸರಿನಲ್ಲಿ ಆಚರಣೆ ಮಾಡಲಾಗುತ್ತದೆ.
ಸಂಕಷ್ಟ ಹರ ಚತುರ್ಥಿಯ ಮಹತ್ವ:
ಸಂಕಷ್ಟಹರ ಚತುರ್ಥಿಯ ಆಚರಣೆಗಳಿಗೆ ಸನಾತನ ಧರ್ಮದಲ್ಲಿ ಎರಡು ಪ್ರಮುಖ ಹಿನ್ನೆಲೆಗಳಿವೆ. ಮೊದಲನೆಯದ್ದು ಚತುರ್ಥಿಯ ದಿನದಂದು ಅಂದರೆ ಯಾವ ದಿನ ಸಂಕಷ್ಟಹರ ಚತುರ್ಥಿಯ ಆಚರಣೆ ನಡೆಸಲಾಗುತ್ತದೆಯೋ ಆ ದಿನದಂದು ಗಣೇಶನನ್ನು ಸರ್ವೋಚ್ಛ ದೇವ ಎಂದು ಘೋಷಿಸಲಾಯಿತು ಎಂಬುದು ಒಂದು ನಂಬಿಕೆಯಾದರೆ, ಈ ದಿನದಂದು ಗಣೇಶ ಸ್ವತಃ ಧರೆಗಿಳಿದು ಭಕ್ತರ ಪ್ರಾರ್ಥನೆಗಳನ್ನು ಆಲಿಸುತ್ತಾನೆ, ಆದ್ದರಿಂದ ಚತುರ್ಥಿಯ ದಿನದಂದು ಪ್ರಾರ್ಥಿಸುವವರ ಸಂಕಷ್ಟಗಳು ಸುಲಭವಾಗಿ ಬಗೆಹರಿಯುತ್ತದೆ ಎಂಬುದು ಮತ್ತೊಂದು ನಂಬಿಕೆಯಾಗಿದೆ.
ಆಚರಣೆ ಹೇಗೆ?
ಸಾಧ್ಯವಾದಲ್ಲಿ ಉಪವಾಸ ಮಾಡಬಹುದು. ಸಂಜೆಯ ಸಮಯದಲ್ಲಿ ಸ್ನಾನ ಮಾಡಿ ಗಣಪತಿಯ ಪೂಜೆ ಮಾಡಬೇಕು. ಪೂಜೆಯ ನಂತರ ರಾತ್ರಿ ಚಂದ್ರ ದರ್ಶನ ಮಾಡಿ ಅರ್ಘ್ಯವನ್ನು ಕೊಟ್ಟು, ಹೂವು, ಅಕ್ಷತೆಗಳನ್ನು ಸಲ್ಲಿಸಿ ನಮಸ್ಕರಿಸಬೇಕು.
ಪೂಜೆ ಸಮಾಪ್ತಿಯಾದ ನಂತರ ಕೊನೆಗೆ ಗಣಪತಿಗೆ ನೈವೇದ್ಯವನ್ನು ಅರ್ಪಿಸಿ ಭೋಜನ ಮಾಡಬೇಕು. ಈ ರೀತಿ ಸಂಕಷ್ಟ ಚತುರ್ಥಿಯನ್ನು ಆಚರಿಸುವುದರಿಂದ ವಿಘ್ನಗಳು ದೂರವಾಗಿ, ಮನಸ್ಸಿನ ಇಚ್ಛೆಗಳು ಈಡೇರಿ, ಸಂವೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
ಸಂಕಷ್ಟ ಹರ ವ್ರತದ ಕಥೆ
ಧರ್ಮರಾಯನಿಗೆ ಸೂತ ಮಹರ್ಷಿಗಳು ತಿಳಿಸಿದ ವ್ರತ
ದುರ್ಯೋಧನನ ಕುತಂತ್ರಕ್ಕೆ ಬಲಿಯಾಗಿ ತನ್ನ ರಾಜ್ಯ, ಐಶ್ವರ್ಯ ಎಲ್ಲವನ್ನೂ ಕಳೆದುಕೊಂಡು ತನ್ನ ತಮ್ಮಂದಿರೊಂದಿಗೆ ಕಾಡಿನ ಪಾಲಾಗಿ ದುಃಖದಲ್ಲಿ ಇದ್ದ ಧರ್ಮರಾಯನನ್ನು ಸೂತ ಪುರಾಣಿಕ ಮಹರ್ಷಿಗಳು ಸಮಾಧಾನ ಮಾಡಿದರು. ಆಗ ಧರ್ಮರಾಯನು ಸೂತರ ಬಳಿ ತನ್ನ ಕಷ್ಟಗಳೆಲ್ಲಾಲ್ಲ ಪರಿಹಾರವಾಗಿ ರಾಜ್ಯ ತನಗೆ ಮರಳಿ ಸಿಗಲು ಉತ್ತಮ ವ್ರತ ಪೂಜೆ ಒಂದನ್ನು ತಿಳಿಸಲು ಪ್ರಾರ್ಥಿಸಿದ.
ಆಗ ಪೂಜ್ಯರು ಧರ್ಮರಾಜನಿಗೆ ಸಾಕ್ಷಾತ್ ಪರಶಿವನೇ ಕುಮಾರಸ್ವಾಮಿಗೆ ತಿಳಿಸಿದ ವರಸಿದ್ಧಿ ವಿನಾಯಕ ವ್ರತವನ್ನು ಮಾಡಲು ತಿಳಿಸಿದರು. ಅಷ್ಟೇ ಅಲ್ಲ ನಳ ಮಹಾರಾಜನಿಗೆ ದಮಯಂತಿ ಸಿಕ್ಕಿದ್ದು ಹಾಗೂ ಕೃಷ್ಣ ಪರಮಾತ್ಮನಿಗೆ ಶಮಂತಕ ಮಣಿ ಸಹಿತ ಜಾಂಬವತಿ ಲಭಿಸಿದ್ದು ಇದೇ ವ್ರತವನ್ನು ಆಚರಣೆ ಮಾಡಿದ್ದರಿಂದ. ಶ್ರೀರಾಮ, ಭಗೀರಥ ಕೂಡ ಈ ವ್ರತದ ಆಚರಣೆ ಮಾಡಿದ್ದಾರೆ.
ಎಲ್ಲರೂ ಆಚರಿಸುವ ವ್ರತ
ಈ ವ್ರತವನ್ನು ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ ಹೀಗೆ ಎಲ್ಲ ವರ್ಣದವರೂ ಮಾಡಬಹುದು. ಯಾವುದೇ ಜಾತಿ- ಧರ್ಮ- ಮತ- ಭೇದಗಳಿಲ್ಲದೆ ಎಲ್ಲರೂ ಆಚರಣೆ ಮಾಡಬಹುದು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ತನಕ ಯಾರು ಬೇಕಾದರೂ ಈ ವ್ರತ ಮಾಡಬಹುದು.
ಇನ್ನು ಈ ವ್ರತಾಚರಣೆಯಿಂದ ಧನಾಕಾಂಕ್ಷಿಗೆ ಧನ, ವಿದ್ಯೆ ಬೇಕಾದವರಿಗೆ ಉತ್ತಮ ವಿದ್ಯೆ, ಆರೋಗ್ಯ ಅವಶ್ಯಕತೆ ಇರುವವರಿಗೆ ಉತ್ತಮ ಆರೋಗ್ಯ... ಹೀಗೆ ಭಕ್ತರ ನಾನಾ ವಿಧ ಬೇಡಿಕೆಗಳನ್ನು ಈಡೇರಿಸುವ ಅತ್ಯುತ್ತಮ ವ್ರತ ಇದಾಗಿದೆ.
ಶ್ರೀ ಗಣೇಶ ಮಾನಸ ಪೂಜಾಸ್ತುತಿ
ನಾನಾರತ್ನ ವಿಚಿತ್ರಕಂ ರಮಣಕಂ ಸಿಂಹಾಸನಂ ಕಲ್ಪಿತಂ|
ಸ್ನಾನಂ ಜಾಹ್ನವಿವಾರಿಣಾ ಗಣಪತೇ ಪೀತಾಂಬರಂ ಗೃಹ್ಯತಾಂ||
ಕಂಠಂ ಮೌಕ್ತಿಕ ಮಾಲಿಕಾ ಶ್ರುತಿಯುಗೇ ದ್ವೇಧಾರಿತೆ ಕುಂಡಲೇ|
ನಾನಾರತ್ನ ವಿರಾಜಿತೊ ರವಿ ವಿಭಾಯುಕ್ತಃ ಕಿರೀಟಃ ಶಿರೇ||೧||
ಭಾಲೇ ಚರ್ಚಿತ ಕೇಶರಂ ಮೃಗಮದಾಮೋದಾಂಕಿತಂ ಚಂದನಂ|
ಕಸ್ತೂರೀ ತಿಲಕೋದ್ಭವಂ ಸುಕುಸುಮಂ ಮಂದಾರ ದೂರ್ವಾಶಮಿ||
ಗುಗ್ಗೂಲೋದ್ಭವ ಧೂಪಕಂ ವಿರಚಿತಂ ದೀಪಂ ಸವರ್ತ್ಯಾಯುತಂ|
ಭಕ್ಷ್ಯಂ ಮೋದಕ ಸಂಯುತಂ ಗಣಪತೇ ಕ್ಷೀರೋದನಂ ಗೃಹ್ಯತಾಮ್||೨||
ತಾಂಬೂಲಂ ಮನಸಾಮಯಾ ವಿರಚಿತಂ, ಜಂಬೂಫಲಂ ದಕ್ಷಿಣಾ|
ಸಾಷ್ಟಾಂಗ ಪ್ರಣತಿಂ ಸ್ತುತಿಂ ಬಹುವಿಧಾಂ ಪೂಜಾ ಗೃಹಾಣ ಪ್ರಭೋ||
ಮೇ ಕಾಮಃ ಸತತಂ ತವಾರ್ಚನವಿಧೌ ಬುದ್ಧಿಸ್ತವಾಲಿಂಗನೇ|
ಸ್ವೇಚ್ಛಾತೇ ಸುಖದರ್ಶನೆ ಗಣಪತೇ ಭಕ್ತಿಸ್ತು ಪಾದಾಂಬುಜೇ||೩||
ಅರ್ಥ:
ಎಲೈ ಗಣಪತೇ, ಹಲವು ಬಗೆಯ ರತ್ನಗಳಿಂದ ವಿಚಿತ್ರವೂ ರಮಣೀಯವೂ ಆದ ಸಿಂಹಾಸನ ಗಂಗಾಜಲದಿಂದ ಸ್ನಾನ ಮತ್ತು ಪೀತಾಂಬರಗಳನ್ನು ನೀನು ಸ್ವೀಕರಿಸು.
ಕೊರಳಲ್ಲಿ ಮುತ್ತಿನ ಮಾಲೆಯೂ ಕಿವಿಗಳಲ್ಲಿ ಸೂರ್ಯಕಾಂತಿಯಿಂದ ಮಿನುಗುವ ಕುಂಡಲಗಳೂ ತಮ್ಮ ತಲೆಯ ಮೇಲೆ ಹಲವಾರು ತರದ ರತ್ನಗಳಿಂದ ಶೋಭಿಸುವ ಮುಕುಟವೂ ಇವೆ.(೧)
ಕಸ್ತೂರಿಯಿಂದ ಸಂತೋಷವನ್ನು ಮಾಡುವ ಚಂದನವೂ ಮತ್ತು ಕೇಶರಲೇಪನವುಳ್ಳ ಹಣೆಯುಳ್ಳವನೂ ಒಳ್ಳೆ ಹೂವು,ಎಕ್ಕೆ ಹೂವು, ಗರಿಕೆ ಗಳಿಂದ ತಲೆಯನ್ನು. ಶೋಭಿತಗೊಳಿಸಿದವನೂ ಆದ ಗಣೇಶನೆ,ಗುಗ್ಗುಳದ ಧೂಪ ಮತ್ತು ಸುಂದರವಾದ ಬತ್ತಿಯುಳ್ಳ ದೀಪ, ಉಂಡೆಯ ಊಟ, ಮತ್ತು ಹಾಲು ಅನ್ನ ಇವನ್ನು ನೀನು ಸ್ವೀಕರಿಸು.(೨)
ನಾನು ಮನಸ್ಸಿನಿಂದ ತಯಾರಿಸಿದ ತಾಂಬೂಲ, ನೆರಳೆಹಣ್ಣು ದಕ್ಷಿಣೆ, ಸಾಷ್ಟಾಂಗ ನಮಸ್ಕಾರ, ಬಹುವಿಧ ಪೂಜೆ, ಸ್ತುತಿ ಇವೆಲ್ಲವನ್ನು ಪ್ರಭುವೆ ನೀನು ಸ್ವೀಕರಿಸು. ನನ್ನ ಬಯಕೆಯು ಯಾವಾಗಲೂ ನಿನ್ನ ಪೂಜೆಯಲ್ಲಿ, ಬುದ್ಧಿಯು ನಿನ್ನ ಧ್ಯಾನದಲ್ಲಿ, ನನ್ನ ಇಚ್ಛೆಯು ನಿನ್ನ ಮುಖದರ್ಶನದಲ್ಲಿ ಮತ್ತು ಭಕ್ತಿಯು ನಿಮ್ಮ ಚರಣಗಳಲ್ಲಿ ಎಲೈ ಗಣಪತಿಯೇ ನೆಲೆಗೊಳ್ಳಲಿ.
ಸಾಹಿತ್ಯ: ಪುರಂದರದಾಸರ ಸಾಹಿತ್ಯ
ಗಜವದನ ಬೇಡುವೆ |೨|
ಗಜವದನ ಬೇಡುವೆ ಗೌರಿ ತನಯ |೩|
ತ್ರಿಜಗ ವಂದಿತನೆ ಸುಜನರ ಪೊರೆವನೆ
ಗಜವದನ ಬೇಡುವೆ!
ಪಾಶಾಂಕುಶಧರ ಪರಮ ಪವಿತ್ರ |೨|
ಮೂಷಕ ವಾಹನ ಮುನಿ ಜನ ಪ್ರೇಮ |೩|
ಗಜವದನ ಬೇಡುವೆ ಗೌರಿ ತನಯ
ತ್ರಿಜಗ ವಂದಿತನೆ ಸುಜನರ ಪೊರೆವನೆ
ಗಜವದನ ಬೇಡುವೆ!
ಮೋದದಿ ನಿನ್ನಯ ಪಾದವ ತೋರೊ
ಸಾಧುವಂದಿತನೆ ಆದರದಿಂದಲಿ |೨|
ಸರಸಿಜನಾಭ ಶ್ರೀ ಪುರಂದರ ವಿಠ್ಠಲನ |೩|
ನಿರತ ನೆನೆಯುವಂತೆ ವರ ದಯ ಮಾಡೊ |೩|
ಗಜವದನ ಬೇಡುವೆ ಗೌರಿ ತನಯ
ತ್ರಿಜಗ ವಂದಿತನೆ ಸುಜನರ ಪೊರೆವನೆ
ಗಜವದನ ಬೇಡುವೆ
ಎಲ್ಲಾ ಸಂಕಷ್ಟ ಹರ ಗಣಪತಿಯನ್ನು ಪೂಜಿಸಿ
ನಿಮ್ಮ ಇಷ್ಟಾರ್ಥ ಸಿದ್ಧಿಯಾಗುವಂತೆ ಅವನು ಅನುಗ್ರಹಿಸುತ್ತಾನೆ.
#ಕೃಪೆ_ನಿರ್ಮಲರಾಜೇಶ್
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು