#ಕರ್ಮ ಭಾಗ-೧ ಮತ್ತು ಭಾಗ-೨
ಕರ್ಮ ಎನ್ನುವುದು ಆಡುಭಾಷೆಯ ಪದವಾದರೂ ಅದರ ಸರಿಯಾದ ಅರ್ಥವನ್ನು ತಿಳಿದವರು ಬಹಳ ವಿರಳ. ಹಲವರು ಏನಾದರೂ ಕೆಡಕು ಉಂಟಾದಾಗ ‘ಎಲ್ಲಾ ನನ್ನ ಕರ್ಮ’ ಎಂದು ಇದನ್ನು ತಪ್ಪಿಸಲಾಗದ ಹಣೆಯ ಬರಹ ಅಥಾವಾ ಅನುಭವಿಸಲೇ ಬೇಕಾದ ಮತ್ತು ಕೇವಲ ಕಹಿಯ ಅನುಭವಗಳನ್ನು ತಂದೊಡ್ಡುವ ವಿಧಿ ಎನ್ನುವ ಅರ್ಥದಲ್ಲಿ ಬಳಸುತ್ತಾರೆ. ಈ ರೀತಿಯ ಬಳಕೆ ಸರಿಯಲ್ಲ. ಏಕೆಂದರೆ ಕರ್ಮ ತಪ್ಪಿಸಲಾಗದ ವಿಧಿಯಲ್ಲ! ಕರ್ಮ ಎನ್ನುವ ಪದಕ್ಕೆ ಇನ್ನೂ ಆಳವಾದ ಅರ್ಥವಿದೆ. ಇದರ ಒಳಹೊಕ್ಕು ಸರಿಯಾದ ಅರ್ಥವನ್ನು ಕಂಡುಕೊಳ್ಳುವ ಪ್ರಯತ್ನ ಮಾಡೋಣ.
ಕರ್ಮ ಎಂದರೇನು?
ಕರ್ಮ ಅಥವಾ ಕರ್ಮಫಲ ಎಂದರೆ ನಾವು ಮಾಡುವ ಪ್ರತಿಯೊಂದು ಕೃತ್ಯದ ಫಲಸ್ವರೂಪ. ಅಂದರೆ ಅದು ನಮ್ಮ ಕಾರ್ಯಗಳ ಮೂಲಕ ನಾವೇ ನಮ್ಮ ಕೈಯ್ಯಾರೆ ನಮಗಾಗಿಯೇ ಕಟ್ಟಿಟ್ಟುಕೊಂಡ ಬುತ್ತಿ ಎಂದರೆ ತಪ್ಪಾಗಲಾರದು. ಈ ಬುತ್ತಿಯು ಹಬ್ಬದೂಟವಾಗಿರಬಹುದು ಅಥವಾ ಕಹಿಯ ಮೂಟೆ ಕೂಡಾ ಆಗಿರಬಹುದು. ಇದನ್ನೇ ನಮ್ಮ ಹಿರಿಯರು ಗಾದೆಯ ರೂಪದಲ್ಲಿ ‘ಮಾಡಿದ್ದುಣ್ಣೋ ಮಹರಾಯ’ ಎಂದು ಹೇಳುವುದನ್ನು ಕೇಳಿದ್ದೇವೆ. ಈ ಸಿದ್ಧಾಂತಕ್ಕೆ ಹತ್ತಿರವಾದ ಭೌತಶಾಸ್ತ್ರದ ನಿಯಮವಾದ Newton’s Third Law ರೂಪದಲ್ಲಿ ‘Action and Reaction are Equal and Opposite’ ಎಂದು ಹೇಳಬಹುದು. ಈ ನಿಯಮದ ಅರ್ಥ ಏನೆಂದರೆ – ಉದಾಹರಣೆಗೆ ನಾವು ಒಂದು ಚೆಂಡನ್ನು ಎದುರುಗಿರುವ ಗೋಡೆಯ ಕಡೆ ಜೋರಾಗಿ ಎಸೆದರೆ, ಆ ಚೆಂಡು ಗೋಡೆಯನ್ನು ತಾಕಿದ ಮೇಲೆ ಅಷ್ಟೇ ವೇಗವಾಗಿ ನಮ್ಮ ಕಡೆ ಹಿಂತಿರುಗಿ ಬರುತ್ತದೆ. ಅಂದರೆ ನಾವು ಇತರರಿಗೆ ಕೊಡುವ ನೋವು, ನಲಿವು ಮುಂದೆ ಹಿಂತಿರುಗಿ ನಮ್ಮನ್ನು ಕೂಡ ಅದೇ ರೀತಿಯ ಅನುಭವಕ್ಕೆ ಗುರಿಪಡಿಸುತ್ತವೆ ಎಂದರ್ಥ. ಆದರೆ ಇದನ್ನು ಓದಿದ ತಕ್ಷಣ ನಿಮ್ಮ ಮನದಲ್ಲಿ ಮೂಡುವ ಪ್ರಶ್ನೆ ಏನೆಂದು ಬಲ್ಲೆ. ಇಲ್ಲಿ ಹೇಳುತ್ತಿರುವುದು ನಿಜವಿದ್ದರೆ, ನಮ್ಮ ಸಮಾಜದಲ್ಲಿ ಅನೇಕ ಸಮಾಜ ಘಾತಕರು ಅನೇಕ ಪಾತಕಗಳನ್ನು ಮಾಡುತ್ತಿದ್ದರೂ ಅದರ ಫಲವು ಅವರನ್ನು ತಾಕದಿರುವ ಅನೇಕ ಉದಾಹರಣೆಗಳನ್ನು ಕೊಡಬಹುದು. ಆದ್ದರಿಂದ ಇಲ್ಲಿ ಹೇಳಿರುವ ಮಾತುಗಳ ಬುನಾದಿ ಸರಿಯೇ? ಇದೇ ಅಲ್ಲವೇ ನಿಮ್ಮ ಪ್ರಶ್ನೆ? ಖಂಡಿತ ಸರಿಯಾದ ಪ್ರಶ್ನೆ. ಆದರೆ ನಾವು ಯಾವುದೇ ಕೃತ್ಯದ ಫಲವು ಒಬ್ಬ ಮನುಷ್ಯನನ್ನು ಆ ಕೃತ್ಯದ ನಂತರ ಕೂಡಲೇ ತಾಕುವುದೆಂದು ಭಾವಿಸುತ್ತೇವೆ. ಅದು ವಾಸ್ತವದಲ್ಲಿ ಹಾಗಿಲ್ಲ. ಒಂದು ಕೃತ್ಯದ ಫಲವು ಆ ಕರ್ತೃವನ್ನು ತಾಕಲು ಸಮಯದ ಅಂತರವಿರುತ್ತದೆ. ಆ ಸಮಯದ ಅಂತರ ಕೆಲವರಿಗೆ ಈ ಜನ್ಮದಲ್ಲೇ ಕೂಡಿಬರಬಹುದು ಅಥವಾ ಇನ್ನು ಕೆಲವರಿಗೆ ಮುಂದಿನ ಜನ್ಮದಲ್ಲಿ ಕೂಡಿಬರಬಹುದು. ಇದು ನಿರ್ದಿಷ್ಟವಾಗಿ ಯಾರಿಗೂ ತಿಳಿಯದ ಸಂಗತಿ. ಏಕೆಂದರೆ ಪ್ರತಿಯೊಬ್ಬರೂ ಈ ಜನ್ಮದಲ್ಲಿ ಈಗಾಗಲೇ ತಾವು ಹಿಂದೆ ಮಾಡಿದ ಕೃತ್ಯಗಳ ಫಲಸ್ವರೂಪವಾದ ಕರ್ಮಫಲವನ್ನು ಅನುಭವಿಸುತ್ತಿರುತ್ತಾರೆ. ಇದು ಪ್ರತಿಯೊಬ್ಬರಿಗೂ ಬೇರೆ ಬೇರೆಯಾಗಿರುತ್ತದೆ. ಆದ್ದರಿಂದ ಇಬ್ಬರು ಈ ಜನ್ಮದಲ್ಲಿ ಒಂದೇ ರೀತಿಯ ಕೃತ್ಯವನ್ನು ಒಂದೇ ಸಮಯದಲ್ಲಿ ಎಸಗಿದರೂ ಅದರ ಫಲವು ಅವರಿಬ್ಬರನ್ನೂ ಒಂದೇ ಸಮಯದಲ್ಲಿ ತಾಕದೆ ಇರುವ ಸಾಧ್ಯತೆ ಇದೆ. ಏಕೆಂದರೆ ಈ ಹೊಸ ಕರ್ಮಫಲಗಳು ನಮ್ಮ ಹಿಂದಿನ ಕರ್ಮಫಲಗಳ ಹಿಂದೆ ಕ್ಯೂ ನಲ್ಲಿ ನಿಲ್ಲಬೇಕಾಗುತ್ತದೆ. ಒಬ್ಬರ ಕ್ಯೂ ಇನ್ನೊಬ್ಬರದ್ದಿಕ್ಕಿಂತ ಚಿಕ್ಕದಿರಬಹ್ದು ಅಥವಾ ದೊಡ್ಡದಿರಬಹುದು. ಮತ್ತು ಒಬ್ಬರ ಕ್ಯೂ ನಲ್ಲಿ ಹಿಂದೆ ಮಾಡಿದ ಸುಕೃತಗಳ ಫಲವಾಗಿ ಒಳ್ಳೆಯ ಫಲಗಳನ್ನು ಈಗ ಅನುಭವಿಸುತ್ತಿರಬಹುದು. ಒಂದು ಕ್ಷಮಿಸಲಾರದಂತಹ ಕೃತ್ಯವನ್ನು ಎಸಗಿದವನು ಆನಂತರವೂ ಸುಖಸಂತೋಷಗಳನ್ನು ಅನುಭವಿಸುತ್ತಿರುವುದು ನಮಗೆ ಒಂದು ಆಭಾಸದಂತೆ ಕಾಣುತ್ತದೆ. ಮತ್ತು ಕರ್ಮ ಸಿದ್ಧಾಂತದ ಬಗ್ಗೆ ಇರುವ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಒಬ್ಬರ ಕರ್ಮಫಲದ ಕ್ಯೂ ನಲ್ಲಿ ಏನಿದೆ ಎನ್ನುವುದು ನಮಗೆ ಅಗೋಚರವಾದ ವಿಷಯ. ಆದ್ದರಿಂದಲೇ ಈ ಕರ್ಮ ಸಿದ್ಧಾಂತವನ್ನು ಭೌತಶಾಸ್ತ್ರದ ನಿಯಮಗಳನ್ನು ಪ್ರಯೋಗಕ್ಕೆ ಒಳಪಡಿಸುವಂತೆ ಪ್ರಯೋಗಕ್ಕೆ ಒಳಪಡಿಸಿ ಪರೀಕ್ಷಿಸಲಾಗುವುದಿಲ್ಲ. ಆದ ಕಾರಣ ಪ್ರಯೋಗದ ಪರೀಕ್ಷೆಯ ಬದಲು ಸಿದ್ಧರ ಮಾತುಗಳನ್ನು ನಂಬಿ ನಡೆಯಬೇಕಿದೆ, ಬೇರೆ ದಾರಿಯಿಲ್ಲ. ಈ ನಂಬಿಕೆಯ ದಾರಿಯಲ್ಲಿ ನಡೆಯುವಂತಿದ್ದರೆ ಮುಂದೆ ಓದಿ.
‘ಕರ್ಮ’ ಪದದ ಸವಿಸ್ತಾರವಾದ ಅರ್ಥವೇನು?
ಕರ್ಮದ ಸೂತ್ರವು (Law of Karma) ಪ್ರಪಂಚದ ಪ್ರತಿಯೊಂದು ಜೀವಿಗೂ ಅನ್ವಯವಾಗುತ್ತದೆ. ಅದು ಯಾವ ಪೂರ್ವಾಗ್ರಹವೂ ಇಲ್ಲದೆ ಎಲ್ಲರ ಕಾರ್ಯಗಳನ್ನೂ ಒಂದೇ ತಕ್ಕಡಿಯಲ್ಲಿಟ್ಟು ಪಾಪ ಅಥವಾ ಪುಣ್ಯ ಎಂದು ನಿರ್ಧರಿಸುತ್ತದೆ. ಮತ್ತು ಅದರ ಪ್ರಕಾರ ಫಲದ ನಿರ್ಧಾರವಾಗುತ್ತದೆ. ಈ ಫಲಗಳನ್ನೆಲ್ಲ ನಾವು ಅನುಭವಿಸುವವಎವಿಗೂ ನಾವು ಜನನ ಮರಣಗಳೆಂಬ ಚಕ್ರವ್ಯೂಹದಲ್ಲಿ ಬಂಧಿತರಾಗುತ್ತೇವೆ.
ನಮ್ಮ ಸನಾತನ ಧರ್ಮದ ಪ್ರಕಾರ ನಾವು ಮಾಡುವ ಕರ್ಮ ನಮ್ಮ ಪುನರ್ಜನ್ಮಕ್ಕೆ ಕಾರಣವಾಗುತ್ತದೆ. ನಮ್ಮ ಕರ್ಮ ಫಲಗಳನ್ನು ಪೂರ್ಣವಾಗಿ ಈ ಜನ್ಮದಲ್ಲೇ ಅನುಭವಿಸುವ ಕಾಲಾವಕಾಶ ಇಲ್ಲದ ಪಕ್ಷದಲ್ಲಿ ನಮ್ಮ DNA ದಲ್ಲಿ ಮುದ್ರಿತವಾದ ಉಳಿದ ಕರ್ಮಗಳು ನಮ್ಮ ಸಾವಿನ ಸಮಯದಲ್ಲಿ ಕಾರಣಶರೀರದ (Causal Body) ಮೂಲಕ ದೇಹತ್ಯಾಗ ಮಾಡುತ್ತವೆ. ಈ ಕಾರಣಶರೀರದಲ್ಲಿ ಶೇಖರವಾದ ಕರ್ಮಗಳೇ ನಾವು ಮತ್ತೊಂದು ಜನ್ಮವನ್ನು ಪಡೆಯಲು ಕಾರಣವಾಗುತ್ತವೆ ಮತ್ತು ನಾವು ಹಿಂದಿನ ಜನ್ಮದಲ್ಲಿ ಅನುಭವಿಸಲಾಗದ ಕರ್ಮಫಲಗಳನ್ನು ನುಭವಿಸುವ ಅವಕಾಶವನ್ನು ಮಾಡಿಕೊಡುತ್ತದೆ. ಈ ಚಕ್ರ ನಿರಂತರವಾಗಿ ಸಾಗುತ್ತ ಆದಿ ಶಂಕರಾಚಾರ್ಯರು ಹೇಳಿದ ಹಾಗೆ “ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ...” ಎನ್ನುವಂತೆ ಕಾಲಚಕ್ರದಲ್ಲಿ ಬಂಧಿತರಾಗುತ್ತೇವೆ. ಪ್ರತಿಯೊಂದು ಜನ್ಮದಲ್ಲಿಯೂ ನಾವು ನಮ್ಮ ಬಂಧುಬಳಗ, ಸ್ನೇಹಿತರ ಜತೆ ಋಣಾತ್ಮಕ ಸಂಬಂಧಗಳನ್ನು ಹೊಂದಿರುತ್ತೇವೆ. ಈ ಋಣಗಳು ಕರ್ಮಫಲಗಳನ್ನು ನೀಡುತ್ತವೆ. ಹೀಗೆ ಉಂಟಾದ ಕರ್ಮಫಲಗಳು ಮತ್ತೆ ನಮ್ಮ ಮುಂದಿನ ಜನ್ಮದಲ್ಲಿ ನಾವು ಎಂತಹ ಕುಟುಂಬದಲ್ಲಿ ಜನಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ – “ಋಣಾನುಬಂಧ ರೂಪೇಣ ಪಶು ಪತ್ನಿ ಸುತ ಆಲಯ” ಎನ್ನುವ ಮಾತು ಎಷ್ಟು ಸತ್ಯವಾದುದು!
ಕರ್ಮಫಲವು ಕೇವಲ ನಾವು ಎಸಗುವ ಕಾರ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ನಾವು ಏನೇ ಮಾಡಿದರೂ ಕಾಯಾ, ವಾಚಾ, ಮನಸಾ ತ್ರಿಕರಣ ಶುದ್ಧಿಯಿಂದ ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ. ಹಾಗೆಯೇ, ನಾವು ಎಸಗುವ ಕಾರ್ಯಗಳ ಜತೆಗೆ ನಾವು ಮಾಡುವ ಅಲೋಚನೆಗಳು, ಮತ್ತು ನಾವು ಆಡುವ ಮಾತುಗಳು ಕೂಡ ಸೂಕ್ತವಾದ ಕರ್ಮಫಲವನ್ನು ನೀಡುವವು. ನಾವು ಮಾಡುವ ಆಲೋಚನೆಗಳು ಇತರರಿಗೆ ತಿಳಿಯುವುದಿಲ್ಲ ಎಂಬ ಹುಂಬ ಧೈರ್ಯ ಬೇಡ. ಇತರರಿಗೆ ತಿಳಿಯದಿದ್ದರೂ, ನಮ್ಮಲ್ಲೇ ಅಡಗಿ ಕುಳಿತಿರುವ ನಮ್ಮ ಖಾಸಾ ಚಿತ್ರಗುಪ್ತನಿಂದ ನಮ್ಮ ಆಲೋಚನೆಗಳನ್ನು ಮುಚ್ಚಿಡಲಾಗುವುದೇ!?
ನಮ್ಮ ವೇದಾಂತದಲ್ಲಿ ಒಟ್ಟು ನಾಲ್ಕು ರೀತಿಯ ಕರ್ಮಗಳನ್ನು ಗುರುತಿಸಲಾಗಿದೆ. ಅವುಗಳು ಯಾವುವೆಂದರೆ:
1. ಸಂಚಿತ ಕರ್ಮ
2. ಪ್ರಾರಬ್ಧ ಕರ್ಮ
3. ಕ್ರಿಯಮಾಣ ಕರ್ಮ
4. ಆಗಾಮಿ ಕರ್ಮ
ಇವುಗಳ ವಿವರವನ್ನು ಮುಂದಿನ ಭಾಗದಲ್ಲಿ ನೋಡೋಣ...
(ಮುಂದುವರೆಯುವುದು...)
#ಕರ್ಮ_ಮತ್ತು_ಕರ್ಮಫಲ: ಭಾಗ - ೨
ನಮ್ಮ ವೇದಾಂತದಲ್ಲಿ ಒಟ್ಟು ನಾಲ್ಕು ರೀತಿಯ ಕರ್ಮಗಳನ್ನು ಗುರುತಿಸಲಾಗಿದೆ. ಅವುಗಳು ಯಾವುವೆಂದರೆ:
1. ಸಂಚಿತ ಕರ್ಮ
2. ಪ್ರಾರಬ್ಧ ಕರ್ಮ
3. ಕ್ರಿಯಮಾಣ ಕರ್ಮ
4. ಆಗಾಮಿ ಕರ್ಮ
1. ಸಂಚಿತ ಕರ್ಮ: ನಾವು ಜನ್ಮ ಜನ್ಮಾಂತರಗಳಿಂದ ಕೂಡಿ ಹಾಕಿದ, ಮುಂದಿನ ಜನ್ಮಗಳಲ್ಲಿ ಅನುಭವಿಸಲೇಬೇಕಿರುವ ಒಟ್ಟು ಕರ್ಮಫಲದ ಗಂಟು. ನಮ್ಮ ಸಂಸ್ಕಾರ ಇದರ ಪ್ರತಿಬಿಂಬವಾಗಿರುತ್ತದೆ. ಇದರ ಮೇರೆಗೆ ನಮ್ಮ ಗುಣಸ್ವಭಾವಗಳು, ಆಸಕ್ತಿಗಳು ನಮ್ಮ ಹುಟ್ಟಿನಿಂದಲೇ ಪ್ರಕಾಶಗೊಳ್ಳುತ್ತ ಹೋಗುತ್ತವೆ. ಇದನ್ನೇ ನಾವು ಪೂರ್ವಜನ್ಮದ ವಾಸನೆ ಎನ್ನುತ್ತೇವೆ.
ಸಂಚಿತ ಕರ್ಮದ ಉದಾಹರಣೆಯೆಂದರೆ - ನಾವು ಖರ್ಚುಮಾಡದೆ ಕೂಡಿಹಾಕಿ ಬ್ಯಾಂಕಿನಲ್ಲಿಟ್ಟ ನಮ್ಮ ಒಟ್ಟು ಹಣದ ಮೊತ್ತ ಎಂದು ತಿಳಿಯಬಹುದು. ಅಥವಾ ಅದು ನಾವು ಹಿಂದೆ ಮಾಡಿದ ಸಾಲದ ಇನ್ನೂ ತೀರದ ಮೊತ್ತ ಎಂದು ಕೂಡ ಅರ್ಥೈಸಬಹುದು.
2. ಪ್ರಾರಬ್ಧ ಕರ್ಮ: ಇದು ಸಂಚಿತಕರ್ಮದ ಒಂದು ಭಾಗ. ಈ ಜನ್ಮದಲ್ಲಿ ನಾವು ಅನುಭವಿಸಲು ನಿರ್ದಿಷ್ಟಪಡಿಸಿದ ನಮ್ಮ ಸಂಚಿತಕರ್ಮದ ಭಾಗ.
ಉದಾ: ಯಾವುದಾದರೂ ನಿರ್ದಿಷ್ಟ ಕಾರ್ಯಕ್ಕೆ ಖರ್ಚುಮಾಡಲು ನಮ್ಮ ಬ್ಯಾಂಕ್ ಖಾತೆಯಿಂದ ತಗೆದ ನಮ್ಮದೇ ಒಟ್ಟು ಹಣದ ಒಂದು ಭಾಗ.
3. ಕ್ರಿಯಾಮಾಣ ಕರ್ಮ: ನಾವು ಈ ಜನ್ಮದಲ್ಲಿ ಮಾಡಿದ ಕಾರ್ಯಕ್ಕೆ ಈ ಜನ್ಮದಲ್ಲೇ ಪಡೆಯುವ ಕರ್ಮಫಲ. ಮತ್ತು ಇಲ್ಲಿ ಮಾನವನಿಗೆ ತನ್ನ ಈಗಿನ ಕೃತ್ಯಗಳ ಮೂಲಕ ಹಿಂದೆ ಮಾಡಿದ ಕರ್ಮಗಳನ್ನು ಅಳಿಸುವ ಅವಕಾಶ ಕೂಡ ದೊರೆಯುತ್ತದೆ. ಮಾನವನಿಗೆ ತನ್ನ ಸಂಕಲ್ಪಶಕ್ತಿಯನ್ನು ಉಪಯೋಗಿಸಿ ತನ್ನ ಜೀವನವನ್ನು ಉತ್ತಮಗೊಳಿಸಿಕೊಳ್ಳುವ ಅವಕಾಶ ದೊರೆಯುತ್ತದೆ. ಮಾಡಿದ ಕರ್ಮದ ಫಲವು ಅನುಭವಕ್ಕೆ ಬರಲು ಪ್ರಾರಂಭವಾದಾಗ ಅದನ್ನು ಆರಬ್ಧ ಕರ್ಮ ಎನ್ನುತ್ತಾರೆ. ಇನ್ನೂ ಮೊಳಕೆಯೊಡೆಯದ ಕರ್ಮಫಲವನ್ನು ಅನಾರಬ್ಧ ಕರ್ಮ ಎನ್ನುತ್ತಾರೆ.
ಉದಾ: ಒಬ್ಬ ಕಳ್ಳ ತನ್ನ ಕಳುವಿನ ಕ್ರಿಯೆಯಿಂದ ಸಿಕ್ಕಿಬಿದ್ದು ಜೈಲನ್ನು ಸೇರಿ ಶಿಕ್ಷೆ ಅನುಭವಿಸುವುದು, ಅಥವಾ ಹಿಂದೆ ಪಡೆದ ಸಾಲವನ್ನು ಈಗ ದುಡಿದ ಹಣ ಪಾವತಿ ಮಾಡಿ ತೀರಿಸುವುದು.
4. ಆಗಾಮಿ ಕರ್ಮ: ನಾವು ಈ ಜನ್ಮದಲ್ಲಿ ಮಾಡಿದ ಕಾರ್ಯದ ಕರ್ಮ ಫಲದ ಭಾಗ, ಈ ಜನ್ಮದಲ್ಲೇ ಸವೆಯದೆ ಮುಂದಿನ ಜನ್ಮಕ್ಕಾಗಿ ಸಂಚಿತ ಕರ್ಮಕ್ಕೆ ಸೇರ್ಪಡೆಯಾಗುವುದು. ಇದು ನಮ್ಮ ಕೃತ್ಯಗಳಿಗನುಗುಣವಾಗಿ ಸಂಚಿತಕರ್ಮವನ್ನು ಕರಗಿಸಬಲ್ಲದು ಅಥವಾ ಹೆಚ್ಚಿಸಬಲ್ಲದು.
ಉದಾ: ಕಳ್ಳತನ ಮಾಡಿದರೂ ಸಿಕ್ಕದೆ ತಪ್ಪಿಸಿಕೊಂಡು ಮುಂದಿನ ಜನ್ಮದಲ್ಲಿ ಅದರ ಫಲವನ್ನು ಅನುಭವಿಸುವುದು, ಅಥವಾ ಸಂಪಾದಿಸಿದ ಹಣವನ್ನು ಮುಂದಿನ ದಿನಗಳ ಖರ್ಚಿಗಾಗಿ ಬ್ಯಾಂಕಿನಲ್ಲಿ ಜಮೆ ಮಾಡುವುದು. ಅಥವಾ ಯಾವುದಾದರೂ ಅಗತ್ಯ ಪೂರೈಸಲು ಸಾಲ ಮಾಡುವುದು. ಇದನ್ನು ಮುಂದೆ ತೀರಿಸಬೇಕಾಗುವುದು.
ಪ್ರಾರಬ್ಧಕರ್ಮವನ್ನು ವಿಧಿ ಎಂದು ತಿಳಿದವರಿಗೆ ಈಗ ಸ್ವಲ್ಪ ಆಶಾಕಿರಣ ಕಾಣಿಸುತ್ತಿರಬಹುದಲ್ಲವೇ? ನಾವು ಪ್ರಾರಬ್ಧ ಕರ್ಮವನ್ನು ಅನುಭವಿಸಲೇಬೇಕಿದ್ದರೆ, ಮತ್ತು ನಾವು ಅನುಭವಿಸಬೇಕಿರುವುದೆಲ್ಲವೂ ಪೂರ್ವನಿರ್ಧರಿತವಾಗಿದ್ದರೆ ನಮ್ಮ ಸ್ವಪ್ರಯತ್ನಕ್ಕೆ ಏನೂ ಬೆಲೆಯೇ ಇಲ್ಲವೇ? ಎನ್ನುವ ಪ್ರಶ್ನೆಗೆ ಇಲ್ಲಿ ಖಂಡಿತ ಉತ್ತರ ಸಿಕ್ಕಿದೆಯೆಂದು ಭಾವಿಸಿದ್ದೇನೆ. ಇಂತಹ ಪ್ರಶ್ನೆಗಳಿಗೆ ಉತ್ತರವೇನೋ ಎಂಬಂತೆ ಪರಮಹಂಸ ಯೋಗಾನಂದರ ಗುರುಗಳಾದ ಶ್ರೀ ಯುಕ್ತೇಶ್ವರ ಗಿರಿಯವರು ಈ ರೀತಿ ಹೇಳಿದ್ದಾರೆ:
ಮಾನವನು ತನ್ನ ಪ್ರಾರಬ್ಧ ಕರ್ಮಕ್ಕನುಗುಣವಾಗುವಂತಹ ದಿನ ಮತ್ತು ಸಮಯಕ್ಕೆ ಕರಾರುವಾಕ್ಕಾಗಿ ಜನಿಸುತ್ತಾನೆ. ಅವನ ಜಾತಕ ಆತನ ಪೂರ್ವವನ್ನು ಕರಾರುವಾಕ್ಕಾಗಿ ತೋರಿಸಿದರೂ ಅದು ಮುಂದೆ ಆಗುವುದನ್ನು ಅಷ್ಟೇ ಕರಾರುವಾಕ್ಕಾಗಿ ತೋರಿಸುವುದಿಲ್ಲ. ಏಕೆಂದರೆ ಮಾನವ ಪ್ರಾರಬ್ಧವನ್ನು ಎದುರಿಸಿ ಹೋರಾಡುವ ಸಂಕಲ್ಪವನ್ನು ಹೊಂದಿದ್ದಾನೆ. ಮಾನವ ತನ್ನ ಪ್ರಾರಬ್ಧ ಕರ್ಮಫಲವನ್ನು ತಾನೇ ಅಳಿಸುವ ಶಕ್ತಿ ಕೂಡ ಹೊಂದಿದ್ದಾನೆ. ಏಕೆಂದರೆ ಅವನ ಬಳಿ ಗ್ರಹಗಳ ಪ್ರಭಾವಕ್ಕೆ ಸಿಲುಕದ ಹಿಂದಿನ ಕರ್ಮಫಲವನ್ನು ಅಳಿಸಬಲ್ಲ ಶಕ್ತಿಯುತ ಆಧ್ಯಾತ್ಮಿಕ ಸಾಧನೋಪಾಯಗಳಿವೆ.
ಆಧ್ಯಾತ್ಮಿಕ ಮಾರ್ಗದಲ್ಲಿ ನಡೆದರೆ ಹಿಂದಿನ ಕರ್ಮಫಲಗಳನ್ನು ಅಳಿಸಬಹುದು ನಿಜ. ಹಾಗಿದ್ದರೆ ಪೂರ್ಣವಾಗಿ ಎಲ್ಲ ರೀತಿಯ ಕರ್ಮಗಳನ್ನೂ ಅಳಿಸಬಹುದೇ? ಇದು ಸಾಧ್ಯವೇ? ಎನ್ನುವ ಪ್ರಶ್ನೆ ಮೂಡುತ್ತದೆ. ಅದನ್ನು ಅರಿಯಲು ನಾವು ಕರ್ಮಸಿದ್ಧಾಂತದ ಇನ್ನೊಂದು ಆಯಾಮದ ಪರಿಚಯ ಮಾಡಿಕೊಳ್ಳಬೇಕಾಗುತ್ತದೆ.
ಹಿಂದೆ ಹೇಳಿದಂತೆ ನಾವು ಈ ಜನ್ಮದಲ್ಲಿ ನಿರ್ದಿಷ್ಟವಾದ ಪ್ರಾರಬ್ಧಕರ್ಮಕ್ಕೆ ಒಳಪಟ್ಟಿರುತ್ತೇವೆ. ಈ ಪ್ರಾರಬ್ಧ ಕರ್ಮವು ಈ ಕೆಳಗಿನ ಮೂರು ವಿಭಾಗಳಲ್ಲಿ ಹಂಚಿಹೋಗಿರುತ್ತದೆ:
ಅದೃಢ ಕರ್ಮ:
ಇದು ಅತ್ಯಂತ ಹಗುರವಾದ ಕರ್ಮ. ಇದನ್ನು ಮಾನವ ತನ್ನ ಒಳ್ಳೆಯ ಕಾರ್ಯಗಳಿಂದ, ಇತರರಿಗೆ ಸಹಾಯ ಮಾಡುವುದರಿಂದ, ಸಣ್ಣ ಪುಟ್ಟ ಪರಿಹಾರಗಳಿಂದ ಸುಲಭವಾಗಿ ಅಳಿಸಿ ಹಾಕಬಹುದು.
ದೃಢಾದೃಢ ಕರ್ಮ:
ಇದನ್ನು ಅಳಿಸಲು ಮಾನವನಿಗೆ ಸಾಧ್ಯವಿದೆ. ಆದರೆ ಅದು ಸುಲಭದ ಕೆಲಸವಲ್ಲ. ಮಾನವ ತನ್ನ ದೃಢಸಂಕಲ್ಪ ಶಕ್ತಿ, ಅವಿರತ ಕಠಿಣ ಪರಿಶ್ರಮ ಮತ್ತು ಧೀರ್ಘಕಾಲಿಕ ಆಧ್ಯಾತ್ಮಿಕ ವಿಧಾನಗಳ ಒಮ್ಮನಿಸ್ಸಿನ ಪಾಲನೆಯಿಂದ ಇವುಗಳನ್ನು ಅಳಿಸಿ ಹಾಕಬಲ್ಲ. ಉದಾಹರಣೆಗೆ, ಒಬ್ಬನಿಗೆ ನೆನಪಿನ ಶಕ್ತಿ ಕಡಿಮೆಯಿದ್ದು ವಿದ್ಯಾಭ್ಯಾಸದಲ್ಲಿ ತೊಂದರೆಯಾಗುತ್ತಿರಬಹುದು. ಆದರೆ ಸತತ ಪರಿಶ್ರಮದಿಂದ ಆತ ಓದಿ ಒಳ್ಳೆಯ ಅಂಕಗಳನ್ನು ಪಡೆಯಲು ಶಕ್ತ. ಪ್ರಯತ್ನಪಡದಿದ್ದರೆ ಇಲ್ಲಿ ಎಡುವುದು ಖಂಡಿತ. ಪ್ರಯತ್ನ ಪಡದೆ ಎಡವಿ ಇದು ನನ್ನ ದುರ್ದೈವ ಅಥವಾ ವಿಧಿ ಎಂದುಕೊಳ್ಳುವುದು ಮೂರ್ಖತನ.
ದೃಢ ಕರ್ಮ:
ಇದು ಮಾನವನ ಪ್ರಯತ್ನಕ್ಕೆ ಮೀರಿದ, ಮತ್ತು ಆತನು ಅನುಭವಿಸಲೇ ಬೇಕಾದ ಭಾಗ. ಉದಾಹರಣೆಗೆ, ನಾವು ಎಂತಹ ಕುಟುಂಬದಲ್ಲಿ ಜನ್ಮ ತಾಳಬೇಕು ಮತ್ತು ನಮ್ಮ ಆಯಸ್ಸಿನ ಪ್ರಮಾಣವೇನು ಎನ್ನುವ ವಿಷಯಗಳು ಈ ದೃಢಕರ್ಮದಿಂದ ನಿರ್ಧಾರಿತವಾದವುಗಳು.
ನಮಗೆ ನಮ್ಮ ಕರ್ಮದ ಭಾಗಾಭಾಗಗಳ ಪರಿಚಯವಿಲ್ಲದಿರುವುದರಿಂದ, ನಾವು ನಮ್ಮ ಪ್ರತಿಯೊಂದು ಕೆಲಸದಲ್ಲೂ ನಮ್ಮ ಶಕ್ತಿ ಮೀರಿ ಪ್ರಯತ್ನಿಸುವುದು, ಆದಷ್ಟು ಸನ್ಮಾರ್ಗದಲ್ಲಿ ನಡೆಯುವುದು, ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವುದು ಮುಂತಾದ ಕೃತ್ಯಗಳಿಂದ ನಮ್ಮ ಹಿಂದಿನ ಕೆಟ್ಟ ಕರ್ಮಗಳನ್ನು ಕರಗಿಸಿಕೊಳ್ಳುವುದಲ್ಲದೆ ನಮ್ಮ ಮುಂದಿನ ಜೀವನಕ್ಕೆ ಒಳ್ಳೆಯ ಫಲಗಳ ಬುನಾದಿಯನ್ನೂ ಹಾಕಿಕೊಳ್ಳಬಹುದು. “ಎಲ್ಲಾ ನನ್ನ ವಿಧಿ” ಎನ್ನುವ ಮಾತನ್ನು ಮರೆತು ನಾವು ನಮ್ಮ ಪಾಲಿಗೆ ಬಂದದ್ದನ್ನು ನಗುನಗುತ್ತ ಸ್ವೀಕರಿಸುವ ಪ್ರಯತ್ನ ಮಾಡಬೇಕಿದೆ. ಏಕೆಂದರೆ ಅದು ನಮಗಾಗಿ ನಾವೇ ನಮ್ಮದೇ ಕೃತ್ಯಗಳ ಮೂಲಕ ನಮ್ಮ ಕೈಯ್ಯಾರೆ ಕಟ್ಟಿಕೊಂಡ ಬುತ್ತಿ ಅಲ್ಲವೇ? ದೈವವನ್ನೋ ಅಥವಾ ಬೇರೆ ಯಾರನ್ನೋ ಅದಕ್ಕಾಗಿ ಹೊಣೆಗಾರರನ್ನಾಗಿ ಮಾಡುವುದು ಸರಿಯೇ? ಎಂದು ಆಲೋಚಿಸಬೇಕಿದೆ ಆಲೋಚಿಸಬೇಕಿದೆ.
ಶಿವಾರ್ಪಣಮಸ್ತು
(ಸದ್ವಿಚಾರ ಸಂಗ್ರಹ)