Sunday, 26 September 2021

ದೇವಾಲಯದಲ್ಲಿ ದರ್ಶನ ಮಾಡಿದ ನಂತರ, ಹೊರಗಿನ ಆಸನದ ಮೇಲೆ ಸ್ವಲ್ಪ ಹೊತ್ತು ಏಕೆ ಕುಳಿತುಕೊಳ್ಳಬೇಕು?

ಪ್ರಶ್ನೆ : ದೇವಾಲಯದಲ್ಲಿ ದರ್ಶನ ಮಾಡಿದ ನಂತರ, ಹೊರಗಿನ ಆಸನದ ಮೇಲೆ ಸ್ವಲ್ಪ ಹೊತ್ತು ಏಕೆ ಕುಳಿತುಕೊಳ್ಳಬೇಕು?
ಉತ್ತರ : ದೇವಾಲಯಗಳಿಗೆ ಹೋದಾಗ ದೇವರ ದರ್ಶನ ಮುಗಿಸಿ ನಮಸ್ಕಾರವನ್ನು ಮುಗಿಸಿದ ನಂತರ ಒಂದೆರಡು ನಿಮಿಷ ಹೊರಗೆ ಕುಳಿತು ಕೊಳ್ಳುವದು ಸಂಪ್ರದಾಯ. ಆದರೆ ಕುಳಿತಾಗ ನಾವು ದರ್ಶನ ಮಾಡಿದ ದೇವರನ್ನು ನೆನೆಸಿಕೊಂಡು ಈ ಕೆಳಗಿನ ಶ್ಲೋಕವನ್ನು ಹೇಳಿಕೊಂಡು ಪ್ರಾರ್ಥಿಸಿಕೊಳ್ಳಬೇಕು. ಇದನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಮಾಡಲಾಗಿದೆ. ವಾಸ್ತವವಾಗಿ ಇಂದಿನ ಜನರು ಈ ಶ್ಲೋಕವನ್ನು ಮರೆತಿದ್ದಾರೆ. 
ಶ್ಲೋಕ ಹೀಗಿದೆ :-               
  (೧) ಅನಾಯಾಸೇನ ಮರಣಂ|
(೨)ವಿನಾ ದೈನೇನ ಜೀವನಂ•
(೩) ದೇಹಾಂತ ತವ ಸಾನಿಧ್ಯಮ್|
(೪) ದೇಹಿಮೇ ಪರಮೇಶ್ವರ | 
ಈ ಶ್ಲೋಕದ ಅರ್ಥ
*ಅನಾಯಾಸೇನ ಮರಣಂ** ಅಂದರೆ ನಮ್ಮ ಅಂತ್ಯಕಾಲದಲ್ಲಿ ಯಾವುದೇ ತೊಂದರೆಯಿಲ್ಲದೆ ಸಾಯಬೇಕು ಮತ್ತು ಅನಾರೋಗ್ಯಕ್ಕೆ ಒಳಗಾದ ನಂತರ ಎಂದಿಗೂ ಹಾಸಿಗೆಯ ಮೇಲೆ ಬೀಳಬಾರದು, ದುಃಖದಿಂದ ಸಾಯಬಾರದು ಮತ್ತು ನಾವು ನಡೆದಾಡುವಾಗಲೇ ನಮ್ಮ  ಜೀವನದ ಅಂತ್ಯ ಆಗಬೇಕು.
*ವಿನಾ ದೈನೇನ ಜೀವನಂ* ಅಂದರೆ ಎಂದಿಗೂ ಯಾರೊಂದಿಗೂ ಪರಾವಲಂಬಿಯಾಗಿ ಜೀವನ ಇರಬಾರದು. ಒಬ್ಬ ವ್ಯಕ್ತಿಯು ಪಾರ್ಶ್ವವಾಯುವಿಗೆ ಒಳಗಾದಾಗ ಇತರರ ಮೇಲೆ ಅವಲಂಬಿತನಾಗುವಂತೆ,  ಅಥವಾ ಅಸಹಾಯಕನಾಗಿರಬಾರದು.  ದೇವರ ಕೃಪೆಯಿಂದ ಭಿಕ್ಷೆ ಬೇಡದೆ ಜೀವನ ನಡೆಸಬಹುದು.
*ದೇಹಾಂತ ತವ ಸಾನಿಧ್ಯಮ್* ಅಂದರೆ ಸಾವು ಬಂದಾಗ ದೇವರು ಮುಂದೆ ಇರಬೇಕು.  ಭೀಷ್ಮ ಪಿತಾಮರ ಮರಣದ ಸಮಯದಲ್ಲಿ, ದೇವರು (ಕೃಷ್ಣ ) ಅವರ ಮುಂದೆ ನಿಂತಿದ್ದರು.  ಅವನನ್ನು ನೋಡಿ ಪ್ರಾಣ ಬಿಟ್ಟರು
 *ದೇಹಿಮೇ ಪರಮೇಶ್ವರ*
ಅಂದರೆ ಓ ದೇವರೇ, ನಮಗೆ ಅಂತಹ ವರವನ್ನು ನೀಡು. 

* ದೇವರನ್ನು ಪ್ರಾರ್ಥಿಸುವಾಗ ಮೇಲಿನ ಶ್ಲೋಕವನ್ನು ಪಠಿಸಿ. * ಕಾರು, ಬಂಗಲೆ, ಹುಡುಗ, ಹುಡುಗಿ, ಗಂಡ, ಹೆಂಡತಿ, ಮನೆ, ಹಣ ಇತ್ಯಾದಿಗಳನ್ನು ಕೇಳಬೇಡಿ (ಸಂಸಾರಿಕ ವಿಷಯಗಳು), ಈ ಅರ್ಹತೆಯು ನಿಮ್ಮ ಅರ್ಹತೆಗೆ ಅನುಗುಣವಾಗಿ ಈ ದೇವರು ನಿಮಗೆ ನೀಡುತ್ತಾನೆ.  ಅದಕ್ಕಾಗಿಯೇ ದರ್ಶನ ಮಾಡಿದ ನಂತರ ಪ್ರತಿಯೊಬ್ಬರು ಈ ಪ್ರಾರ್ಥನೆಯನ್ನು ಕುಳಿತು ಪ್ರಾರ್ಥಿಸಬೇಕು.  ಇದು ಪ್ರಾರ್ಥನೆ, ವಿಜ್ಞಾಪನೆ ಅಲ್ಲ.  ವಿಜ್ಞಾಪನೆಯು ಲೌಕಿಕ ವಿಷಯಗಳಿಗಾಗಿ.  ಉದಾಹರಣೆಗೆ, ಮನೆ, ವ್ಯವಹಾರ, ಉದ್ಯೋಗ, ಮಗ, ಮಗಳು, ಲೌಕಿಕ ಸುಖಗಳು, ಸಂಪತ್ತು ಅಥವಾ ಇತರ ವಿಷಯಗಳಿಗಾಗಿ, ಬೇಡಿಕೆಯಿಡುವುದು.

      'ಪ್ರಾರ್ಥನೆ' ಎಂಬ ಪದದ ಅರ್ಥ 'ಪ್ರಾ' ಎಂದರೆ 'ವಿಶೇಷ', ವಿಶಿಷ್ಟ, ಉತ್ತಮ ಮತ್ತು 'ಆರ್ಥನಾ' ಎಂದರೆ ವಿನಂತಿ.  ಪ್ರಾರ್ಥನೆ ಎಂದರೆ ವಿಶೇಷ ವಿನಂತಿ. *
           ದೇವಾಲಯದಲ್ಲಿ ದೇವರ ದರ್ಶನವನ್ನು ಯಾವಾಗಲೂ ತೆರೆದ ಕಣ್ಣುಗಳಿಂದ ಮಾಡಬೇಕು.  ಕೆಲವರು ಕಣ್ಣು ಮುಚ್ಚಿಕೊಂಡು ಅಲ್ಲಿ ನಿಲ್ಲುತ್ತಾರೆ.  ಏಕೆ ನಮ್ಮ ಕಣ್ಣುಗಳನ್ನು ಮುಚ್ಚಬೇಕು? ನಾವು ದೇವರ ದರ್ಶನಕ್ಕೆ ಬಂದಿದ್ದೇವೆ.  ದೇವರ ಸ್ವರೂಪವನ್ನು, ಪಾದಗಳಿಂದ ಮುಖದವರೆಗಿನ ಸೌಂದರ್ಯದ ಪೂರ್ಣ ಆನಂದವನ್ನು ಪಡೆಯಿರಿ. ನಿಮ್ಮ ಕಣ್ಣುಗಳನ್ನು ದೇವರ ಸ್ವರೂಪದಿಂದ ತುಂಬಿಸಿ. 
       * ನೀವು ದರ್ಶನದ ನಂತರ ಹೊರಗೆ ಕುಳಿತಾಗ, ನಂತರ ನೀವು ಕಣ್ಣುಗಳನ್ನು ಮುಚ್ಚಿಕೊಂಡು ನೋಡಿದ ಸ್ವರೂಪವನ್ನು ಧ್ಯಾನಿಸಿ.             
*ಇದನ್ನು ನಿಮ್ಮ ಆಪ್ತರಿಗೆ ರವಾನಿಸಿ*🙏 ಹರಿಃ ಓಂ

Monday, 15 March 2021

ಉಚ್ಚಿಷ್ಟಮ್ ಎಂದರೆ ಎಂಜಲು

*ಉಚ್ಚಿಷ್ಟಮ್ ಎಂದರೆ ಎಂಜಲು .* 

*ಯಾವ ಐದು ವಸ್ತುಗಳು ಎಂಜಲು* 

ಇದೊಂದು ಸುಭಾಷಿತಕಾರು ಬರೆದ ಒಂದು ಸುಭಾಷಿತ
ಆದರೆ ಸತ್ಯ .... ಯಾವ ಐದು ವಸ್ತುಗಳು ಅಪವಿತ್ರ ಆದರೂ ಪವಿತ್ರ . ಇಲ್ಲಿ ಯಾವುದೂ ಅಪವಿತ್ರವಲ್ಲ ಅನ್ನುವದೆ ಅವರ ಉದ್ದೇಶ ಓದಿ

*ಉಚ್ಚಿಷ್ಟಮ್ ಶಿವನಿರ್ಮಾಲ್ಯಂ ವಮನಮ್ ಶವಕರ್ಪಟಮ್ ಕಾಕವಿಷ್ಠಾಸಮುತ್ಪನ್ನಮ್ ಪಂಚೈತೇತಿಪವಿತ್ರಕಾಃ*

ಅಂದರೆ .. *ಎಂಜಲು, ಶಿವನ ನಿರ್ಮಾಲ್ಯ, ವಾಂತಿ, ಹೆಣದ ಬಟ್ಟೆ, ಕಾಗೆಯ ಮಲದಿಂದ ಹುಟ್ಟಿದ್ದು* . ಈ ಐದು ಅತ್ಯಂತ ಪವಿತ್ರವಾದವುಗಳು...!! ಎಂದು .

1. *ಉಚ್ಚಿಷ್ಟಮ್* - ಎಂದರೆ *ಎಂಜಲು* .

*ಹಾಲು ಕರುವಿನ ಎಂಜಲು. ಹಸುವಿನ ಹಾಲನ್ನು ಕರು ಕುಡಿದು ಹಾಗೇ ಬಿಟ್ಟಿರುತ್ತದೆ . ಆ ಎಂಜಲು ಹಾಲನ್ನೇ ನಾವು ಉಪಯೋಗಿಸುತ್ತೇವೆ. ಕರುವಿನಿಂದ ಎಂಜಲಾದ ಹಾಲು ದೇವರಿಗೆ , ಪಂಚಾಮೃತಾಭಿಷೇಕಕ್ಕೆ ಬೇಕಾದ ಅತ್ಯಂತ ಪವಿತ್ರ ವಸ್ತು.*

2. *ಶಿವನಿರ್ಮಾಲ್ಯಮ್* - ಎಂದರೆ *ಶಿವನ ಜಟೆಯಿಂದ ಹೊರಗೆ ಬಂದ ಗಂಗೆ.*

*ಗಂಗಾ ನದಿ ಸ್ವರ್ಗಲೋಕದಿಂದ ಭೂಲೋಕಕ್ಕೆ ಬರುವಾಗ ಅಹಂಕಾರದಿಂದ ಬರುತ್ತಿದ್ದಳು . ಆಗ ಗಂಗೆಯ ಗರ್ವವನ್ನು ದಮನ ಮಾಡುವುದಕ್ಕಾಗಿ ಪರಶಿವನು ಆ ಗಂಗೆಯನ್ನು ತನ್ನ ಜಟೆಯ ಮಧ್ಯೆ ಕಟ್ಟಿಹಾಕಿಬಿಟ್ಟ. ಅನಂತರ ಆ ಜಟೆಯಿ೦ದ ಗಂಗಾನದಿಯನ್ನು ಹೊರಕೆ ಹಾಕಿದ. ಶಿವನ ಜಟೆಯಲ್ಲಿದ್ದು ಅಲ್ಲಿಂದ ಮುಕ್ತಳಾದ್ದರಿಂದ ಗಂಗಾನದಿಯು ಶಿವನ ನಿರ್ಮಾಲ್ಯವಾಯಿತು. ಆದರೂ ಈ ಗಂಗೆಯು ಪವಿತ್ರ.*

3. *ವಮನಮ್* - ಎಂದರೆ *ವಾಂತಿ (ಜೇನುತುಪ್ಪ).* 

*ಜೇನುಹುಳುಗಳು ಬೇರೆಬೇರೆಯ ಗಿಡಮರಗಳಿಂದ ಮಕರಂದವನ್ನು ಬಾಯಲ್ಲಿ ಹಿಡಿದು ತಂದು, ಬಾಯಿಂದಲೇ ಆ ಮಕರಂದವನ್ನು ಗೂಡಿನಲ್ಲಿ ಇಟ್ಟಿರುತ್ತವೆ. ಅದೇ ಜೇನು ತುಪ್ಪ. ಇದು ಜೇನುಹುಳುಗಳ ವಮನ. ಆದರೆ ಜೇನು ತುಪ್ಪ ಪ್ರಶಸ್ತವಾದದ್ದು.*

4. *ಶವಕರ್ಪಟಮ್* - ಎಂದರೆ *ಶವದ ಬಟ್ಟೆ (ರೇಷ್ಮೆ ವಸ್ತ್ರ).* 

*ರೇಷ್ಮೆ ಹುಳುಗಳನ್ನು ಬೇಯಿಸಿ, ಸಾಯಿಸಿ ಅದರ ನೂಲಿನಿಂದ ಸಿದ್ದವಾದ ವಸ್ತು.*

5. *ಕಾಕವಿಷ್ಠಾಸಮುತ್ಪನ್ನಮ್* - ಅಂದರೆ *ಕಾಗೆಯ ಮಲದಿಂದ ಹುಟ್ಟಿದ್ದು (ಅರಳಿ ಮರ).* 

*ಕಾಗೆಯು ಅರಳಿಮರದ ಬೀಜವನ್ನು ತಿಂದಾಗ, ಅದು ಕಾಗೆಯ ಮಲದ ಮೂಲಕ ಹೊರಗಡೆಗೆ ಎಲ್ಲೋ .. ಬಿದ್ದಾಗ ಅದರಿಂದ ಅರಳಿ ಮರವು ಹುಟ್ಟುತ್ತದೆ. ಅಶ್ವತ್ಥವೃಕ್ಷವು ತ್ರಿಮೂರ್ತಿಸ್ವರೂಪದ್ದಾಗಿರುತ್ತದೆ.*

ಇದೊಂದು ಚಮತ್ಕಾರಿಕ ಸುಭಾಷಿತ. ಮಡಿ, ಮೈಲಿಗೆ ಎಂದು ಬಹಳ ಹಾರಾಡುವವರಿಗೆ, ಕವಿಯು ಎಲ್ಲವೂ ನೈರ್ಮಾಲ್ಯವೇ ಎಂದು ಚಾಟಿ ಬೀಸಿದ್ದಾನೆ. 

ಲೋಕದಲ್ಲಿ ಅಪವಿತ್ರವೆಂಬುದು, ಅಶುದ್ಧವೆಂಬುದು ನಮ್ಮ *"ಮನಸ್ಸು"* ಮಾತ್ರ. *"ಮನಸ್ಸ"* ನ್ನು ಶುದ್ಧವಾಗಿಸಿದಲ್ಲಿ ಸಕಲವೂ ಪವಿತ್ರವಾಗಿಯೇ ಇರುವುದು.

ಆಹಾರಕ್ಕೆ ಭಕ್ತಿಯನ್ನು ಸೇರಿಸಿದರೆ *ನೈವೇಧ್ಯ* ವಾಗುವುದು.
ನಿರಾಹಾರಕ್ಕೆ ಭಕ್ತಿಯನ್ನು ಸೇರಿಸಿದರೆ *ಉಪವಾಸ* ವಾಗುವುದು... 
ನೀರಿಗೆ ಭಕ್ತಿಯನ್ನು ಸೇರಿಸಿದರೆ *ತೀರ್ಥ* ವಾಗುವುದು... 
ಮಾತಿಗೆ ಭಕ್ತಿಯನ್ನು ಸೇರಿಸಿದರೆ *ಸ್ತೋತ್ರ* ವಾಗುವುದು... 
ಕೇಳುವುದಕ್ಕೆ ಭಕ್ತಿಯನ್ನು ಸೇರಿಸಿದರೆ *ಮಂತ್ರ* ವಾಗುವುದು.. 
ಆಲೋಚನೆಗೆ ಭಕ್ತಿಯನ್ನು ಸೇರಿಸಿದರೆ *ಧ್ಯಾನ* ವಾಗುವುದು.. 
ಕೆಲಸಗಳಿಗೆ ಭಕ್ತಿಯನ್ನು ಸೇರಿಸಿದರೆ *ಪೂಜೆ* ಯಾಗುವುದು. 
ಪ್ರೀತಿಗೆ ಭಕ್ತಿಯನ್ನು ಸೇರಿಸಿದರೆ *ಆರಾಧನೆ* ಯಾಗುವುದು.. 
ಸ್ನೇಹಕ್ಕೆ ಭಕ್ತಿಯನ್ನು ಸೇರಿಸಿದರೆ *ಸತ್ಸಂಗ* ವಾಗುವುದು... 
ಬದುಕಿಗೇ.. ಭಕ್ತಿಯನ್ನು ಸೇರಿಸಿದರೆ ಬದುಕೇ *ಪಾವನ* ವಾಗುವದು....

Wednesday, 3 March 2021

ಸಾಡೇಸಾಥ್

#ಓಂ_ಶಂ_ಶನೈಶ್ಚರಾಯ_ನಮಹ

ಇಂದು ನಾವು "ಸಾಡೇಸಾಥ್" ಬಗ್ಗೆ ಸ್ವಲ್ಪ ತಿಳಿದುಕೊಳ್ಳಲು ಪ್ರಯತ್ನಿಸೋಣ, ಹೆಚ್ಚಿನ ಜನರು ಈ ಪದವನ್ನು ಸಹ ಕೇಳಲು ಇಷ್ಟಪಡುವುದಿಲ್ಲ ಮತ್ತು ಕೇಳಿದರೆ ಹೆದರುತ್ತಾರೆ.

ಸಾಡೇಸಾಥ್ ಎಂದರೆ ಏಳು ಮತ್ತು ಅರ್ಧ ಎಂಬ ಅರ್ಥವಾಗುತ್ತದೆ ಸಾಮಾನ್ಯವಾಗಿ  ಶನಿ ಮಹಾತ್ಮ ಒಂದು ರಾಶಿಯನ್ನು ದಾಟಲು 2.5 ವರ್ಷಗಳನ್ನು ತೆಗೆದುಕೊಳ್ಳುತ್ತಾನೆ, ಕೆಲವೊಮ್ಮೆ 3 ವರ್ಷಗಳು ಸಹ ಆಗುತ್ತದೆ.

ಗ್ರಹಗಳಲ್ಲಿ ಅತಿ ನಿಧಾನವಾಗಿ ಚಲಿಸುವ ಗ್ರಹವೆಂದರೆ ಅದು ಶ್ರೀ ಶನಿ ಮಹಾತ್ಮ, ದ್ವಾದಶ ರಾಶಿ ಚಕ್ರವನ್ನು ಒಂದು ಸುತ್ತು ಪೂರ್ಣಗೊಳಿಸಲು ಶನಿ ಮಹಾತ್ಮ ತೆಗೆದುಕೊಳ್ಳುವ ಸಮಯ ೩೦ ವರ್ಷಗಳು.

ಯಾವಾಗ ಶನಿ ಮಹಾತ್ಮ ನಿಮ್ಮ ರಾಶಿಯಿಂದ 12 ನೇ ಮನೆಗೆ ಪ್ರವೇಶ ಮಾಡುತ್ತಾನೋ ಆಗ ಸಾಡೇಸಥ್ ಪ್ರಾರಂಭವಾಗುತ್ತದೆ.

ಶನಿಯು 12 ನೇ ಮನೆ, 1 ನೇ ಮನೆಯಾದ ಜನ್ಮ ರಾಶಿ ಮತ್ತು 2 ನೇ ಮನೆಗಳಲ್ಲಿ ಸಾಗುವಾಗ ಆ ಕಾಲಘಟ್ಟವನ್ನು ಸಾಡೇಸಾಥ್ ಎಂದು ಕರೆಯಲಾಗುತ್ತದೆ.

12 ನೇ ಮನೆಯಲ್ಲಿ 2.5 ವರ್ಷಗಳು, ಜನ್ಮ ರಾಶಿಯಲ್ಲಿ 2.5 ವರ್ಷಗಳು ಮತ್ತು ಎರಡನೇ ಮನೆಯಲ್ಲಿ 2.5 ವರ್ಷಗಳು, ಸಂಪೂರ್ಣವಾಗಿ 7.5 ವರ್ಷಗಳ ಕಾಲ ಒಬ್ಬ ಮನುಷ್ಯ ಶನಿ ಮಹಾತ್ಮನ ಪ್ರಭಾವದಲ್ಲಿ ಇರುತ್ತಾನೆ.

ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಸರಾಸರಿ 3 ಸುತ್ತುಗಳ ಸಾಡೇಸಾತ್ ನೋಡುತ್ತಾನೆ.

ಮೊದಲ ಸುತ್ತಿನ ಸಾಡೇಸಾತ್ ಹಾದುಹೋಗಲು ಕಠಿಣವಾಗಿರುತ್ತದೆ, ಎರಡನೇ ಸುತ್ತು ಅಷ್ಟು ಕಠಿಣವಿರುವುದಿಲ್ಲ ಮತ್ತು ಅಂತಿಮ ಸುತ್ತನ್ನು ಸಾಮಾನ್ಯವಾಗಿ ಮರಣ ಶನಿ ಎಂದು ಕರೆಯಲಾಗುತ್ತದೆ.

ಸಾಡೇಸಾತ್ ಒಬ್ಬರ ಜೀವನದಲ್ಲಿ ವೇಗ ನಿಯಂತ್ರಣ ಇದ್ದಂತೆ, ಇದು ವೇಗವಾಗಿ ಚಲಿಸುವ ವಾಹನವನ್ನು ನಿಲ್ಲಿಸಿ, ಯೋಚಿಸಿ ಮತ್ತು ಅನುಭವದೊಂದಿಗೆ ಮುಂದುವರಿಯುವಂತೆ ಮಾಡುತ್ತದೆ.

ನಿಮಗೆ ತೊಂದರೆ ಕೊಡುವುದು ಶನಿ ಮಹಾತ್ಮ ಅಲ್ಲ, ಸ್ವತಃ ನಿಮ್ಮ ಕರ್ಮ, ಅವರವರ ಕರ್ಮಾನುಸಾರವಾಗಿ ಫಲ ನೀಡಲು ಭಗವಂತ ಮಹಾದೇವನಿಂದ ನೇಮಿಸಲ್ಪಟ್ಟ ಮಾಸ್ತರ್ ಶನಿ ಎಂದು ಜನರು ಅರಿತುಕೊಳ್ಳಬೇಕು.

ನಿಮ್ಮ ಕೆಟ್ಟ ಕರ್ಮವನ್ನು ಶುದ್ಧೀಕರಿಸಲು ಶನಿ ಮಹಾತ್ಮ ಸಹಾಯ ಮಾಡುತ್ತಾನೆ, ಸಾಡೆ ಸಾಥ್ ಎನ್ನುವುದು ಒಬ್ಬ ವ್ಯಕ್ತಿಯು ಜೀವನದ ಎಲ್ಲಾ ಅಂಶಗಳು ಆಯಾಗಳ ಬಗ್ಗೆ ಕಲಿಯುವ ಕಾಲ, ಆದರೆ ಕಲಿಕೆಯ ಪ್ರಕ್ರಿಯೆಯು ಮಾತ್ರ ಕಠಿಣವಾಗಿರುತ್ತದೆ.

ಒಬ್ಬ ವ್ಯಕ್ತಿಯು ತನ್ನ ಸ್ವಂತ ಜಾತಕದಲ್ಲಿ ಒಳ್ಳೆಯ ದಶಾ ಭುಕ್ತಿಯಲ್ಲಿದ್ದರೆ ಅವನು ಹೆಚ್ಚು ತೊಂದರೆಯಿಲ್ಲದೆ ಸಾಡೇ ಸಾಥನ್ನು ಹಾದುಹೋಗಬಹುದು, ಆದರೆ ದಶಾ ಭುಕ್ತಿ ಪ್ರತಿಕೂಲವಾಗಿದ್ದರೆ ಅದು ಬೆಂಕಿಯಲ್ಲಿ ನಡೆಯುವಂತಾಗುತ್ತದೆ.

ಸಾಡೇಸಾತ್ ಕೊನೆಯ ಹಂತದಲ್ಲಿ ನಿಮ್ಮ ಜೀವನ ರೂಪಿಸಿಕೊಳ್ಳಲು ಶನಿ ಮಹಾತ್ಮ ಬುನಾದಿ ಹಾಕಿಕೊಡುತ್ತಾರೆ, ಅದು ಬಲವಾದ ಅನುಭವಗಳಿಂದ ತುಂಬಿರುತ್ತದೆ.

ಸಾಡೇಸಾತ್ ಪ್ರಕ್ರಿಯೆ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಸಂಪೂರ್ಣವಾಗಿ ತಿಳಿಸುತ್ತೇನೆ.

ಮುಂದುವರಿಯುವುದು...

#JyothishyaAacharya #JyothishyaRatna #VijayendraRaj #KaalaPurushaGnyaniAstrology #KPGAstrology #KPGVaasthu #KPG #Astrology #Vaasthu

Wednesday, 3 February 2021

ಸಪ್ತ ಋಷಿಗಳು

💚💓 ಸಪ್ತ ಋಷಿಗಳು 💓💚
    
    ಸಾಮಾನ್ಯವಾಗಿ ಹೆಚ್ಚಿನವರು ಸಪ್ತ ಋಷಿ ಎನ್ನುವ ಶಬ್ಧವನ್ನು ಕೇಳಿರುತ್ತಾರೆ. ಆದರೆ ಸಪ್ತ ಋಷಿಗಳು ಯಾರು..? ಅವರ ಕೆಲಸವೇನು..? ಎಂಬೂದರ ಕುರಿತು ಹೆಚ್ಚಿನವರಿಗೆ ಅರಿವಿಲ್ಲ. ಸಪ್ತ ಋಷಿಗಳೆಂದರೆ ವೈದಿಕ ಕ್ಷೇತ್ರದ 7 ಶ್ರೇಷ್ಟ ಋಷಿಗಳು. ಅವರು ಯೋಗದ ಶಕ್ತಿಯಿಂದ ದೀರ್ಘಾಯುಷ್ಯವನ್ನು ಹೊಂದಿದವರು. ಈ 7 ಋಷಿಗಳನ್ನು ಅಮರರು ಎನ್ನಲಾಗುತ್ತದೆ. ಭೂಮಿಯ ಮೇಲಿನ ಸಮತೋಲನವನ್ನು ಕಾಪಾಡಿಕೊಳ್ಳಲು, ಮಾನವ ಜನಾಂಗಕ್ಕೆ ಮಾರ್ಗದರ್ಶನ ನೀಡಲು, ದೇವರುಗಳ ಪ್ರತಿನಿಧಿಯಾಗಿ ಸೇವೆಸಲ್ಲಿಸಲು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ಅವರನ್ನು ಭೂಮಿಯಲ್ಲಿ ನೇಮಿಸುತ್ತಾರೆ. ಬೃಹದರಣ್ಯಕ ಉಪನಿಷತ್‌ನ ಪ್ರಕಾರ, ಪ್ರಸ್ತುತ ಮನ್ವಂತರದ ಸಪ್ತ ಋಷಿಗಳು ಅಥವಾ 7 ಋಷಿಗಳು ಇಲ್ಲಿದ್ದಾರೆ.

🙏 ​ಭರದ್ವಜ ಋಷಿ

ಭರಧ್ವಜ ಋಷಿಗಳು ವೈಧಿಕ ಕಾಲದ ಶ್ರೇಷ್ಠ ಋಷಿಗಳಲ್ಲೊಬ್ಬರಾಗಿದ್ದರು ಮತ್ತು ಇವರು ಅಂಗೀರಸ ಮುನಿಯವರ ವಂಶಸ್ಥರಾಗಿದ್ದರು. ಭರಧ್ವಜ ಋಷಿಗಳ ತಂದೆ ದೇವಋಷಿ ಬೃಹಸ್ಪತಿ. ಋಷಿ ಭರಧ್ವಜರನ್ನು ಆಯುರ್ವೇದದ ಲೇಖಕ ಎಂದು ಪರಿಗಣಿಸಲಾಗುತ್ತದೆ. ಭರಧ್ವಜ ಋಷಿಗಳು ದ್ರೋಣಾಚಾರ್ಯರ ತಂದೆ ಹಾಗೂ ಇವರ ಆಶ್ರಮವನ್ನು ಇಂದಿಗೂ ನಾವು ಅಲಹಾಬಾದ್‌ನಲ್ಲಿ ನೋಡಬಹುದು. ಭರಧ್ವಜ ಋಷಿಗಳು ದೇವಸ್ತ್ರಗಳ ಹಾಗೂ ಯುದ್ಧ ಕಲೆಯ ಪ್ರವೀಣರಾಗಿದ್ದರು. ಭರಧ್ವಜ ಋಷಿಗಳ ಪತ್ನಿ ಸುಸೀಲಾ ಹಾಗೂ ದೇವವರ್ಣಿನಿ ಎನ್ನುವ ಮಗಳು ಮತ್ತು ಗರ್ಗಾ ಎನ್ನುವ ಮಗನಿದ್ದನು. ದ್ರೋಣಾಚಾರ್ಯರು ಅಪ್ಸರ ಮತ್ತು ಭರಧ್ವಜ ಋಷಿಗಳ ಮಗನಾಗಿದ್ದಾನೆ. ಕೆಲವು ಪುರಾಣಗಳ ಪ್ರಕಾರ, ಭರಧ್ವಜ ಋಷಿಯು ಗಂಗಾ ನದಿಯ ದಡದಲ್ಲಿ ಭರತ ಎನ್ನುವ ರಾಜನಿಗೆ ಸಿಕ್ಕಿದನು. ಅಲ್ಲಿಂದ ಆತನನ್ನು ಭರತ ರಾಜನು ದತ್ತುಮಗನಾಗಿ ಸಾಕಿದನೆಂದು ಹೇಳಲಾಗುತ್ತದೆ.

🙏 ವಿಶ್ವಾಮಿತ್ರ

ಸಪ್ತ ಋಷಿಗಳಲ್ಲಿ ವಿಶ್ವಾಮಿತ್ರ ಮುನಿಯು ಅತ್ಯಂತ ಪ್ರಸಿದ್ಧ ಋಷಿಯಾಗಿದ್ದರು. ಗಾಯತ್ರಿ ಮಂತ್ರವನ್ನು ಕಂಡುಹಿಡಿದ ವೇದಗಳ ಕಾಲದ ಪ್ರಮುಖ ಋಷಿಮುನಿಗಳಲ್ಲಿ ವಿಶ್ವಾಮಿತ್ರರು ಒಬ್ಬರಾಗಿದ್ದಾರೆ. ಬ್ರಹ್ಮರ್ಷಿಯ ಮಟ್ಟಕ್ಕೆ ಏರಲು ಕೇವಲ ಆತನ ಅರ್ಹತೆ ಮಾತ್ರವಲ್ಲ, ಅದಕ್ಕೆ ಬ್ರಹ್ಮ ದೇವನ ಅನುಮತಿಯೂ ಬೇಕಾಗುತ್ತದೆ. ಆದರೆ ವಿಶ್ವಾಮಿತ್ರರ ವಿಷಯದಲ್ಲಿ ಇದು ಸುಳ್ಳಾಗಿದೆ. ವಿಶ್ವಾಮಿತ್ರರು ಕೇವಲ ತಮ್ಮ ಸ್ವ ಅರ್ಹತೆಯಿಂದ ಬ್ರಹ್ಮರ್ಷಿಗಳಾದವರು.

ವಸಿಷ್ಠರೊಂದಿಗಿನ ವಿಶ್ವಾಮಿತ್ರರ ಹೋರಾಟ ಗಣನೀಯವಾಗಿದೆ. ವಿಶ್ವಾಮಿತ್ರರು ಬ್ರಾಹ್ಮಣರಾಗಿರಲಿಲ್ಲ. ಬದಲಾಗಿ ಇವರು ಕ್ಷತ್ರಿಯ ಧರ್ಮದಲ್ಲಿ ಜನಿಸಿದವರಾಗಿದ್ದರು. ಒಮ್ಮೆ ವಿಶ್ವಾಮಿತ್ರರ ನಡುವೆ ಮತ್ತು ವಸಿಷ್ಠರ ನಡುವೆ ಹೋರಾಟ ನಡೆದಾಗ ವಿಶ್ವಾಮಿತ್ರರು ಇದರಲ್ಲಿ ಸೋಲನ್ನು ಅನುಭವಿಸುತ್ತಾರೆ. ವಸಿಷ್ಠರ ವಿರುದ್ಧದ ಸೋಲಿನಿಂದ ವಿಶ್ವಾಮಿತ್ರರು ತಪಸ್ಸಿನಿಂದ ಪಡೆದ ಶಕ್ತಿಯು ದೈಹಿಕ ಶಕ್ತಿಗಿಂತ ಮಿಗಿಲಾದದ್ದು ಎಂದು ಅರಿತುಕೊಂಡರು. ಆಗ ವಿಶ್ವಾಮಿತ್ರರು ತನ್ನ ರಾಜ್ಯವನ್ನು ದಾನ ಮಾಡಿ ವಸಿಷ್ಢರಿಗಿಂತಲೂ ದೊಡ್ಡ ಋಷಿಯಾಗಬೇಕೆಂದು ಹೊರಡುತ್ತಾರೆ. ಅಂದಿನಿಂದ ಅವರ ವಿಶ್ವಾಮಿತ್ರ ಎನ್ನುವ ಹೆಸರನ್ನು ಪಡೆದರು. ವಿಶ್ವಾಮಿತ್ರರ ಮೂಲ ಹೆಸರು ಕೌಶಿಕ. ಸಾವಿರಾರು ವರ್ಷಗಳ ಕಠಿಣ ತಪಸ್ಸಿನಿಂದ, ಜ್ಞಾನದಿಂದ, ಪ್ರಯೋಗಗಳಿಂದ ಕೊನೆಗೂ ವಿಶ್ವಾಮಿತ್ರರು ಬ್ರಹ್ಮ ಮತ್ತು ವಸಿಷ್ಠರಿಂದ ಬ್ರಹ್ಮರ್ಷಿ ಎನ್ನುವ ಬಿರುದನ್ನು ಪಡೆದುಕೊಂಡರು.

🙏 ​ವಸಿಷ್ಠ ಋಷಿ

ವಸಿಷ್ಠ ಮುನಿಗಳು ಮನ್ವಂತರದಲ್ಲಿನ ಸಪ್ತಋಷಿಗಳಲ್ಲಿ ಒಬ್ಬರು ಮತ್ತು ಅರುಂಧತಿ ಯ ಪತಿ. ವಸಿಷ್ಠ ಮಹರ್ಷಿಯು ಬ್ರಹ್ಮನ ಮಾನಸಪುತ್ರದಿಂದ ಜನಿಸಿದ ಮಗ. ಹಾಗೂ ಸೂರ್ಯ ವಂಶದ ಅಥವಾ ಸೌರ ರಾಜವಂಶದ ರಾಜಗುರುವಾಗಿದ್ದವರು. ವಸಿಷ್ಠರು ಚುನಾವಣಾ ಜ್ಯೋತಿಷ್ಯ ಕುರಿತ ಗ್ರಂಥವಾದ ವಸಿಷ್ಠ ಸಂಹಿತೆಯ ಲೇಖಕರು. ಋಗ್ವೇದದ ಸ್ತೋತ್ರಗಳಲ್ಲಿ ವಸಿಷ್ಠ ಬ್ರಹ್ಮರ್ಷಿಯನ್ನು ಮತ್ತು ಆತನ ಕುಟುಂಬವನ್ನು ವೈಭವೀಕರಿಸಲಾಗಿದೆ. ಭಗವಾನ್‌ ರಾಮನು ಕೇಳಿದ ಲೌಕಿಕ ಪ್ರಶ್ನೆಗಳಿಗೆ ವಸಿಷ್ಠ ಮಹರ್ಷಿ ಉತ್ತರವನ್ನು ನೀಡುತ್ತಾನೆ. ಇವುಗಳೇ ಯೋಗ ವಸಿಷ್ಠ ಎನ್ನುವ ಗ್ರಂಥದ ಸಂದರ್ಭ ಮತ್ತು ವಿಷಯವಾಗಿದೆ.

🙏 ​ಗೌತಮ ಮಹರ್ಷಿ
 
ಮಹರ್ಷಿ ಗೌತಮರು ಸಪ್ತ ಋಷಿಗಳಲ್ಲಿ ಒಬ್ಬರು ಹಾಗೂ ಇವರು ಅಂಗೀರಸ ವಂಶಕ್ಕೆ ಸೇರಿದವರಾಗಿದ್ದರು. ಗೌತಮ ಮಹರ್ಷಿಗಳು ಗವತಮ ಧರ್ಮ ಸೂತ್ರವನ್ನು, ಋಗ್ವೇದದ ಮತ್ತು ಸಾಮವೇದದ ಮಂತ್ರಗಳನ್ನು ಬರೆದಿದ್ದಾರೆ. ಗೌತಮ ಮುನಿಗಳು ಬ್ರಹ್ಮ ದೇವನ ಮಗಳಾದ ಅಹಲ್ಯಾಳನ್ನು ವಿವಾಹವಾಗುತ್ತಾರೆ. ಬ್ರಹ್ಮನು ಸೂಕ್ತ ಸಮಯದಲ್ಲಿ ಯಾರು ಭೂಮಿಯನ್ನು ಸುತ್ತುತ್ತಾರೋ ಅವರಿಗೆ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡುವುದಾಗಿ ಘೋಷಿಸುತ್ತಾನೆ. ಆಗ ಎಲ್ಲಾ ಋಷಿ, ಮುನಿಗಳು ಷರತ್ತನ್ನು ಗೆಲ್ಲಲು ಮುಂದಾಗುತ್ತಾರೆ ಆದರೆ ಗೌತಮ ಮಹರ್ಷಿಗಳು ಒಂದು ದೈವಿಕ ಹಸುವಿನ ಸುತ್ತಲೂ ಸುತ್ತುತ್ತಾರೆ. ಆಗ ಅವರ ಬುದ್ಧಿವಂತಿಕೆಯನ್ನು ಹಾಗೂ ಷರತ್ತಿನಲ್ಲಿ ಗೆಲುವನ್ನು ನೋಡಿದ ಬ್ರಹ್ಮನು ತನ್ನ ಪುತ್ರಿ ಅಹಲ್ಯಾಳನ್ನು ಗೌತಮ ಮುನಿಗಳಿಗೆ ವಿವಾಹ ಮಾಡಿಕೊಡುತ್ತಾರೆ. ಗೌತಮ ಋಷಿ ಅಹಂಕಾರವಿಲ್ಲದ ವ್ಯಕ್ತಿ. ದೇಶದಲ್ಲಿ ಬರಗಾಲ ಬಂದಾಗ ಅವರು ಮಳೆಗಾಗಿ ವರುಣ ದೇವನನ್ನು ಕಠಿಣ ಧ್ಯಾನದ ಮೂಲಕ ಒಲಿಸಿಕೊಂಡು ಜನರನ್ನು ಬರಗಾಲದಿಂದ ಮುಕ್ತಿಗೊಳಿಸಿದವರು.

🙏 ​ಅತ್ರಿ ಮಹರ್ಷಿ

ಅತ್ರಿ ಮಹರ್ಷಿ ಕೂಡ ಬ್ರಹ್ಮ ದೇವನ ಮಗ ಹಾಗೂ ಮನ್ವಂತರದ ಸಪ್ತ ಋಷಿಗಳಲ್ಲಿ ಒಬ್ಬರು. ಪವಿತ್ರ ದಾರಗಳನ್ನು ಪ್ರತಿಪಾದಿಸಿದ ಋಷಿಗಳಲ್ಲಿ ಇವರೂ ಕೂಡ ಒಬ್ಬರು. ಅನುಸೂಯಾ ಅತ್ರಿ ಮಹರ್ಷಿಗಳ ಪತ್ನಿಯಾಗಿದ್ದಳು. ಅತ್ರಿಯವರನ್ನು ಪವಿತ್ರ ಮಂತ್ರಗಳ ಮಹಾನ್‌ ಅನ್ವೇಷಕರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ವನವಾಸದಲ್ಲಿದ್ದ ಶ್ರೀರಾಮನು ಇವರ ಆಶ್ರಮಕ್ಕೆ ಬಂದಾಗ ಅನೇಕ ಧರ್ಮರಹಸ್ಯಗಳನ್ನು ಶ್ರೀರಾಮನಿಗೆ ಬೋಧಿಸಿದ್ದರು. ಅಷ್ಟು ಮಾತ್ರವಲ್ಲ ಕೆಲವು ಕಾಲಗಳವರೆಗೆ ಬ್ರಹ್ಮರ್ಷಿ ಪಟ್ಟದಲ್ಲೂ ಕೂಡ ಕುಳಿತಿದ್ದರು. ಅತ್ರಿ ಮಹರ್ಷಿಗಳು ಅತ್ರಿ ಸಂಹಿತಾ ಮತ್ತು ಅತ್ರಿ ಸ್ಮೃತಿ ಎನ್ನುವ ಎರಡು ಮಹಾನ್‌ ಕೃತಿಗಳನ್ನು ಬರೆದಿದ್ದರು.

🙏 ​ಕಶ್ಯಪ ಮಹರ್ಷಿ

ಕಶ್ಯಪ ಮಹರ್ಷಿಗಳು ಅತ್ಯಂತ ಜನಪ್ರಿಯ ಹಾಗೂ ಪ್ರಾಚೀನ ಋಷಿಗಲು ಮತ್ತು ಸಪ್ತಋಷಿಗಳಲ್ಲಿ ಒಬ್ಬರಾಗಿದ್ದರು. ಕಶ್ಯಪ ಮಹರ್ಷಿಗಳು ಋಷಿ ಮಾರೀಚಿಯ ಮಗ ಮತ್ತು ಬ್ರಹ್ಮನ ಮೊಮ್ಮಗ. ಕಶ್ಯಪ ಮಹರ್ಷಿಗಳು ದೇವರ, ಅಸುರರ, ನಾಗರ, ಗರುಡರ, ವಾಮನ, ಅಗ್ನಿ, ಆದಿತ್ಯ, ದೈತ್ಯರ, ಆರ್ಯಮಾನ್‌ರ, ಮಿತ್ರ, ಪುಸಾನ, ವರುಣ ಮತ್ತು ಎಲ್ಲಾ ಮಾನವೀಯತೆಯ ತಂದೆ ಎಂದು ಹೇಳಲಾಗುತ್ತದೆ. ಕಶ್ಯಪ ಮಹರ್ಷಿಗಳು ಕಶ್ಯಪ ಸಂಹಿತೆಯ ಲೇಖಕರಾಗಿದ್ದರು. ಬ್ರಹ್ಮನ ಸೃಷ್ಟಿ ಕರ್ತವ್ಯದಲ್ಲಿ ಕಶ್ಯಪನ ಪಾತ್ರ ಮಹತ್ತರವಾದುದ್ದಾಗಿದೆ.

🙏 ​ಜಮದಗ್ನಿ

ಜಮದಗ್ನಿಯು ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ತಂದೆ. ಜಮದಗ್ನಿ ಋಷಿಯು ಬ್ರಹ್ಮನು ಸೃಷ್ಟಿಸಿದ ಪ್ರಜಾಪತಿಗಳಲ್ಲಿ ಒಬ್ಬನಾದ ಭೃಗು ಋಷಿಯ ವಂಶಸ್ಥನು. ಜಮದಗ್ನಿಯ ಪತ್ನಿ ಹೆಸರು ರೇಣುಕಾ. ಈಕೆ ಯಾವಾಗಲು ಪರಿಶುದ್ಧತೆಯ ಶಕ್ತಿಯಿಂದ ತಯಾರಿಸಿದ ಮಣ್ಣಿನ ಮಡಿಕೆಯಲ್ಲಿ ನಿರನ್ನು ತರುತ್ತಿದ್ದಳು. ಒಮ್ಮೆ ಈಕೆ ಕೊಳದಿಂದ ನೀರನ್ನು ತರುವಾಗ ಗಂಧರ್ವರನ್ನು ನೋಡುತ್ತಾಳೆ ಹಾಗೂ ಆಕೆಯ ಮನಸ್ಸು ಗಂಧರ್ವರತ್ತ ಆಕರ್ಷಿತವಾಗುತ್ತದೆ. ಇದರಿಮದಾಗಿ ಆಕೆಯ ಕೈಯಲ್ಲಿದ್ದ ಮಣ್ಣಿನ ಮಡಕೆಯು ಕರಗುತ್ತದೆ. ಇದನ್ನು ತನ್ನ ಧ್ಯಾನ ಶಕ್ತಿಯಿಂದ ಅರಿತ ಜಮದಗ್ನಿಯು ತನ್ನ ಮಕ್ಕಳನ್ನು ಕರೆದು ತಾಯಿಯನ್ನು ಕೊಲ್ಲಲು ಹೇಳುತ್ತಾನೆ. ಆದರೆ ಆತನ ಯಾವ ಮಕ್ಕಳು ಒಪ್ಪುವುದಿಲ್ಲ. ಆಗ ಜಮದಗ್ನಿಯ ಮಕ್ಕಳಲ್ಲಿ ಒಬ್ಬನಾದ ಪರಶುರಾಮನು ತಂದೆಯ ಮಾತಿಗೆ ಬೆಲೆಕೊಟ್ಟು ತಾಯಿಯ ಶಿರಚ್ಛೇದ ಮಾಡುತ್ತಾನೆ. ಜಮದಗ್ನಿಯು ತನ್ನ ಉಳಿದ ಮಕ್ಕಳು ತನ್ನ ಮಾತನ್ನು ನಿರಾಕರಿಸಿದರೆಂದು ಮಕ್ಕಳನ್ನೇ ಸಾಯಿಸುತ್ತಾನೆ.
ಇದು ಸಪ್ತ ಋಷಿಗಳ ವಿವರ.
ಓಂ ನಮೋ ಭಗವತೇ ವಾಸುದೇವಾಯ
💚💓ಕೃಷ್ಣ... ಕೃಷ್ಣ... ಕೃಷ್ಣ💓💚

Sunday, 3 January 2021

ನಂದಿಯು ಶಿವನ ಎದುರಿಗೆ ಇರಲು ಕಾರಣವೇನು?

ನಂದಿಯು ಶಿವನ ಎದುರಿಗೆ ಇರಲು ಕಾರಣವೇನು?

ನಾವು ಶಿವನ ದೇವಾಲಯಕ್ಕೆ ಭೇಟಿ ನೀಡಿದಾಗ ಶಿವನ ಮುಂದಿರುವ ನಂದಿಯನ್ನು ನೋಡಿಯೇ ಇರುತ್ತೇವೆ.  ಎಲ್ಲಾ ಶಿವನ ದೇವಾಲಯಗಳಲ್ಲಿ ಶಿವನ ಮುಂದೆ ದ್ವಾರಪಾಲಕ ನಾಗಿ ನಂದಿ ಏಕೆ ಇರುತ್ತಾನೆ ಎಂಬ ಸ್ವಾರಸ್ಯಕರವಾದ  ಕತೆಯೊಂದು ಇಲ್ಲಿದೆ.

 ಹಲವು ವರ್ಷಗಳಿಂದ ಮಕ್ಕಳಿಲ್ಲದೆ ಕೊರಗುತ್ತಿದ್ದ ಶಿಲಾದು ಮುನಿಯು ಶಿವನನ್ನು ಕುರಿತು ಕಠಿಣ ತಪಸ್ಸಿಗೆ ಕುಳಿತ.  ಶಿಲಾದುವಿನ ಕಠಿಣ ತಪಸ್ಸಿಗೆ ಒಲಿದ ಶಿವನು ಪ್ರತ್ಯಕ್ಷನಾದಾಗ ಶಿಲಾದು ಮುನಿಯು ಅಮರನಾದ ಮಗನನ್ನು ವರವಾಗಿ ಬೇಡಿಕೊಂಡನು.  ಶಿವನಿಂದ ವರವನ್ನು ಪಡೆದುಕೊಂಡ ನಂತರ ಶಿಲಾದು ಮುನಿಯು ಒಂದು ಯಜ್ಞವನ್ನು ಕೈಗೊಂಡನು.  ಯಜ್ಞ ಮಾಡುವಾಗ ಯಜ್ಞಕುಂಡದಿಂದ ಒಬ್ಬ ಬಾಲಕನು ಹೊರಬಂದನು.

ಆ ಬಾಲಕನಿಗೆ ನಂದಿ ಎಂದು ಹೆಸರಿಟ್ಟು ಆಶ್ರಮದಲ್ಲಿ ಬೆಳೆಸಿದರು.  ನಂದಿಯು ಅತಿ ಚುರುಕಾಗಿದ್ದು ಎಲ್ಲಾ ವಿದ್ಯೆಗಳನ್ನು ಅತಿ ಬೇಗನೆ ಪಾರಂಗತ ಮಾಡಿಕೊಳ್ಳುತ್ತಿದ್ದನು.  ಹೀಗೆ ಇರಬೇಕಾದರೆ ಮಿತ್ರವರ್ಣವೆಂಬ ಮಹರ್ಷಿಯು ಆಶ್ರಮಕ್ಕೆ ಬಂದರು.  ನಂದಿಯು ಮಹರ್ಷಿ ಗೆ ಸಕಲ ಗೌರವಗಳಿಂದ ಆಥಿತ್ಯವನ್ನು ನೆರವೇರಿಸಿದನು.

 ಪುಟ್ಟ ಬಾಲಕನನ್ನು ಮೆಚ್ಚಿದ ಮಹರ್ಷಿಯು ಹೊರಡುವಾಗ ದೀರ್ಘಾಯುಷ್ಮಾನ್ ಭವ ಎಂದು ಆಶೀರ್ವದಿಸಲು ಮುಂದಾಗಿ ಮತ್ತೆ ಸುಮ್ಮನಾದರು.  ಮಹರ್ಷಿಗಳು ದಿಗ್ಭ್ರಾಂತರಾಗಿ ನಿಂತದ್ದನ್ನು ಕಂಡ ಶಿಲಾದು ಮುನಿಗಳು ಏನೆಂದು ಕೇಳಿದಾಗ ಮಹರ್ಷಿಯು ಬಾಲಕನ ಆಯಸ್ಸು ಮುಗಿದಿರುವ ಬಗ್ಗೆ ತಿಳಿಸುತ್ತಾರೆ. ಈ ವಿಷಯ ಕೇಳಿದ ಶಿಲಾದು   ಮುನಿಯು ಅತ್ಯಂತ ದುಃಖಿತರಾಗುತ್ತಾರೆ.

 ಆದರೆ ನಂದಿಯು ಸ್ವಲ್ಪವೂ ವಿಚಲಿತನಾಗದೆ ಶಿವನನ್ನು ಕುರಿತು ತಪಸ್ಸಿಗೆ ಕೂರುವುದಾಗಿ ಹೇಳಿ ಹೋಗುತ್ತಾನೆ.  ನಂತರ ಹಲವು ದಿನಗಳ ಕಾಲ ಕಠಿಣ ತಪಸ್ಸನ್ನು ಆಚರಿಸುತ್ತಾನೆ. ನಂದಿಯ ಕಠಿಣ ತಪಸ್ಸನ್ನು ಮೆಚ್ಚಿದ ಶಿವನು ಪ್ರತ್ಯಕ್ಷನಾಗುತ್ತಾನೆ.  ಶಿವನನ್ನು ಕಂಡ ನಂದಿಯು ಇಡೀ ಜಗತ್ತನ್ನೇ ಮರೆತು ಶಿವನನ್ನು ನೋಡುತ್ತಾ ಮೈಮರೆಯುತ್ತಾನೆ.

 ತಾನು ತಪಸ್ಸಿಗೆ ಕೂತ ಉದ್ದೇಶವನ್ನು ಮರೆತ ನಂದಿಯು ಶಿವನಲ್ಲಿ ಎಂದಿಗೂ ನಿಮ್ಮ ಕಾಲ ಬಳಿಯಲ್ಲಿಯೇ ಸೇವಕನಾಗಿ ರುವಂತೆ ಅನುಗ್ರಹಿಸಲು ಕೇಳಿಕೊಳ್ಳುತ್ತಾನೆ.  ಅದಕ್ಕೆ ಶಿವನು ಒಪ್ಪಿ ತನ್ನ ವಾಹನ ಹಾಗೂ ದ್ವಾರಪಾಲಕ ನಾಗಿ ನೇಮಿಸಿಕೊಳ್ಳುತ್ತಾನೆ.  ಅಂದಿನಿಂದ ಶಿವ ಮಂದಿರಗಳಲ್ಲಿ ನಂದಿಯು ದ್ವಾರಪಾಲಕ ನಾಗಿ ಇರುತ್ತಾನೆ.

ಸಂಗ್ರಹ :ಮಹೋನ್ನತಿ.
ಚಿತ್ರ :ಮಹೋನ್ನತಿ.