Wednesday, 24 August 2022

ವಿನಾಯಕನ ಲೋಕ - ಸ್ವಾನಂದ ಲೋಕ!

ವಿನಾಯಕನ ಲೋಕ - ಸ್ವಾನಂದ ಲೋಕ!
ಸತ್ಯಲೋಕದಲ್ಲಿ ಬ್ರಹ್ಮ, ವೈಕುಂಠದಲ್ಲಿ ಮಹಾವಿಷ್ಣು, ಕೈಲಾಸದಲ್ಲಿ ಮಹೇಶ್ವರ.. ಹೀಗೆ ಒಬ್ಬೊಬ್ಬ ದೇವನಿಗೂ ಒಂದೊಂದು ಲೋಕ. ಹಾಗಿದ್ದಲ್ಲಿ ವಿಶ್ವಮಾನ್ಯನಾದ ವಿನಾಯಕ ಇರುವ ಲೋಕ ಯಾವುದು? ಗಣೇಶ ತನ್ನ ಅಪ್ಪ- ಅಮ್ಮನ ಜೊತೆ ಕೈಲಾಸದಲ್ಲೇ ವಿರಾಜಮಾನನಾಗಿರುತ್ತಾನೆ ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ'ಶ್ರೀ ಗಣೇಶ ಪುರಾಣ'ದ ಉಪಾಸನ ಖಂಡದ51ನೇ ಅಧ್ಯಾಯದಲ್ಲಿ ಹೇಳಿರುವಂತೆ ಗಣೇಶನಿಗೆ ಪ್ರತ್ಯೇಕ ಲೋಕವಿದೆ. 'ಸ್ವಾನಂದ ಲೋಕ' ಎಂದು ಅದರ ಹೆಸರು. ಇದನ್ನು ʼನಿಜಲೋಕʼ, ʼದಿವ್ಯಲೋಕʼವೆಂದೂ ಕರೆಯುತ್ತಾರೆ.
ಪುರಾಣಗಳಲ್ಲಿ ವರ್ಣಿಸಲ್ಪಟ್ಟಿರುವ ಇತರ ಲೋಕಗಳಿಗಿಂತ ಗಣೇಶನ ಲೋಕಕ್ಕೆ ಪ್ರತ್ಯೇಕ ಸ್ಥಾನವಿದೆ. ಈ ಲೋಕ ಐದು ಸಾವಿರ ಯೋಜನಗಳಷ್ಟು ವಿಸ್ತಾರವಾದುದು. ರತ್ನಖಚಿತವಾದ ಸುವರ್ಣಭೂಮಿಯಲ್ಲಿ ಹತ್ತು ದಿಕ್ಕುಗಳನ್ನು ಬೆಳಗುತ್ತ ಸಮಷ್ಟಿ ವೃಷ್ಟಿರೂಪ ಜಗದಾತ್ಮಕವಾಗಿ ವಿನಾಯಕನು ಇಲ್ಲಿ ನೆಲೆಸಿದ್ದಾನೆ.
ಲೋಕದ ತುಂಬೆಲ್ಲ ಇಕ್ಷು ಸಾಗರ (ಕಬ್ಬಿನ ರಸದ ಸಮುದ್ರ). ಅದರ ಮಧ್ಯೆ ಸಾವಿರ ದಳಗಳ ಶ್ವೇತ ಕಮಲದ ಕರ್ಣಿಕೆಯಲ್ಲಿ ರತ್ನಖಚಿತವಾದ ಸುವರ್ಣ ಮಂಚ ಶೋಭಿಸುತ್ತಿದೆ. ಆ ಮಂಚದ ಮೇಲೆ ಬಾಲ ಸ್ವರೂಪಿಯಾಗಿ, ರಕ್ತವರ್ಣದ ಪೀತಾಂಬರವನ್ನು ಧರಿಸಿದ, ಅರ್ಧಚಂದ್ರಕಿರೀಟ, ಮುತ್ತು ಮಣಿ ಮಾಣಿಕ್ಯಾದಿ ಹೊನ್ನಾಭರಣ ಧರಿಸಿದ, ತ್ರಿನೇತ್ರಧಾರಿಯಾದ, ಶಯನಭಂಗಿಯಲ್ಲಿ ಇರುವ(ಯೋಗ ನಿದ್ರಾರೂಢನಾದ) ವಿನಾಯಕ ವಿರಾಜಿಸುತ್ತಿದ್ದಾನೆ.
ಸರ್ವಸಿದ್ಧಿಗಳಿಗೂ ಕಾರಣರಾದ ಸಿದ್ಧಿ-ಬುದ್ಧಿ ದೇವಿಯರು ಗಣಪನ ಪಾದ ಪೂಜಿಸುತ್ತ, ಅಣಿಮಾ-ಗರಿಮಾದೇವಿಯರು ಶ್ವೇತ ಚಾಮರ ಸೇವೆಗೈಯುತ, ಜ್ವಾಲಿನಿ-ತೇಜಿನಿ ದೇವಿಯರಿಬ್ಬರೂ ದೇವದೇವನ ಎರಡೂ ಪಾರ್ಶ್ವಗಳಲ್ಲಿ ಪುಷ್ಪಾರ್ಚನೆಗೈಯುತ್ತ ಛತ್ರಿಯನ್ನು ಹಿಡಿದು ಶೋಭಿಸುತ್ತಿರುತ್ತಾರೆ. ಮಹಿಮಾ-ಪ್ರತಿಮೆಯರಿಗೆ ದೇವನ ದೃಷ್ಟಿ ಗೋಚರವಾಗಿ ಸಮೀಪದಲ್ಲೇ ರತ್ನಖಚಿತ ಸುವರ್ಣ ಜಲಪಾತ್ರೆ ಹಿಡಿದು ನಿಂತಿರುತ್ತಾರೆ.
ಸಾಮವೇದ ಪುರುಷನು ಗಣೇಶನ ಮಹಿಮೆಯನ್ನು ಗುಣಗಾನ ಮಾಡುತ್ತಿರುತ್ತಾನೆ. ಎಲ್ಲ ಶಾಸ್ತ್ರಗಳು, ಇತಿಹಾಸ ಪುರಾಣಗಳು ಮೂರ್ತಿವತ್ತಾಗಿ ಬಂದು ಶ್ರೀ ಗಣೇಶನ ಮಹಿಮೆಯನ್ನು ಕೊಂಡಾಡುತ್ತಿರುತ್ತವೆ. ಈ ಎಲ್ಲ ರಸಮಯ ಸನ್ನೀವೇಶಗಳನ್ನು ಒಳಗೊಂಡ 'ಸ್ವಾನಂದ ಲೋಕ'ವನ್ನು ನೆನೆಯುವುದೇ ನೀಡುವುದು ಒಂದು ಅಲೌಕಿಕ ಆನಂದ!
ಸ್ವಾನಂದ ಲೋಕದ ಬಾಲಗಣಪನ ದೇಗುಲವನ್ನು ಕನಕಪುರ ರಸ್ತೆಗೆ ಮೂರು ಕಿ.ಮೀ ದೂರದಲ್ಲಿರುವ ತಾತಗುಣಿಯ ಅಗರ ಗ್ರಾಮದ ಸ್ವಾನಂದಾಶ್ರಮದಲ್ಲಿ ಕಾಣಬಹುದು. ಒಂಬತ್ತು ಎಕರೆ ವಿಸ್ತೀರ್ಣದ ದೇವಾಲಯದ ಸಂಕೀರ್ಣ ಪ್ರದೇಶವು ಹಚ್ಚ ಹಸಿರಿನ ಉದ್ಯಾನವನಗಳನ್ನು ಹೊಂದಿದೆ, ಇದು ಕಣ್ಣಿಗೆ ಮತ್ತು ಮನಸ್ಸಿಗೆ ಮುದ ನೀಡುತ್ತದೆ.   ಆಶ್ರಮವು ಮುಖ್ಯ ದೇವಾಲಯದ ಸುತ್ತಲೂ, ಸತ್ಯ ಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ ಹೀಗೆ ನಾಲ್ಕು ಯುಗದ ಗಣಪತಿಗಳಿಗೆ ನಾಲ್ಕು ದೇವಾಲಯಗಳು ಮತ್ತು ಗಣಪತಿಯ ವಿವಿಧ ಅಭಿವ್ಯಕ್ತಿಗಳ 32 ವಿಗ್ರಹಗಳನ್ನು ಹೊಂದಿದೆ.  ಸ್ವಾನಂದಾಶ್ರಮ ಸಂಕೀರ್ಣದಲ್ಲಿ ಸುಬ್ರಹ್ಮಣ್ಯ ದೇವರಿಗೆ ಮತ್ತು ಪಾರ್ವತಿ ದೇವಿಗೆ ಮತ್ತೊಂದು ದೇವಾಲಯವಿದೆ.  ಇಲ್ಲಿ ಪಾರ್ವತಿ ದೇವಿ ಹಾವಿನ ಮೇಲೆ ಕುಳಿತಿದ್ದಾಳೆ. ಇಲ್ಲಿನ ಗೋಶಾಲೆಯಲ್ಲಿ ಗೋವುಗಳನ್ನು ನೋಡಿಕೊಳ್ಳಲಾಗುತ್ತಿದೆ.  ಆಶ್ರಮವು ಸುತ್ತಲಿನ ಗ್ರಾಮೀಣ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಾ, ಇತರ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತೊಡಗಿಸಿಕೊಂಡಿದೆ.
ಜೀವನದಲ್ಲಿ ಕೆಲವೊಮ್ಮೆ ಕೆಲವೊಂದು ಅಲೌಕಿಕ ಅನುಭೂತಿಯ ಸಂದರ್ಭಗಳು ತಾನೇ ತಾನಾಗಿ ಸಹಜವಾಗಿ ಬಂದೊದಗುತ್ತವೆ. ಎಂದೋ ಘಟಿಸಬೇಕಾದ ಧನಾತ್ಮಕ ಘಟನೆಗಳು ಎಂದೋ ಒಂದು ದಿನದಿಂದ ಇದ್ದಕ್ಕಿದ್ದಂತೆಯೇ ಆರಂಭವಾಗಿ ಬಿಡುತ್ತದೆ. ಇತ್ತೀಚೆಗೆ ನನ್ನ ಗೆಳತಿಯರೊಂದಿಗೆ ಆಕಸ್ಮಿಕವಾಗಿ ಸ್ವಾನಂದ ಗಣಪತಿಯನ್ನು ದರ್ಶಿಸುವ ಸೌಭಾಗ್ಯ ನನಗೆ ದೊರೆಯಿತು. ಸ್ವಾನಂದ ಗಣಪತಿಯ ದೇವಾಲಯದ ದ್ವಾರವನ್ನು ದಾಟಿ ಒಳಾಂಗಣವನ್ನು ಪ್ರವೇಶಿಸುತ್ತಿದ್ದಂತೆಯೇ ಸ್ವಾನಂದದ ಅನುಭವವಾಯಿತು. ಪರಿಸರ ಅತ್ಯಂತ ಪ್ರಶಾಂತವಾಗಿತ್ತು. ತಾನೇ ತಾನಾಗಿ ಸಹಜವಾಗಿ ನನ್ನೊಳಗೆ ಭಕ್ತಿಭಾವ ಮೂಡಿತು. ಹಲವಾರು ವರುಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರೂ, ಒಮ್ಮೆಯೂ ಸ್ವಾನಂದಾಶ್ರಮಕ್ಕೆ ಹೋಗಿರಲಿಲ್ಲ.  ಬಹುಶಃ ಇದು ದೇವರೇ ನನಗೆ ಒದಗಿಸಿದ ಒಂದು ಸುಯೋಗ!
ನಾವು ಒಂದು ಕ್ಷೇತ್ರದ ದೇವರನ್ನು ದರ್ಶನ ಮಾಡಲೆಂದೇ ಹೋಗುವುದು ಬೇರೆ.  ಒಂದು ಕ್ಷೇತ್ರದ ದೇವರೇ ನಮ್ಮನ್ನು ದರ್ಶಿಸಲು ಬಾ ಎಂದು ಕರೆಸಿಕೊಳ್ಳುವುದೇ ಬೇರೆ!  ಈ ಎರಡರಲ್ಲಿ ಎರಡನೆಯದು ಅತ್ಯಂತ ಶ್ರೇಷ್ಠವೆಂದು ನನ್ನ ಭಾವನೆ! ಒಂದನೆಯದು ನಮ್ಮಿಚ್ಛೆ, ಎರಡನೆಯದು ದೈವೇಚ್ಛೆ! ಒಂದನೆಯದು ನಮ್ಮಿಂದ ನಿರ್ಧಾರಿತ, ಎರಡನೆಯದು ದೈವ ನಿರ್ಧಾರಿತ.  ಎರಡನೆಯದಕ್ಕೆ ತಾನೇ ತಾನಾಗಿ ಕಾಲ ಕೂಡಿಬರಬೇಕು, ಯೋಗ ಕೂಡಿ ಬರಬೇಕು.  ಹಾಗೆ ಕೂಡಿ ಬಂದ ಯೋಗವೇ ನಮ್ಮ ಪಾಲಿಗೆ ಅದೃಷ್ಟವೆಂದು ಭಾವಿಸಿ ನಮ್ಮ ಕೈಲಾದ ಸೇವೆಯನ್ನು ಮಾಡಬೇಕು. ಆತ್ಮೀಯ ಬಂಧುಗಳೇ, ನಿಮಗೂ ಸಹ ಇಂತಹ ಸುಯೋಗ ಕೂಡಿ ಬರಬಹುದು, ಸ್ವಾನಂದ ಗಣಪತಿ ನಿಮ್ಮನ್ನೂ ಸ್ವಾಗತಿಸಬಹುದು!.. ಅಂತಹ ಸುಯೋಗ ನಿಮಗೂ ಕೂಡಿ ಬರಲಿ.

ಶ್ರೀಕೃಷ್ಣರ್ಪಣಮಸ್ತು

No comments:

Post a Comment