Thursday, 2 April 2026

ಹನುಮ ಜಯಂತಿ

***ಹನುಮ ಜಯಂತಿ***.                 
ಮಧುಕೈಟಭರ ವಧೆಯಾದ ಬಳಿಕ ನಿರ್ಮಾಣವಾದ ಈ ಮೇದಿನಿಯಲ್ಲಿ ಮೊದಲು ಪ್ರಜೆಗಳೇ ಇರಲಿಲ್ಲ. ಹೀಗಾಗಿ ತನ್ನ ಸೃಷ್ಟಿಕಾರ್ಯಕ್ಕೆ ಅನುಕೂಲಿಸಲು ಬ್ರಹ್ಮನು ಹತ್ತು ಜನರನ್ನು ಸೃಷ್ಟಿಸುತ್ತಾನೆ. ಅವರೇ ಮರೀಚಿ , ಅತ್ರಿ , ಅಂಗೀರಸ , ಪುಲಸ್ತ್ಯ , ಪುಲಹ , ಕ್ರತು , ಸ್ವಾಯಂಭೂ ಮನ್ವಂತರದ ದಕ್ಷ , ವಸಿಷ್ಠ , ಭೃಗು ಮತ್ತು ನಾರದರೆಂಬ ಹತ್ತು ಮಂದಿ ಪ್ರಜಾಪತಿಗಳು. ಅವರು ಮುಖ್ಯವಾಗಿ ಪ್ರಜೆಗಳ ಸೃಷ್ಟಿಗಾಗಿಯೇ ಬ್ರಹ್ಮನಿಂದ ನಿಯುಕ್ತರಾದವರು. ಆದ್ದರಿಂದ ಅವರನ್ನು “ಪ್ರಜಾಪತಿಗಳು” ಎಂದು ಕರೆಯಲಾಯಿತು. ಆದರೆ ಅವರಿಂದಲೂ ಸೃಷ್ಟಿ ಕಾರ್ಯವು ವೇಗವನ್ನು ಪಡೆದುಕೊಳ್ಳದೇ ಇದ್ದಾಗ ಬ್ರಹ್ಮನು ತನ್ನನ್ನೇ ತಾನು ಎರಡಾಗಿ ಸೀಳಿಕೊಳ್ಳುತ್ತಾನೆ. ಆಗ ಶತರೂಪಾ ಎಂಬ ಹೆಣ್ಣು ಮತ್ತು ಸ್ವಯಂಭುವ ಎಂಬ ಗಂಡುಗಳ ಜನನವಾಗುತ್ತದೆ. ಅವರಿಬ್ಬರು ಸೃಷ್ಟಿಯ ಪ್ರಥಮ ಸ್ತ್ರೀ-ಪುರುಷ ಜೋಡಿಯಾಗುತ್ತಾರೆ.

ಈ ಹತ್ತು ಜನ ಪ್ರಜಾಪತಿಗಳು ಸ್ವಾರೋಚಿಷ , ಉತ್ತಮ , ತಾಮಸ , ರೈವತ , ಚಾಕ್ಷುಷ ಮತ್ತು ವೈವಸ್ವತ ಎಂಬ ಬೇರೆ ಆರು ಜನ ಮನುಗಳನ್ನು , ದೇವತೆಗಳನ್ನು ಮತ್ತು ಅನೇಕ ಮುನಿಗಳನ್ನು ಸೃಷ್ಟಿಸುತ್ತಾರೆ. ಯಕ್ಷ , ರಾಕ್ಷಸ , ಪಿಶಾಚ , ಗಂಧರ್ವ , ಅಪ್ಸರೆ , ಅಸುರ , ನಾಗ , ಸರ್ಪ , ಸುಪರ್ಣ , ಪಿತೃಗಣಗಳನ್ನೆಲ್ಲಾ ಸೃಷ್ಟಿಸುತ್ತಾರೆ.

ಕೇವಲ ಬ್ರಹ್ಮ ಅಥವಾ ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಪ್ರಜಾಪತಿಗಳಿಂದ ಸೃಷ್ಟಿ ಕಾರ್ಯವು ನಡೆದರೆ ಆಗ ಸೃಷ್ಟಿ ಕಾರ್ಯವು ನಿಧಾನವಾಗುತ್ತದೆ. ಹೀಗಾಗಿ ಪ್ರಜೆಗಳ ಸಂಖ್ಯೆಯು ಶೀಘ್ರವಾಗಿ ಹೆಚ್ಚಳವಾಗಬೇಕಾದರೆ ಹೊಸ ರೀತಿಯ ಸೃಷ್ಟಿಯ ಕ್ರಮ ಬೇಕು ಎಂಬುದನ್ನು ಮನಗಂಡ ದಕ್ಷಪ್ರಜಾಪತಿಯು ಗಂಡು ಹೆಣ್ಣಿನ ಮೈಥುನದಿಂದ ಮಕ್ಕಳು ಹುಟ್ಟುವ ವ್ಯವಸ್ಥೆ ಮಾಡುತ್ತಾನೆ. ಅದಕ್ಕಿಂತ ಮೊದಲು ಆ ರೀತಿಯ ಸೃಷ್ಟಿ ಕ್ರಮವೇ ಇರಲಿಲ್ಲ. ಅದುವರೆಗೆ ಸಂಕಲ್ಪ , ದರ್ಶನ , ಸ್ಪರ್ಶ , ತಪಸ್ಸು ಮೊದಲಾದ ವಿಧಗಳಿಂದ ಮಕ್ಕಳ ಸೃಷ್ಟಿ ಕಾರ್ಯ ನಡೆಯುತ್ತಿತ್ತು. 

ಪ್ರಜಾಪತಿಗಳ ಜನನವು ಕೂಡಾ ಅದೇರೀತಿ ಬ್ರಹ್ಮನ ಸಂಕಲ್ಪದಿಂದ ಉಂಟಾದುದಾಗಿತ್ತು. ಮರೀಚಿಯು ಬ್ರಹ್ಮನ ಮನಸ್ಸಿನಿಂದಲೂ , ಅತ್ರಿಯು ಬ್ರಹ್ಮನ ಕಣ್ಣಿನಿಂದಲೂ , ಅಂಗೀರಸನು ಬ್ರಹ್ಮನ ಮುಖದಿಂದಲೂ , ಪುಲಸ್ತ್ಯನು ಬ್ರಹ್ಮನ ಕಿವಿಗಳಿಂದಲೂ  , ಪುಲಹನು ಬ್ರಹ್ಮನ ನಾಭಿಯಿಂದಲೂ , ಕ್ರತುವು ಬ್ರಹ್ಮನ ಕೈಯಿಂದಲೂ , ಸ್ವಾಯಂಭೂ ಮನ್ವಂತರದ ದಕ್ಷನು ಬ್ರಹ್ಮನ ಬಲಗೈ ಅಂಗುಷ್ಠದಿಂದಲೂ , ವಸಿಷ್ಠನು ಬ್ರಹ್ಮನ ಪ್ರಾಣದಿಂದಲೂ , ಭೃಗುವು ಬ್ರಹ್ಮನ ಚರ್ಮದಿಂದಲೂ ಮತ್ತು ನಾರದರು ಬ್ರಹ್ಮನ ತೊಡೆಯಿಂದಲೂ ಜನಿಸಿದವರಾಗಿದ್ದರು. ಹೀಗೇ ಇವರೆಲ್ಲ ಬ್ರಹ್ಮನ ದೇಹದ ಬೇರೆ ಬೇರೆ ಭಾಗಗಳಿಂದ ಜನಿಸಿದವರೇ ಆದರೂ ಕೂಡಾ , ಎಲ್ಲರೂ ಬ್ರಹ್ಮನ ಮನಸ್ಸಿನ ಸಂಕಲ್ಪದಿಂದಲೇ ಜನಿಸಿದವ ರಾಗಿರುವುದರಿಂದ ಈ ಎಲ್ಲರನ್ನೂ ಬ್ರಹ್ಮಮಾನಸ ಪುತ್ರರೆಂದೇ ಕರೆಯುತ್ತಾರೆ. 

ಭೂಲೋಕದಲ್ಲಿ ಈ ಪ್ರಜಾಪತಿಗಳ ಪಾರುಪತ್ಯವು ನಡೆಯುತ್ತಿದ್ದ ಸ್ವಾಯಂಭೂ ಮನ್ವಂತರದ ಆ ಆದಿ ಕಾಲದಲ್ಲಿಯೂ ದೇವಲೋಕವು ಇದ್ದಿತ್ತು. ಆ ದೇವಲೋಕದಲ್ಲಿ ದೇವತೆಗಳು , ಅವರ ಒಡೆಯ ದೇವೇಂದ್ರ , ಅಷ್ಟ ದಿಕ್ಪಾಲಕರು , ಸಪ್ತ ಮರುತ್ತುಗಳು , ಅಷ್ಟವಸುಗಳು , ಏಕಾದಶ ರುದ್ರರು ಮೊದಲಾದವರೆಲ್ಲ ಇದ್ದರು. ಇವರೆಲ್ಲರೂ ತ್ರಿಮೂರ್ತಿಗಳಾದ ಬ್ರಹ್ಮ , ವಿಷ್ಣು ಮತ್ತು ಮಹೇಶ್ವರರನ್ನು ಸಮಾನವಾಗಿ ಗೌರವಿಸಿಕೊಂಡು ಅವರ ಅನುಗ್ರಹದಿಂದ ಸ್ವರ್ಗದಲ್ಲಿ ಇದ್ದುಕೊಂಡೇ ಮೂರು ಲೋಕಗಳ ಅಧಿಪತ್ಯವನ್ನು ನಿಭಾಯಿಸುತ್ತಿದ್ದರು.

ಹೀಗಿರುವಾಗ ಒಮ್ಮೆ ಬ್ರಹ್ಮದೇವನು ಆಕಳಿಸಿದಾಗ ಅವನ ಬಾಯಿಯಿಂದ ಜಾಂಬವಂತ ಎಂಬ ಭಲ್ಲೂಕನೊಬ್ಬನು ಜನಿಸುತ್ತಾನೆ. ಇನ್ನೊಮ್ಮೆ ಬ್ರಹ್ಮದೇವನು ತನ್ನ ಕಮಂಡಲದಲ್ಲಿನ ಜಲವನ್ನು ಪ್ರೋಕ್ಷಿಸಿದಾಗ ಋಕ್ಷರಜಸ್ ಎಂಬ ವಾನರನ ಜನನವಾಗುತ್ತದೆ. ಹೀಗೆ ತನ್ನ ಸಂಕಲ್ಪದಿಂದಲೇ ಜನಿಸಿದ ಜಾಂಬವ ಮತ್ತು ಋಕ್ಷರಜಸ್ ಈ ಇಬ್ಬರನ್ನೂ ಬ್ರಹ್ಮದೇವನು ಭೂಲೋಕದ “ಕಿಷ್ಕಿಂಧೆ” ಎಂಬಲ್ಲಿಗೆ ಕಳುಹಿಸುತ್ತಾನೆ. ಈಗಿನ ಕೊಪ್ಪಳ ಜಿಲ್ಲೆಯ ಹಂಪಿ ಮತ್ತು ಆನೆಗೊಂದಿ ಪ್ರದೇಶವೇ ಈ ಹಿಂದೆ ರಾಮಾಯಣ ಕಾಲದಲ್ಲಿ ಕಿಷ್ಕಿಂದೆ ಆಗಿತ್ತು. “ಕಿಷ್ಕಿ” ಎಂಬ ವಾನರರಾಜನು ಆಳಿಕೊಂಡಿದ್ದರಿಂದ ಆ ಪ್ರದೇಶಕ್ಕೆ “ಕಿಷ್ಕಿಂಧೆ” ಎಂಬ ಹೆಸರು ಬಂದಿತ್ತು. ಕಿಷ್ಕಿಯ ಕಾಲಾ ನಂತರ ಕಿಷ್ಕಿಂಧೆಯು ಪಾಳುಬಿದ್ದಿತ್ತು. ಇಂತಹ ಕಿಷ್ಕಿಂದೆಗೆ ಋಕ್ಷನನ್ನು ಅರಸನನ್ನಾಗಿಯೂ ಮತ್ತು ಜಾಂಬವಂತನನ್ನು ಅವನ ಮಂತ್ರಿಯಾಗಿಯೂ ಬ್ರಹ್ಮನು ನೇಮಿಸುತ್ತಾನೆ. ಅಂದಿನಿಂದ ಋಕ್ಷರಜಸನು “ಋಕ್ಷರಾಜ” ಎನ್ನಿಸಿಕೊಳ್ಳುತ್ತಾನೆ. ಮುಂದೆ ಅವನು ಋಕ್ಷಿ ಎಂಬ ವಾನರ ಸ್ತ್ರೀಯೊಬ್ಬಳನ್ನು ಮದುವೆಯಾಗುತ್ತಾನೆ. 

ಹಲವು ವರ್ಷಗಳು ಉರುಳಿದರೂ ತನ್ನ ಹೆಂಡತಿ ಋಕ್ಷಿಯಲ್ಲಿ ಸಂತಾನವನ್ನು ಪಡೆಯಲು ಅಸಾಧ್ಯವಾದಾಗ ಋಕ್ಷನು ಪಂಪಾತೀರದಲ್ಲಿ ಶಿವನನ್ನು ಕುರಿತು ತಪಸ್ಸನ್ನು ಆರಂಭಿಸುತ್ತಾನೆ. ಒಂದು ದಿನ ಸ್ನಾನಕ್ಕಾಗಿ ಸರೋವರವೊಂದರಲ್ಲಿ ಮುಳುಗಿ ಏಳುವಾಗ ಅವನು ಹೆಣ್ಣು ಕಪಿಯಾಗಿ ಮಾರ್ಪಡುತ್ತಾನೆ. ಅಷ್ಟರಲ್ಲಿ ಶಿವಪೂಜೆಗಾಗಿ ಅಲ್ಲಿಗೆ ಬಂದ ದೇವೇಂದ್ರನು ಆಕೆಯ ರೂಪಕ್ಕೆ ಮನಸೋತು ಅವಳನ್ನು ಕೂಡುತ್ತಾನೆ. ಆಗ ಆ ವಾನರಿಯ ವಾಲ ಅಂದರೆ ಬಾಲದ ಕಡೆಯಿಂದ ಗಂಡು ಕಪಿಯೊಂದು ಜನಿಸುತ್ತದೆ. ಹೀಗೆ ವಾಲ ಪ್ರದೇಶದಿಂದ ಜನಿಸಿದ ಇಂದ್ರಕುಮಾರನೇ “ವಾಲಿ”. ಸ್ವಲ್ಪ ಸಮಯದ ಬಳಿಕ ಅಲ್ಲಿಗೆ ಬಂದ ಸೂರ‍್ಯದೇವನೂ ಕೂಡಾ ಆಕೆಯ ರೂಪಕ್ಕೆ ಸೋತು ಅವಳನ್ನು ಕೂಡುತ್ತಾನೆ. ಆಗ ಆಕೆಯ ಗ್ರೀವ ಅಂದರೆ ಕುತ್ತಿಗೆಯ ಭಾಗದಿಂದ ಇನ್ನೊಂದು ಗಂಡು ಕಪಿ ಜನಿಸುತ್ತದೆ. ಹೀಗೆ ಗ್ರೀವ ಪ್ರದೇಶದಿಂದ ಹುಟ್ಟಿದ ಸೂರ‍್ಯ ನಂದನನೇ “ಸುಗ್ರೀವ”. ತನಗೆ ಒದಗಿದ ಹೆಣ್ತನದ ಸ್ಥಿತಿಯಿಂದ ಕಳವಳಗೊಂಡ ಋಕ್ಷನು ಪುನಹ ಶಿವನನ್ನು ಧ್ಯಾನಿಸುತ್ತಾ ಅದೇ ಕೊಳದಲ್ಲಿ ಮತ್ತೊಮ್ಮೆ ಮುಳುಗುತ್ತಾನೆ. ಆಗ ಅವನು ತನ್ನ ಮೊದಲಿನ ಪುರುಷ ರೂಪವನ್ನು ಮರಳಿ ಪಡೆದುಕೊಳ್ಳುತ್ತಾನೆ. ಅಷ್ಟರಲ್ಲಿ ಶಿವನು ಪ್ರತ್ಯಕ್ಷನಾಗಿ ಆ ಇಬ್ಬರು ಮಕ್ಕಳನ್ನು ಸಲಹಿಕೊಳ್ಳುವಂತೆ ಸೂಚಿಸಿ ಮರೆಯಾಗುತ್ತಾನೆ. 

ಪುಂಜಿಕಸ್ಥಲೀ ಎಂಬ ಅಪ್ಸರೆಯೊಬ್ಬಳು ಅದ್ಯಾವುದೋ ಶಾಪದಿಂದಾಗಿ ವಾನರ ಜನ್ಮವನ್ನು ಪಡೆದು ಕುಂಜರ ಎಂಬ ಕಪಿನಾಯಕನೊಬ್ಬನಿಗೆ ಮಗಳಾಗಿ ಜನಿಸುತ್ತಾಳೆ. ಅವಳೇ ಅಂಜನೆ.  ಇತ್ತ ಗೋಕರ್ಣ ಕ್ಷೇತ್ರದಲ್ಲಿ ಋಷಿಗಳನ್ನು ಪೀಡಿಸುತ್ತಿದ್ದ ಶಂಬಸಾದ ಎಂಬ ರಾಕ್ಷಸನನ್ನು ಋಷಿಗಳ ಕೋರಿಕೆಯಂತೆ ಆ ಪರಿಸರದಲ್ಲೇ ವಾಸವಾಗಿದ್ದ ಕೇಸರಿ ಎಂಬ ವಾನರನು ಕೊಲ್ಲುತ್ತಾನೆ. ಇದರಿಂದ ಸಂತುಷ್ಟರಾದ ಮುನಿ ಪುಂಗವರು “ನಿನಗೆ ಸಕಲ ಶಾಸ್ತ್ರ ಪಾರಂಗತನೂ , ಕಾಮಚಾರಿಯೂ , ಬಲಾಧಿಕನೂ , ಬ್ರಹ್ಮನಿಷ್ಠನೂ ಆದ ಮಗನು ಜನಿಸಲಿ” ಎಂಬುದಾಗಿ ಹರಸುತ್ತಾರೆ. ಮುಂದೆ ಅದೇ ಕೇಸರಿಯನ್ನು ಅಂಜನೆಯು ಮದುವೆಯಾಗುತ್ತಾಳೆ. ಮದುವೆಯಾಗಿ ಹಲವು ವರ್ಷಗಳವರೆಗೂ ಮಕ್ಕಳಾಗದೇ ಇದ್ದಾಗ ಕೇಸರಿ ಮತ್ತು ಅಂಜನೆಯರು ಶಿವನನ್ನು ಕುರಿತು ತಪಸ್ಸು ಮಾಡುತ್ತಾರೆ. ಆಗ ಪ್ರತ್ಯಕ್ಷನಾದ ಶಿವನು “ನನ್ನ ಅಂಶದಿಂದಲೇ ನಿನಗಗೊಬ್ಬ ಮಗನು ಹುಟ್ಟುತ್ತಾನೆ” ಎಂಬುದಾಗಿ ವರವನ್ನು ಕರುಣಿಸುತ್ತಾನೆ. 

ಒಮ್ಮೆ ಕೈಲಾಸದಲ್ಲಿ ಕ್ರೀಡಿಸುತ್ತಿರುವ ಒಂದು ವಾನರ ಜೋಡಿಯನ್ನು ನೋಡುತ್ತಿದ್ದ ಪಾರ್ವತೀಪರಮೇಶ್ವರರು ತಾವೂ ಕೂಡಾ ಒಂದಾಗುತ್ತಾರೆ. ಆಗ ಉದ್ಭವವಾದ ಗರ್ಭವನ್ನು ಪಾರ್ವತಿಯು ತಾಳಲಾರದೇ ಹೋದಾಗ ಶಿವನು ಅದನ್ನು ವಾಯುವಿಗೆ ಕೊಡುತ್ತಾನೆ. ಶಿವನ ಸಂಕಲ್ಪವನ್ನು ಅರಿತ ವಾಯುವು ಅದನ್ನು ಅಂಜನೆಯ ಗರ್ಭದಲ್ಲಿ ಇಡುತ್ತಾನೆ. ಹೀಗೆ ಗರ್ಭ ಧರಿಸಿದ ಅಂಜನೆಯಲ್ಲಿ ಆಂಜನೇಯನ ಜನನವಾಗುತ್ತದೆ. 

ಹುಟ್ಟಿದಾಕ್ಷಣವೇ ಎದ್ದು ಬಂದು ತನ್ನನ್ನು ತಬ್ಬಿಕೊಂಡ ಮಗುವನ್ನು ಕಂಡ ಅಂಜನೆಯು ಅಚ್ಚರಿ , ಸಂಭ್ರಮಗಳಿಂದ ಮುದ್ದಿಸಿ ಅವನಿಗೆ ತಿನ್ನಲು ಫಲಗಳನ್ನು ತಂದುಕೊಡುವುದಕ್ಕಾಗಿ ಕಾಡನ್ನು ಪ್ರವೇಶಿಸುತ್ತಾಳೆ. ಅಷ್ಟರಲ್ಲಿ ಸೂರ‍್ಯನು ಕೆಂಪಗೆ ಕಾಣಿಸಿಕೊಂಡಾಗ ಅದು ಹಣ್ಣೆಂದು ಭ್ರಮಿಸಿದ ಆಂಜನೇಯನು ಸೂರ್ಯನೆಡೆಗೆ ನೆಗೆಯುತ್ತಾನೆ. ಈ ವಾನರನು ತನ್ನನ್ನು ತಿನ್ನಲು ಬರುತ್ತಿದ್ದಾನೆಂದು ಹೆದರಿದ ಸೂರ್ಯನು ಕಾಪಾಡುವಂತೆ ದೇವೇಂದ್ರನಲ್ಲಿ ಮೊರೆಯಿಡುತ್ತಾನೆ. ಆಗ ಇಂದ್ರನು ತನ್ನ  ವಜ್ರಾಯುಧದಿಂದ ಮಾರುತಿಯ ದವಡೆಗೆ ಹೊಡೆಯುತ್ತಾನೆ. ದೇವೇಂದ್ರನ ಹೊಡೆತದಿಂದ ಬಾಲಕ ಆಂಜನೇಯನ ಹನುವು ಅಂದರೆ ದವಡೆಯು ಶಾಶ್ವತವಾಗಿ ಊದಿಕೊಂಡು ಮುಂದೆ ಅವನು “ಹನುಮಂತ”ನಾಗುತ್ತಾನೆ. ಅಷ್ಟೇ ಅಲ್ಲದೇ ಹನುಮಂತನು ಸತ್ತು ಧರೆಗೆ ಬೀಳುತ್ತಾನೆ. 

ಆಗ ಕೋಪಗೊಂಡ ವಾಯುವು ಇವರಿಬ್ಬರಿಗೆ ಬುದ್ಧಿ ಕಲಿಸುತ್ತೇನೆ ಎಂದುಕೊಂಡು ತನ್ನ ಸಂಚಾರವನ್ನು ನಿಲ್ಲಿಸಿ ಹಿಮಾಲಯದ ಗುಹೆಯೊಂದರಲ್ಲಿ ಅಡಗಿ ಕುಳಿತುಕೊಳ್ಳುತ್ತಾನೆ. ವಾಯುವಿನ ಸಂಚಾರ ಇಲ್ಲದೇ ಲೋಕವೆಲ್ಲ ತಲ್ಲಣಗೊಂಡಾಗ ಎಲ್ಲಾ ದೇವತೆಗಳೊಡನೆ ಸ್ವತಹ ತ್ರಿಮೂರ್ತಿಗಳೇ ಬಂದು ಹನುಮಂತನನ್ನು ಬದುಕಿಸುತ್ತಾರೆ. ಅವನಿಗೆ ಇಚ್ಛಾಮರಣದ ವರವನ್ನು ಕೊಡುತ್ತಾರೆ. ಇದರಿಂದಾಗಿ ಮುಂದೆ ಅವನು ಚಿರಂಜೀವಿಯಾಗುತ್ತಾನೆ. ಅಲ್ಲದೇ ದೇವತೆಗಳೆಲ್ಲ ಸೇರಿ ಹನುಮಂತನಿಗೆ ವಾಯುವೇಗವನ್ನೂ , ಅತಿಯಾದ ದೈಹಿಕ ಬಲವನ್ನೂ ಕರುಣಿಸಿ ಅವನನ್ನು ದೈವಿಕ ವ್ಯಕ್ತಿಯನ್ನಾಗಿ ಮಾಡುತ್ತಾರೆ. ಹೀಗಾಗಿ ಆತನು “ವಜ್ರಶರೀರಿ” ಅಥವಾ “ವಜ್ರಾಂಗಬಲಿ” ಅಥವಾ “ಬಜರಂಗಬಲಿ”ಯಾಗುತ್ತಾನೆ. ಆಗ ವಾಯುವು ಪ್ರಸನ್ನನಾಗಿ ಲೋಕದಲ್ಲಿ ಪುನಹ ಪಸರಿಸಲು ಆರಂಭಿಸುತ್ತಾನೆ. ಬಾಲಕ ಹನುಮನ ಅತಿಯಾದ ದೈಹಿಕ ಶಕ್ತಿಯನ್ನು ಕಂಡು ಮುನಿಗಳು ಅವನಿಂದ ಅಚಾತುರ್ಯವಾದ ಘಟನೆಯೇನೂ ನಡೆಯದೇ ಇರಲಿ ಎಂಬ ಆಶಯದಿಂದ ಅವನಿಗೆ ಸ್ವಸಾಮರ್ಥ್ಯದ ಅರಿವು ಉಂಟಾಗದೇ ಇರುವಂತೆ ಮಾಡುತ್ತಾರೆ. 

ತಾಯಿ ಅಂಜನಾದೇವಿಯು ಹನುಮನ ಕಿವಿಗೆ ಕುಂಡಲವೊಂದನ್ನು ತೊಡಿಸಿ “ಬೇರೆ ಯಾರಿಗೂ ಈ ನಿನ್ನ ಕರ್ಣಕುಂಡಲವು ಕಾಣಿಸುವುದಿಲ್ಲ , ಯಾರಿಗೆ ಇದು ಕಾಣಿಸಿ ಅದರ ಗುರುತು ಹಿಡಿಯುತ್ತಾರೋ ಅವರೇ ನಿನ್ನ ಸ್ವಾಮಿ ಶ್ರೀರಾಮ ಎಂಬುದಾಗಿ ತಿಳಿದುಕೋ , ಅವರ ದರ್ಶನವಾದಕೂಡಲೇ ನಿನಗೆ ನಿನ್ನ ಸ್ವಸಾಮರ್ಥ್ಯದ ಅರಿವು ಉಂಟಾಗುತ್ತದೆ” ಎಂಬ ಗುಟ್ಟನ್ನು ಆತನಿಗೆ ಅರುಹುತ್ತಾಳೆ. ಬಳಿಕ ಹನುಮಂತನು ಸೂರ್ಯದೇವನಲ್ಲಿ ಸಕಲ ಶಾಶ್ತ್ರಗಳನ್ನು ಕಲಿತುಕೊಳ್ಳುತ್ತಾನೆ. ಮುಂದೆ ಋಶ್ಯಮೂಕ ಪರ್ವತದಲ್ಲಿ ವಾಸವಾಗಿದ್ದ ಸುಗ್ರೀವನನ್ನು ಆಶ್ರಯಿಸಿ ಅವನ ಮಂತ್ರಿಯಾಗುತ್ತಾನೆ. ಆಗ ಹೆಂಡತಿಯನ್ನು ಅರಸುತ್ತಾ ಅಲ್ಲಿಗೆ  ಬಂದ ಶ್ರೀರಾಮನು ಯಾರಿಗೂ ಕಾಣಿಸದೇ ಇರುವ ಹನುಮಂತನ ಕರ್ಣಕುಂಡಲವನ್ನು ಗುರುತಿಸುತ್ತಾನೆ. ಆಗ ಹನುಮಂತನಿಗೆ ತನ್ನ ತಾಯಿಯ ವಚನವು ನೆನಪಾಗಿ ಈತನೇ ತನ್ನ ಸ್ವಾಮಿ ಎಂಬುದು ಅರಿವಾಗುತ್ತದೆ. ಅಂದಿನಿಂದ ಆತನು ಶ್ರೀರಾಮನ ಬಂಟನಾಗುತ್ತಾನೆ. ಅಲ್ಲದೇ ಅಂದಿನಿಂದ ಹನುಮಂತನಿಗೆ ತನ್ನ ಸ್ವಸಾಮರ್ಥ್ಯದ ಅರಿವು ಕೂಡಾ ಉಂಟಾಗುತ್ತದೆ.  

ಚೈತ್ರ ಮಾಸದ ಹುಣ್ಣಿಮೆಯ ದಿನ ಹನುಮಂತನ ಜನ್ಮದಿನೋತ್ಸವವನ್ನು ಆಚರಿಸುತ್ತಾರೆ. ಆ ಪ್ರಕಾರ ದಿನಾಂಕ 02-04-2026 ನೇ ಗುರುವಾರದಂದು ಹನುಮ ಜಯಂತಿಯ ದಿನವಾಗಿದೆ. ಎಲ್ಲರಿಗೂ ಹನುಮಜ್ಜಯಂತಿಯ ಶುಭಾಶಯಗಳು. 

- ಹರಿಕೃಷ್ಣ ಹೊಳ್ಳ , ಬ್ರಹ್ಮಾವರ.

No comments:

Post a Comment