Tuesday, 11 August 2020

ಮಹಾವೀರನಾದ ಕರ್ಣನ ಮರಣ‌ ಶಾಸನ ಬರೆದ ಮೂರು ಭೀಕರ ಶಾಪಗಳು

ಮಹಾಭಾರತದ ಮಹಾವೀರ, ದಾನ ವೀರ ಶೂರ ಎನಿಸಿದ ಕರ್ಣನ ಪಾತ್ರ ಅದೆಷ್ಟೋ ಜನರಿಗೆ ಬಹಳ ಅಚ್ಚುಮೆಚ್ಚಿನ ಪಾತ್ರವೂ ಕೂಡಾ. ಅಸಾಮಾನ್ಯ ಶೂರನಾದ ಕರ್ಣನು ಧನುರ್ವಿದ್ಯೆಯಲ್ಲಿ ಅರ್ಜುನನಿಗೆ ಸಮವರ್ತಿ. ಆದರೂ ಸಹಾ ಕುರುಕ್ಷೇತ್ರ ರಣರಂಗದಲ್ಲಿ ಕರ್ಣನು ಕೂಡಾ ಹತನಾದನು. ಇದಕ್ಕೆ ಕಾರಣ ಆತನಿಗೆ ಅಂಟಿದ್ದ ಮೂರು ಮುಖ್ಯ ಶಾಪಗಳು. ಕರ್ಣನ ಅಂತ್ಯಕ್ಕೆ ಕಾರಣವಾದ ಆ ಮೂರು ಶಾಪಗಳ ಬಗ್ಗೆ ತಿಳಿಯೋಣ ಬನ್ನಿ.

ಭೂದೇವಿಯ ಶಾಪ: ಹಾಲನ್ನು (ಅಥವಾ ತುಪ್ಪ) ನೆಲದ ಮೇಲೆ ಬೀಳಿಸಿ ಚೆಲ್ಲಿದ ಬಾಲಕಿಯೊಬ್ಬಳು ತನ್ನ ತಾಯಿ ಬೈಯ್ಯುವಳೆಂಬ ಭಯದಿಂದ ಇದ್ದಾಗ, ಕರ್ಣನು ಆ ಪುಟ್ಟ ಹುಡುಗಿಗೆ ಸಹಾಯ ಮಾಡಲು, ನೆಲದ ಮೇಲಿನ ಮಣ್ಣನ್ನು ಎತ್ತಿ ಅದನ್ನು ಗಟ್ಟಿಯಾಗಿ ಹಿಂಡಿ, ತಿರುಚುವ ಮೂಲಕ ಹಾಲನ್ನು ಹಿಂಪಡೆಯಲು ಪ್ರಯತ್ನ ಮಾಡುವಾಗ, ಭೂದೇವಿಗೆ ಆ ನೋವು ತುಂಬಾ ಅಸಹನೀಯವಾಗಿತ್ತು. ಆಕೆ ನೋವಿನಿಂದ ಕರ್ಣನನ್ನು ಶಪಿಸಿಯೇ ಬಿಟ್ಟಳು. ಭೂದೇವಿಯು ಅವನಿಗೆ ಅಪಾಯದ ವೇಳೆಯಲ್ಲಿ ತಾನು ಯಾವುದೇ ಸಹಾಯ ಮಾಡುವುದಿಲ್ಲ ಎಂದು ಶಪಿಸಿದಳು.‌ ಅದರಂತೆ ಕುರುಕ್ಷೇತ್ರ ಯುದ್ಧದಲ್ಲಿ ಕರ್ಣನ ರಥ ಚಕ್ರ ಭೂಮಿಯಲ್ಲಿ ಕುಸಿದು ಹೋಗಿದ್ದು ಇದೇ ಕಾರಣದಿಂದ.

ಗುರು ಪರಶುರಾಮರ ಶಾಪ: ವಿದ್ಯೆಯನ್ನು ಕಲಿತಾದ ನಂತರ ಅಂತಿಮ ದಿನದಂದು, ಪರಶುರಾಮನು ಕರ್ಣನ ತೊಡೆಯ ಮೇಲೆ ವಿಶ್ರಾಂತಿ ಪಡೆಯುತ್ತಿರುವಾಗ, ಇಂದ್ರ ದೇವನು ಚೇಳಿನ ರೂಪ ಧರಿಸಿ ಬಂದು ಬಲವಾಗಿ ಕಚ್ಚುತ್ತಾನೆ, ರಕ್ತ ಬಂದರು ಕೂಡಾ ಮೇಲೆಳದೆ ಕರ್ಣ ಕುಳಿತಿರುವಾಗ, ಎಚ್ಚರ ಗೊಂಡ ಪರಶುರಾಮ ಗುರುಗಳಿಗೆ ಕರ್ಣನು ಕ್ಷತ್ರಿಯನಲ್ಲದೇ ಬೇರೆಯವನಲ್ಲ ಎಂದು ಅರಿವಾಗಿ, ಕ್ಷತ್ರಿಯ ದ್ವೇಷಿಯಾದ ಅವರು ಶಸ್ತ್ರಾಸ್ತ್ರಗಳ ಜ್ಞಾನವನ್ನು, ವಿಶೇಷವಾಗಿ ಬ್ರಹ್ಮಾಸ್ತ್ರವನ್ನು ಹೆಚ್ಚು ಅಗತ್ಯವಿದ್ದಾಗ ಮರೆತುಬಿಡು ಎಂದು ಕರ್ಣನಿಗೆ ಶಾಪ ನೀಡಿದರು. ಪರಿಣಾಮವಾಗಿ ಅರ್ಜುನನ ವಿರುದ್ಧ ಯುದ್ಧಭೂಮಿಯಲ್ಲಿ ಹೋರಾಡುವಾಗ ಕರ್ಣನು ಬ್ರಹ್ಮಾಸ್ತ್ರವನ್ನು ಆಹ್ವಾನಿಸುವ ಮಂತ್ರವನ್ನು ಮರೆತು ಹೋಗುತ್ತಾನೆ.

ಬ್ರಾಹ್ಮಣ ಶಾಪ: ಕರ್ಣನು ಒಮ್ಮೆ ಶಬ್ದವೇದಿ ಶಸ್ತ್ರ ವಿದ್ಯೆಯನ್ನು ಅಭ್ಯಾಸ ಮಾಡುವಾಗ, ಕಾಡು ಪ್ರಾಣಿಯೆಂದು ತಿಳಿದು, ಒಬ್ಬ ಬ್ರಾಹ್ಮಣನ ಜೀವನಾಧಾರ ಆಗಿದ್ದ ಹಸುವಿನ ಮೇಲೆ ಬಾಣ ಪ್ರಯೋಗ ಮಾಡಿ ಅದರ ಸಾವಿಗೆ ಕಾರಣನಾಗುತ್ತಾನೆ. ಆಗ ಬ್ರಾಹ್ಮಣನ ಸಂಕಟ ಕಾಲದಲ್ಲಿ ನಿನ್ನ ಗಮನ ಬೇರೆ ಕಡೆ ಇರುವಾಗ, ನಿನ್ನ ಶತ್ರುಗಳಿಂದ ನೀನು ಹತನಾಗು ಎಂದು ಶಪಿಸಿದನು.‌ ಯುದ್ಧರಂಗದಲ್ಲಿ ತನ್ನ ರಥದ ಚಕ್ರ ಮಣ್ಣಿನಲ್ಲಿ ಸಿಲುಕಿ ಅದನ್ನು ಹೊರಗೆ ತೆಗೆಯುವಾಗ, ಕೃಷ್ಣನ ಸಲಹೆಯಂತೆ ಅರ್ಜುನ ಬಿಟ್ಟ ಬಾಣಕ್ಕೆ ಕರ್ಣ ಬಲಿಯಾಗುತ್ತಾನೆ.

No comments:

Post a Comment