Tuesday, 8 December 2020

ಎಲ್ಲರೂ ನಾಗರ ಪಂಚಮಿಯದಿನ #ಆಸ್ತಿಕ ಆಸ್ತಿಕ ಎಂದು ಕರೆಯಿರಿ ಯಾಕೆಂದರೆ

ಎಲ್ಲರೂ ನಾಗರ ಪಂಚಮಿಯದಿನ  #ಆಸ್ತಿಕ ಆಸ್ತಿಕ ಎಂದು ಕರೆಯಿರಿ  ಯಾಕೆಂದರೆ 
 ನಾಗರ ಪಂಚಮಿಯ ದಿನ  ಎಲ್ಲರೂ ಆಸ್ತಿಕ ಆಸ್ತಿಕ ಎನ್ನುವ ಹೆಸರನ್ನು ಹೇಳಿದರೆ ನಿಮಗೆ ನಿಮ್ಮ ಕುಟುಂಭಕ್ಕೆ ಯಾವ ಸರ್ಪ ದೋಷಗಳೂ ಬರುವುದಿಲ್ಲ ಮತ್ತು ನಾಗ ದೋಷ ಇದ್ದರೂ ಪರಿಹಾರವಾಗುತ್ತದೆ .

ಏನಿದು #ಆಸ್ತಿಕ .....?

ಆಸ್ತಿಕ ಅಂದರೆ ಆಸ್ತಿಕ ಋಷಿಯ ಹೆಸರು . ಯಾಕೆ ಕರೆಯ ಬೇಕು ಮತ್ತು ಯಾರಿವರು ಆಸ್ತಿಕ ಋಷಿ ಎನ್ನುವ ಪ್ರಶ್ನೆ ಮೂಡುತ್ತಿದೆಯೇ ಅದರ ಪೂರ್ತಿ ಪೌರಾಣಿಕ ಕಥೆಯನ್ನು ನಿಮಗೆ ಕಥಾ ರೂಪದಲ್ಲಿ ಸವಿಸ್ತಾರ ವಾಗಿ ಹೇಳುತ್ತೇನೆ .

ಜನಮೇಜಯನ ಸರ್ಪಯಾಗದಲ್ಲಿ ಬರುತ್ತದೆ .

ಅರ್ಜುನನ ಮಗನಾದ ಅಭಿಮನ್ಯು ಮತ್ತು ಉತ್ತರೆಯ ಮಗ #ಪರೀಕ್ಷಿತ . ಈತನು ರಾಜ್ಯ ವಹಿಸಿಕೊಂಡು ರಾಜ್ಯಭಾರ ಮಾಡುತ್ತಿರುವಾಗ ಒಂದು ದಿನ ಬೇಟೆ ಗೆಂದು ಅರಣ್ಯಕ್ಕೆ ಹೋಗುತ್ತಾನೆ ಅಲ್ಲಿ ಬಹುಕಾಲ ಭೇಟೆಯಾಡಿದ ಕಾರಣ ಬಹಳ ಬಳಲಿಕೆ ಗೊಂಡ ರಾಜ ಒಂದು ಗುಹೆಯನ್ನು ಪ್ರವೇಶಿಸುತ್ತಾನೆ .

ಅಲ್ಲಿ ಶಮೀಕ ಮುನಿಯು ಸಮಾಧಿ ಸ್ಥಿತಿಯಲ್ಲಿ ತಪಸ್ಸು ಮಾಡುತ್ತಿರುತ್ತಾರೆ . ಆಗ ಪರೀಕ್ಷಿತ ಶಮೀಕ ಋಷಿಯಲ್ಲಿ ನೀರನ್ನು ಕೇಳುತ್ತಾನೆ ಎಷ್ಟು ಕೇಳಿದರೂ ಮೌನ ವಾಗಿದ್ದ ಋಷಿಯ ಕಂಡು ಕೋಪ ಗೊಂಡ ರಾಜ ಅಲ್ಲೇ ಸತ್ತು ಬಿದ್ದ ಹಾವನ್ನು ಕತ್ತಿಯಿಂದ ತೆಗೆದು ಋಷಿಯ ಕೊರಳಿಗೆ ಹಾಕಿ ಹೋಗುತ್ತಾನೆ .

ಗುಹೆಗೆ ಬಂದ ಶಮೀಕ ಋಷಿಯ ಮಗ ಶೃಂಗಿಯು ತನ್ನ ತಂದೆಯ ಕೊರಳಲ್ಲಿರುವ ಹಾವನ್ನು ಕಂಡು ಕೋಪಾವೇಶ ಗೊಂಡು ಯಾರು ಹೀಗೆ ಅಪಚಾರ ಮಾಡಿದ್ದಾರೋ ಅವರು ಇನ್ನು ಏಳು ದಿನಗಳಲ್ಲಿ ಸರ್ಪದಿಂದ ಸಾಯಲಿ ಎಂದು ಶಾಪ ಕೊಡುತ್ತಾನೆ .

ಪರೀಕ್ಷಿತನಿಗೆ ಶೃಂಗ ಋಷಿಯ ಶಾಪ ತಿಳಿದು ಬಹಳ ಪಶ್ಚಾತ್ತಾಪ ಪಡುತ್ತಾನೆ ಆದರೇನಂತೆ ಶಾಪ ಶಾಪವೇ 

ಶಾಪದ ಫಲವಾಗಿ ಏಳನೆಯ ದಿನ ದಂದು ಋಷಿಯ ಶಾಪವನ್ನು ಈಡೇರಿಸುವ ಸಲುವಾಗಿ ಕದ್ರುವಿನ ಮಗ #ತಕ್ಷಕ ಪರೀಕ್ಷಿತ ರಾಜನಿದ್ದಲ್ಲಿಗೆ ಬರುತ್ತದೆ . ಆದರೆ ಬಹಳಷ್ಟು ಕಾವಲುಗಾರರಿರುತ್ತಾರೆ ಒಳಗೆ ಹೋಗುವ ದಾರಿಯೇ ಇರುವುದಿಲ್ಲ .

ಆಗ ತಕ್ಷಕ ಸಣ್ಣ ಹುಳುವಿನ ರೂಪ ಧರಿಸಿ ಹಣ್ಣಿನ ಬುಟ್ಟಿಯಲ್ಲಿ ಸೇರಿ ಹಣ್ಣಲ್ಲಿ ವಿಷ ಬಿಡುತ್ತದೆ , ಆ ವಿಷ ಪೂರಿತವಾದ ಹಣ್ಣನ್ನು ಸೇವಿಸಿದ ಪರೀಕ್ಷಿತ ಸಾವನ್ನು ಅಪ್ಪುತ್ತಾನೆ .

ಪರೀಕ್ಷಿತ ಮಹಾರಾಜನಿಗೆ ಜನಮೇಜಯ ಎಂಬ ಮಗ ಇರುತ್ತಾನೆ ಆಗ ಅವನು ಇನ್ನೂ ಚಿಕ್ಕವನು , ಬೆಳೆದು ದೊಡ್ಡವನಾದಾಗ ತನ್ನ ತಂದೆ ಹೇಗೆ ಸತ್ತರು ಎಂದು ತಿಳಿದು ಕೋಪ ಗೊಂಡು ಒಂದು ಹಾವು ಸಾಯಿಸಿತಾ ಇಡೀ ನಾಗ ಕುಲವನ್ನೇ ಸಂಹರಿಸುತ್ತೇನೆ ಎಂದು 

ಮಹಾ ಸರ್ಪಯಾಗವನ್ನು ಮಾಡುತ್ತಾನೆ . ಆ ಯಾಗದ ಪ್ರಕಾರ ಜಗತ್ತಿನಲ್ಲಿರುವ ಎಲ್ಲಾ ಹಾವುಗಳೂ ಬಂದು ಅಗ್ನಿ ಕುಂಡದಲ್ಲಿ ಬೀಳುತ್ತಿದ್ದವು . ಹಿಗಿರುವಾಗ ನಾಗ ಕುಲವು ಭಯದಿಂದ ಇದ್ದಾಗ ನಾಗ ಕುಲದ ದೂರದ ಸಂಬಂದಿ ಯಾದ   #ಆಸ್ತಿಕ ಋಷಿಯು ಜನಮೇಜಯನಿದ್ದಲ್ಲಿಗೆ ಬಂದು ಪ್ರಾರ್ಥಿಸಿದಾಗ 

ಪ್ರಾರ್ಥನೆ ಯನ್ನು ಕೇಳಿ ಸಂಪನ್ನನಾದ ಜನಮೇಜಯ ಏನು ವರ ಬೇಕು ಎಂದಾಗ ಈ ಕೂಡಲೇ ಸರ್ಪಯಾಗ ನಿಲ್ಲಿಸಿ ಇದು ಮಹಾ ಪಾಪ , ಪಾಪದ ಕೆಲಸ ಮಾಡಿದ್ದೀರಿ ನಾಗ ಕುಲ ನಿರ್ನಾಮ ಮಾಡುವುದು ಉತ್ತಮ ಕೆಲಸವಲ್ಲ ಅಂದಾಗ ಜನಮೇಜಯ ತಾನು ಮಾಡುತ್ತಿದ್ದ ಯಾಗ ವನ್ನು ನಿಲ್ಲಿಸಿದನು . ಅದು ಪಂಚಮಿಯ ದಿನ ವಾಗಿತ್ತು . 

ಯಾಗ ನಿಂತು ತಮ್ಮ ಸರ್ಪ ಕುಲ ನಾಶ ವಾಗುವುದನ್ನು ತಡೆದ ಆಸ್ತಿಕ ಋಷಿಗೆ ನಮಿಸಿದ ನಾಗರಾಜ ,ಆಸ್ತಿಕ ಋಷಿಯೇ ನಮ್ಮ ಸಂಕುಲವನ್ನು ಉಳಿಸಿದ ನಿಮಗೆ ವರ ಕೊಡುತ್ತಿದ್ದೇವೆ . ಈ ಪಂಚಮಿಯ ದಿನದಂದು ಯಾಗ ನಿಲ್ಲಿಸಿದ್ದೀರಿ ಈ ದಿನದಂದು ಯಾರು ಆಸ್ತಿಕ ಎಂದು ಹೆಸರನ್ನು ಹೇಳುವರೋ ಅವರಿಗೆ ನಮ್ಮ ನಾಗ ಕುಲ ತೊಂದರೆ ಕೊಡುವುದಿಲ್ಲ .

ಆಸ್ತಿಕ ಅನ್ನುವ ಹೆಸರನ್ನು ಜಪಿಸುವರ ಮೇಲೆ ನಮ್ಮ ಕೃಪೆ ಇರುತ್ತದೆ . ಯಾವ ನಾಗ ದೋಷಗಳು ಅವರಿಗೆ ಬರುವುದಿಲ್ಲ . ಅವರ ಮೇಲೆ ನಮ್ಮ ಕೃಪೆ ಇರುತ್ತದೆ ಎಂದು ವರವನ್ನು ಕೊಡುತ್ತಾನೆ ನಾಗರಾಜ . 

ಈ ಪಂಚಮಿಯ ದಿನದಂದು ಯಾರು ಆಸ್ತಿಕ ಋಷಿಯ ಹೆಸರನ್ನು ಜಪಿಸುವರೋ ಅವರಿಗೆ ಯಾವ ನಾಗ ದೋಷಗಳೂ ಬರುವುದಿಲ್ಲ . 

ಈಗಲಾದರು ಆಸ್ತಿಕ ಆಸ್ತಿಕ ಎಂದು ಜಪಿಸಿರಿ .

ಲೋಕೋ ಸಮಸ್ತೋ ಸುಖಿನೋ ಭವತುಃ ಸನ್ಮಂಗಳಾಮಿ ಭವತುಃ . 

ನಾಗ ರಾಜನ ಕೃಪೆ ಎಲ್ಲರ ಮೇಲೆ ಇರಲಿ .

ಓಂ ನಮಃ ಶಿವಾಯ ಹರ ಹರ ಮಹಾದೇವ .

ಧನ್ಯವಾದಗಳು 

ಮಮತಾ ಎಸ್ ಗೌಡ

No comments:

Post a Comment