Wednesday, 30 October 2019

ಶಕುಂತಲೋಪಾಖ್ಯಾನ

🌺💐🌺 #ಶಕುಂತಲೋಪಾಖ್ಯಾನ 🌺💐🌺

🍂🍂 #ಭಾಗ-1🍂🍂

👉ದುಃಷಂತ-ಶಕುಂತಲೆಯರ ಈ ಕಥೆಯು ವ್ಯಾಸ ಮಹಾಭಾರತದ ಆದಿಪರ್ವದ ಸಂಭವ ಪರ್ವ (ಅಧ್ಯಾಯ ೬೨-೬೯) ದಲ್ಲಿ ಬರುತ್ತದೆ. ಈ ಕಥೆಯನ್ನು ಮುನಿ ವೈಶಂಪಾಯನನು ಜನಮೇಜಯನಿಗೆ ಹಸ್ತಿನಾಪುರದಲ್ಲಿ ಸರ್ಪಸತ್ರದಲ್ಲಿ ಹೇಳಿದನು.

🔹ನಾಲ್ಕೂ ಕಡೆಗಳಲ್ಲಿ ಸಮುದ್ರವು ಆವರಿಸಿರುವ ಈ ಪೃಥ್ವಿಯನ್ನು ದುಃಷಂತ ಎಂಬ ಹೆಸರಿನ ವೀರ ಪೌರವ ವಂಶಕರನು ಆಳುತ್ತಿದ್ದನು. ಆ ಮನುಜೇಶ್ವರನು ಭೋಗಿಸಿದ ದೇಶವು ಸಮುದ್ರದಿಂದ ಆವರಿಸಲ್ಪಟ್ಟ ಭೂಮಿಯ ನಾಲ್ಕೂ ಭಾಗಗಳನ್ನು ಒಳಗೊಂಡಿದ್ದಿತು. ಆ ರಿಪುಮರ್ದನನ ರಾಜ್ಯವು ಮ್ಲೇಚ್ಛರ ರಾಜ್ಯಗಳೆಲ್ಲವನ್ನೂ ಸೇರಿ ರತ್ನಾಕರ ಸಮುದ್ರದ ಅಂತ್ಯದವರೆಗೂ ಕೂಡಿದ್ದು ಚಾತುರ್ವಣ್ಯದವರನ್ನೂ ಒಳಗೊಂಡಿತ್ತು. ಆ ರಾಜನ ಶಾಸನದಲ್ಲಿ ವರ್ಣಸಂಕರವಿರಲಿಲ್ಲ, ಬೇಸಾಯ ಮಾಡಬೇಕಾಗಿರಲಿಲ್ಲ, ಗಣಿಗಳನ್ನು ತೋಡಬೇಕಾಗಿರಲಿಲ್ಲ, ಪಾಪಕೃತ್ಯಗಳನ್ನು ಮಾಡುವವರು ಯಾರೂ ಇರಲಿಲ್ಲ. 

🔹ಅವನ ರಾಜ್ಯಭಾರದಲ್ಲಿ ಎಲ್ಲರೂ ಧರ್ಮನಿರತರಾಗಿದ್ದು ಅವರು ಮಾಡುವ ಎಲ್ಲ ಕಾರ್ಯಗಳೂ ಧರ್ಮದ ಸೇವೆಯಲ್ಲಿಯೇ ನಡೆಯುತ್ತಿತ್ತು. ಅವನ ರಾಜ್ಯಭಾರದಲ್ಲಿ ಯಾವುದೇ ರೀತಿಯ ಚೋರ ಭಯವಾಗಲೀ, ಬರಗಾಲದ ಭಯವಾಗಲೀ, ಅಥವಾ ವ್ಯಾಧಿ ಭಯವಾಗಲೀ ಇರಲಿಲ್ಲ. ಎಲ್ಲ ವರ್ಣದವರೂ ಅವರವರ ಧರ್ಮಗಳಲ್ಲಿ ನಿರತರಾಗಿದ್ದು ಯಾವುದೇ ಫಲವನ್ನೂ ಬಯಸದೇ ದೇವಕಾರ್ಯಗಳಲ್ಲಿ ತೊಡಗಿದ್ದರು. ಅವನಲ್ಲಿ ಆಶ್ರಯ ಹೊಂದಿದ ಪ್ರಜೆಗಳ್ಯಾರಿಗೂ ಯಾವುದೇ ರೀತಿಯ ಭಯವಿರಲಿಲ್ಲ. ಪರ್ಜನ್ಯನು ಕಾಲಕ್ಕೆ ಸರಿಯಾಗಿ ಮಳೆ ಸುರಿಸುತ್ತಿದ್ದನು ಮತ್ತು ಸಸ್ಯಗಳು ಫಲಭರಿತವಾಗಿರುತ್ತಿದ್ದವು. 

🔹ಆ ಕಾಲದಲ್ಲಿ ವಸುಮತಿ ಭೂಮಿಯು ಸರ್ವರತ್ನ ಸಮೃದ್ಧಳಾಗಿದ್ದಳು. ಆ ಯುವಕನಾದರೋ ಅದ್ಭುತಮಹಾವೀರ್ಯನೂ, ವಜ್ರಕಾಯನೂ ಆಗಿದ್ದು ವನಕಾನನಗಳ ಸಮೇತ ಮಂದರ ಪರ್ವತವನ್ನು ಎತ್ತಿಹಿಡಿಯಬಲ್ಲಂಥ ಭುಜಯುಕ್ತನಾಗಿದ್ದನು. ಅವನು ಧನುರ್ಯುದ್ಧ, ಗದಾಯುದ್ಧ, ಖಡ್ಗ ಪ್ರಹಾರ, ಆನೆ ಸವಾರಿ ಮತ್ತು ಕುದುರೆ ಸವಾರಿ ಎಲ್ಲದರಲ್ಲಿಯೂ ಪರಿಣಿತನಾಗಿದ್ದನು. ಅವನು ಬಲದಲ್ಲಿ ವಿಷ್ಣುಸಮಾನನೂ, ತೇಜಸ್ಸಿನಲ್ಲಿ ಭಾಸ್ಕರನಂತೆಯೂ, ಶಾಂತತೆಯಲ್ಲಿ ಸಾಗರ ಸಮನೂ, ಮತ್ತು ಸಹಿಷ್ಣುತೆಯಲ್ಲಿ ಭೂಮಿಯ ಸಮನೂ ಆಗಿದ್ದನು. ಆ ಸಮ್ಮತ ಮಹೀಪಾಲನು ಪ್ರಸನ್ನತೆಯಿಂದ ತನ್ನ ಪುರರಾಷ್ಟ್ರಗಳನ್ನು ಆಳುತ್ತಿರಲು ಅಲ್ಲಿಯ ಜನರೆಲ್ಲರೂ ಧರ್ಮ ನಿರತರಾಗಿದ್ದರು.

🔹ಒಮ್ಮೆ ಆ ಮಹಾಬಾಹುವು ನೂರಾರು ಆನೆ ಕುದುರೆಗಳನ್ನೊಡಗೂಡಿದ ಮಹಾಸೇನೆಯೊಂದಿಗೆ ಗಹನ ವನವೊಂದಕ್ಕೆ ಹೋದನು. ಖಡ್ಗ ಮತ್ತು ಶಕ್ತಿಗಳನ್ನು ಧರಿಸಿದ, ಗದೆ ಮುಸಲಗಳನ್ನು ಹಿಡಿದ ನೂರಾರು ವೀರ ಯೋಧರಿಂದ ಆವೃತ ರಾಜನು ಮುಂದೆ ಸಾಗಿದನು. ರಾಜನು ಹೊರಟಾಗ ಯೋಧರ ಸಿಂಹನಾದ, ಶಂಖದುಂಧುಭಿಗಳ ಸ್ವರ, ರಥಗಾಲಿಗಳ ಶಬ್ಧ, ದೊಡ್ಡ ದೊಡ್ಡ ಆನೆಗಳ ಕೂಗಾಟ, ಕುದುರೆಗಳ ಕೂಗು, ನಡೆಯುತ್ತಿರುವ ಸೈನಿಕರ ಆಯುಧಗಳ ಸದ್ದು ಇವುಗಳೆಲ್ಲವುಗಳ ಒಟ್ಟು ಆರ್ಭಟವು ಕಿವಿಗಳನ್ನು ಕಿವುಡುಮಾಡುವಷ್ಟು ಜೋರಿನಲ್ಲಿ ಕೇಳಿಬರುತ್ತಿತ್ತು. 

🔹ಶೂರನೂ ಆತ್ಮಯಶಸ್ಕರನೂ ಆದ ಆ ಸುಂದರ ನೃಪನನ್ನು ಸ್ತ್ರೀಯರು ಮನೆಗಳ ಮಹಡಿಗಳ ಮೇಲೆ ನಿಂತು ನೋಡುತ್ತಿದ್ದರು. ಶಕ್ರನಂತೆ ಶತ್ರುಗಳನ್ನು ನಾಶಗೊಳಿಸಬಲ್ಲ, ಪರರ ಆನೆಗಳನ್ನು ಹೊಡೆದೋಡಿಸಬಲ್ಲ ಆ ಶಸ್ತ್ರಪಾಣಿಯನ್ನು ನೋಡಿದ ಸ್ತ್ರೀಗಣಗಳು ಈ ರೀತಿ ಯೋಚಿಸಿಸುತ್ತಿದ್ದವು: “ರಣದಲ್ಲಿ ಅದ್ಭುತಪರಾಕ್ರಮಿಯಾದ ಇವನು ಪುರುಷವ್ಯಾಘ್ರ. ಇವನ ಬಾಹುಬಲಕ್ಕೆ ಸಿಲುಕಿದ ಯಾವ ಶತ್ರುವೂ ಉಳಿಯಲಿಕ್ಕಿಲ್ಲ.”

🔹ನರಾಧಿಪನ ಕುರಿತು ಪ್ರೇಮದಿಂದ ಸ್ತ್ರೀಯರು ಈ ರೀತಿ ಆಡಿಕೊಂಡರು, ಮತ್ತು ಸಂತಸದಿಂದ ಅವನ ನೆತ್ತಿಯ ಮೇಲೆ ಹೂವಿನ ಮಳೆಯನ್ನೇ ಸುರಿಸಿದರು. ಅವನು ಹೋದಲ್ಲೆಲ್ಲಾ ವಿಪ್ರೇಂದ್ರರು ಸ್ತುತಿಸುತ್ತಿರಲು ಅವನು ಅತಿ ಸಂತಸದಿಂದ ಮೃಗ ಬೇಟೆಗೆಂದು ವನವನ್ನು ಪ್ರವೇಶಿಸಿದನು. ಅವನನ್ನು ಸ್ವಲ್ಪದೂರದವರೆಗೆ ಅನುಸರಿಸಿದ ನಗರ ಮತ್ತು ಗ್ರಾಮೀಣ ಜನರು ಸ್ವಲ್ಪ ಸಮಯದ ನಂತರ ರಾಜನ ಅನುಜ್ಞೆಯಂತೆ ಹಿಂದಿರುಗಿದರು. ಗರುಡನಂತೆ ಅತಿ ವೇಗದಲ್ಲಿ ಪ್ರಯಾಣಿಸುತ್ತಿರುವ ಆ ವಸುಧಾಧಿಪನ ರಥ ಘೋಷವು ಇಡೀ ಭೂಮಿಯನ್ನೂ ಸೇರಿ ಮೂರೂ ಲೋಕಗಳನ್ನೂ ತುಂಬಿತು. 

🔹ಹೀಗೆ ಹೋಗುತ್ತಿರುವಾಗ ಆ ಧೀಮಂತನು ಬಿಲ್ವಾಕ, ಅರ್ಕ, ಖದಿರ, ಕೀರ್ಣ, ಕಪಿತ್ಥ ಮತ್ತು ಧವ ಸಂಕುಲಗಳಿಂದ ಕೂಡಿದ ನಂದನವನವನ್ನೇ ಹೋಲುವ ವನವೊಂದನ್ನು ಕಂಡನು. ಅದು ಪರ್ವತ, ಕಣಿವೆ, ಬಂಡೆಗಲ್ಲುಗಳನ್ನುಹೊಂದಿದ್ದು ವಿಷಮವಾಗಿತ್ತು; ನಿರ್ಜಲ ನಿರ್ಮನುಷ್ಯವಾಗಿ ಬಹಳಷ್ಟು ಯೋಜನ ವಿಸ್ತೀರ್ಣಗೊಂಡಿತ್ತು; ಜಿಂಕೆ, ಸಿಂಹ ಮತ್ತು ಇನ್ನೂ ಇತರ ಘೋರ ವನಪ್ರಾಣಿಗಳಿಂದ ತುಂಬಿಕೊಂಡಿತ್ತು. ತನ್ನ ಸೇವಕರು ಮತ್ತು ಸೈನಿಕರೊಡಗೂಡಿದ ಆ ಮನುಜವ್ಯಾಘ್ರ ದುಃಷಂತನು ಆ ವನದಲ್ಲಿ ವಿವಿಧ ಮೃಗಗಳನ್ನು ಬೇಟೆಯಾಡಿದನು. ತನ್ನ ಬಾಣಗಳ ಪರಿಧಿಯಲ್ಲಿ ಸಿಕ್ಕಿದ ಹಲವಾರು ವ್ಯಾಘ್ರಗಳನ್ನು ದುಃಷಂತನು ತನ್ನ ಬಾಣಗಳಿಂದ ಹೊಡೆದು ಉರುಳಿಸಿದನು. 

🔹ಆ ನರರ್ಷಭನು ದೂರದಲ್ಲಿರುವವನ್ನು ಬಾಣಗಳಿಂದ ಹೊಡೆದನು; ಹತ್ತಿರದಲ್ಲಿರುವವನ್ನು ಖಡ್ಗದಿಂದ ಕತ್ತರಿಸಿದನು. ಆ ಶಕ್ತಿವಂತರಲ್ಲಿ ಶ್ರೇಷ್ಠನು ಕೆಲವು ಪ್ರಾಣಿಗಳನ್ನು ಈಟಿಯಿಂದ ಹೊಡೆದನು; ಆ ಅಮಿತವಿಕ್ರಮಿಯು ಕೆಲವನ್ನು ಗದೆಯಿಂದ ಹೊಡೆದು ಉರುಳಿಸಿದನು. ಈ ರೀತಿ ತೋಮರ, ಖಡ್ಗ, ಗದೆ, ಮುಸಲ ಮುಂತಾದ ಆಯುಧಗಳನ್ನು ಹಿಡಿದು ಬೇಟೆಯಾಡುವಾಗ ಆ ವನದಲ್ಲಿರುವ ಮೃಗಗಳೆಲ್ಲವೂ ಅಲ್ಲಿಂದ ಪಲಾಯನಗೈಯ ತೊಡಗಿದವು. ರಾಜನ ಆ ಸಮರಪ್ರಿಯ ಅದ್ಭುತವೀರ್ಯ ಯೋಧರ ಧಾಳಿಗೊಳಗಾದ ಆ ಮಹಾರಣ್ಯದ ಮಹಾಮೃಗಗಳೆಲ್ಲವೂ ಅಲ್ಲಿಂದ ಓಡತೊಡಗಿದವು. ತಮ್ಮ ಪಡೆಯ ನಾಯಕನನ್ನು ಕಳೆದುಕೊಂಡು ಗಲಿಬಿಲಿಗೊಂಡ ಜಿಂಕೆಗಳ ಪಡೆಯು ಭಯ ಉದ್ವೇಗಗಳ ಆಕ್ರಂದವನ್ನೀಯುತ್ತಾ ಎಲ್ಲ ದಿಕ್ಕುಗಳಲ್ಲಿಯೂ ಓಡತೊಡಗಿದವು. 

🔹ಬತ್ತಿಹೋದ ನದಿಗಳಿಂದ ತಮ್ಮ ಬಾಯಾರಿಕೆಯನ್ನು ನೀಗಿಕೊಳ್ಳಲಾಗದೇ ಕೃಷರಾಗಿ, ಆಯಾಸದಿಂದ ಬಳಲಿದವರಾಗಿ ಅಲ್ಲಿಯೇ ವಿಚೇತಸರಾಗಿ ಬಿದ್ದವು. ಹಸಿವು ಬಾಯಾರಿಕೆಗಳಿಂದ ಬಳಲಿದವುಗಳು ಭೂಮಿಯ ಮೇಲೆ ಬಿದ್ದವು. ಕೆಲವನ್ನು ಅಲ್ಲಿದ್ದ ನರವ್ಯಾಘ್ರರು ಹಸಿದಾಗಿಯೇ ಭಕ್ಷಿಸಿದರು. ಕೆಲವೊಂದನ್ನು ಆ ವನಚರರು ಬೆಂಕಿಯನ್ನು ಹಾಕಿ ಅದರಲ್ಲಿ ಮಾಂಸವನ್ನು ವಿಧಿವತ್ತಾಗಿ ಸುಟ್ಟು ತಿಂದರು. ಶಸ್ತ್ರಗಳಿಂದ ಗಾಯಗೊಂಡು ಭಯಭೀತರಾದ ಬಲಶಾಲೀ ಮತ್ತ ಗಜಗಳು ತಮ್ಮ ಸೊಂಡಿಲುಗಳನ್ನು ಮೇಲೇರಿಸಿ ಘೀಳಿಡುತ್ತಾ ಓಡತೊಡಗಿದವು. ಭಯಭೀತರಾಗಿ ಮಲ ಮೂತ್ರಗಳನ್ನು ವಿಸರ್ಜಿಸುತ್ತಾ ರಕ್ತವನ್ನು ಕಾರುತ್ತಾ ಓಡುತ್ತಿದ್ದ ಆ ಆನೆಗಳು ಹಲವಾರು ಸೈನಿಕರನ್ನು ತುಳಿದು ಕೊಂದುಹಾಕಿದವು. ಹಲವಾರು ಪ್ರಾಣಿಗಳಿಂದ ತುಂಬಿದ್ದ ಆ ವನವನ್ನು ರಾಜನ ಅಸಂಖ್ಯ ಸೇನೆಯು ಸಿಂಹ, ಹುಲಿ ಮತ್ತು ಇತರ ಪ್ರಾಣಿಗಳಿಂದ ಮುಕ್ತಮಾಡಿತು.

🔹ಸಹಸ್ರಾರು ಮೃಗಗಳನ್ನು ಬೇಟೆಯಾಡಿದ ಆ ವಿಪುಲವಾಹನ ರಾಜನು ಬೇಟೆಯಾಡುತ್ತಾ ಇನ್ನೊಂದು ವನವನ್ನು ಪ್ರವೇಶಿಸಿದನು. ಹಸಿವು ಬಾಯಾರಿಕೆಗಳಿಂದ ಬಳಲಿದ ಆ ಉತ್ತಮ ಬಲಶಾಲಿಯು ಒಬ್ಬನೇ ವನದ ಅಂಚಿನಲ್ಲಿದ್ದ ಒಂದು ಮೈದಾನ ಪ್ರದೇಶವನ್ನು ಸೇರಿದನು. ಅದನ್ನು ದಾಟಿದ ನೃಪತಿಯು ಉತ್ತಮ ಆಶ್ರಮಗಳಿಂದ ಕೂಡಿದ, ಅತೀವ ಸುಂದರವಾಗಿದ್ದು ಮನಸ್ಸಿಗೆ ಸಂತೋಷವನ್ನುಂಟುಮಾಡುವ, ತಂಗಾಳಿ ಬೀಸುತ್ತಿದ್ದ ಇನ್ನೊಂದು ಮಹಾ ವನವನ್ನು ಪ್ರವೇಶಿಸಿದನು. ಹೂತುಂಬಿದ ಮರಗಳು ಮತ್ತು ವಿಶಾಲ ಸಮೃದ್ಧ ಹುಲ್ಲಿನ ಹಾಸಿಗೆಯನ್ನು ಹೊಂದಿದ್ದ ಅಲ್ಲಿ ಪಕ್ಷಿಗಳ ಮಧುರ ಕಲರವಗಳು ಪ್ರತಿಧ್ವನಿಸುತ್ತಿತ್ತು. ಅಲ್ಲಿ ಸುಖಛಾಯೆಯನ್ನು ನೀಡುವ ವಿಶಾಲ ರೆಂಬೆಗಳನ್ನು ಹೊಂದಿ ಪ್ರವೃದ್ಧವಾಗಿ ಬೆಳೆದಿದ್ದ ವೃಕ್ಷಗಳಿದ್ದವು. ಸುಂದರ ಪೊದೆಗಳು ಮತ್ತು ಹೂವಿನ ಬಳ್ಳಿಗಳನ್ನು ದುಂಬಿಗಳು ಸುತ್ತುವರೆದಿದ್ದವು. 

🔹ಆ ಕಾನನದಲ್ಲಿ ಹೂ-ಫಲಗಳಿಲ್ಲದ ಮರವೇ ಇರಲಿಲ್ಲ, ಮುಳ್ಳುಗಳಿಂದ ಕೂಡಿದ ಪೊದೆಯೇ ಇರಲಿಲ್ಲ, ಮತ್ತು ದುಂಬಿಗಳು ಮುತ್ತಿಕೊಂಡಿರದ ಯಾವ ಗಿಡವೂ ಇರಲಿಲ್ಲ. ಪಕ್ಷಿಗಳ ನಾದದಿಂದ ತುಂಬಿದ್ದ, ಬಹಳಷ್ಟು ಪುಷ್ಪಗಳಿಂದ ಅಲಂಕೃತವಾಗಿದ್ದ, ಸರ್ವಋತುಗಳಲ್ಲಿ ಕಂಡುಬರುವ ಸುಮವೃಕ್ಷಗಳ ಸುಖ ನೆರಳಿನಿಂದ ಮನೋರಮ ಆ ಉತ್ತಮ ವನವನ್ನು ಮಹೇಷ್ವಾಸನು ಪ್ರವೇಶಿಸಿದನು. ಗಾಳಿಯಿಂದ ಅಲುಗಾಡುತ್ತಿದ್ದ ಕುಸುಮದ್ರುಮಗಳಿಂದ ಪುನಃ ಪುನಃ ಪುಷ್ಪವೃಷ್ಟಿಯಾಗುತ್ತಿತ್ತು. ಸ್ವರ್ಗವನ್ನು ಮುಟ್ಟುತ್ತಿವೆಯೋ ಎನ್ನುವಷ್ಟು ಎತ್ತರ ಬೆಳೆದಿದ್ದ ಪಕ್ಷಿಗಳ ಮಧುರ ಸ್ವರಗಳಿಂದ ವಿರಾಜಿಸುತ್ತಿದ್ದ ಅಲ್ಲಿಯ ಮರಗಳ ರೆಂಬೆಗಳು ವಿಚಿತ್ರ ಕುಸುಮಗಳನ್ನು ಹೊತ್ತು ಆ ಪುಷ್ಪಗಳ ಭಾರದಿಂದಲೋ ಎಂಬಂತೆ ಕೆಳಗೆ ಚಾಚಿ ಸುತ್ತುವರೆದ ಪಕ್ಷಿ-ದುಂಬಿಗಳ ನಾದಸಮೂಹದಲ್ಲಿ ಮುದಿತವಾಗಿದ್ದವು. 

🔹ಆ ಪ್ರದೇಶದಲ್ಲಿ ಹೂವಿನ ಗೊಂಚಲುಗಳನ್ನು ಹೊಂದಿದ್ದ ಹಲವಾರು ಬಳ್ಳಿಗಳಿದ್ದವು. ಮನಸ್ಸಿನ ಸಂತೋಷವನ್ನು ಹೆಚ್ಚಿಸುವ ಲತಾಗೃಹಗಳಿದ್ದವು. ಇದನ್ನೆಲ್ಲಾ ನೋಡಿದ ಮಹಾತೇಜಸ್ವಿಯು ಆನಂದಿತನಾದನು. ತಮ್ಮ ತಮ್ಮ ಕುಸುಮಾಚ್ಛಾದಿತ ರೆಂಬೆಗಳಿಂದ ಪರಸ್ಪರ ಅಪ್ಪಿಕೊಂಡಂತಿದ್ದ ವೃಕ್ಷಗಳಿಂದ ಕೂಡಿದ ಆ ವನವು ಅನೇಕ ಸುಂದರ ಕಾಮನಬಿಲ್ಲುಗಳಂತೆ ಶೋಭಿಸುತ್ತಿತ್ತು. ಹೂವುಗಳ ಪರಾಗವನ್ನು ಹೊತ್ತ ಸುಗಂಧಿತ ಸುಖಶೀತಲ ಗಾಳಿಯು ಅಲ್ಲಿಯ ಮರಗಳೊಂದಿಗೆ ಆಟವಾಡುತ್ತಿದೆಯೋ ಎನ್ನುವಂತೆ ವನದ ಸುತ್ತಲೂ ಬೀಸುತ್ತಿತ್ತು.

🔹ಈ ರೀತಿ ಗುಣಸಮಾಯುಕ್ತ ಆ ವನವು ನದಿಯೊಂದರ ತೀರದಲ್ಲಿ ಇಂದ್ರನ ಗೌರವಾರ್ಥ ನೆಟ್ಟಿದ್ದ ಧ್ವಜದಂತಿದೆ ಎನ್ನುವುದನ್ನು ನೃಪನು ಗಮನಿಸಿದನು. ಆ ವನದಲ್ಲಿ ಸದಾ ಸಂತಸದಿಂದ ಚಿಲಿಪಿಲಿಗುಡುತ್ತಿದ್ದ ಪಕ್ಷಿಗಳನ್ನು ಮತ್ತು ಮನೋರಮ ರಮ್ಯ ಆಶ್ರಮಸಂಕುಲವನ್ನು ಕಂಡನು. ಅದು ನಾನಾ ವೃಕ್ಷಗಳಿಂದ ಸುತ್ತುವರೆದಿತ್ತು ಮತ್ತು ಮಧ್ಯದಲ್ಲಿ ಪುಣ್ಯ ಪಾವಕವು ಉರಿಯುತ್ತಿತ್ತು. ವಾಲಖಿಲ್ಯಧಾರಿ ಯತಿ ಮತ್ತು ಮುನಿಗಣಗಳಿಂದ ಕೂಡಿತ್ತು. ಬಹಳ ಅಗ್ನ್ಯಾಗಾರಗಳಿದ್ದವು, ನೆಲದ ಮೇಲೆ ಮರಗಳಿಂದ ಕೆಳಗೆ ಬಿದ್ದ ಪುಷ್ಪಗಳ ದರಿಯೇ ಹಾಸಿತ್ತು. 

🔹ಮಹಾ ರೆಂಬೆಗಳನ್ನು ಹೊಂದಿದ್ದ ಸುಂದರ ಮರಗಳಿಂದ ಅತೀವ ಸುಂದರವಾಗಿ ಕಾಣುತ್ತಿತ್ತು. ಸುಖೋದಕವನ್ನು ಹೊಂದಿದ್ದ ಪುಣ್ಯಕರ ಮಾಲಿನೀ ನದಿಯು ಅಲ್ಲಿ ಹರಿಯುತ್ತಿತ್ತು. ಹೀಗೆಯೇ ಆ ಶ್ರೀಮಾನ್ ಅತಿರಥನು ಸರ್ವತವೂ ಸುಮನೋಹರವಾಗಿದ್ದ ದೇವಲೋಕದಂತಿದ್ದ ಅಶ್ರಮವನ್ನು ಪ್ರವೇಶಿಸಿದನು. ಅಲ್ಲಿರುವ ಸರ್ವ ಪ್ರಾಣಿಗಳಿಗೂ ಜನನಿಯಂತೆ ಹರಿಯುತ್ತಿರುವ ಪುಣ್ಯ ನದಿಯ ದಂಡೆಯ ಮೇಲೆ ನಿಂತಿದ್ದ ಆ ಆಶ್ರಮವನ್ನು ನೋಡಿದನು.

🔹ಪುಷ್ಪ-ನೊರೆಗಳೊಡನೆ ಪ್ರವಾಹಿಸುತ್ತಿದ್ದ ಅದರ ದಂಡೆಯ ಮೇಲೆ ಚಕ್ರವಾಕಗಳು ಆಟವಾಡುತ್ತಿದ್ದವು, ತಮ್ಮ ಗಣಗಳೊಂದಿಗೆ ಕಿನ್ನರರು ವಾಸಿಸುತ್ತಿದ್ದರು ಮತ್ತು ವಾನರ-ಕರಡಿಗಳು ಅಲ್ಲಿಗೆ ಬರುತ್ತಿದ್ದವು. ಸ್ವಾಧ್ಯಾಯ ನಿರತ ಪುಣ್ಯಪುರುಷರು ಆ ಸುಂದರ ದಂಡೆಯ ಮೇಲೆ ವಾಸಿಸುತ್ತಿದ್ದರು. ಮದಿಸಿದ ಆನೆಗಳೂ, ಹುಲಿಗಳೂ, ಸರ್ಪಗಳೂ ಅಲ್ಲಿಗೆ ಬರುತ್ತಿದ್ದವು. ನದಿಯ ದಂಡೆಗೇ ಹೊಂದಿಕೊಂಡಿದ್ದ ಆಶ್ರಮಪದವನ್ನು ನೋಡಿದ ನೃಪತಿಯು ಅದನ್ನು ಪ್ರವೇಶಿಸುವ ಮನಸ್ಸುಮಾಡಿದನು. 

🔹ಮಾಲಿನೀ ನದಿಯು ದ್ವೀಪಗಳಿಂದ ಮತ್ತು ರಮ್ಯ ತೀರಗಳಿಂದ ಅಲಂಕೃತವಾಗಿದ್ದು, ಗಂಗಾ ತೀರದಲ್ಲಿದ್ದ ನರನಾರಾಯಣರ ಆಶ್ರಮದಂತೆ ಶೋಭಿಸುತ್ತಿತ್ತು. ಚೈತ್ರರಥನ ವನದಂತಿರುವ, ಮತ್ತು ನವಿಲು ಸಂಕುಲಗಳಿಂದ ಕೂಡಿದ ಆ ಮಹಾವನವನ್ನು ನರೇಶ್ವರನು ಪ್ರವೇಶಿಸಿದನು. ಅತೀವ ಗುಣಸಂಪನ್ನ ಅನಿರ್ದೇಶ್ಯ ವರ್ಚಸ ಮಹರ್ಷಿ ತಪೋಧನ ಕಾಶ್ಯಪ ಕಣ್ವನನ್ನು ನೋಡಲು ಬಯಸಿದನು. ರಥಿಗಳನ್ನು, ಅಶ್ವಸವಾರಿಗಳನ್ನು ಮತ್ತು ಪದಾತಿಗಣಸಂಕುಲಗಳ ಸೇನೆಯನ್ನು ವನದ ದಾರಿಯಲ್ಲಿಯೇ ನಿಲ್ಲಿಸಿ ಈ ಮಾತುಗಳನ್ನಾಡಿದನು: “ನಾನು ಮುನಿ ವಿರಜಸ ತಪೋಧನ ಕಾಶ್ಯಪನನ್ನು ಕಾಣಲು ಹೋಗುತ್ತಿದ್ದೇನೆ. ನಾನು ಬರುವವರೆಗೆ ಇಲ್ಲಿಯೇ ನಿಂತಿರಿ.”

ನಾಳೆಗೆ ಮುಂದುವರೆಯುವುದು.......,

🙏ಕೃಷ್ಣಾರ್ಪಣಾಮಸ್ತು🙏

🍂🍁ಶುಭನಮನಗಳು, ಶುಭರಾತ್ರಿ🍁🍂

No comments:

Post a Comment