Wednesday, 30 October 2019

ಶ್ರೀರಾಮಚಂದ್ರನ ಹಿರಿಯಕ್ಕ

ರಾಮಾಯಣದ ಶ್ರೀರಾಮಚಂದ್ರನ ಹಿರಿಯಕ್ಕನ ಬಗ್ಗೆ ನಿಮಗೆ ಗೊತ್ತಾ ? ಈ ಮಾಹಿತಿ‌ ನೋಡಿ.
🍀🍀🍀🍀🍀🍀🍀🍀🍀🍀🍀🍀🍀🍀🍀🍀

ರಾಮಾಯಣ ಎಂದರೆ ನಮಗೆ ತಕ್ಷಣ ನೆನಪಾಗುವುದು ಶ್ರೀ ರಾಮಚಂದ್ರ ಹಾಗೂ ಸೀತೆ. ಅನಂತರ ಹನುಮಂತ. ಇನ್ನು ಪ್ರಮುಖ ಪಾತ್ರಗಳೆಂದರೆ ಲಕ್ಷ್ಮಣ , ಭರತ , ಶತ್ರುಘ್ನ, ಲಂಕೇಶ್ವರ ರಾವಣ, ವಾನರ ಸೇನೆ‌ ಹಾಗೂ ಶ್ರೀ ರಾಮಚಂದ್ರನ ತಂದೆ ತಾಯಿ. ಆದರೆ ನಾವಿಂದು ನಿಮಗೆ ತಿಳಿಯದ, ಬಹಳಷ್ಟು ಜನಕ್ಕೆ ಗೊತ್ತಿಲ್ಲದ ಒಂದು ಅತಿ ಪ್ರಮುಖ ಪಾತ್ರವನ್ನು ನಿಮಗೆ ಪರಿಚಯ ಮಾಡಲು ಹೊರಟಿದ್ದೇವೆ. ಈ ಪಾತ್ರದ ಬಗ್ಗೆ ನಾವು ಹೇಳಿದರೆ ಒಂದು ಕ್ಷಣ ನಿಮಗೂ ಆಶ್ಚರ್ಯ ಆಗುವುದರಲ್ಲಿ ಸಂದೇಹವೇ ಇಲ್ಲ. ನಾವು ಇಂದು ಹೇಳಲು ಹೊರಟಿರುವುದು ಶ್ರೀ ರಾಮಚಂದ್ರನ ಹಿರಿಯ ಅಕ್ಕನ ಬಗ್ಗೆ‌ . ಹೌದು ನೀವು ಓದಿದ್ದು, ನಿಜ. ನಾವು ಹೇಳುತ್ತಿರುವುದು ಶ್ರೀ ರಾಮಚಂದ್ರನ ಹಿರಿಯಕ್ಕನ ಬಗ್ಗೆಯೇ?

ರಾಮಾಯಣದ ಸುಮಾರು 300 ಆವೃತ್ತಿಗಳು ಜಗತ್ತಿನಾದ್ಯಂತ ಪ್ರಸಿದ್ಧವಾಗಿದ್ದು, ಬಹುತೇಕ ರಾಮಾಯಣಗಳಲ್ಲಿ ರಾಮನ ಸಹೋದರಿಯ ಬಗ್ಗೆ ಎಲ್ಲೂ ಅಷ್ಟಾಗಿ ಪ್ರಸ್ತಾಪಿಸಲಾಗಿಲ್ಲ. ಪುರಾಣಗಳಲ್ಲಿ ಕೆಲವು ವಿಷಯಗಳು ರಜಸ್ಯವಾಗಿ ಉಳಿಯುವಂತೆ ಶ್ರೀ ರಾಮನ ಹಿರಿಯಕ್ಕನ ಪಾತ್ರವೂ ಹಲವರಿಗೆ ಒಂದು ರಹಸ್ಯವೇ ಸರಿ. ಇನ್ನು ಶ್ರೀ ರಾಮನ ಹಿರಿಯ ಸಹೋದರಿಯ ಹೆಸರು ಶಾಂತಾ. ಈಕೆ ದಶರಥನ ನಾಲ್ಕು ಜನ ಗಂಡು ಮಕ್ಕಳಿಗಿಂತ ಹಿರಿಯಳು. ಇನ್ನು ಈಕೆಗೆ ಸಂಬಂಧಿಸಿದ ಮೂರು ಕಥೆಗಳು ಪ್ರಚಲಿತದಲ್ಲಿದೆ. ಆದರೆ ಮೂರು ಕಥೆಗಳಲ್ಲಿ ರಾಮನಿಗೆ ಹಿರಿಯಕ್ಕ ಇದ್ದಳೆಂಬ ವಿಷಯ ಮಾತ್ರ ಸ್ಪಷ್ಟವಾಗಿ ಕಾಣುತ್ತದೆ.

ದಶರಥ ಹಾಗೂ ಕೌಸಲ್ಯಾ ಸಂಜಾತೆ ಈ ಶಾಂತಾ. ಮೊದಲನೇ ಕಥೆಯ ಪ್ರಕಾರ ರಾಮನ ತಾಯಿ ಕೌಸಲ್ಯಾ ಸಹೋದರಿ ವರ್ಷಿಣಿಗೆ ಮಕ್ಕಳಿಲ್ಲದ ಕಾರಣ, ದಶರಥ ಆಕೆಗೆ ಹಾಗೂ ಆಕೆಯ ಪತಿ ರೋಮಪದನಿಗೆ ಶಾಂತಳನ್ನು ದತ್ತು ಪುತ್ರಿಯಾಗಿ ನೀಡುತ್ತಾನೆ. ಶಾಂತ ಅಪರೂಪ ಗುಣವತಿ, ಕುಶಲಮತಿ ಹಾಗೂ ಧೈರ್ಯವಂತೆ ಕೂಡಾ ಆಗಿದ್ದಳೆಂದು ಹೇಳುತ್ತವೆ ಪುರಾಣಗಳು. ಎರಡನೇ ಕಥೆಯ ಅನುಸಾರ ಶಾಂತ ಹೆಣ್ಣು ಮಗಳೆಂಬ ಕಾರಣದಿಂದ ಹಾಗೂ ಅಯೋಧ್ಯೆಯಲ್ಲಿ ಆಕೆಯ ಜನನದ ನಂತರ ಬರಗಾಲ ಆಯಿತೆಂದು ಆಕೆಯನ್ನು ದಶರಥ ವರ್ಷಿಣಿಗೆ ದತ್ತು ನೀಡಿದನೆಂದೂ ಸಹಾ ಹೇಳಲಾಗುತ್ತದೆ. ಕಾರಣ ಏನೇ ಆದರೂ ಆಕೆ ದಶರಥನ ಹಿರಿಮಗಳು ಹಾಗೂ ಶ್ರೀ ರಾಮಚಂದ್ರನ ಅಕ್ಕ.

ರಾಜ ರೋಮಪದ ಅಂದರೆ ಶಾಂತಾಳ ಸಾಕು ತಂದೆ ತನ್ನ ರಾಜ್ಯದಲ್ಲಿ ಮಳೆ ಬಾರದಾಗ ಮಳೆ ತರಿಸುವ ಋಷಿಯೆಂದೇ ಖ್ಯಾತನಾದ ಶೃಂಗ ಋಷಿಯನ್ನು ಕರೆಸಿ ಯಜ್ಞ ಮಾಡಿಸಲು, ಧೋ ಎಂದು ಮಳೆ ಸುರಿದು ಸುಭಿಕ್ಷವಾಯಿತು. ನಂತರ ರೋಮಪದ ತನ್ನ ಮಗಳನ್ನು ಶೃಂಗ ಋಷಿಗೆ ಕೊಟ್ಟು ವಿವಾಹ ಮಾಡಿದ. ಅನಂತರದಲ್ಲಿ ರಾಜ ದಶರಥನಿಗೆ ಸಂತಾನವಾಗದೇ ಇರಲು, ರಾಜ ದಶರಥ ತನ್ನ ಮಗಳು ಹಾಗೂ ಅಳಿಯನನ್ನು ರಾಜ್ಯಕ್ಕೆ ಆಹ್ವಾನಿಸಿದನು. ಆಗ ಶೃಂಗ ಋಷಿ ನಡೆಸಿದ ಪುತ್ರಕಾಮೇಷ್ಟಿ ಯಾಗದ ಫಲವಾಗಿ ದಶರಥನಿಗೆ ಪುತ್ರ ಸಂತಾನವಾಗಿ ಅಯೋಧ್ಯೆಯ ಉದ್ದಾರವಾಯಿತೆನ್ನಲಾಗಿತ್ತದೆ. ಹೀಗೆ ದಶರಥ ದತ್ತು ನೀಡಿದ ಆತನ ಮಗಳೇ ಅವರ ವಂಶೋದ್ಧಾರಕ್ಕೆ ಕಾರಣಳಾದಳು.

ಲೇಖನ :- ಇ.ಸೋಮಶೇಖರ್. ಖ್ಯಾತ ಬರಹಗಾರರು ಮತ್ತು ಉಪನ್ಯಾಸಕರು.

No comments:

Post a Comment