🌺🙏🌺 #ನಮ್ಮ #ಮನಸ್ಸೇ #ಎಲ್ಲಾ #ಬಂಧ #ಮೋಕ್ಷಗಳಿಗೆ #ಕಾರಣ 🌺🙏🌺
🔹ಒಂದೂರಿನಲ್ಲಿ ಒಬ್ಬಳು ವೇಶ್ಯೆ. ಅವಳಲ್ಲಿಗೆ ಆ ವ್ಯಸನಕ್ಕೆ ಸಿಲುಕಿದವರೆಲ್ಲ ಹೋಗಿಬರುತ್ತಿದ್ದರು. ಆ ವೇಶ್ಯೆ ಮನೆ ಎದುರು ಒಬ್ಬ ಸಂತರು. ಅವರ ಹತ್ತಿರ ಧರ್ಮಜಿಜ್ಞಾಸೆ ಮಾಡಲು, ಒಳ್ಳೆಯ ಉಪನ್ಯಾಸಗಳನ್ನು ಕೇಳಲು ಸಜ್ಜನರೆಲ್ಲ ಬರುತ್ತಿದ್ದರು. ಅದನ್ನು ವೇಶ್ಯೆ ನಿತ್ಯವೂ ನೋಡುತ್ತಿದ್ದಳು.
🔹ಅವಳ ಮನಸ್ಸಿನಲ್ಲಿ- ‘ಇವರು ಎಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸದಾ ಭಗವಂತನ ಸ್ಮರಣೆಯಲ್ಲಿ ಕಳೆಯುತ್ತಾರೆ. ಬಂದವರಿಗೆಲ್ಲ ದೇವರ ವಿಷಯಗಳನ್ನು ಹೇಳುತ್ತಾರೆ, ಜೀವನಕ್ಕೆ ಸನ್ಮಾರ್ಗವನ್ನು ತೋರುತ್ತಿದ್ದಾರೆ, ಜೀವಿತದ ಎಲ್ಲ ಅವಧಿಯೂ ಎಷ್ಟು ಪಾವನ! ನಾನಾದರೋ ಧರ್ಮಬಾಹಿರವಾದ ಕೆಲಸವನ್ನು ಮಾಡುತ್ತಿದ್ದೇನೆ.
🔹ನನ್ನ ಜೀವನದಲ್ಲಿ ಅವರಂತೆ ಸದಾ ಭಗವಂತನನ್ನು ಆರಾಧಿಸುವ, ಸನ್ನಿವೇಶ ಒದಗಲೇ ಇಲ್ಲವಲ್ಲ. ಎಷ್ಟು ಪಾಪಿ ನಾನು. ಮುಂದಿನ ಜನ್ಮದಲ್ಲಾದರೂ ನನಗೆ ಸದಾ ನಿನ್ನನ್ನು ಸ್ಮರಿಸುವ, ಪೂಜಿಸುವ ಅವಕಾಶ ಕರುಣಿಸಪ್ಪಾ ದೇವ’ ಎಂದು ನಿತ್ಯವೂ ಪ್ರಾರ್ಥಿಸುತ್ತಿದ್ದಳು.
🔹ಇತ್ತ ಈ ಸಂತರು ಆ ವೇಶ್ಯೆ ಮನೆಗೆ ಹೋಗಿ ಬರುವವರನ್ನೆಲ್ಲ ನಿತ್ಯವೂ ನೋಡುತ್ತಿದ್ದರು. ಆ ವೇಶ್ಯೆಯನ್ನು ನಿಂದಿಸುತ್ತಿದ್ದರಾದರೂ, ಹೀಗೆ ಯೋಚಿಸುತ್ತಿದ್ದರು-‘ನಿತ್ಯವೂ ಇವಳಲ್ಲಿಗೆ ಬಂದು ಈ ಜನರೆಲ್ಲ ಎಲ್ಲ ಬಗೆಯ ಸುಖ ಪಡೆಯುತ್ತಿದ್ದಾರೆ. ಯಾವುದೋ ಕಾರಣಕ್ಕೆ ನಾನು ಜೀವನದ ಸುಖವನ್ನೆಲ್ಲ ಕಳೆದುಕೊಂಡೆ. ನೀರಸವಾದ ಬದುಕಾಯಿತು ನನ್ನದು. ಇವರೆಲ್ಲರಂತೆ ಸಾಮಾನ್ಯ ಮನುಷ್ಯನಾಗಿದ್ದಿದ್ದರೆ ನಾನೂ ಆ ಸುಖವನ್ನೆಲ್ಲ ಅನುಭವಿಸಬಹುದಿತ್ತು’ ಎಂದು ಪಶ್ಚಾತ್ತಾಪ ಪಡುತ್ತಿದ್ದರು.
🔹ಮೃತ್ಯು ಯಾರನ್ನು ಬಿಡುತ್ತದೆ? ಯಾರನ್ನು ಬಿಡುವುದಿಲ್ಲ ಅದು ವಿಧಿಲಿಖಿತ, ಆಶ್ಚರ್ಯವೆಂಬಂತೆ ಇಬ್ಬರೂ ಒಂದೇ ದಿನ ಮರಣ ಹೊಂದಿದರು. ವೇಶ್ಯೆಯ ಶವವನ್ನು ನಾಯಿ, ನರಿಗಳಿಗೆ ಆಹಾರವಾಗುವಂತೆ ಊರ ಹೊರಗೆ ಎಸೆಯಲಾಯಿತು. ಸಂತರ ದೇಹಕ್ಕೆ ಪೂರ್ಣಕುಂಭದ ಮರ್ಯಾದೆ. ಅಂತಿಮಯಾತ್ರೆಯಲ್ಲಿ ಸಾವಿರಾರು ಜನರ ಮೆರವಣಿಗೆ.
🔹ಆದರೆ ಆಶ್ಚರ್ಯವೊಂದು ನಡೆಯಿತು. ದೇವಲೋಕದಿಂದ ವೇಶ್ಯೆಯ ಜೀವವನ್ನು ಕೊಂಡೊಯ್ಯಲು ವಿಷ್ಣುದೂತರೂ, ಸಂತರ ಜೀವವನ್ನು ಕೊಂಡೊಯ್ಯಲು ಯಮದೂತರೂ ಬಂದರು. ಆತಂಕದಿಂದ ಸಂತರ ಆತ್ಮವು ಕೇಳಿತು-‘ಏನಿದು ಅನ್ಯಾಯ? ಜೀವನವಿಡೀ ಧರ್ಮಕಾರ್ಯದಲ್ಲೇ ಕಳೆದ ನನ್ನನ್ನು ನೀವೇಕೆ ಕೊಂಡೊಯ್ಯುತ್ತಿದ್ದೀರಿ? ಜೀವನಪೂರ್ತಿ ಅಸಹ್ಯವಾದ ಕೆಲಸವನ್ನು ಮಾಡುತ್ತಿದ್ದ ಆ ವೇಶ್ಯೆಯ ಆತ್ಮವನ್ನು ವೈಕುಂಠಕ್ಕೆ ಹೇಗೆ ಕರೆದೊಯ್ಯಲಾಗುತ್ತಿದೆ?’
🔹ಅಶರೀರವಾಣಿಯೊಂದು ಉತ್ತರಿಸಿತು- ‘ನೀನು ದೇಹದಿಂದ ಧರ್ಮಕಾರ್ಯವನ್ನೇ ಮಾಡಿದ್ದರಿಂದ ನಿನ್ನ ದೇಹಕ್ಕೆ ನೋಡು-ಪೂರ್ಣಕುಂಭದ ಮರ್ಯಾದೆ. ಆದರೆ ಮನಸ್ಸಿನಲ್ಲಿ ಸದಾ ವಿಷಯ ಸುಖಗಳನ್ನೇ ಚಿಂತಿಸಿದೆ, ಎಲ್ಲಾ ಸುಖಗಳನ್ನು ಕಳೆದುಕೊಂಡೇ ಎಂದು ಕೊರಗುತ್ತಿದ್ದೆ.
🔹ಅದಕ್ಕಾಗಿ ನರಕವೇ ಗತಿ. ಹಾಗೆ ಅವಳು ದೇಹದಿಂದ ಅಸಹ್ಯವಾದ ಕೆಲಸ ಮಾಡಿದಳು. ಅವಳ ದೇಹ ಅನಾಥವಾಗಿ ಬಿದ್ದಿದೆ. ಆದರೆ ಮನಸ್ಸು ಸದಾ ಭಗವಂತನನ್ನೇ ಸ್ಮರಿಸುತ್ತಿತ್ತು ಎಂದೇ ಅವಳಿಗೆ ವೈಕುಂಠ’.
🔹‘ಮಾನವ ತನ್ನ ಹೃದಯದಲ್ಲಿ ಭಗವಂತನಿಗೆ ಜಾಗ ಕೊಟ್ಟಷ್ಟೂ ಆ ತೇಜೋನಿಧಿ ತನ್ನ ಮಡಿಲಿನಲ್ಲಿ ಅವನಿಗೆ ಜಾಗ ಕೊಡುತ್ತಾನೆ’ ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.
👉ಸದ್ಗತಿ, ದುರ್ಗತಿಗಳಿಗೆ, ಎಲ್ಲಾ ಬಂಧ ಮೋಕ್ಷಗಳಿಗೆ ನಮ್ಮ ಮನಸ್ಸೇ ಕಾರಣ ಅಲ್ಲವೇ. ‘ನಮ್ಮ ಮನಸ್ಸುಗಳನ್ನು ನಿನ್ನ ಸ್ಮರಣೆಯಲ್ಲಿರಿಸು’ ಎಂದು ಆ ಸರ್ವೆಶ್ವರನನ್ನು ಪ್ರಾರ್ಥಿಸೋಣ.
(ಲೇಖನ ಕೃಪೆ: ಸಂಗ್ರಹ ಕೆ ಆರ್ ರಮೇಶ್)
🌷🙏🌷ಶ್ರೀ ಕೃಷ್ಣಾರ್ಪಣಾಮಸ್ತು🌷🙏🌷
🌹ಸರ್ವರಿಗೂ ಶುಭನಮನಗಳು, ಶುಭಸಂಜೆ,🌹
No comments:
Post a Comment