*ಪುರಾಣ ; ನಾಲ್ಕರ ಪ್ರಕಾರ ಗಂಗಾದೇವಿಯ ವಿವಾಹದ ವಿವರ *...
ಒಬ್ಬನಿಗಿಂತ ಹೆಚ್ಚ್ಚುಜನರಿಗೆ ಪತ್ನಿಯಾವಳು ದ್ರೌಪದಿ ಮಾತ್ರ ಎಂದು ಸಾಮಾನ್ಯ ತಿಳಿವಳಿಕೆ. ಆದರೆ ಪುರಾಣವನ್ನು ಕೆದಕಿದರೆ ಇನ್ನೂ ಕೆಲವು ಸ್ತ್ರೀಯರ ಹೆಸರುಗಳು ದೊರೆಯುತ್ತವೆ. ಅವರಲ್ಲಿ ಗಂಗೆಯೂ ಒಬ್ಬಳು. ಗಂಗೆ ಪರ್ವತ ರಾಜ ಹಿಮವಂತ ಹಾಗು ಮೇನೆಯರ ಹಿರಿಯ ಮಗಳು. ಹಿಮವಂತ ಒಮ್ಮೆ ದೊಡ್ದ ಯಾಗ ಮಾಡಿ ಸಮಾರಂಭಕ್ಕೆ ದೇವತೆಗಳನ್ನು ಆಹ್ವಾನಿಸಿದನು. ಆಗ ಅಲ್ಲಿಗೆ ಬಂದಿದ್ದ ದೇವತಾ ಸ್ತ್ರೀಯರು ಗಂಗೆಯ ಅಪ್ರತಿಮ ಚೆಲುವನ್ನು ನೋಡಿ ದಂಗಾದರು. ಆಗ ವರುಣನ ಹೆಂಡತಿ ಗೌರಿ(ಪಾರ್ವತಿಯಲ್ಲ) ಏನು ಚೆಲುವಿದ್ದರೇನು ಮನುಷ್ಯ ಜಾತಿಯಲ್ಲಿ ಹುಟ್ಟಿದ ಮೇಲೆ ಮುದುಕಿಯಾಗಲೇ ಬೇಕು ಎಂದು ಕೊಂಕು ನುಡಿದಳು. ಅವಮಾನದಿಂದ ಕೆರಳಿ ಗಂಗೆ ದೈವತ್ವ ಪಡೆಯಲು ನಿರ್ಧರಿಸಿದಳು. ಕುತ್ತಿಗೆಯವರೆಗೂ ಹಿಮದಲ್ಲಿ ಕುಳಿತು ಘೋರವಾದ ತಪವನ್ನಾಚರಿಸಿದಳು . ಅವಳ ಕಷ್ಟ ನೋಡಲಾಗದೆ ಬ್ರಹ್ಮ ಪ್ರತ್ಯಕ್ಷನಾಗಿ ಏನು ವರ ಬೇಕೆಂದು ಕೇಳಿದ. ಗಂಗೆ ತನಗೂ ತನ್ನ ತಂದೆ-ತಾಯಿ ಕುಲ ಬಳಗದ ಎಲ್ಲರಿಗೂ ದೈವತ್ವ ಬೇಕೆಂದು ಬೇಡಿದಳು. ಬ್ರಹ್ಮ ಸರಿ ಮತ್ತೊಂದು ವರ ಕೇಳೆಂದ. ಗಂಗೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡಳು ಸಾಗರದ ಒಂದೊಂದು ಹನಿಯೂ ತನ್ನಿಂದಲೇ ತುಂಬುವಂತಾಗಬೇಕು ಎಂದಳು. ಬ್ರಹ್ಮ ಅದಕ್ಕೂ ಸರಿಯೆಂದು ಇನ್ನೂ ಒಂದು ವರ ಕೇಳು ಎಂದ. ಗಂಗೆ ಅತಿ ಆಸೆ ಒಳ್ಳೆಯದಲ್ಲ ತನ್ನ ಉಳಿದ ತಪಸ್ಸಿನ ಫಲವನ್ನು ಎಲ್ಲರಿಗೂ ಹಂಚುತ್ತೇನೆ ಎಂದು ಹೇಳಿದಳು. ಬ್ರಹ್ಮ ಸಂತುಷ್ಟನಾಗಿ ತಾನೇ ಯಾರಿಗೂ ತಲೆ ಬಾಗದೆ ಬದುಕುವ ಹಿರಿಮೆಯ ಮೂರನೆಯವರವನ್ನು ನೀಡಿ ಮಾಯವಾದ.
ಗಂಗೆ ಜಲದೇವತೆಯಾಗುತ್ತಿದ್ದಂತೇ ವರುಣನ ಸಾಗರ ಬತ್ತಿ ಹೋಯ್ತು. ಗಡಬಡಿಸಿದ ವರುಣ ಹಿಮವಂತನ ಕಾಲು ಹಿಡಿದು ಗಂಗೆಯನ್ನು ತನಗೆ ಕೊಟ್ಟು ಮದುವೆ ಮಾಡುವಂತೆ ಬೇಡಿದ. ತಂದೆಯ ಮಾತಿಗೆ ಬೆಲೆಕೊಟ್ಟು ಗಂಗೆ ತನ್ನನ್ನು ಪಟ್ಟ ಮಹಿಷಿಯನ್ನಾಗಿಸಿದರೆ ಮಾತ್ರ ವರುಣನ ಮದುವೆಯಾಗುವುದಾಗಿ ಹೇಳಿದಳು. ವರುಣ ವಿಧಿಯಿಲ್ಲದೆ ತಲೆಯಾಡಿಸಿ ಆಕೆಯನ್ನು ಮದುವೆಯಾಗಿ ಪಟ್ಟದರಾಣಿಯನ್ನಾಗಿಸಿದ. ವರುಣನ ಸಾಗರ ಮತ್ತೆ ತುಂಬಿತು. ವರುಣನ ಹೆಂಡತಿ ಗೌರಿಯ ಕೈಗಳಿಂದ ಚಾಮರ ಬೀಸಿಸಿ ಕೊಂಡು ಗಂಗೆ ಹೆಮ್ಮೆಯಿಂದ ಬೀಗಿದಳು.
ದೇವಿ ಭಾಗವತದ ಪ್ರಕಾರ ಲಕ್ಷ್ಮಿಯೇ ಗಂಗೆಯಾಗಿ ಮತ್ಸ್ಯ, ಕೂರ್ಮಾವತಾರದಲ್ಲಿ ವಿಷ್ಣುವಿನ ಜೊತೆಯಾದಳು. ದೇವಿ ಭಾಗವತದ ಇನ್ನೊಂದು ಕಥೆಯ ಪ್ರಕಾರ ಲಕ್ಷ್ಮಿ , ಗಂಗೆ , ಸರಸ್ವತಿಯರು ವಿಷ್ಣುವಿನ ಪತ್ನಿಯರಾಗಿದ್ದರು ಗಂಗೆ ಸರಸ್ವತಿಯರು ಸದಾ ಜಗಳ ಕಾಯುತ್ತಿದ್ದರು. ಅದನ್ನು ಸಹಿಸಲಾಗದೆ ವಿಷ್ಣುವು ಗಂಗೆಯನ್ನು ಶಿವನಿಗೂ , ಸರಸ್ವತಿಯನ್ನು ಬ್ರಹ್ಮನಿಗೂ ಕೊಟ್ಟು ಸದಾ ಹಸನ್ಮುಖಿಯೂ ಸೌಮ್ಯಳೂ ಆಗಿರುತ್ತಿದ್ದ ಲಕ್ಷ್ಮಿಯನ್ನು ತನ್ನ ಬಳಿಯೇ ಇರಿಸಿಕೊಂಡನಂತೆ.
ಪಿತೃಗಳಿಗೆ ಸದ್ಗತಿಯನ್ನು ನೀಡಲು ತನ್ನನ್ನು ತಪಸ್ಸಿನಿಂದ ಮೆಚ್ಚಿಸಿದ ಭಗೀರಥನ ಸಲುವಾಗಿ ಗಂಗೆ ಭೂಮಿಗೆ ಬಂದಳು. ಅವಳ ವೇಗವನ್ನು ನಿಯಂತ್ರಿಸಲು ಶಿವನೇ ಹಿಮಾಲಯದಲ್ಲಿ ತನ್ನ ಜಟೆಯನ್ನು ಹರಡಿ ನಿಂತನು. ಅವಳ ಸೊಕ್ಕು ಮುರಿಯಲು ಅವಳನ್ನು ಜಟೆಯಲ್ಲಿ ಬಿಗಿದು ಹೊತ್ತು ಕೈಲಾಸಕ್ಕೆ ಹೋದನು. ಭಗೀರಥನು ಗಂಗೆಯನ್ನು ಬಿಡಲು ಶಿವನನ್ನು ಬೇಡಿದಾಗ ಶಿವನು ಗಂಗೆಯನ್ನು ಬಿಡುಗಡೆಗೊಳಿಸಿದರೂ ಗಂಗೆ ಕೆಳಗಿಳಿಯಲು ಒಪ್ಪಲಿಲ್ಲ. ತನಗೂ ಶಿವನ ಪತ್ನಿಯ ಸ್ಥಾನಮಾನ ಕೊಡುವುದಾಗಿ ಮಾತುಕೊಟ್ಟರೆ ಮಾತ್ರ ಕೆಳಗಿಳಿಯುವುದಾಗಿ ಹೇಳಿದಳು. ಶಿವ ವಿಧಿಯಿಲ್ಲದೆ ಗಂಗೆಯನ್ನು ಪತ್ನಿಯೆಂದು ಒಪ್ಪ ಬೇಕಾಯ್ತು. ಪಾರ್ವತಿ ಸವತಿ ಮಾತ್ಸರ್ಯದಿಂದ ದುರುಗುಟ್ಟಿ ನೋಡಿದ್ದೇ ಬಂದು(ಗಂಗಾಸಾಪತ್ನ್ಯಜನಿತೇರ್ಷ್ಯಾಯತೇಕ್ಷಣ ಶೋಣಿಮಾ..) ಅಷ್ಟೆ ಅಲ್ಲ ಪಾರ್ವತಿಯ ಸವತಿಯಾಗಿದ್ದರೂ ಅವಳ ಇಬ್ಬರು ಮಕ್ಕಳಿಗೆ ತಾನೂ ನೆಚ್ಚಿನ ತಾಯಿಯಾದಳು. ಗಣೇಶ ದ್ವೈಮಾತುರ(ಇಬ್ಬರು ತಾಯಂದಿರ ಮಗ) ಎನಿಸಿಕೊಂಡರೆ , ಕುಮಾರ ಗಾಂಗೇಯನೆನಿಸಿಕೊಂದನು.
ಒಮ್ಮೆ ಪ್ರತೀಪನೆಂಬ ಕುರುವಂಶದ ಸ್ಪುರದ್ರೂಪಿ ಅರಸನು ಕೆರೆಯ ದಂಡೆಯಲ್ಲಿ ಕುಳಿತಿರಲು ಅವನಿಗೆ ಮರುಳಾದ ಗಂಗೆ ನೀರಿನಿಂದೆದ್ದು ಬಂದು ಅವನ ಬಲತೊಡೆಯ ಮೆಲೆ ಕುಳಿತು ತನ್ನನು ಮದುವೆಯಾಗ ಬೇಕೆಂದು ಕೇಳಿದಳು. ಆಗ ಪ್ರತೀಪನು ಎಡತೊಡೆಯ ಮೇಲೆ ಕೂರುವವಳು ಪತ್ನಿಯ ಸಮಾನ, ಬಲತೊಡೆಯ ಮೇಲೆ ಕುಳಿತವಳು ಮಗಳ ಸಮಾನ ಎಂದು ಗಂಗೆಯನ್ನು ನಿರಾಕರಿಸಿ. ದೇವಕನ್ಯೆಯಾದ ನಿನಗೆ ಕನ್ಯತ್ವ, ಹಾಗು ವಯಸ್ಸಿನ ಕಟ್ಟಳೆ ಇಲ್ಲ. ನನಗೆ ಗಂಡು ಮಗುವಾದ ಮೇಲೆ ಅವನನ್ನೇ ಮದುವೆಯಾಗು ಎಂದು ಹೇಳಿದನು
ಒಮ್ಮೆ ಬ್ರಹ್ಮಲೋಕದ ಸಭೆಯಲ್ಲಿ ಸ್ವರ್ಗವಾಸಿಯಾಗಿದ್ದ ಮಹಾಭಿಷನೆಂಬ ರಾಜನು ನಿರ್ಲಜ್ಜೆಯಿಂದ ಗಂಗೆಯನ್ನು ದಿಟ್ಟಿಸಿ ನೋಡುತ್ತ್ತಾ ಇರಲು ಗಂಗೆಯೂ ಸಭೆಯ ಮರ್ಯಾದೆಯನ್ನು ಕಡೆಗಣಿಸಿ ಅವನನ್ನೇ ಮೋಹದಿಂದ ನೋಡ ತೊಡಗಿದಳು. ಕೋಪಗೊಂಡ ಬ್ರಹ್ಮ ನು ಮಹಾಭಿಷನಿಗೆ ಮತ್ತೆ ಭೂಮಿಯ ಮೇಲೆ ಜನ್ಮ ತಾಳುವಂತೆಯೂ ಗಂಗೆ ಅಲ್ಲಿಯೇ ಹೋಗಿ ಅವನನ್ನು ಸೇರುವಂತೆಯೂ ಶಾಪವಿತ್ತನು. ಅದರಂತೆ ಮಹಾಭಿಷನು ಪ್ರತೀಪನ ಮಗ ಶಂತನುವಾಗಿ ಹುಟ್ಟಿದನು. ಗಂಗೆ ಅವನನ್ನು ಮದುವೆಯಾಗಿ ಭೀಷ್ಮನನ್ನು ಪಡೆದಳು.
ಗಂಗೆಯು ತ್ರಿಪಥಗಾ ಅಂದರೆ ಸ್ವರ್ಗದಲ್ಲಿ ಮಂದಾಕಿನಿಯಾಗಿ , ಭೂಮಿಯಲ್ಲಿ ಭಾಗೀರಥಿಯಾಗಿ , ಪಾತಾಳದಲ್ಲಿ ವೈತರಣಿಯಾಗಿ ಹರಿಯುವಳು.
No comments:
Post a Comment