Monday, 6 January 2020

ನರಕ ಚತುರ್ದಶಿ

ನರಕ ಚತುರ್ದಶಿ 27-10-2019 ಭಾನುವಾರ

ನರಕಚತುರ್ದಶಿ ಲೋಕ ಕಂಟಕನಾಗಿದ್ದ ನರಕಾಸುರ ಹತನಾದ ದಿನ.ಶ್ರೀಮನ್ ಮಹಾವಿಷ್ಣುವಿನ ಅವತಾರವೆಂದೇ ನಂಬಿರುವ ಶ್ರೀಕೃಷ್ಣ ನರಕಾಸುರನನ್ನು ವಧಿಸಿದ ದಿನ.ನರಕಾಸುರ ಬಂಧಿಸಿಟ್ಟಿದ್ದ ಹದಿನಾರು ಸಾವಿರದ ನೂರ ಎಂಟು ಸ್ತೀಯರನ್ನು ಬಂಧಮುಕ್ತಗೊಳಿಸಿ ತಾನೇ ಅವರೆಲ್ಲರನ್ನೂ ಶ್ರೀ ಕೃಷ್ಣ ವರಿಸುತ್ತಾನೆ.ಇದು ಲೀಲಾಮಯ ಶ್ರೀಕೃಷ್ಣನ ಭಾಗವತದ ಕತೆಗಳಲ್ಲಿ ಒಂದು.

ನರಕಾಸುರನೆಂಬ ರಾಕ್ಷಸನು ಹಿಂದೆ ಶೋಣಿತಾಪುರವನ್ನು ( ಪ್ರಾಗ್ಜ್ಯೋತಿಶಪುರ) ಆಳುತ್ತಿದ್ದ. ಈಶ್ವರನನ್ನು ತಪಸ್ಸು ಮಾಡಿ ತನಗೆ ಸ್ತ್ರೀಯರಿಂದ ಮಾತ್ರವೇ ಮರಣ ದೊರೆಯುವಂತಹ ಅಮೂಲ್ಯ ವರವೊಂದನ್ನು ಪಡೆದು ಜನ ಕಂಟಕನಾಗಿ ಮೆರೆಯತೊಡಗಿದನು.

ನರಕಾಸುರನು ಋಷಿಗಳ ತಪಸ್ಸಿಗೆ ತಪೋಭಂಗ ಮಾಡುತ್ತಿದ್ದನು. ಯಜ್ಞಯಾಗಾದಿಗಳಿಗೆ ಅಡ್ಡಿಮಾಡುತ್ತಿದ್ದನು. ಋಷಿಪತ್ನಿಯರನ್ನು ಹಿಂಸಿಸುತ್ತಿದ್ದನು. ಅಲ್ಲದೆ ಲೋಕಕಂಟಕನಾಗಿ ದೇವಾದಿದೇವತೆಗಳಿಗೆ ಉಪದ್ರವ ನೀಡುತ್ತಿದ್ದನು.

ಉದ್ಧಟತನದಿಂದ ಮೆರೆಯುತ್ತಿದ್ದ ನರಕಾಸುರನನ್ನು ಕೊಲ್ಲಲೇಬೇಕೆಂಬ ಪರಿಸ್ಥಿತಿ ಅನಿವಾರ್ಯವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ದೇವತೆಗಳು ಋಷಿಮುನಿಗಳು ನರಕಾಸುರನ ಸಂಹಾರ ಮಾಡಬೇಕೆಂದು ಕೃಷ್ಣನಲ್ಲಿ ವಿನಂತಿಸಿಕೊಂಡರು. ಇವರ ಪ್ರಾರ್ಥನೆಗೆ ಮನಸೋತ ಶ್ರೀಕೃಷ್ಣನು ನರಕಾಸುರನನ್ನು ಸಂಹಾರ ಮಾಡಲು ನಿರ್ಧರಿಸಿದನು.

ಆದರೆ ತನಗೆ ಸ್ತ್ರೀಯರಿಂದಲೇ ಮರಣ ಎಂಬ ವರಪಡೆದಿದ್ದ ಕಾರಣ ಆತನನ್ನು ಕೊಲ್ಲುವುದು ಕೃಷ್ಣನಿಗೆ ಸುಲಭವಾಗಿರಲಿಲ್ಲ. ಅದಕ್ಕಾಗಿ ಶ್ರೀಕೃಷ್ಣನು ಒಂದು ಉಪಾಯವನ್ನು ಮಾಡಿದನು. ತನ್ನ ಪತ್ನಿಯಾದ ಸತ್ಯಭಾಮೆಯ ಮುಖಾಂತರ ಆಶ್ವಯುಜ ಮಾಸದ ಕೃಷ್ಣಪಕ್ಷದಂದು ಅವನನ್ನು ಸಂಹರಿಸಿದನು.

ನರಕದಂತಾಗಿದ್ದ ಲೋಕವು ಅವನ ಸಂಹಾರದಿಂದ ಪುಣ್ಯಪಾವನವಾಯಿತು. ಯಜ್ಞಯಾಗಾದಿಗಳು ಯಾವುದೇ ಅಡ್ಡಿಯಿಲ್ಲದೆ ಸರಾಗವಾಗಿ ನಡೆಯತೊಡಗಿದವು. ತಪಸ್ಸುಗಳು ಉತ್ತಮ ರೀತಿಯಲ್ಲಿ ಸಾಗಿದವು.

ಇನ್ನೊಂದು ಹಿನ್ನೆಲೆಯ ಪ್ರಕಾರ, ನರಕಾಸುರನು 16,000 ಗೋಪಿಕಾ ಸ್ತ್ರೀಯರನ್ನು ಬಂಧನದಲ್ಲಿಟ್ಟಿದ್ದನು ಮತ್ತು ಅವರಿಗೆ ಅತೀವ ಕಿರುಕುಳವನ್ನು ನೀಡುತ್ತಿದ್ದನು. ಅಂತಹ ಪರಿಸ್ಥಿತಿಯಲ್ಲಿ ಗೋಪಿಕಾ ಸ್ತ್ರೀಯರೆಲ್ಲ ಶ್ರೀಕೃಷ್ಣನ ಮೊರೆ ಹೊಕ್ಕರು. ಶ್ರೀಕೃಷ್ಣನು ಗೋಪಿಕಾ ಸ್ತ್ರೀಯರಿಗಾಗಿ ಸತ್ಯಭಾಮೆಯ ಮುಖಾಂತರ ನರಕಾಸುರನ ವಧೆ ಮಾಡಿದನು.

ನರಕಾಸುರನ ವಧೆಯ ನಂತರ ಬಂಧನದಲ್ಲಿದ್ದ ಗೋಪಿಕಾ ಸ್ತ್ರೀಯರೆಲ್ಲ ಅತೀವ ಸಂತೋಷದಿಂದ ತೈಲಾಭ್ಯಂಜನವನ್ನು ಮಾಡಿ ಸ್ನಾನಗೈದು ಪವಿತ್ರಪಾವನರಾದರು.

ಸಾಯುವಾಗ ನರಕಾಸುರನು ಕೃಷ್ಣನಲ್ಲಿ ‘ಇಂದಿನ ತಿಥಿಗೆ ಯಾರು ಮಂಗಲಸ್ನಾನವನ್ನು ಮಾಡುತ್ತಾರೆಯೋ, ಅವರಿಗೆ ನರಕದ ತೊಂದರೆಯಾಗದಿರಲಿ’ ಎಂಬ ವರವನ್ನು ಬೇಡಿದನು ಮತ್ತು ಕೃಷ್ಣನು ಆ ವರವನ್ನು ಕೊಟ್ಟನು. ಅಂದಿನಿಂದ ಆಶ್ವಯುಜ ಕೃಷ್ಣ ಚತುರ್ದಶಿಯು ನರಕ ಚತುರ್ದಶಿಯೆಂದು ಪರಿಗಣಿಸಲ್ಪಟ್ಟಿತು ಮತ್ತು ಜನರು ಆ ದಿನ ಸೂರ್ಯೋದಯಕ್ಕೂ ಮೊದಲು ಎದ್ದು ಅಭ್ಯಂಗಸ್ನಾನವನ್ನು ಮಾಡತೊಡಗಿದರು.

ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನಸಂಪದಂ। 
ಶತ್ರು ಬುದ್ಧಿ ವಿನಾಶಾಯ
ದೀಪಜ್ಯೋತಿರ್ನಮೋsಸ್ತುತೆ।।
ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನರ್ಧನಃ । ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೇ ॥

ಸಮೃದ್ಧಿ, ಸಂಪ್ರೀತಿ, ಸಮಾನತೆ, ಸೌಜನ್ಯತೆ ದೀಪದ ಬೆಳಕಿನಂತೆ ಎಲ್ಲೆಡೆ ಹರಡಲಿ. ನಿಮಗೆ, ನಿಮ್ಮ
ಕುಟುಂಬದವರಿಗೆ  ಈ
ದೀಪಾವಳಿ ಮಂಗಳ ಮಾಡಲಿ ಎಂದು ಹಾರೈಸುತ್ತಾ...
ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

No comments:

Post a Comment