Monday, 6 January 2020

#ದತ್ತಾತ್ರೇಯ - #ಶ್ರೀ_ಗುರುದೇವ_ದತ್ತ

#ದತ್ತಾತ್ರೇಯ - #ಶ್ರೀ_ಗುರುದೇವ_ದತ್ತ

#ಅರ್ಥ
ದತ್ತನೆಂದರೆ (ನಿರ್ಗುಣದ ಅನುಭೂತಿಯನ್ನು) ಪಡೆದವನು. ‘ನಾನು ಬ್ರಹ್ಮನೇ ಆಗಿದ್ದೇನೆ, ಮುಕ್ತನೇ ಆಗಿದ್ದೇನೆ, ಆತ್ಮನೇ ಆಗಿದ್ದೇನೆ’ ಎಂಬ ನಿರ್ಗುಣದ ಅನುಭೂತಿಯನ್ನು ಯಾರಿಗೆ ಕೊಡಲಾಗಿದೆಯೋ ಅವನೇ ದತ್ತ. ಜನ್ಮದಿಂದಲೇ ದತ್ತನಿಗೆ ನಿರ್ಗುಣದ ಅನುಭೂತಿ ಇತ್ತು, ಸಾಧಕರಿಗೆ ಇಂತಹ ಅನುಭೂತಿ ಬರಲು ಎಷ್ಟೋ ಜನ್ಮಗಳವರೆಗೆ ಸಾಧನೆಯನ್ನು ಮಾಡಬೇಕಾಗುತ್ತದೆ. ಇದರಿಂದ ದತ್ತನ ಮಹತ್ವವು ಗಮನಕ್ಕೆ ಬರುತ್ತದೆ.

#ಇತರ_ಕೆಲವು_ಹೆಸರುಗಳು

ಅವಧೂತ
೧. ‘ಅವಧೂತ ಚಿಂತನ ಶ್ರೀ ಗುರುದೇವ ದತ್ತ|’ ಎಂಬ ಜಯಘೋಷವನ್ನು ದತ್ತಭಕ್ತರು ಮಾಡುತ್ತಾರೆ. ಇದರ ಅರ್ಥವು ಹೀಗಿದೆ - ಅವಧೂತನೆಂದರೆ ಭಕ್ತ. ಭಕ್ತರ ಚಿಂತನೆಯನ್ನು ಮಾಡುವವನು, ಅಂದರೆ ಭಕ್ತರ ಹಿತಚಿಂತಕ, ಶ್ರೀ ಗುರುದೇವ ದತ್ತ.

೨. ಎಲ್ಲ ಸಂಕಲ್ಪ-ವಿಕಲ್ಪರಹಿತದ ವಿಭೂತಿಯನ್ನು ಅವನು ಸಂಪೂರ್ಣ ಶರೀರಕ್ಕೆ ಹಚ್ಚಿಕೊಂಡಿದ್ದನು. ಆದುದರಿಂದಲೇ ಅವನಿಗೆ ‘ಅವಧೂತ’ ಎಂದು ಕರೆಯಲಾಗುತ್ತಿತ್ತು; ಅನ್ಯಥಾ ಅವನು ಬ್ರಾಹ್ಮಣನೇ ಆಗಿದ್ದನು. ಸುತ್ತಲಿನ ಪ್ರಪಂಚವನ್ನು ಅವನು ಆತ್ಮಜ್ಞಾನದಿಂದ ತೊಳೆದಿದ್ದನು; ಆದುದರಿಂದಲೂ ಅವನಿಗೆ ‘ಅವಧೂತ’ ಎನ್ನಬೇಕು. ಅನ್ಯಥಾ ಅವನು ಓರ್ವ ವಿಖ್ಯಾತ ಬ್ರಾಹ್ಮಣನಾಗಿದ್ದನು. ಯಾವನು ‘ಅಹಂ’ ವನ್ನು ತೊಳೆಯುತ್ತಾನೆಯೋ ಅವನೇ ಅವಧೂತ, ಅವನೇ ಯೋಗಿ ಮತ್ತು ಅವನೇ ಪುನೀತನಾಗಿದ್ದಾನೆ. ಯಾವನು ಅಹಂಕಾರಪೀಡಿತನಾಗಿರು ತ್ತಾನೆಯೋ ಅವನೇ ಜನ್ಮಕರ್ಮಗಳಲ್ಲಿ ಪಾಪಿಯಾಗಿರುತ್ತಾನೆ ಎಂದು ತಿಳಿಯಬೇಕು. - ಏಕನಾಥೀ ಭಾಗವತ ಅಧ್ಯಾಯ ೭, ದ್ವಿಪದಿ ೨೭೦-೨೭೨

ದಿಗಂಬರ
‘ದಿಕ್ ಏವ ಅಂಬರಃ|’ ದಿಕ್ ಅಂದರೆ ದಿಕ್ಕುಗಳೇ ಯಾವನ ಅಂಬರವಾಗಿವೆಯೋ, ಅಂದರೆ ವಸ್ತ್ರವಾಗಿವೆಯೋ, ಅವನೇ ದಿಗಂಬರ; ಅಂದರೆ ಅವನು ಇಷ್ಟು ದೊಡ್ಡವನಾಗಿದ್ದಾನೆ, ಸರ್ವವ್ಯಾಪಿಯಾಗಿದ್ದಾನೆ.

ದತ್ತಾತ್ರೇಯ
ಈ ಶಬ್ದವು ದತ್ತ + ಆತ್ರೇಯ ಹೀಗೆ ರೂಪುಗೊಂಡಿದೆ. ದತ್ತನ ಅರ್ಥವನ್ನು ವಿಷಯ ಪ್ರಾರಂಭದಲ್ಲಿ ನೀಡಲಾಗಿದೆ. ಆತ್ರೇಯ ಎಂದರೆ ಅತ್ರಿಋಷಿಗಳ ಮಗ.

#ಜನ್ಮದ_ಇತಿಹಾಸ
ದತ್ತನ ಜನ್ಮವು ಪ್ರಸ್ತುತ ಮನ್ವಂತರದ ಆರಂಭದಲ್ಲಿ ಪ್ರಥಮ ಪರ್ಯಾಯದಲ್ಲಿನ ತ್ರೇತಾಯುಗದಲ್ಲಿ ಆಗಿದೆ, ಎಂಬ ವರ್ಣನೆಯು ಪುರಾಣಗಳಲ್ಲಿ ಸಿಗುತ್ತದೆ.

#ಪುರಾಣಗಳಿಗನುಸಾರ
ಅತ್ರಿಋಷಿಗಳ ಪತ್ನಿ ಅನಸೂಯಾಳು ಮಹಾಪತಿವ್ರತೆಯಾಗಿದ್ದಳು. ಅವಳ ಪಾತಿವ್ರತ್ಯದ ಪರೀಕ್ಷೆ ತೆಗೆದುಕೊಳ್ಳಲು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ನಿರ್ಧರಿಸಿದರು. ಒಮ್ಮೆ ಅತ್ರಿಋಷಿಗಳು ಅನುಷ್ಠಾನಕ್ಕಾಗಿ ಹೊರಗೆ ಹೋದಾಗ ತ್ರಿಮೂರ್ತಿಗಳು (ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು) ಅತಿಥಿಗಳ ವೇಷದಲ್ಲಿ ಬಂದರು ಮತ್ತು ಅನಸೂಯಾಳ ಬಳಿ ಭೋಜನವನ್ನು ಬೇಡಿದರು. ಅದಕ್ಕೆ ಅನಸೂಯಾಳು, ‘ಋಷಿಗಳು ಅನುಷ್ಠಾನಕ್ಕಾಗಿ ಹೊರಗೆ ಹೋಗಿದ್ದಾರೆ ಅವರು ಬರುವ ತನಕ ತಡೆಯಿರಿ’ ಎಂದಳು. ಆಗ ತ್ರಿಮೂರ್ತಿಗಳು ಅನಸೂಯಾಳಿಗೆ, ‘ಋಷಿಗಳಿಗೆ ಹಿಂದಿರುಗಲು ತಡವಾಗಬಹುದು; ನಮಗೆ ತುಂಬಾ ಹಸಿವಾಗಿದೆ; ತಕ್ಷಣ ಆಹಾರವನ್ನು ನೀಡು, ಇಲ್ಲವಾದರೆ ನಾವು ಬೇರೆ ಕಡೆ ಹೋಗುತ್ತೇವೆ’. ‘ಆಶ್ರಮಕ್ಕೆ ಬಂದ ಅತಿಥಿಗಳಿಗೆ ನೀವು ಇಚ್ಛಾಭೋಜನವನ್ನು ನೀಡುತ್ತೀರಿ,’ ಎಂದು ನಾವು ಕೇಳಿದ್ದೇವೆ; ಆದುದರಿಂದ ನಾವು ಇಚ್ಛಾಭೋಜನವನ್ನು ಮಾಡಲು ಬಂದಿದ್ದೇವೆ’ ಎಂದು ಹೇಳಿದರು. ನಂತರ ಅನಸೂಯಾಳು ಅವರನ್ನು ಸ್ವಾಗತಿಸಿದಳು ಮತ್ತು ಭೋಜನಕ್ಕೆ ಕುಳಿತುಕೊಳ್ಳಲು ವಿನಂತಿಸಿದಳು. ಅದರಂತೆಯೇ ಅವರು ಭೋಜನಕ್ಕೆ ಕುಳಿತುಕೊಂಡರು. ಅವಳು ಊಟಕ್ಕೆ ಬಡಿಸಲು ಬಂದಾಗ ಅವರು, ‘ನೀನು ವಿವಸ್ತ್ರಳಾಗಿ ನಮಗೆ ಬಡಿಸಬೇಕು ಎಂಬುದು ನಮ್ಮ ಇಚ್ಛೆಯಾಗಿದೆ’ ಎಂದರು. ‘ಅತಿಥಿಗಳನ್ನು ಹಿಂದಿರುಗಿಸಿ ಕಳುಹಿಸುವುದು ಅಯೋಗ್ಯವಾಗುತ್ತದೆ. ನನ್ನ ಮನಸ್ಸು ನಿರ್ಮಲವಾಗಿದೆ. ನನ್ನ ಪತಿಯ ತಪಸ್ಸಿನ ಫಲವು ನನ್ನನ್ನು ಕಾಪಾಡುವುದು,’ ಎಂದು ವಿಚಾರ ಮಾಡಿ ಅವಳು ಅತಿಥಿಗಳಿಗೆ ‘ಸರಿ, ನೀವು ಭೋಜನಕ್ಕೆ ಕುಳಿತುಕೊಳ್ಳಿರಿ’ ಎಂದಳು. ನಂತರ ಅಡುಗೆಮನೆಗೆ ಹೋಗಿ ಪತಿಯ ಸ್ಮರಣೆಯನ್ನು ಮಾಡಿದಳು, ಮನಸ್ಸಿನಲ್ಲಿ ‘ಅತಿಥಿಗಳು ನನ್ನ ಮಕ್ಕಳೇ ಆಗಿದ್ದಾರೆ’ ಎಂಬ ಭಾವವನ್ನಿಟ್ಟುಕೊಂಡಳು. ನಂತರ ನೋಡಿದರೆ ಅಲ್ಲಿ ಅತಿಥಿಗಳ ಜಾಗದಲ್ಲಿ ಅಳುತ್ತಿರುವ ಮೂರು ಮಕ್ಕಳಿದ್ದರು! ಅವರನ್ನು ಮಡಿಲಲ್ಲಿ ತೆಗೆದುಕೊಂಡು ಅವಳು ಸ್ತನಪಾನವನ್ನು ಮಾಡಿಸಿದಳು. ಮಕ್ಕಳು ಅಳುವುದನ್ನು ನಿಲ್ಲಿಸಿದರು.
ಅಷ್ಟರಲ್ಲಿಯೇ ಅತ್ರಿಋಷಿಗಳು ಬಂದರು. ಅವಳು ಅವರಿಗೆ ಎಲ್ಲ ವೃತ್ತಾಂತವನ್ನು ತಿಳಿಸಿದಳು. ಅವಳು, ‘ಸ್ವಾಮಿನ್ ದೇವೇನ ದತ್ತಮ್|’ ಎಂದು ಹೇಳಿದಳು. ಇದರ ಅರ್ಥ - ‘ಹೇ ಸ್ವಾಮಿ, ದೇವರು ನೀಡಿದ (ಮಕ್ಕಳು).’ ಇದರಿಂದ ಅತ್ರಿಯವರು ಆ ಮಕ್ಕಳ ನಾಮಕರಣವನ್ನು ‘ದತ್ತ’ ಎಂದು ಮಾಡಿದರು. ನಂತರ ಅತ್ರಿಋಷಿಗಳು ಅಂತರ್‌ಜ್ಞಾನದಿಂದ ಆ ಮಕ್ಕಳ ನಿಜ ಸ್ವರೂಪವನ್ನು ತಿಳಿದುಕೊಂಡು ಅವರಿಗೆ ನಮಸ್ಕಾರ ಮಾಡಿದರು. ಮಕ್ಕಳು ತೊಟ್ಟಿಲಲ್ಲಿ ಉಳಿದವು ಹಾಗೂ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಅವರೆದುರು ಪ್ರಕಟರಾದರು ಮತ್ತು ಪ್ರಸನ್ನರಾಗಿ ‘ವರ ಬೇಡಿರಿ’, ಎಂದರು. ಅತ್ರಿ ಮತ್ತು ಅನಸೂಯರು ‘ಬಾಲಕರು ನಮ್ಮ ಮನೆಯಲ್ಲಿಯೇ ಇರಲಿ’, ಎಂಬ ವರವನ್ನು ಕೇಳಿದರು. ಆ ವರವನ್ನು ನೀಡಿ ದೇವರು ತಮ್ಮತಮ್ಮ ಲೋಕಗಳಿಗೆ ತೆರಳಿದರು. ಮುಂದೆ ಬ್ರಹ್ಮದೇವನಿಂದ ಚಂದ್ರ, ಶ್ರೀವಿಷ್ಣುವಿನಿಂದ ದತ್ತ ಮತ್ತು ಶಂಕರನಿಂದ ದೂರ್ವಾಸರಾದರು. ಮೂವರಲ್ಲಿ ಚಂದ್ರ ಮತ್ತು ದೂರ್ವಾಸರು ತಪಸ್ಸಿಗೆ ಹೋಗಲು ಅನುಮತಿಯನ್ನು ಪಡೆದು ಕ್ರಮವಾಗಿ ಚಂದ್ರಲೋಕ ಮತ್ತು ತೀರ್ಥಕ್ಷೇತ್ರಗಳಿಗೆ ಹೋದರು. ಮೂರನೆಯ ದತ್ತನು ವಿಷ್ಣುವಿನ ಕಾರ್ಯಕ್ಕಾಗಿ ಭೂಮಿಯ ಮೇಲೆ ಉಳಿದನು.
ಕೃಪೆ:ಧರ್ಮಗ್ರಂಥ
Sridhar shri

No comments:

Post a Comment