Thursday, 18 June 2020

ಮಕರ_ಸಂಕ್ರಾಂತಿ

#ವ್ರತಗಳು_12

#ಮಕರ_ಸಂಕ್ರಾಂತಿ

ಅ. ತಿಥಿ : ಈ ಹಬ್ಬವು ತಿಥಿವಾಚಕವಾಗಿರದೇ ಅಯನ-ವಾಚಕವಾಗಿದೆ. ಈ ದಿನ ಸೂರ್ಯನ ನಿರಯನ ಮಕರ ರಾಶಿ ಯಲ್ಲಿ ಸಂಕ್ರಮಣವಾಗುತ್ತದೆ. ಸೂರ್ಯನ ಭ್ರಮಣದಿಂದಾಗುವ ಕಾಲ ವ್ಯತ್ಯಾಸವನ್ನು ಸರಿ ಪಡಿಸಲು ಪ್ರತಿ 80 ವರ್ಷಕ್ಕೊಮ್ಮೆ ಸಂಕ್ರಾಂತಿಯನ್ನು ಒಂದು ದಿನ ಮುಂದೂಡಲಾಗುತ್ತದೆ.

ಆ. ಇತಿಹಾಸ: ಸಂಕ್ರಾಂತಿಯನ್ನು ದೇವತೆ ಎಂದು ನಂಬಲಾಗಿದೆ. ಸಂಕ್ರಾಂತಿಯು ಸಂಕರಾಸುರನೆಂಬ ದೈತ್ಯನ ವಧೆ ಮಾಡಿದ್ದಾಳೆ ಎಂಬ ಕಥೆಯಿದೆ.

ಇ. ಸಂಕ್ರಾಂತಿಯ ಬಗ್ಗೆ ಪಂಚಾಂಗದಲ್ಲಿ ಇರುವ ಮಾಹಿತಿ: ಪಂಚಾಂಗದಲ್ಲಿ ಸಂಕ್ರಾಂತಿಯ ರೂಪ, ವಯಸ್ಸು, ವಸ್ತ್ರ, ಹೋಗುವ ದಿಕ್ಕು ಮುಂತಾದವುಗಳ ಮಾಹಿತಿ ಇರುತ್ತದೆ. ಅದು ಕಾಲಮಹಿಮೆಗನುಸಾರ ಅವಳಲ್ಲಿ ಆಗುವ ಬದಲಾವಣೆಯನ್ನು ಅನುಸರಿಸಿರುತ್ತದೆ.

ಈ. ಮಹತ್ವ: ಈ ದಿನ ಪಂಚಾಂಗದ ನಿರಯನ ಪದ್ಧತಿಗನುಸಾರ ಸೂರ್ಯನ ಉತ್ತರಾಯಣ ಪ್ರಾರಂಭವಾಗುತ್ತದೆ. ಕರ್ಕಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯ ವರೆಗಿನ ಕಾಲವನ್ನು ‘ದಕ್ಷಿಣಾಯನ’ ಎನ್ನುತ್ತಾರೆ. ದಕ್ಷಿಣಾಯನ ಕಾಲದಲ್ಲಿ ಮೃತನಾದ ವ್ಯಕ್ತಿಯು, ಉತ್ತರಾಯಣದಲ್ಲಿ ಮೃತನಾದ ವ್ಯಕ್ತಿಗಿಂತ ದಕ್ಷಿಣಲೋಕಕ್ಕೆ (ಯಮಲೋಕಕ್ಕೆ) ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.

ಈ೧. ಸಾಧನೆಯ ದೃಷ್ಟಿಯಿಂದ ಮಹತ್ವ: ಈ ದಿನ ಪಂಚಾಂಗದ ನಿರಯನ ಪದ್ಧತಿಗನುಸಾರ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ವಾತಾವರಣವು ಅಧಿಕ ಚೈತನ್ಯಮಯವಾಗಿರುವುದರಿಂದ ಸಾಧನೆಯನ್ನು ಮಾಡುವವರಿಗೆ ಈ ಸಮಯ ಚೈತನ್ಯದ ಲಾಭವಾಗುತ್ತದೆ.

ಉ. ಹಬ್ಬವನ್ನು ಆಚರಿಸುವ ಪದ್ಧತಿ

ಉ೧. ಮಕರಸಂಕ್ರಾಂತಿಯ ಕಾಲದಲ್ಲಿ ತೀರ್ಥಸ್ನಾನವನ್ನು ಮಾಡುವುದರಿಂದ ಮಹಾಪುಣ್ಯವು ದೊರೆಯುವುದು: ‘ಮಕರಸಂಕ್ರಾಂತಿಯ ದಿನ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ಕಾಲವು ಪುಣ್ಯಕಾಲವಾಗಿರುತ್ತದೆ. ಈ ಕಾಲದಲ್ಲಿ ತೀರ್ಥಸ್ನಾನಕ್ಕೆ ವಿಶೇಷ ಮಹತ್ವವಿದೆ. ಗಂಗಾ, ಯಮುನಾ, ಗೋದಾವರಿ, ಕೃಷ್ಣಾ ಮತ್ತು ಕಾವೇರಿ ನದಿಗಳ ದಡದಲ್ಲಿರುವ ಕ್ಷೇತ್ರದಲ್ಲಿ ಸ್ನಾನ ಮಾಡಿದರೆ ಮಹಾಪುಣ್ಯವು ಲಭಿಸುತ್ತದೆ.’

ಉ೨. ದಾನ

ಉ೨ಅ. ‘ಪರ್ವಕಾಲದಲ್ಲಿ ದಾನದ ಮಹತ್ವ: ಮಕರಸಂಕ್ರಾಂತಿಯಿಂದ ರಥ ಸಪ್ತಮಿಯವರೆಗಿನ ಕಾಲವು ಪರ್ವಕಾಲ ವಾಗಿರುತ್ತದೆ. ಈ ಪರ್ವಕಾಲದಲ್ಲಿ ಮಾಡಿದ ದಾನ ಮತ್ತು ಪುಣ್ಯಕರ್ಮಗಳು ವಿಶೇಷ ಫಲವನ್ನು ಕೊಡುತ್ತವೆ.

ಉ೨ಆ. ದಾನ ಕೊಡುವ ವಸ್ತುಗಳು: ‘ಹೊಸಪಾತ್ರೆ, ವಸ್ತ್ರ, ಅನ್ನ, ಎಳ್ಳು, ಎಳ್ಳುಪಾತ್ರೆ, ಬೆಲ್ಲ, ಆಕಳು, ಕುದುರೆ, ಚಿನ್ನ ಅಥವಾ ಭೂಮಿಯನ್ನು ಯಥಾಶಕ್ತಿ ದಾನ ಮಾಡಬೇಕು. ಈ ದಿನ ಮುತ್ತೈದೆಯರು ದಾನ ಮಾಡುತ್ತಾರೆ. ಮುತ್ತೈದೆಯರು ಕೆಲವು ಪದಾರ್ಥಗಳನ್ನು ಕುಮಾರಿಯರಿಂದ ದೋಚುತ್ತಾರೆ (ಅಪಹರಿಸುತ್ತಾರೆ) ಮತ್ತು ಅವರಿಗೆ ಎಳ್ಳುಬೆಲ್ಲ ಕೊಡುತ್ತಾರೆ.’

ಉ೨ಆ೧. ಬಾಗಿನ ನೀಡುವುದರ ಮಹತ್ವ: ‘ಬಾಗಿನ ನೀಡುವುದೆಂದರೆ’ ಇನ್ನೊಂದು ಜೀವದಲ್ಲಿನ ದೇವತ್ವಕ್ಕೆ ತನು, ಮನ ಮತ್ತು ಧನದಿಂದ ಶರಣಾಗುವುದು. ಸಂಕ್ರಾಂತಿಯ ಕಾಲವು ಸಾಧನೆಗೆ ಪೂರಕವಾಗಿರುವುದರಿಂದ ಈ ಕಾಲದಲ್ಲಿ ನೀಡಿದ ಬಾಗಿನದಿಂದ ದೇವತೆಯ ಕೃಪೆಯಾಗಿ ಜೀವಕ್ಕೆ ಇಚ್ಛಿತ ಫಲಪ್ರಾಪ್ತಿಯಾಗುತ್ತದೆ.

ಉ೨ಆ೨. ಬಾಗಿನವೆಂದು ಯಾವ ವಸ್ತುಗಳನ್ನು ಕೊಡಬೇಕು?: ಇತ್ತೀಚೆಗೆ ಸಾಬೂನು, ಪ್ಲಾಸ್ಟಿಕ್‌ನ ವಸ್ತುಗ ಳಂತಹ ನಿರುಪಯುಕ್ತ ವಸ್ತುಗಳನ್ನು ಬಾಗಿನ ವೆಂದು ಕೊಡುವ ಅಯೋಗ್ಯ ಪದ್ಧತಿಯು ರೂಢಿಯಲ್ಲಿದೆ. ಈ ವಸ್ತುಗಳ ಬದಲಿಗೆ ಸೌಭಾಗ್ಯದ ವಸ್ತುಗಳು, ಊದುಬತ್ತಿ, ಉಟಣೆ, ಧಾರ್ಮಿಕಗ್ರಂಥ, ಪುರಾಣಗ್ರಂಥ, ದೇವತೆಗಳ ಚಿತ್ರ, ಅಧ್ಯಾತ್ಮದ ಬಗೆಗಿನ ಧ್ವನಿಚಿತ್ರಮುದ್ರಿಕೆ ಮುಂತಾದ ಅಧ್ಯಾತ್ಮಕ್ಕೆ ಪೂರಕವಾಗಿರುವ ವಸ್ತುಗಳನ್ನು ಕೊಡಬೇಕು.

#ಎಳ್ಳಿನ_ಉಪಯೋಗ

ಸಂಕ್ರಾಂತಿಯಲ್ಲಿ ಎಳ್ಳನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ, ಉದಾ.ಎಳ್ಳುನೀರಿನಿಂದ ಸ್ನಾನ ಮಾಡಿ ಎಳ್ಳು ಬೆಲ್ಲವನ್ನು ಸೇವಿಸುವುದು ಹಾಗೂ ಇತರರಿಗೂ ಕೊಡುವುದು, ಬ್ರಾಹ್ಮಣರಿಗೆ ಎಳ್ಳು ದಾನ ಮಾಡುವುದು, ಶಿವಮಂದಿರದಲ್ಲಿ ಎಳ್ಳೆಣ್ಣೆಯ ದೀಪಗಳನ್ನು ಹಚ್ಚುವುದು, ಪಿತೃಶ್ರಾದ್ಧ ಮಾಡುವುದು (ಇದರಲ್ಲಿ ತಿಲಾಂಜಲಿ ನೀಡುತ್ತಾರೆ).

ಮಕರ ಸಂಕ್ರಾಂತಿಯ ಮಹತ್ವ ಮಕರ ಸಂಕ್ರಾಂತಿಯ ಕಾಲವು ಸಾಧನೆ ಮಾಡುವವರಿಗೆ ಪೂರಕವಾಗಿದೆ!

ಕರ್ಕಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯವರೆಗಿನ ಕಾಲವನ್ನು ‘ದಕ್ಷಿಣಾಯಣ’ ಎನ್ನುತ್ತಾರೆ. ಸೂರ್ಯನ ದಕ್ಷಿಣಾಯಣ ಆರಂಭವಾಗುವುದಕ್ಕೆ ಬ್ರಹ್ಮಾಂಡದ ಸೂರ್ಯನಾಡಿ ಕಾರ್ಯನಿರತವಾಗುವುದು ಎಂದು ಹೇಳುತ್ತಾರೆ. ಬ್ರಹ್ಮಾಂಡದ ಸೂರ್ಯನಾಡಿಯು ಕಾರ್ಯನಿರತವಾಗುವುದರಿಂದ (ಸೂರ್ಯನ ದಕ್ಷಿಣಾಯಣದಲ್ಲಿ) ಬ್ರಹ್ಮಾಂಡದಲ್ಲಿನ ರಜ-ತಮಾತ್ಮಕ ಲಹರಿಗಳು ಹೆಚ್ಚು ಪ್ರಮಾಣದಲ್ಲಿರುತ್ತದೆ.

ಮಕರ ಸಂಕ್ರಾಂತಿಯ ದಿನ ಸೂರ್ಯನ ಉತ್ತರಾಯಣವು ಆರಂಭವಾಗುತ್ತದೆ. ಸೂರ್ಯನ ಉತ್ತರಾಯಣ ಆರಂಭವಾಗುವುದನ್ನೇ ಬ್ರಹ್ಮಾಂಡದ ಚಂದ್ರನಾಡಿಯು ಕಾರ್ಯನಿರತವಾಗುವುದೆಂದು ಹೇಳುತ್ತಾರೆ. ಬ್ರಹ್ಮಾಂಡದ ಚಂದ್ರನಾಡಿಯು ಕಾರ್ಯನಿರತವಾಗುವುದರಿಂದ ಸೂರ್ಯನ ಉತ್ತರಾಯಣದಲ್ಲಿ, ಬ್ರಹ್ಮಾಂಡದಲ್ಲಿ ರಜ-ಸತ್ತ್ವಾತ್ಮಕ ಲಹರಿಗಳ ಪ್ರಮಾಣವು ಅಧಿಕ ವಾಗಿರುತ್ತದೆ. ಆದುದರಿಂದ ಈ ಕಾಲವು ಸಾಧನೆ ಮಾಡುವವರಿಗೆ ಪೂರಕವಾಗಿರುತ್ತದೆ. ಬ್ರಹ್ಮಾಂಡದ ಚಂದ್ರನಾಡಿಯು ಕಾರ್ಯನಿರತವಾಗಿರುವುದರಿಂದ ಈ ಕಾಲದಲ್ಲಿ ವಾತಾವರಣವು ಕೂಡ ಎಂದಿಗಿಂತಲೂ ಹೆಚ್ಚು ಶೀತಲವಾಗಿರುತ್ತದೆ. ಈ ಕಾಲದಲ್ಲಿ ಎಳ್ಳನ್ನು ತಿನ್ನುವುದು ಹೆಚ್ಚು ಲಾಭದಾಯಕವಾಗಿರುತ್ತದೆ. ಎಳ್ಳೆಣ್ಣೆಯಲ್ಲಿ ಸತ್ತ್ವಲಹರಿಗಳನ್ನು ಗ್ರಹಿಸುವ ಕ್ಷಮತೆಯು ಅಧಿಕವಾಗಿರುತ್ತದೆ, ಅಲ್ಲದೆ ಎಳ್ಳನ್ನು ತಿನ್ನುವುದರಿಂದ ಶರೀರದಲ್ಲಿನ ಚಂದ್ರನಾಡಿಯು ಕಾರ್ಯನಿರತವಾಗುತ್ತದೆ. 

ಇದರಿಂದಾಗಿ ಜೀವವು ವಾತಾವರಣದೊಂದಿಗೆ ಬೇಗನೆ ಹೊಂದಿಕೊಳ್ಳುತ್ತದೆ; ಏಕೆಂದರೆ ಈ ಸಮಯದಲ್ಲಿ ಬ್ರಹ್ಮಾಂಡದ ಚಂದ್ರನಾಡಿಯೇ ಕಾರ್ಯನಿರತವಾಗಿರುತ್ತದೆ. ಜೀವದ ಶರೀರದಲ್ಲಿನ ವಾತಾವರಣ ಮತ್ತು ಬ್ರಹ್ಮಾಂಡದಲ್ಲಿನ ವಾತಾವರಣ ಒಂದಾಗುವುದರಿಂದ ಸಾಧನೆ ಮಾಡುವಾಗ ಜೀವಕ್ಕೆ ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ.

ಮಕರ ಸಂಕ್ರಾಂತಿಯಂದು ಕಪ್ಪುಬಣ್ಣವನ್ನು ಏಕೆ ಉಪಯೋಗಿಸುತ್ತಾರೆ?

ಸನಾತನ ಧರ್ಮದಲ್ಲಿ ಕಪ್ಪುಬಣ್ಣವನ್ನು ಅಶುಭವೆಂದು ಪರಿಗಣಿಸಲಾಗಿದೆ; ಏಕೆಂದರೆ ಕಪ್ಪುಬಣ್ಣದಲ್ಲಿ ವಾತಾವರಣದಲ್ಲಿನ ತಮಕಣಗಳನ್ನು ಗ್ರಹಿಸುವ ಕ್ಷಮತೆಯು ಅತ್ಯಧಿಕವಾಗಿರುತ್ತದೆ. ಆದರೆ ಮಕರ ಸಂಕ್ರಾಂತಿಯ ದಿನ ಕಪ್ಪುಬಣ್ಣದ ಬಟ್ಟೆಗಳನ್ನು ಧರಿಸಿದರೂ, ಆ ಬಟ್ಟೆಗಳಿಂದ ನಮಗೆ ಏನೂ ತೊಂದರೆಯಾಗುವುದಿಲ್ಲ; ಏಕೆಂದರೆ ಆ ದಿನ ವಾತಾವರಣದಲ್ಲಿ ರಜ-ಸತ್ತ್ವಕಣಗಳ ಪ್ರಾಬಲ್ಯವಿರುತ್ತದೆ. ಆದುದರಿಂದ ಈ ದಿನ ನಮಗೆ ಕಪ್ಪುಬಣ್ಣವನ್ನು ಉಪಯೋಗಿಸಲು ಸನಾತನ ಧರ್ಮವು ಅನುಮತಿ ನೀಡಿದೆ. ಇದರಿಂದ ಸನಾತನ ಧರ್ಮವು ನಿಶ್ಚಯಿಸಿದ ಪ್ರತಿಯೊಂದು ಸಂಗತಿಯು ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಎಷ್ಟು ಯೋಗ್ಯವಿದೆ ಎನ್ನುವುದು ಸ್ಪಷ್ಟವಾಗುತ್ತದೆ. - ಶ್ರೀಗುರುತತ್ತ್ವ

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)

#ಮುಂದುವರೆಯುವುದು 

#ಸರ್ವೆ_ಜನ_ಸುಖಿನೋಭವಂತು

No comments:

Post a Comment