Thursday, 18 June 2020

ಐತರೇಯೋಪನಿಷತ್

#ಹಿಂದೂ_ಧರ್ಮದ_ಇತಿಹಾಸ

#ಐತರೇಯೋಪನಿಷತ್

ಐತರೇಯ ಉಪನಿಷತ್, ಋಗ್ವೇದಕ್ಕೆ ಸೇರಿದ ಐತರೇಯ ಅರಣ್ಯಕದ, ಎರಡನೇ ಅರಣ್ಯಕದ ಭಾಗ. ಎರಡನೇ ಅರಣ್ಯಕದ ನಾಲ್ಕನೆಯ, ಐದನೆಯ ಮತ್ತು ಆರನೆಯ ಅಧ್ಯಾಯಗಳೇ ಐತರೇಯ ಉಪನಿಷತ್. ಶಂಕರಾಚಾರ್ಯರು ಭಾಷ್ಯ ಬರೆದಿರುವ ಪ್ರಮುಖವಾದ ದಶೋಪನಿಷತ್ತುಗಳಲ್ಲಿ ಇದೂ ಒಂದು. ಸಂಪ್ರದಾಯದ ನಂಬಿಕೆಯ ಪ್ರಕಾರ ಮಹೀದಾಸನೆಂಬ ಋಷಿಯಿಂದ ಪ್ರಕಾಶಿಸಲ್ಪಟ್ಟಿದೆ. ಈ ಉಪನಿಷತ್ತಿನಲ್ಲಿ ನಾಲ್ಕು ಅಧ್ಯಾಯಗಳಿವೆ. ಪ್ರತಿಯೊಂದು ಅಧ್ಯಾಯವೂ ಅಧ್ಯಯನ ಅನುಕೂಲಕ್ಕಾಗಿ ಸಣ್ಣ-ಸಣ್ಣ ಖಂಡಗಳಾಗಿ ವಿಭಜಿಸಲ್ಪಟ್ಟಿದೆ.

#ಮೊದಲನೆಯ_ಅಧ್ಯಾಯ

ಮೊದಲನೆಯ ಅಧ್ಯಾಯದಲ್ಲಿ ಸೃಷ್ಟಿಗೆ ಸಂಬಂಧಪಟ್ಟ ಅಖ್ಯಾಯಿಕೆಯಿದೆ. ಇದರಲ್ಲಿ ಪರಮಾತ್ಮನು ತನಿಗಿಂತ ಭಿನ್ನವಾದ ಬೇರೊಂದು ವಸ್ತುವನ್ನು ತೆಗೆದುಕೊಳ್ಳದೆ ಆಕಾಶಾದಿ ಕ್ರಮದಿಂದ ವಿಶ್ವವನ್ನು ಸೃಷ್ಟಿಸಿದನೆಂದೂ ನಂತರ ಅತ್ಮಪ್ರಬೋಧಕಾಗಿ ಪ್ರಾಣವೇ ಮೊದಲಾದವುಗಳಿಂದ ಕೂಡಿರುವ ಸರ್ವಶರೀರಗಳನ್ನೂ ತಾನೇ ಪ್ರವೇಶಿಸಿದನೆಂದೂ ಮತ್ತು ಪ್ರವೇಶಿಸಿದ ಮೇಲೆ ಯಥಾರ್ಥವಾದ ತನ್ನ ಆತ್ಮನನ್ನೇ "ನಾನು ಈ ಬ್ರಹ್ಮವೇ ಆಗಿರುತ್ತೇನೆ" ಎಂದು ಸಾಕ್ಷಾತ್ತಾಗಿ ಅರಿತುಕೊಂಡನೆಂದು ಹೇಳಲಾಗಿದೆ. ಆದ್ದರಿಂದ ಸರ್ವಶರೀರಗಳಲ್ಲಿಯೂ ಇರುವವನು ಅವನೊಬ್ಬ ಆತ್ಮನೇ ಹೊರತು ಬೇರೊಬ್ಬನಿಲ್ಲ, ಆದಕಾರಣ ಎಲ್ಲರೂ "ನಾನು ಬ್ರಹ್ಮವೇ ಆಗಿದ್ದೇನೆ" ಅಹಂ ಬ್ರಹ್ಮಾಸ್ಮಿ ಎಂದು ಅರಿಯಬೇಕೆಂದು ತಮ್ಮ ಭಾಷ್ಯದಲ್ಲಿ ಶಂಕರಾಚಾರ್ಯರು ಅಭಿಪ್ರಾಯಪಡುತ್ತಾರೆ.

#ಏರಡನೆಯ_ಅಧ್ಯಾಯ

ಎರಡನೆಯ ಅಧ್ಯಾಯದಲ್ಲಿ ಒಂದೇ ಖಂಡವಿದೆ.ಇದರಲ್ಲಿ ಜೀವನಿಗೆ ಜನ್ಮ-ಮರಣಗಳು ನದಿಯ ಸ್ರೋತದಂತೆ ಪುನಃ ಪುನಃ ಉಂಟಾಗುತ್ತವೆಯೆಂದು ಹೇಳಿದೆ ಅಲ್ಲದೆ, ಜೀವನ ಮೂರು ಅವಸ್ಥೆಗಳನ್ನು ಹೇಳಲಾಗಿದೆ. ಜೀವನು ಪುರುಷನಲ್ಲಿ ರೇತಸ್ಸು ಅಥವಾ ವೀರ್ಯ ರೂಪದಿಂದ ಇರುತ್ತಾನೆ. ಯಾವಾಗ ಪುರುಷನು ವೀರ್ಯವನ್ನು ಸ್ತ್ರೀಗರ್ಭದಲ್ಲಿ ಸೇಚನ ಮಾಡುವನೊ ಆಗ ಉತ್ಪತ್ತಿಯಾಗುವ ಗರ್ಭಸ್ಥ ಶಿಶುರೂಪವು ಮೊದಲನೆ ಅವಸ್ಥೆಯು. ಶಿಶುವು ಮಾತೃಗರ್ಭದಿಂದ ಹೊರಬಂದು ಜೀವಿಸುವುದು ಎರಡನೆಯ ಅವಸ್ಥೆಯು.ಕೊನೆಗೆ ಜೀವನವನ್ನು ಮುಗಿಸಿ ಶರೀರವನ್ನು ಬಿಟ್ಟಮೇಲೆ ಇನ್ನೊಂದು ಶರೀರವನ್ನು ಪಡೆದುಕೊಳ್ಳುವುದು ಮೂರನೆಯ ಅವಸ್ಥೆ. ಯಾವ ಅವಸ್ಥೆಯಲ್ಲಾದರೂ ಇರಲಿ ಜೀವನು ತನ್ನ ಅತ್ಮ ಸ್ವರೂಪವನ್ನು ಅರಿತುಕೊಂಡರೆ,ಬಂಧಮುಕ್ತನಾಗುತ್ತಾನೆಂದೂ, ವಾಮದೇವನು ಮಾತೃಗರ್ಭದಲ್ಲಿರುವಾಗಲೇ ಆತ್ಮಜ್ಞಾನವನ್ನು ಹೊಂದಿ ಅವಿದ್ಯಾಕೃತವಾದ ಶರೀರವನ್ನು ನಾಶಪಡಿಸಿಕೊಂಡು ಅಮೃತನಾದನೆಂದೂ ಹೇಳಲಾಗಿದೆ.

#ಮೂರನೆಯ_ಅಧ್ಯಾಯ

ಮೂರನೆಯ ಅಧ್ಯಾಯದಲ್ಲಿಯೂ ಒಂದೇ ಖಂಡವಿದೆ. ಎರಡನೆಯ ಅಧ್ಯಾಯದಲ್ಲಿ ಹೇಳಿದಂತೆ ವಾಮದೇವನು ಅರಿತುಕೊಂಡ ಆತ್ಮಸ್ವರೂಪದ ಜಿಜ್ಞಾಸೆಯನ್ನು ಮಾಡಲಾಗಿದೆ. ನಾಲ್ಕನೆಯ ಅಧ್ಯಾಯದಲ್ಲಿ "ವಾಙ್ಮೇ ಮನಸಿ ಪ್ರತಿಷ್ಟಿತಾ..." ಎಂದು ಪ್ರಾರಂಭವಾಗುವ ಶಾಂತಿಮಂತ್ರವೊಂದೇ ಇದೆ.

#ಅಧಾರ

ಐತರೇಯೋಪನಿಷತ್:ಸ್ವಾಮೀ ಆದಿದೇವಾನಂದ., ಹಿಂದೂ ಧರ್ಮದ ಪರಿಚಯ:ಎದುರ್ಕಳ ಕೆ.ಶಂಕರನಾರಾಯಣ ಭಟ್.

#ಸರ್ವೆ_ಜನ_ಸುಖಿನೋಭವಂತು 

#ಶ್ರೀ_ಕೃಷ್ಣಾರ್ಪಣ_ಮಸ್ತು

No comments:

Post a Comment