#ವ್ಯಾಸ_ಮಹರ್ಷಿ_ಜಯಂತಿಯ
ಪ್ರಯುಕ್ತ ವಿಶೇಷ ಲೇಖನ
ವ್ಯಾಸ ಅಥವಾ ವೇದವ್ಯಾಸ ಹಿಂದೂ ಧರ್ಮ ಪರಂಪರೆ ಮತ್ತು ಸಾಹಿತ್ಯದಲ್ಲಿ ಬಹಳ ಪ್ರಮುಖರು. ಬ್ರಹ್ಮನ ಸಾರ್ಥಕತೆಯನ್ನು ತಿಳಿದ ಇವರನ್ನು ಆದರ್ಶ ಬ್ರಹ್ಮರ್ಷಿ ಎಂದು ಕರೆಯಲಾಗುತ್ತದೆ
ವ್ಯಾಸರು ಬಹು ಮುಖ್ಯ ಹಿಂದೂ ಮಹಾಕಾವ್ಯವಾದ ಮಹಾಭಾರತದ ಕರ್ತೃ. ಶತಮಾನಗಳಷ್ಟು ಹಳೆಯದಾದ ಭಾರತದ ಚಾರಿತ್ರಿಕ ಘಟನೆಗಳನ್ನು ಆಧರಿಸಿ ಮಹಾಭಾರತವು ರಚಿತವಾಗಿದ್ದರೂ ಕೂಡ, ಇದು ಪ್ರಾಚೀನ ಭಾರತದ ದಂತಕಥೆಗಳು, ಪುರಾಣಗಳು, ದಾರ್ಶನಿಕತೆ ಮತ್ತು ಅರೆಚಾರಿತ್ರಿಕ ಘಟನೆಗಳ ಒಂದು ಬೃಹತ್ ಕಾವ್ಯ. ಈ ಕಾರಣದಿಂದ ಚಾರಿತ್ರಿಕವಾಗಿ ವ್ಯಾಸರ ಕಾಲ ಮತ್ತು ದೇಶಗಳನ್ನು ದಂತಕಥೆಗಳಿಂದ ಬೇರ್ಪಡಿಸುವುದು ಬಹಳ ಕಷ್ಟ. ಮಹಾಭಾರತದ ಪ್ರಕಾರ, ವ್ಯಾಸರು ಪರಾಶರ ಮುನಿ ಮತ್ತು ಮೀನುಗಾರ[ಬೆಸ್ತ]ನ ಮಗಳಾದ ಮತ್ಸ್ಯಗಂಧಿ ಅಥವಾ ಸತ್ಯವತಿಯ ಪುತ್ರ. ಜನ್ಮ ಯಮುನಾ ನದಿ ಯ ಒಂದು ದ್ವೀಪದಲ್ಲಿ. ಇದು ಈಗಿನ ಕಾಲದ ಉತ್ತರ ಪ್ರದೇಶದ ಜಲುವಾ ಜಿಲ್ಲೆಯ 'ಕಲ್ಪಿ' ಎನ್ನುವ ಸ್ಥಳದ ಬಳಿಯಿದೆ. ವ್ಯಾಸರ ಬಣ್ಣ ಕಪ್ಪಾಗಿದ್ದ ಕಾರಣ 'ಕೃಷ್ಣ' ಎಂದು ಕರೆಯಲಾಗುತ್ತಿತ್ತು. ದ್ವೀಪದಲ್ಲಿ ಜನಿಸಿದ ಕಾರಣ 'ದ್ವೈಪಾಯನ' ಎಂದೂ ಹೆಸರಿತ್ತು. ಈ ಕಾರಣದಿಂದ ಇವರನ್ನು "ಕೃಷ್ಣ-ದ್ವೈಪಾಯನ" ಎಂದೂ ಕರೆಯಲಾಗುತ್ತದೆ. ಮಗು ವಾಗಿ ಹುಟ್ಟಿದ ಕ್ಷಣವೇ ದೊಡ್ಡವರಾಗಿ ಬೆಳೆದು, ತಾಪಸ ಜೀವನ ನಡೆಸಿ ಅತಿ ಪ್ರಮುಖ ಋಷಿಗಳಲ್ಲಿ ಒಬ್ಬರಾಗಿ ಪರಿಗಣಿತರಾಗಿದ್ದಾರೆ.ಪುರಾಣಗಳಲ್ಲಿ ಇವರನ್ನು ವಿಷ್ಣುವಿನ ಒಂದು ಅವತಾರವೆಂದೇ ಪರಿಗಣಿಸಲಾಗಿದೆ. ಹಿಂದೂ ಪುರಾಣದ ಪ್ರಕಾರ ಇವರು ಏಳು ಚಿರಂಜೀವಿಗಳಲ್ಲಿ ಒಬ್ಬರು.
ಹಿಂದೂಗಳು ನಂಬುವ ಪ್ರಕಾರ ಇವರು ಪ್ರಾಚೀನ ಕಾಲದ ಒಂದು ವೇದವನ್ನು ನಾಲ್ಕು ವೇದಗಳನ್ನಾಗಿ ವಿಂಗಡಿಸಿದ ಕಾರಣ ವೇದವ್ಯಾಸ ಎಂಬ ಹೆಸರು ಬಂತು. ಈ ಹೆಸರಿನಲ್ಲಿಯೇ ಇವರು ಬಹಳ ಪರಿಚಿತರು. ವ್ಯಾಸರು ಒಬ್ಬ ವ್ಯಕ್ತಿಯೇ ಅಥವಾ ಮೇಧಾವಿಗಳ ಗುಂಪೇ ಎಂದು ತರ್ಕಿಸಲಾಗಿದೆ. ವಿಷ್ಣು ಪುರಾಣದಲ್ಲಿ ಇದರ ಬಗ್ಗೆ ಒಂದು ಕುತೂಹಲಕಾರೀ ವಿವರಣೆಯಿದೆ. ಇದರ ಪ್ರಕಾರ:
ಪ್ರತಿ ಮೂರನೇ (ದ್ವಾಪರ)ಯುಗದಲ್ಲಿ ವಿಷ್ಣು ವ್ಯಾಸರ ರೂಪದಲ್ಲಿ ಬಂದು ಮಾನವ ಕುಲದ ಉದ್ಧಾರಕಾಗಿ ವೇದವನ್ನು ವಿಂಗಡಿಸುತ್ತಾನೆ.
ವೇದವನ್ನು ಇಪ್ಪತ್ತೆಂಟು ಬಾರಿ ವೈವಸ್ವತ ಮನ್ವಂತರದ ಮಹರ್ಷಿಗಳಿಂದ ವಿಂಗಡಿಸಲಾಗಿದೆ. ಆದ್ದರಿಂದ ಇಪ್ಪತ್ತೆಂಟು ವ್ಯಾಸರು ಬಂದು ಹೋಗಿದ್ದಾರೆ. ಇದರಲ್ಲಿ ಪ್ರಥಮವಾಗಿ ವೇದವನ್ನು ವಿಂಗಡಿಸಿದ ಸ್ವಯಂಭೂ (ಬ್ರಹ್ಮ); ಅದರ ನಂತರ ವೇದವನ್ನು ವಿಂಗಡಿಸಿದ್ದು ಪ್ರಜಾಪತಿ... (ಹೀಗೇ ಇಪ್ಪತ್ತೆಂಟು ಬಾರಿ)
ಪಾರಂಪರಿಕವಾಗಿ ವ್ಯಾಸರು ಈ ಮಹಾಕಾವ್ಯದ ಲೇಖಕರು. ಆದರೆ ಈ ಮಹಾಕಾವ್ಯದಲ್ಲಿ ಇವರ ಒಂದು ಪಾತ್ರವೂ ಇದೆ. ಇವರ ತಾಯಿ ನಂತರ ಹಸ್ತಿನಾಪುರದ ರಾಜ ಶಂತನುವನ್ನು ಮದುವೆಯಾಗಿ ಇಬ್ಬರು ಗಂಡು ಮಕ್ಕಳನ್ನು ಹೆತ್ತಳು. ಈ ಇಬ್ಬರೂ ಸಂತಾನವಿಲ್ಲದೇ ತೀರಿಕೊಂಡರು. ಪ್ರಾಚೀನ ಪದ್ಧತಿ ನಿಯೋಗವನ್ನು ಅನುಸರಿಸಿ ಸತ್ಯವತಿಯು ವ್ಯಾಸರಿಗೆ ತನ್ನ ಸತ್ತ ಮಗನಾದ ವಿಚಿತ್ರವೀರ್ಯನ ಪರವಾಗಿ ಗಂಡು ಮಕ್ಕಳನ್ನು ಹುಟ್ಟಿಸುವಂತೆ ಕೋರುತ್ತಾಳೆ. ಈ ಪ್ರಕಾರ ವ್ಯಾಸರು ತೀರಿಕೊಂಡ ರಾಜನ ಪತ್ನಿಯರಾದ ಅಂಬಿಕೆಮತ್ತು ಅಂಬಾಲಿಕೆಯಿಂದ ಧೃತರಾಷ್ಟ್ರ ಮತ್ತು ಪಾಂಡುವಿನ ತಂದೆಯಾಗುತ್ತಾರೆ. ಇದೇ ಸಂಪ್ರದಾಯದಿಂದ ರಾಣಿಯರ ಸೇವಕಿಯಿಂದ ವಿದುರ ನ ಜನ್ಮವಾಗುತ್ತದೆ.
ಪ್ರಾಯಶಃ ಈ ಮೂರು ಜನ ವ್ಯಾಸರ ಪುತ್ರರಾಗಿ ಪರಿಗಣಿತರಾಗುವುದಿಲ್ಲ. ಇವರ ಇನ್ನೊಬ್ಬ ಪುತ್ರ ಶುಕನು ಇವರ ನಿಜವಾದ ಆಧ್ಯಾತ್ಮಿಕ ಪುತ್ರನೆಂದು ಕರೆಸಿಕೊಳ್ಳುತ್ತಾನೆ. ಈ ಪ್ರಕಾರ ವ್ಯಾಸರು ಮಹಾಭಾರತ ಯುದ್ಧದಲ್ಲಿ ಕಾದಾಡಿದ ಕೌರವರು ಮತ್ತು ಪಾಂಡವರ ತಾತರಾಗುತ್ತಾರೆ. ತದ ನಂತರ ಮಹಾಭಾರತದಲ್ಲಿ ಆಧ್ಯಾತ್ಮಿಕ ಗುರುವಾಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾರೆ.
ಮಹಾಭಾರತದ ಮೊದಲ ಗ್ರಂಥದಲ್ಲಿ ಇವರು ಈ ಮಹಾಕಾವ್ಯವನ್ನು ರಚಿಸಲು ಗಣೇಶನನ್ನು ಕೇಳಿಕೊಂಡರು. ಈ ಪ್ರತೀತಿಯ ಪ್ರಕಾರ ಗಣೇಶನು ವ್ಯಾಸರಿಗೆ ಮಹಾಕಾವ್ಯವನ್ನು ಒಂದು ಕ್ಷಣವನ್ನೂ ನಿಲ್ಲಿಸಿದೇ ಹೇಳಲು ಷರತ್ತು ವಿಧಿಸಿದನು. ಇದಕ್ಕೆ ಪ್ರತಿಯಾಗಿ ವ್ಯಾಸರು ಹಾಕಿದ ಷರತ್ತೇನೆಂದರೆ ತಾವು ಹೇಳಿದ ಪ್ರತಿ ಶ್ಲೋಕವನ್ನು ಗಣೇಶನು ಅರ್ಥ ಮಾಡಿ ಕೊಂಡ ನಂತರವಷ್ಟೇ ಬರೆಯಬೇಕೆಂದು. ಹೀಗೆ ವ್ಯಾಸರಿಗೆ ವಿಶ್ರಾಂತಿ ಬೇಕಿದ್ದಾಗ ಕಷ್ಟಕರವಾದ ಸಂಸ್ಕೃತಶ್ಲೋಕಗಳನ್ನು ಹೇಳುತ್ತಿದ್ದರು.
ಇವರಿಗೆ ಹದಿನೆಂಟು ಮಹಾಪುರಾಣಗಳನ್ನು ಬರೆದ ಕೀರ್ತಿಯೂ ಕೊಡಲಾಗುತ್ತದೆ. ಇವರ ಮಗನಾದ ಶುಕನು ಭಾಗವತ ಪುರಾಣದ ನಿರೂಪಕ.
ಬ್ರಹ್ಮ ಸೂತ್ರವನ್ನು ಬರೆದ ಕವಿ ಬಾದರಾಯಣ. ವ್ಯಾಸರು ಹುಟ್ಟಿದ ದ್ವೀಪದಲ್ಲಿ ಬಾದರವೃಕ್ಷಗಳಿದ್ದ ಕಾರಣ ಇವರಿಗೆ ಬಾದರಾಯಣ ಎಂಬ ಹೆಸರೂ ಇದೆ. ಆದರೆ ಇತಿಹಾಸಕಾರರ ಪ್ರಕಾರ ಇವರಿಬ್ಬರೂ ಬೇರೆ ಬೇರೆ ವ್ಯಕ್ತಿಗಳು.
ಯೋಗಭಾಷ್ಯ ಪತಂಜಲಿಯ ಯೋಗಸೂತ್ರಗಳು ಎಂಬ ಕೃತಿಯ ವ್ಯಾಖ್ಯಾನ. ವ್ಯಾಸರ ಚಿರಂಜೀವತ್ವವನ್ನು ನಂಬಿದರೆ ಮಾತ್ರ ಅವರನ್ನು ಯೋಗ ಭಾಷ್ಯದ ಲೇಖಕ ಎಂದು ಹೇಳಬಹುದು. ಏಕೆಂದರೆ ಇದು ವ್ಯಾಸರ ಕಾಲದ ನಂತರ ಬರೆದದ್ದು
#ಶ್ರೀ_ಕೃಷ್ಣಾರ್ಪಣ_ಮಸ್ತು
No comments:
Post a Comment