#ನಿರ್ಜಲ_ಏಕಾದಶಿ
2/6/2020 ರಂದು
ಇಲ್ಲಿದೆ ಏಕಾದಶಿಯ ಕಾರಣ, ಮಹತ್ವ ಮತ್ತು ಪೂಜಾ ವಿಧಾನ
ದೇಶದ ಹಲವೆಡೆ ನಿರ್ಜಲ ಏಕಾದಶಿಯನ್ನು ಆಚರಿಸಲಾಗುತ್ತಿದ್ದು, ಈ ನಿರ್ಜಲ ಏಕಾದಶಿಯನ್ನು ಆಚರಿಸುವುದರಿಂದ ಸಕಲ ಸಂಕಷ್ಟಗಳೆಲ್ಲವೂ ಕೂಡ ದೂರಾಗು?ತ್ತದೆ. ಇಲ್ಲಿದೆ ನೋಡಿ ನಿರ್ಜಲ ಏಕಾದಶಿಯ ಕಾರಣ, ಮಹತ್ವ ಮತ್ತು ನಿರ್ಜಲ ಏಕಾದಶಿಯ ಪೂಜಾ ವಿಧಾನ.
ಜ್ಯೇಷ್ಠ ಶುಕ್ಲ ಪಕ್ಷದ ಏಕಾದಶಿಯಂದು ನಿರ್ಜಲ ಏಕಾದಶಿಯನ್ನು ದೇಶದ ಹಲವೆಡೆ ಆಚರಿಸಲಾಗುತ್ತದೆ. ಪುರಾಣಗಳಲ್ಲೂ ಕೂಡ ಈ ಹಬ್ಬದ ಅಥವಾ ಈ ಪೂಜೆಯ ಮಹತ್ವವನ್ನು ಉಲ್ಲೇಖಿಸಲಾಗಿದೆ. ಒಂದು ವೇಳೆ ಯಾರಿಗಾದರೂ 24 ಏಕಾದಶಿಯನ್ನು ಮಾಡಲು ಸಾಧ್ಯವಾಗದೇ ಇದ್ದರೆ ಒಂದು ನಿರ್ಜಲ ಏಕಾದಶಿಯನ್ನು ಮಾಡಿದರೆ ಸಾಕಂತೆ. ಒಂದು ನಿರ್ಜಲ ಏಕಾದಶಿಯ ಆಚರಣೆಯು 24 ಏಕಾದಶಿ ಆಚರಣೆಗೆ ಸರಿಸಮವಾಗಿದೆ.
1) ಸನಾತನ ಧರ್ಮಗಳಲ್ಲಿ ನಿರ್ಜಲ ಏಕಾದಶಿ
ಪವಿತ್ರ ಧರ್ಮವಾದ ಸನಾತನ ಧರ್ಮವು 24 ಏಕಾದಶಿಯನ್ನು ಒಳಗೊಂಡಿದೆ. ಅಧಿಕ ಮಾಸ ಅಥವಾ ಮಲಮಾಸ ಬಂದಾಗ ಈ 24 ಏಕಾದಶಿಗೆ ಹೆಚ್ಚಿನದಾಗಿ ಇನ್ನೆರೆಡು ಏಕಾದಶಿಯನ್ನು ಸೇರಿಸಲಾಗುತ್ತದೆ. ಈ ರೀತಿಯಾಗಿ ಹಿಂದೂ ಧರ್ಮದಲ್ಲಿ ಬರೋಬ್ಬರಿ 26 ಏಕಾದಶಿ ವ್ರತಗಳಿವೆ. ಈ ಎಲ್ಲಾ 26 ಏಕಾದಶಿಗಳಲ್ಲಿ ನಿರ್ಜಲ ಏಕಾದಶಿಯು ಬಲು ಪ್ರಮುಖವಾದ ಏಕಾದಶಿಯಾಗಿದೆ. ಈಗಾಗಲೇ ಹೇಳಿರುವ ಹಾಗೆ ಈ ಒಂದು ಏಕಾದಶಿಯನ್ನು ಆಚರಿಸಿದರೆ 24 ಏಕಾದಶಿಯ ಫಲವು ನಮ್ಮದಾಗುತ್ತದೆ ಎನ್ನುವ ನಂಬಿಕೆಯಿದೆ.
ನಿರ್ಜಲ ಏಕಾದಶಿಯು ಜ್ಯೇಷ್ಠ ತಿಂಗಳ ಶುಕ್ಲ ಪಕ್ಷದ ಏಕಾದಶಿ ತಿಥಿಯಂದು ಆಚರಿಸಲಾಗುತ್ತದೆ. ಈ ಏಕಾದಶಿಯಲ್ಲಿ ಕುಡಿಯುವ ನೀರನ್ನು ಕೂಡ ನಿಷೇಧಿಸಲಾಗಿದೆ. ಇಂದು ನೀರನ್ನು ಕೂಡ ಕುಡಿಯಬಾರದೆಂಬ ನಂಬಿಕೆಯಿದೆ ಆದ್ದರಿಂದ ಇದನ್ನು ನಿರ್ಜಲ ಏಕಾದಶಿಯೆಂದು ಹೇಳಲಾಗುತ್ತದೆ. ಈ ಏಕಾದಶಿಯನ್ನು ಧಾರ್ಮಿಕ ಗ್ರಂಥಗಳಲ್ಲಿ ಭೀಮ್ಸೇನ್ ಏಕಾದಶಿಯೆಂದೂ ಕೂಡ ಕರೆಯಲಾಗುತ್ತದೆ. ಈ ಬಾರಿ ನಿರ್ಜಲ ಏಕಾದಶಿಯನ್ನು "ಜೂನ್ 2" ರಂದು ಆಚರಣೆಗೆ ಬಂದಿದೆ. ಭೀಮ್ಸೇನ್ ಅಥವಾ ನಿರ್ಜಲ ಏಕಾದಶಿಯ ಉಪವಾಸ, ಇದರ ಆಚರಣೆಯ ವಿಧಿ ವಿಧಾನ ಮತ್ತು ಮಹತ್ವದ ಕುರಿತು ತಿಳಿಯೋಣ:
2) ನಿರ್ಜಲ ಏಕಾದಶಿಯ ಶುಭ ಮುಹೂರ್ತ ಮತ್ತು ವಿಧಿ:
ನಿರ್ಜಲ ಏಕಾದಶಿಯು ಇದೇ ಜೂನ್ 1 ರಂದು ಮಧ್ಯಾಹ್ನ 2.57 ಕ್ಕೆ ಪ್ರಾರಂಭವಾಗಿ ಜೂನ್ 2 ರಂದು12.04 ಕ್ಕೆ ಅಂತ್ಯಗೊಳ್ಳುತ್ತದೆ. ಈ ದಿನ ನಾವು ವಿಷ್ಣುವನ್ನು 12.04 ರವರೆಗೆ ಪೂಜಿಸಬಹುದಾಗಿದೆ. ಗಂಗಾ ದಸರ ದಿನದಿಂದ ಉಪವಾಸವನ್ನು ಆರಂಭಿಸಿದರೆ ಒಳ್ಳೆಯದೆಂದು ತಜ್ಞರು ಹೇಳುತ್ತಾರೆ. ಅದರಲ್ಲೂ ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ಬಳಸದೇ ತಯಾರಿಸಿದ ಆಹಾರವನ್ನು ಸ್ವೀಕರಿಸಬೇಕು. ರಾತ್ರಿಯ ವೇಳೆ ಹಾಸಿಗೆ ಮೇಲೆ ಮಲಗಬಾರದು. ಮರುದಿನ ಅಂದರೆ ಜೂನ್ 2 ರಂದು ಬೆಳಗ್ಗೆ ಬ್ರಹ್ಮಮೂಹುರ್ತದಲ್ಲಿ ಎದ್ದು ಶ್ರೀ ವಿಷ್ಣುವನ್ನು ನೆನೆಯಬೇಕು. ತದನಂತರ ಗಂಗಾ ಜಲದಲ್ಲಿ ಸ್ನಾನಮಾಡಿ ಹಳದಿ ಬಟ್ಟೆಯನ್ನು ಧರಿಸಿ ಸೂರ್ಯದೇವನಿಗೆ ಅರ್ಘ್ಯವನ್ನು ಅರ್ಪಿಸಿ
3) ನಿರ್ಜಲ ಏಕಾದಶಿಯಂದು ಪೂಜೆ ಹೇಗಿರಬೇಕು..?
ನಿರ್ಜಲ ಏಕಾದಶಿಯಂದು ಸೂರ್ಯದೇವನಿಗೆ ಅರ್ಘ್ಯವನ್ನು ಅರ್ಪಿಸಿದ ನಂತರ, ವಿಷ್ಣುವನ್ನು ಹಳದಿ ಬಣ್ಣದ ಹೂವುಗಳಿಂದ, ಹಣ್ಣುಗಳಿಂದ, ಅಕ್ಷತೆಗಳಿಂದ, ಅರಶಿಣ, ಕುಂಕುಮ ಮತ್ತು ಶ್ರೀಗಂಧದಿಂದ ಪೂಜಿಸಬೇಕು. ತದನಂತರ ಪೂಜೆಯ ಸಮಯದಲ್ಲಿ "ಓಂ ನಮೋ ಭಗವತೇ ವಾಸುದೇವ" ಎಂದು ವಿಷ್ಣುವಿನ ಮಂತ್ರವನ್ನು ಪಠಿಸಬೇಕು. ತದನಂತರ ನಿರ್ಜಲ ಏಕಾದಶಿಗೆ ಸಂಬಂಧಿಸಿದ ಕಥೆಯನ್ನು ಓದಿ ದೇವರಿಗೆ ಆರತಿಯನ್ನು ಬೆಳಗಿರಿ. ವ್ರತ ಸಂಪೂರ್ಣಗೊಂಡ ನಂತರವೇ ನೀರನ್ನು ಕುಡಿಯಬೇಕು. ಅಲ್ಲಿಯವರೆಗೆ ನೀರನ್ನು ಕುಡಿಯಬಾರದು. ಪೂಜೆಯ ವೇಳೆ ವಿಷ್ಣುವಿಗೆ ಸಿಹಿಯಿಂದ ಪ್ರಸಾದವನ್ನು ತಯಾರಿಸಿ ಅರ್ಪಿಸಿ ತದನಂತರ ಪೂಜೆ ಕೊನೆಗೊಂಡ ನಂತರ ಆ ಪ್ರಸಾದವನ್ನು ಎಲ್ಲರಿಗೂ ವಿತರಿಸಿ. ಬ್ರಾಹ್ಮಣರಿಗೆ ಹಾಗೂ ನಿರ್ಗತಿಕರಿಗೆ ಕೈಲಾದಷ್ಟು ಸಹಾಯವನ್ನು ನೀಡಿ.
4) ಭೀಮ್ಸೇನ್ ಏಕಾದಶಿಯೆಂದು ಕರೆಯಲು ಕಾರಣವೇನು ಗೊತ್ತಾ..?
ಕಥೆಗಳಲ್ಲಿ ಹೇಳುವ ಪ್ರಕಾರ, ಮಹರ್ಷಿ ವೇದವ್ಯಾಸರು ಏಕಾದಶಿ ಉಪವಾಸಕ್ಕಾಗಿ ಪಾಂಡವರಿಗೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನು ತಿಳಿಸಿಕೊಡುತ್ತಾರೆ. ಆ ಸಂದರ್ಭದಲ್ಲಿ ಭೀಮನು ಮಹರ್ಷಿಯಲ್ಲಿ ನೀವು ಪ್ರತೀ ಪಕ್ಷದಂದು ಒಂದು ದಿನ ಸಂಪೂರ್ಣ ಉಪವಾಸವನ್ನು ಆಚರಿಸಲು ಹೇಳಿದ್ದೀರಿ. ಆದರೆ ನನಗೆ ಒಂದು ದಿನವೇನೂ ಒಂದು ಗಳಿಗೆಯೂ ಕೂಡ ಉಪವಾಸದಿಂದಿರಲು ಸಾಧ್ಯವಿಲ್ಲ. ನನ್ನ ಹೊಟ್ಟೆಯನ್ನು ತಣ್ಣಗಾಗಿರಿಸಲು ನಾನು ಆಗಾಗ ಆಹಾರಗಳನ್ನು ಸೇವಿಸುತ್ತಲೇ ಇರಬೇಕು. ಹಾಗಾದರೆ ನಾನು ಏಕಾದಶಿ ವ್ರತದಿಂದ ಸಿಗುವ ಮೋಕ್ಷದಿಂದ ವಂಚಿತನಾಗುತ್ತೇನೆಯೇ ಎಂದು ವಿನಂತಿಸಿಕೊಳ್ಳುತ್ತಾನೆ.
5) ಇಲ್ಲಿದೆ ಭೀಮನ ಸಮಸ್ಯೆಗೆ ಪರಿಹಾರ:
ಭೀಮನ ಸಮಸ್ಯೆಗೆ ಪರಿಹಾರವೊಂದನ್ನು ನೀಡಲು ಮಹರ್ಷಿಗಳು ಯೋಚಿಸುತ್ತಾರೆ ಹಾಗೂ ಕೊನೆಗೆ ಭೀಮನ ಸಮಸ್ಯೆಗೆ ಪರಿಹಾರವನ್ನು ಕೂಡ ನೀಡುತ್ತಾರೆ. ಕುಂತಿನಂದನನೇ ನೀನು ಇದಕ್ಕಾಗಿ ನಿನ್ನ ಸ್ಥೈರ್ಯವನ್ನು ಕಳೆದುಕೊಳ್ಳಬೇಕಾಗಿಲ್ಲ, ಅಥವಾ ಇದಕ್ಕಾಗಿ ಚಿಂತೆಗೊಳಗಾಗಬೇಕಾಗಿಲ್ಲ. ಈ ಎಲ್ಲಾ ಉಪವಾಸಗಳನ್ನು ಕೂಡ ನೀವು ಆಚರಿಸಬೇಕೆಂದಿಲ್ಲ. ಬದಲಾಗಿ ನಿರ್ಜಲ ಏಕಾದಶಿ ಉಪವಾಸವೊಂದನ್ನು ಆಚರಿಸಿದರೆ ಸಾಕು, ನೀವೆಲ್ಲಾ ಏಕಾದಶಿ ಉಪವಾಸದ ಮೋಕ್ಷ, ಫಲಗಳನ್ನು ಪಡೆದುಕೊಳ್ಳುವಿರಿ ಎಂದು ಪರಿಹಾರವನ್ನು ನೀಡುತ್ತಾರೆ.
6) ನಿರ್ಜಲ ಏಕಾದಶಿಯ ಮಹತ್ವ:
ವೇದವ್ಯಾಸರು ನೀಡಿದ ಭರವಸೆಯ ಮೇರೆಗೆ ವೃಕೋದರ ಭೀಮ್ಸೇನನು ಕೂಡ ಈ ಏಕಾದಶಿ ಉಪವಾಸವನ್ನು ಮಾಡಲು ಒಪ್ಪಿಕೊಂಡನು. ಆದ್ದರಿಂದ ವರ್ಷಪೂರ್ತಿ ಏಕಾದಶಿಯ ಪ್ರಯೋಜನವನ್ನು ನೀಡುವ ಈ ಏಕಾದಶಿಯನ್ನು ಪಾಂಡವ ಏಕಾದಶಿ ಅಥವಾ ಭೀಮ್ಸೇನ ಏಕಾದಶಿಯೆಂದೂ ಕೂಡ ಕರೆಯಲಾಗುತ್ತದೆ. ಈ ದಿನದಂದು ನೀರನ್ನು ಕೂಡ ಕುಡಿಯದೇ ಹಾಗೇ ಉಪವಾಸವಿದ್ದು, ಶುದ್ಧವಾದ ನೀರು ತುಂಬಿದ ಮಡಿಕೆಯನ್ನು ಬ್ರಾಹ್ಮಣರಿಗೆ ಅಥವಾ ನಿರ್ಗತಿಕ ವ್ಯಕ್ತಿಗಳಿಗೆ ನೀಡಿದರೆ ಜೀವನದಲ್ಲಿನ ಎಲ್ಲಾ ಕುಂದು ಕೊರತೆಗಳು ನಿವಾರಣೆಯಾಗುತ್ತದೆ ಮತ್ತು ಯಾವಾಗಲು ಸಂತೋಷ, ಸಮೃದ್ಧಿಯು ನೆಲೆಯಾಗುತ್ತದೆ ಎನ್ನಲಾಗಿದೆ.
#ಶ್ರೀ_ಕೃಷ್ಣಾರ್ಪಣ_ಮಸ್ತು
No comments:
Post a Comment