Tuesday, 9 June 2020

ಉಚ್ಚಿಷ್ಟಮ್ ಎಂದರೆ ಎಂಜಲು

🕉 ಶ್ರೀ ಗುರುಭ್ಯೋ ನಮಃ 🕉       ‌            ‌                                                           ‌                                                                                             *ಉಚ್ಚಿಷ್ಟಮ್ ಎಂದರೆ ಎಂಜಲು* 

"ಯಾವ ಐದು ವಸ್ತುಗಳು ಎಂಜಲು...?" 

ಇದೊಂದು ಸುಭಾಷಿತಕಾರು ಬರೆದ ಒಂದು ಸುಭಾಷಿತ, ಆದರೆ ಸತ್ಯ. ಯಾವ ಐದು ವಸ್ತುಗಳು ಅಪವಿತ್ರ ಆದರೂ ಪವಿತ್ರ. ಇಲ್ಲಿ ಯಾವುದೂ ಅಪವಿತ್ರವಲ್ಲ ಎನ್ನುವದೇ ಅವರ ಉದ್ದೇಶ.  ಓದಿ.....

*ಉಚ್ಚಿಷ್ಟಮ್ ಶಿವನಿರ್ಮಾಲ್ಯಂ ವಮನಮ್ ಶವಕರ್ಪಟಮ್ ಕಾಕವಿಷ್ಠಾಸಮುತ್ಪನ್ನಮ್ ಪಂಚೈತೇತಿಪವಿತ್ರಕಾಃ*

ಅಂದರೆ .. *ಎಂಜಲು, ಶಿವನ ನಿರ್ಮಾಲ್ಯ, ವಾಂತಿ, ಹೆಣದ ಬಟ್ಟೆ, ಕಾಗೆಯ ಮಲದಿಂದ ಹುಟ್ಟಿದ್ದು* . ಈ ಐದು ಅತ್ಯಂತ ಪವಿತ್ರವಾದವುಗಳು...!! ಎಂದು .

1. *ಉಚ್ಚಿಷ್ಟಮ್* - ಎಂದರೆ *ಎಂಜಲು* .

*ಹಾಲು ಕರುವಿನ ಎಂಜಲು* ಹಸುವಿನ ಹಾಲನ್ನು ಕರು ಕುಡಿದು ಹಾಗೇ ಬಿಟ್ಟಿರುತ್ತದೆ. ಆ ಎಂಜಲು ಹಾಲನ್ನೇ ನಾವು ಉಪಯೋಗಿಸುತ್ತೇವೆ. ಕರುವಿನಿಂದ ಎಂಜಲಾದ ಹಾಲು ದೇವರಿಗೆ, ಪಂಚಾಮೃತಾಭಿಷೇಕಕ್ಕೆ ಬೇಕಾದ ಅತ್ಯಂತ ಪವಿತ್ರ ವಸ್ತು.

2. *ಶಿವ ನಿರ್ಮಾಲ್ಯಮ್* - ಎಂದರೆ *ಶಿವನ ಜಟೆಯಿಂದ ಹೊರಗೆ ಬಂದ ಗಂಗೆ.*

ಗಂಗಾ ನದಿ ಸ್ವರ್ಗಲೋಕದಿಂದ ಭೂಲೋಕಕ್ಕೆ ಬರುವಾಗ ಅಹಂಕಾರದಿಂದ ಬರುತ್ತಿದ್ದಳು. ಆಗ ಗಂಗೆಯ ಗರ್ವವನ್ನು ದಮನ ಮಾಡುವುದಕ್ಕಾಗಿ ಪರಶಿವನು ಆ ಗಂಗೆಯನ್ನು ತನ್ನ ಜಟೆಯ ಮಧ್ಯೆ ಕಟ್ಟಿಹಾಕಿಬಿಟ್ಟ. ಅನಂತರ ಆ ಜಟೆಯಿ೦ದ ಗಂಗಾನದಿಯನ್ನು ಹೊರಕೆ ಹಾಕಿದ. ಶಿವನ ಜಟೆಯಲ್ಲಿದ್ದು ಅಲ್ಲಿಂದ ಮುಕ್ತಳಾದ್ದರಿಂದ ಗಂಗಾನದಿಯು ಶಿವನ ನಿರ್ಮಾಲ್ಯವಾಯಿತು. ಆದರೂ ಈ ಗಂಗೆಯು ಪವಿತ್ರ.

3. *ವಮನಮ್* - ಎಂದರೆ *ವಾಂತಿ (ಜೇನುತುಪ್ಪ).* 

ಜೇನುಹುಳುಗಳು ಬೇರೆಬೇರೆಯ ಗಿಡಮರಗಳಿಂದ ಮಕರಂದವನ್ನು ಬಾಯಲ್ಲಿ ಹಿಡಿದು ತಂದು, ಬಾಯಿಂದಲೇ ಆ ಮಕರಂದವನ್ನು ಗೂಡಿನಲ್ಲಿ ಇಟ್ಟಿರುತ್ತವೆ. ಅದೇ ಜೇನು ತುಪ್ಪ. ಇದು ಜೇನುಹುಳುಗಳ ವಮನ. ಆದರೆ ಜೇನುತುಪ್ಪ ಪ್ರಶಸ್ತವಾದದ್ದು.

4. *ಶವಕರ್ಪಟಮ್* - ಎಂದರೆ *ಶವದ ಬಟ್ಟೆ (ರೇಷ್ಮೆ ವಸ್ತ್ರ).* 

ರೇಷ್ಮೆ ಹುಳುಗಳನ್ನು ಬೇಯಿಸಿ, ಸಾಯಿಸಿ ಅದರ ನೂಲಿನಿಂದ ಸಿದ್ದವಾದ ವಸ್ತು.

5. *ಕಾಕವಿಷ್ಠಾಸಮುತ್ಪನ್ನಮ್* - ಅಂದರೆ *ಕಾಗೆಯ ಮಲದಿಂದ ಹುಟ್ಟಿದ್ದು (ಅರಳಿ ಮರ).* 

ಕಾಗೆಯು ಅರಳಿಮರದ ಬೀಜವನ್ನು ತಿಂದಾಗ, ಅದು ಕಾಗೆಯ ಮಲದ ಮೂಲಕ ಹೊರಗಡೆಗೆ ಎಲ್ಲೋ ಬಿದ್ದಾಗ ಅದರಿಂದ ಅರಳಿ ಮರವು ಹುಟ್ಟುತ್ತದೆ. ಅಶ್ವತ್ಥವೃಕ್ಷವು ತ್ರಿಮೂರ್ತಿಸ್ವರೂಪದ್ದಾಗಿರುತ್ತದೆ.

ಇದೊಂದು ಚಮತ್ಕಾರಿಕ ಸುಭಾಷಿತ. ಮಡಿ, ಮೈಲಿಗೆ ಎಂದು ಬಹಳ ಹಾರಾಡುವವರಿಗೆ, ಕವಿಯು ಎಲ್ಲವೂ ನೈರ್ಮಾಲ್ಯವೇ ಎಂದು ಚಾಟಿ ಬೀಸಿದ್ದಾನೆ. 

ಲೋಕದಲ್ಲಿ ಅಪವಿತ್ರವೆಂಬುದು, ಅಶುದ್ಧವೆಂಬುದು ನಮ್ಮ *"ಮನಸ್ಸು"* ಮಾತ್ರ. *"ಮನಸ್ಸ"* ನ್ನು ಶುದ್ಧವಾಗಿಸಿದಲ್ಲಿ ಸಕಲವೂ ಪವಿತ್ರವಾಗಿಯೇ ಇರುವುದು.

ಆಹಾರಕ್ಕೆ ಭಕ್ತಿಯನ್ನು ಸೇರಿಸಿದರೆ *ನೈವೇದ್ಯ* ವಾಗುವುದು.
ನಿರಾಹಾರಕ್ಕೆ ಭಕ್ತಿಯನ್ನು ಸೇರಿಸಿದರೆ *ಉಪವಾಸ* ವಾಗುವುದು... 
ನೀರಿಗೆ ಭಕ್ತಿಯನ್ನು ಸೇರಿಸಿದರೆ *ತೀರ್ಥ* ವಾಗುವುದು... 
ಮಾತಿಗೆ ಭಕ್ತಿಯನ್ನು ಸೇರಿಸಿದರೆ *ಸ್ತೋತ್ರ* ವಾಗುವುದು... 
ಕೇಳುವುದಕ್ಕೆ ಭಕ್ತಿಯನ್ನು ಸೇರಿಸಿದರೆ *ಮಂತ್ರ* ವಾಗುವುದು.. 
ಆಲೋಚನೆಗೆ ಭಕ್ತಿಯನ್ನು ಸೇರಿಸಿದರೆ *ಧ್ಯಾನ* ವಾಗುವುದು.. 
ಕೆಲಸಗಳಿಗೆ ಭಕ್ತಿಯನ್ನು ಸೇರಿಸಿದರೆ *ಪೂಜೆ* ಯಾಗುವುದು. 
ಪ್ರೀತಿಗೆ ಭಕ್ತಿಯನ್ನು ಸೇರಿಸಿದರೆ *ಆರಾಧನೆ* ಯಾಗುವುದು.. 
ಸ್ನೇಹಕ್ಕೆ ಭಕ್ತಿಯನ್ನು ಸೇರಿಸಿದರೆ *ಸತ್ಸಂಗ* ವಾಗುವುದು... 
ಬದುಕಿಗೆ.. ಭಕ್ತಿಯನ್ನು ಸೇರಿಸಿದರೆ ಬದುಕೇ *ಪಾವನ* ವಾಗುವುದು...

No comments:

Post a Comment