Tuesday, 9 June 2020

ಶಿವನನ್ನು ತೃಪ್ತಿಗೊಳಿಸುವ ರುದ್ರಾಭಿಷೇಕ ಪೂಜೆಯ ಮಹತ್ವವೇನು ಗೊತ್ತಾ ?

🕉 ಶ್ರೀ ಗುರುಭ್ಯೋ ನಮಃ 🕉        ‌            ‌                                              ‌                                                                                                                   *ಶಿವನನ್ನು ತೃಪ್ತಿಗೊಳಿಸುವ ರುದ್ರಾಭಿಷೇಕ ಪೂಜೆಯ ಮಹತ್ವವೇನು ಗೊತ್ತಾ ?*

ಶಿವನು ರುದ್ರ ಅವತಾರವನ್ನು ತಾಳಿದಾಗ ಶಾಂತಗೊಳಿಸಲು ಮತ್ತು ಮೆಚ್ಚಿಸುವ ಕಾರಣಗಳಿಗಾಗಿ ರುದ್ರಾಭಿಷೇಕ ಪೂಜೆಯನ್ನು ಮಾಡುತ್ತಿದ್ದರು ಎಂದು ಪುರಾಣ ಕಥೆಗಳು ಹೇಳುತ್ತವೆ. ಈ ಕುರಿತು ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ.
 

ಶ್ರೇಷ್ಠತೆ, ಪಾಲನೆ ಹಾಗೂ ಭಕ್ತರ ಉದ್ಧಾರಕ್ಕಾಗಿಯೇ ಇರುವ ದೇವ ಶಿವ. ಮನುಕುಲದ ಒಳಿತಿಗಾಗಿಯೇ ಅವತರಿಸಿ ಬಂದ ಈ ರೂಪವು ಜಗತ್ತಿನ ಕಣ ಕಣದಲ್ಲಿಯೂ ಇದೆ. ಅಸಂಖ್ಯಾತ ಹಾಗೂ ಅಂತ್ಯವಿಲ್ಲದ ಈ ವಿಶೇಷ ರೂಪಕ್ಕೆ ವಿವಿಧ ರೀತಿಯಲ್ಲಿ ಪೂಜೆ ಪುನಸ್ಕಾರಗಳನ್ನು ಕೈಗೊಳ್ಳಲಾಗುವುದು. ಅಂತಹ ಒಂದು ವಿಶೇಷ ಹಾಗೂ ಶ್ರೇಷ್ಠ ಆರಾಧನಾ ವಿಧಾನ ಎಂದರೆ ರುದ್ರಾಭಿಷೇಕ ಪೂಜೆ. ಶಿವನು ರುದ್ರ ಅವತಾರವನ್ನು ತಾಳಿದಾಗ ಶಾಂತ ಗೊಳಿಸಲು ಮತ್ತು ಮೆಚ್ಚಿಸುವ ಕಾರಣಗಳಿಗಾಗಿ ರುದ್ರಾಭಿಷೇಕ ಪೂಜೆಯನ್ನು ಮಾಡುತ್ತಿದ್ದರು ಎಂದು ಪುರಾಣ ಕಥೆಗಳು ಹೇಳುತ್ತವೆ. ಈ ಕುರಿತು ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.
 ‌                                                                                                              *ರುದ್ರಾಭಿಷೇಕ*

ಶಿವನಿಗೆ ಸಲ್ಲಿಸುವ ಪೂಜೆ ಹಾಗೂ ಅಭಿಷೇಕದ ವಿಧಾನಗಳು ಹಲವು. ಅವುಗಳಲ್ಲಿ ರುದ್ರಾಭಿಷೇಕವು ಒಂದು. ಅತ್ಯಂತ ಪವಿತ್ರ ಹಾಗೂ ಶ್ರೇಷ್ಠ ಸಂಗತಿಗಳಿಂದ ಕೂಡಿರುವ ಈ ವಿಧಾನದಲ್ಲಿ ಶಿವನಿಗೆ ಹಾಲು, ಮೊಸರು, ಜೇನುತುಪ್ಪ ಮತ್ತು ಸಾಸಿವೆ ಎಣ್ಣೆಯನ್ನು ಶಿವನಿಗೆ ಅರ್ಪಿಸಲಾಗುವುದು. ಭಕ್ತಿಯಿಂದ ಕೈಗೊಳ್ಳಲಾಗುವ ಈ ಪೂಜಾ ವಿಧಾನದಿಂದ ಶಿವನು ಬಹು ಬೇಗ ಸಂತೃಪ್ತನಾಗುವನು. ಶಿವನಿಗೆ ರುದ್ರಾಭಿಷೇಕ ಪೂಜೆಯನ್ನು ಮಾಡುವುದರಿಂದ ಭಕ್ತರು ತಮ್ಮ ಜೀವನದಲ್ಲಿ ಇರುವ ಅಡೆತಡೆಗಳನ್ನು, ತೊಂದರೆಗಳನ್ನು ಮತ್ತು ದುಃಖ ದುಮ್ಮಾನಗಳಿಂದ ಮುಕ್ತರಾಗಬಹುದು. ಜೀವನದಲ್ಲಿ ವಿಜಯ, ಸಂತೋಷ ಹಾಗೂ ನೆಮ್ಮದಿಯನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಪುರಾಣ ಗ್ರಂಥಗಳು ತಿಳಿಸುತ್ತವೆ.
 ‌                                                                                                                                          *ಶಿವ ಪೂಜೆ ಗೈದ ಶ್ರೀರಾಮ*

ರಾಮನು ವನವಾಸಕ್ಕೆ ಹೋದಾಗ ಸೀತಾದೇವಿಯನ್ನು ರಾವಣನು ಅಪಹರಿಸಿದನು. ಆ ಸಮಯದಲ್ಲಿ ರಾಮನು ಮಹಾನ್ ಶಕ್ತಿಶಾಲಿ ಹಾಗೂ ಕ್ರೂರ ಗುಣವನ್ನು ಹೊಂದಿರುವ ರಾವಣನ ವಿರುದ್ಧ ಯುದ್ಧ ಮಾಡಬೇಕಾಯಿತು. ಆಗ ತನ್ನ ಕೈಗಳಿಂದಲೇ ಶಿವಲಿಂಗವನ್ನು ನಿರ್ಮಿಸಿ, ಪೂಜೆಯನ್ನು ಮಾಡುತ್ತಿದ್ದನು. ಶಿವನಿಗೆ ವಿಶೇಷ ಆರಾಧನೆ, ಮಂತ್ರ ಘೋಷ ಹಾಗೂ ರುದ್ರಾಭಿಷೇಕ ಮಾಡುತ್ತಿದ್ದನು. ಅದರಿಂದಾಗಿ ಶಿವನು ರಾವಣನ ವಿರುದ್ಧ ಯುದ್ಧ ಮಾಡುವ ಶಕ್ತಿ, ಸುಲಭ ಮಾರ್ಗ ಮತ್ತು ಯುದ್ಧದಲ್ಲಿ ಜಯಶಾಲಿಯಾಗಿ, ಸೀತೆಯನ್ನು ಬಿಡಿಸಿಕೊಂಡು ಬರುವಂತಹ ಶಕ್ತಿಯನ್ನು ರಾಮನಿಗೆ ಆಶೀರ್ವದಿಸಿದನು ಎಂದು ಹೇಳಲಾಗುವುದು.

*ಶಿವ ಮತ್ತು ರುದ್ರ ಅವತಾರ*

ರುದ್ರ ಎನ್ನುವುದು ಸೂರ್ಯ ಮತ್ತು ಚಂದ್ರನ ಕಣ್ಣುಗಳು. ಇದು ಗಾಳಿಯಲ್ಲಿರುವ ಉಸಿರು, ವೇದಗಳ ಧ್ವನಿ ಮತ್ತು ಬ್ರಹ್ಮಾಂಡದ ಹೃದಯವನ್ನು ಪ್ರತಿನಿಧಿಸುತ್ತದೆ. ಭೋಲೆನಾಥ್, ನೀಲಕಂಠ, ಮಹಾದೇವ, ನಟರಾಜ ಸೇರಿದಂತೆ ಶಿವನಿಗೆ ವಿವಿಧ ಹೆಸರುಗಳಿಂದ ಕರೆಯಲಾಗುವುದು. ಅಂತಹ ವಿಶೇಷ ನಾಮಗಳಲ್ಲಿ ರುದ್ರ ಎನ್ನುವುದು ಒಂದು. ರುದ್ರ ಎನ್ನುವುದು ರೌದ್ರ ಎನ್ನುವ ಅರ್ಥವನ್ನು ನೀಡುವುದು. ಇದು ಶಿವನ ವಿಧ್ವಂಸಕ ರೂಪವನ್ನು ಕೇಂದ್ರೀಕರಿಸುತ್ತದೆ. ಶಿವನು ಆಕ್ರಮಣಕಾರಿಯಾದಾಗ, ಹಿಂಸಾತ್ಮಕ ಮತ್ತು ವಿನಾಶಕಾರಿಯಾಗಿ ನಿಂತಾಗ ರೌದ್ರ ರೂಪ ಎಂದು ಹೇಳಲಾಗುವುದು. ಈ ಅವತಾರ ತಾಳಿದಾಗ ಶಿವನು ತನ್ನ ಸಹನೆಯನ್ನು ಮೀರಿರುತ್ತಾನೆ. ಜೊತೆಗೆ ಅತ್ಯಂತ ಕೋಪಕ್ಕೆ ಒಳಗಾಗಿರುತ್ತಾನೆ. ಅವನನ್ನು ತಣಿಸಲು ರುದ್ರಾಭಿಷೇಕ ಪೂಜೆಯನ್ನು ಮಾಡಲಾಗುವುದು ಎಂದು ಧಾರ್ಮಿಕ ಚಿಂತನೆಗಳು ತಿಳಿಸುತ್ತವೆ.
 ‌                                                                                     *ರುದ್ರಾವತಾರಕ್ಕೆ ಸಂಬಂಧಿಸಿದ ಕಥೆ*

ರುದ್ರಾವತಾರ ಎನ್ನುವುದು ಅತ್ಯಂತ ನಿರ್ಭೀತ ಮತ್ತು ಹುರುಪಿನಿಂದ ಕೂಡಿರುವ ರೂಪ. ರುದ್ರ ಅವತಾರ ತಾಳಿದಾಗ ಶಿವನು ತಾಂಡವ ನೃತ್ಯವನ್ನು ಮಾಡುವನು. ಸೃಷ್ಟಿಯಲ್ಲಿ ಉಂಟಾದ ತೊಂದರೆ ಹಾಗೂ ದೋಷಗಳ ನಾಶಕ್ಕಾಗಿ ಮಹಾದೇವನು ಈ ಅವತಾರವನ್ನು ತಾಳುವನು ಎನ್ನಲಾಗುವುದು. ಈ ಅವತಾರಕ್ಕೆ ಸಂಬಮಧಿಸಿದಂತೆ ಕೆಲವು ಕಥೆಗಳಿವೆ. ರುದ್ರ ಎನ್ನುವುದು 11 ರುದ್ರಗಳಿಂದ ಕೂಡಿದೆ. ಇದು ಜೀವಿಗಳ ವಿಶಿಷ್ಟ ಸ್ವರೂಪವನ್ನು ರಚಿಸುವ ಬ್ರಹ್ಮ ದೇವರ ಕೋರಿಕೆಯ ಮೇರೆಗೆ ಶಿವನು ಈ ಅವತಾರವನ್ನು ರಚಿಸಿದನು. ಕಪಾಲಿ, ಪಿಂಗಲಾ, ವಿರೂಪಾಕ್ಷ, ಭೀಮಾ, ವಿಲೋಹಿತ, ಶವಾಸನ, ಅಜೇಶ, ಶಾಸ್ತಾ, ಚಂದಾ, ಶಂಭು ಮತ್ತು ಧ್ರುವ ಎನ್ನುವ 11 ಅಮರರನ್ನು ಈ ಅವತಾರವು ಪ್ರತಿಬಿಂಬಿಸುವುದು. ಹಾಗಾಗಿಯೇ ಮಹಾದೇವನು ತನ್ನ ಸೃಷ್ಟಿಯ ನಂತರ ರುದ್ರ ಎನ್ನುವ ಹೆಸರನ್ನು ಪಡೆದನು.
 ‌                                                                                 *ರುದ್ರಾಭಿಷೇಕದ ಮಹತ್ವ*

ಸೃಷ್ಟಿಯಲ್ಲಿ ಅಸಮತೋಲನ ಕಂಡಾಗ ಅಥವಾ ದುಷ್ಟ ಶಕ್ತಿಯ ಆರ್ಭಟ ಹೆಚ್ಚಿದಾಗ ಶಿವನು ಅತ್ಯಂತ ಕೋಪಕ್ಕೆ ಒಳಗಾಗುವನು. ಜೊತೆಗೆ ಆ ದುಷ್ಟ ಸಂಗತಿಗಳ ನಿರ್ಮೂಲನೆ ಮಾಡುವನು. ಹಾಗಾಗಿಯೇ ಶಿವನನ್ನು ರುದ್ರ ಎಂಬ ಹೆಸರಿನಿಂದ ಕರೆಯಲಾಗುವುದು. ಶಿವನ ಉಗ್ರ ರೂಪವನ್ನು ರುದ್ರ ಎನ್ನುವ ಪದವು ಪ್ರತಿನಿಧಿಸುತ್ತದೆ. ರುದ್ರನಾಗಿರುವಾಗ ಶಿವನಿಗೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಪವಿತ್ರ ಸ್ನಾನ ಅಥವಾ ಅಭಿಷೇಕವನ್ನು ಕೈಗೊಂಡರೆ ಅವನು ಶಾಂತನಾಗುತ್ತಾನೆ. ಜೊತೆಗೆ ಬೇಕಾದ ವರವನ್ನು ನೀಡುವನು. ಅಂತಹ ಒಂದು ವಿಶೇಷ ಹಾಗೂ ಪವಿತ್ರವಾದ ಅಭಿಷೇಕ ಎಂದರೆ ರುದ್ರಾಭಿಷೇಕ. ಶಿವನನ್ನು ಮೆಚ್ಚಿಸಲು ಕೈಗೊಳ್ಳಲಾಗುವ ಈ ಅಭಿಷೇಕವು ಅತ್ಯಂತ ಶ್ರೇಷ್ಠತೆಯಿಂದ ಕೂಡಿದೆ. ಇದನ್ನು ಯಾರು ಕೈಗೊಳ್ಳುತ್ತಾರೆ, ಅವರ ಆರೋಗ್ಯ, ಸಂಪತ್ತು ಮತ್ತು ಸಂತೋಷವು ಹೆಚ್ಚುವುದು. ಅಲ್ಲದೆ ಶತ್ರು, ನಕಾರಾತ್ಮಕ ಶಕ್ತಿ ಮತ್ತು ದುಷ್ಟರ ವಿರುದ್ಧ ರಕ್ಷಣೆ ನೀಡುತ್ತದೆ.

*ರುದ್ರಾಭಿಷೇಕ ವಿಧಿ*

ರುದ್ರಾಭಿಷೇಕ ಮಾಡುವಾಗ ಮೊದಲು ಶಿವಲಿಂಗವನ್ನು ವೈದಿಕ ಮಂತ್ರಗಳನ್ನು ಹೇಳುತ್ತಾ ನೀರಿನಿಂದ ತೊಳೆಯಲಾಗುವುದು. ನಂತರ ರುದ್ರ ಸೂಕ್ತವನ್ನು ನಿರಂತರವಾಗಿ ಪಠಿಸಲಾಗುವುದು. ಹಸುವಿನ ಹಾಲು, ತೆಂಗಿನ ನೀರು, ಅಕ್ಕಿ, ಸಕ್ಕರೆ ಪುಡಿ, ತುಪ್ಪ, ಮೊಸರು, ಜೇನುತುಪ್ಪ, ಕಬ್ಬಿನ ರಸ ಇತ್ಯಾದಿ ಸಾಮಾಗ್ರಿಗಳನ್ನು ಒಟ್ಟಿಗೆ ಬೆರೆಸಿ, ನಂತರ ಶಿವನಿಗೆ ಅಭಿಷೇಕ ಮಾಡಲಾಗುವುದು. ವೇದ ಸಾಧಕರು ಮುಂಜಾನೆ ಲಕ್ಷ್ಮಿ ಮತ್ತು ಗಣೇಶನ ಪೂಜೆಯೊಂದಿಗೆ ರುದ್ರಾಭಿಷೇಕವನ್ನು ಕೈಗೊಳ್ಳುತ್ತಾರೆ. ನಂತರ ದಿನ ಪೂರ್ತಿ ಈ ಮೇಲೆ ತಿಳಿಸಲಾದ ವಸ್ತುಗಳಿಂದ ಅಭಿಷೇಕವನ್ನು ಕೈಗೊಳ್ಳುವರು.
 ‌                                                                                                                                    *ಶಿವನಿಗೆ ಅರ್ಪಿಸುವ ಪವಿತ್ರ ವಸ್ತುಗಳು*

ರುದ್ರಾಭಿಷೇಕದ ನಂತರ ಕಮಲದ ಹೂವಿನಿಂದ ಶಿವಲಿಂಗವನ್ನು ಅಲಂಕರಿಸುತ್ತಾರೆ. ಇದರೊಟ್ಟಿಗೆ ಶಿವನಿಗೆ ಇಷ್ಟವಾಗುವ ಬಿಲ್ವ ಪತ್ರೆಯನ್ನು ಅರ್ಪಿಸುವರು. ಈ ವಿಧಿ-ವಿಧಾನಗಳ ನಂತರ 108 ದೀಪಗಳ ಮೂಲಕ ದೀಪದ ಆರತಿಯನ್ನು ಮಾಡಲಾಗುವುದು. ಬಳಿಕ ಪೂಜೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಪ್ರಸಾದವನ್ನು ವಿತರಿಸಲಾಗುವುದು.

*ರುದ್ರಾಭಿಷೇಕದ ಪ್ರಯೋಜನಗಳು*

ರುದ್ರಾಭಿಷೇಕವನ್ನು ಕೈಗೊಳ್ಳುವುದರಿಂದ ವ್ಯಕ್ತಿ ಜೀವನದಲ್ಲಿ ಸಂಪತ್ತು ಮತ್ತು ಸಾಮರಸ್ಯವನ್ನು ಕೈಗೊಳ್ಳುತ್ತಾನೆ.
ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವುದರ ಮೂಲಕ ಆತ್ಮವು ಶುದ್ಧಿಯಾಗುವುದು.
ಕೆಟ್ಟ ಶಕ್ತಿಯಿಂದ ರಕ್ಷಣೆ ಮತ್ತು ತೊಂದರೆಗಳನ್ನು ಎದುರಿಸಲು ಶಕ್ತಿ ದೊರೆಯುವುದು.
ಯಾವ ವ್ಯಕ್ತಿಯ ಕುಂಡಲಿಯಲ್ಲಿ ರಾಹು ದೋಷ, ಪಿತೃದೋಷ ಸೇರಿದಂತೆ ವಿವಿಧ ದೋಷಗಳಿಗೆ ಹಾಗೂ ತೊಂದರೆಗಳಿಗೆ ಪರಿಹಾರವನ್ನು ನೀಡುತ್ತದೆ.
ಜೀವನದಲ್ಲಿ ಸಾಕಷ್ಟು ಪುಣ್ಯ ಫಲಗಳನ್ನು ಪಡೆದುಕೊಳ್ಳಲು ಸಹಾಯವಾಗುವುದು.

No comments:

Post a Comment