🕉 ಶ್ರೀ ಗುರುಭ್ಯೋ ನಮಃ 🕉
*ದಶಾವತಾರದ ಸಂಕ್ಷಿಪ್ತ ಪರಿಚಯ*
ಬ್ರಹ್ಮದೇವ ಸೃಷ್ಟಿಕರ್ತನಾದರೆ, ವಿಷ್ಣು ಸ್ಥಿತಿ ಸ್ಥಾಪಕ, ಶಿವ ಲಯಕರ್ತ. ತ್ರಿಮೂರ್ತಿಗಳಲ್ಲಿ ಸ್ಥಿತಿ ಸ್ಥಾಪಕನಾದ ಶ್ರೀಮನ್ನಾರಾಯಣ ದುಷ್ಟರನ್ನು ಸಂಹರಿಸಲು ಮತ್ತು ಶಿಷ್ಟರನ್ನು ಸಂರಕ್ಷಿಸುವ ಸಲುವಾಗಿ ಈ ಧರೆಯಲ್ಲಿ ಹತ್ತು ಅವತಾರಗಳನ್ನೆತ್ತಿಹನು
ಲೋಕಕಲ್ಯಾಣಾರ್ಥವಾಗಿ ವಿಷ್ಣು ಎತ್ತಿದ ಈ ಎಲ್ಲಯ ಅವತಾರಗಳ ಹಾಗೂ ವಿಷ್ಣುವಿನ ಮೂರು ಅವತಾರಕ್ಕೆ ಕಾರಣವಾದ ಜಯವಿಜಯರ ಶಾಪವೃತ್ತಾಂತದ ಕಿರುಪರಿಚಯ ಇಲ್ಲಿದೆ.
*1) ಮತ್ಸ್ಯಾವತಾರ :*
ಪ್ರಳಯ ಕಾಲದಲ್ಲಿ ಅಪೌರುಷೇಯಗಳಾದ ವೇದಗಳನ್ನು ನಾಶವಾಗದಂತೆ ಸಂರಕ್ಷಿಸುವ ಸಲುವಾಗಿ ಹಾಗೂ ಪ್ರಳಯಾನಂತರ ಆ ಮಹಾನ್ ವೇದಗಳನ್ನು ಋಷಿಮುನಿಗಳಿಗೆ ಪುನಃ ನೀಡುವ ಸಲುವಾಗಿ ನಾರಾಯಣನು ಎತ್ತಿದ ಅವತಾರವೇ ಮತ್ಸ್ಯಾವತಾರ.
*2) ಕೂರ್ಮಾವತಾರ :*
ಕೂರ್ಮ ಅರ್ಥಾತ್ ಆಮೆಯ ಅವತಾರವನ್ನು ವಿಷ್ಣು ಎತ್ತಿದ್ದೂ ಲೋಕಕಲ್ಯಾಣಾರ್ಥವಾಗಿಯೇ. ಕಲ್ಪವೃಕ್ಷ, ಕಾಮಧೇನು, ಐರಾವತ, ಅಮೃತವೇ ಮೊದಲಾದ ಅತ್ಯಮೂಲ್ಯಗಳನ್ನುಪಡೆಯಲು ಮಂದರ ಪರ್ವತವನ್ನು ಕಡೆಗೋಲು ಮಾಡಿ, ವಾಸುಕಿಯೆಂಬ ಸರ್ಪವನ್ನು ಹಗ್ಗವನ್ನಾಗಿ ಮಾಡಿಕೊಂಡು ಸಮುದ್ರ ಮಂಥನ ಮಾಡುತ್ತಿದ್ದ ಕಾಲದಲ್ಲಿ ಮಂದರ ಪರ್ವತವು ಸಮುದ್ರದಲ್ಲಿ ಮುಳುಗದಂತೆ ತಡೆಯಲು ವಿಷ್ಣು ಎತ್ತಿದ ಎರಡನೇ ಆವತಾರ ಕೂರ್ಮಾವತಾರ.
*ಜಯ-ವಿಜಯರ ಶಾಪ ವೃತ್ತಾಂತ* : ವೈಕುಂಠದ ದ್ವಾರಪಾಲಕರಾಗಿದ್ದ ಜಯ-ವಿಜಯರು ದುರಹಂಕಾರದಿಂದ ವೈಕುಂಠಕ್ಕೆ ಬಂದ ಸನಕ, ಸನಂದನ, ಸನತ್ಕುಮಾರ್ ಮತ್ತು ಸನತ್ ಸುಜಾತ ಎಂಬ ಬಾಲಯೋಗಿಗಳನ್ನು ದ್ವಾರದಲ್ಲೇ ತಡೆದು ಶಾಪಗ್ರಸ್ಥರಾದರು. ಭಕ್ತರ ಶಾಪವನ್ನು ತಡೆಯಲು ಸಾಧ್ಯವಿಲ್ಲ ಎಂದ ವಿಷ್ಣು ಜಯ-ವಿಜಯರಿಗೆ ತನ್ನ ಮಿತ್ರರಾಗಿ ಭೂಮಿಯಲ್ಲಿ 7 ಜನ್ಮ ಎತ್ತುವಿರೋ ಇಲ್ಲ ನನ್ನ ಶತ್ರುಗಳಾಗಿ 3 ಜನ್ಮ ಎತ್ತುವಿರೋ ಎಂದು ಕೇಳಿದಾಗ, ಜಯ-ವಿಜಯರು ವೈಕುಂಠಕ್ಕೆ ಬರುವ ಆತುರದಲ್ಲಿ ಶತ್ರುಗಳಾಗೇ ಹುಟ್ಟುತ್ತೇವೆಂದು ಹೇಳಿದರು. ಇದರ ಫಲವಾಗಿ ಜಯ-ವಿಜಯರು ಭೂಮಿಯಲ್ಲಿ ಹಿರಣ್ಯಾಕ್ಷ ಮತ್ತು ಹಿರಣ್ಯ ಕಶಿಪುವಾಗಿ, ರಾವಣ - ಕುಂಭಕರ್ಣರಾಗಿ ಹಾಗೂ ಮೂರನೆಯ ಜನ್ಮದಲ್ಲಿ ಶಿಶುಪಾಲ - ದಂತವಕ್ತ್ರರಾಗಿ ಜನಿಸಿ ಅನುಕ್ರಮವಾಗಿ ವರಹಾವತಾರ, ನರಸಿಂಹಾವತಾರ, ರಾಮಾವತಾರ, ಕೃಷ್ಣಾವತಾರ ಎತ್ತಿದ ವಿಷ್ಣುವಿನಿಂದಲೇ ಹತರಾದರು.
*3) ವರಹಾವತಾರ :*
ದಾನವನಾದ ಹಿರಣ್ಯಾಕ್ಷನು ತನ್ನ ಶಕ್ತಿ ಬಲ, ವರಬಲ ಗರ್ವದಿಂದ ಭೂದೇವಿಯನ್ನು ಸಮುದ್ರದಲ್ಲಿ ಬಚ್ಚಿಟ್ಟ ಸಂದರ್ಭದಲ್ಲಿ ಭೂದೇವಿಯನ್ನು ರಕ್ಷಿಸುವ ಸಲುವಾಗಿ ಹಾಗೂ ದುಷ್ಟನಾಗಿದ್ದ ಹಿರಣ್ಯಾಕ್ಷನ ಸಂಹರಿಸುವ ಸಲುವಾಗಿ ವಿಷ್ಣು ಎತ್ತಿದ ಅವತಾರ ವರಹಾವತಾರ.
*4) ನರಸಿಂಹಾವತಾರ :*
ಹಿರಣಾಕ್ಷನ ಸೋದರನಾದ ಹಿರಣ್ಯಕಶಿಪು ವರಬಲದಿಂದ ಹಾಗೂ ಭುಜಬಲದಿಂದ ನರರನ್ನೂ ದೇವಾನು ದೇವತೆಗಳನ್ನೂ ಕಾಡಿ, ಮಹಾ ಗರ್ವಿಷ್ಠನಾಗಿ, ಧರ್ಮವನ್ನೇ ಮರೆತು ದುರಾಚಾರಿಯಾದಾಗ, ಆತನ ಮಗ ಪರಮ
ವಿಷ್ಣುಭಕ್ತನಾದ ಬಾಲ ಪ್ರಹ್ಲಾದನ ಮೊರೆಗೆ ಕಂಬದಿಂದವತರಿಸಿ, ಹಿರಣ್ಯ ಕಶಿಪುವನ್ನು ಸಂಹರಿಸಲು ವಿಷ್ಣು ಎತ್ತಿದ ಅವರಾತ ನರಸಿಂಹಾವತಾರ.
*5) ವಾಮನಾವತಾರ :*
ಇಂದ್ರಪದವಿಯ ಮೇಲೆ ಕಣ್ಣಿಟ್ಟಿದ್ದ ದಾನವಾಸುರನಾದ ಬಲಿಚಕ್ರವರ್ತಿಯಿಂದ ಮೂರು ಅಡಿ ಜಾಗವನ್ನು ದಾನವಾಗಿ ಪಡೆದು, ಒಂದು ಅಡಿಯಲ್ಲಿ ಭೂಮಿಯನ್ನೂ ಮತ್ತೊಂದು ಅಡಿಯಲ್ಲಿ ಆಕಾಶವನ್ನೂ ಅಳೆದ ವಾಮನ ಮೂರನೇ ಅಡಿಯನ್ನು ಬಲಿಯ ತಲೆಯಮೇಲಿಟ್ಟು ಪಾತಳಕ್ಕೆ ತುಳಿದ. ಬಲಿಯ ಸಂಹಾರಕ್ಕಾಗಿ ವಿಷ್ಣು ಎತ್ತಿದ ಅವತಾರ ವಾಮನಾವತಾರ.
*6) ಪರಶುರಾಮಾವತಾರ :*
ಲೋಕಕಂಟಕರಾಗಿ ಮುಗ್ಧ ಜನರ ಮೇಲೆ ಹಾವಳಿ ಮಾಡುತ್ತಿದ್ದ ಕ್ಷತ್ರಿಯ ಕುಲವನ್ನೇ ನಾಶಮಾಡಲು ವಿಷ್ಣು ಎತ್ತಿದ ಅವತಾರ ಪರಶುರಾಮಾವತಾರ. ಈ ಅವತಾರದಲ್ಲಿ ಪರಶುರಾಮರು 21 ಬಾರಿ ಭೂ ಪ್ರದಕ್ಷಿಣೆ ಮಾಡಿ ದುಷ್ಟರಾದ ಎಲ್ಲಾ ಕ್ಷತ್ರಿಯರನ್ನೂ ಸಂಹರಿಸುವ ಮೂಲಕ ಧರ್ಮ ಸಂಸ್ಥಾಪನೆ ಮಾಡಿದರು.
*7) ರಾಮಾವತಾರ :*
ಏಕಪತ್ನೀವ್ರತಸ್ಥನೂ, ಮರ್ಯಾದಾ ಪುರುಷೋತ್ತಮನೂ ಆದ ಶ್ರೀರಾಮನು, ತನ್ನ ಪತ್ನಿಯನ್ನೇ ಅಪಹಿರಿಸದ ದುಷ್ಟ ರಾವಣ ಹಾಗೂ ಆತನ ಸೋದರ ಕುಂಭಕರ್ಣರ ಸಂಹಾರ ಮಾಡಲು ಮತ್ತು ಭೂಮಂಡಲವನ್ನು ಸಂರಕ್ಷಿಸಲು ಎತ್ತಿದ ಅವತಾರವೇ ರಾಮಾವತಾರ.
*8) ಕೃಷ್ಣಾವತಾರ :*
ಪ್ರಳಯಕಾಲದಲ್ಲಿ ಆಲದೆಲೆಯ ಮೇಲೆ ಪವಡಿಸಿದ ಪರಮಾತ್ಮನಾದ ಕೃಷ್ಣ, ಧರ್ಮಸಂಸ್ಥಾಪನಾರ್ಥವಾಗಿ ಈ ಧರೆಯಲ್ಲಿ ಅವತರಿಸಿದ ಶ್ರೀಮನ್ನಾರಾಯಣ. ಶಿಶುಪಾಲ ಮತ್ತು ದಂತವಕ್ತ್ರರ ಸಂಹಾರವೇ ಈ ಅವತಾರದ ಪ್ರಮುಖ ಕಾರಣವಾದರೂ, ಕಂಸ, ಚಾಣೂರ, ಪೂತನಿ, ಜರಾಸಂಧ, ಕೌರವರೇ ಮೊದಲಾದ ಲೋಕಕಂಟಕರ ನಾಶಕ್ಕೂ ಕೃಷ್ಣ ಕಾರಣನಾದ. ಭಗವದ್ಗೀತೆಯೆಂಬ ಮಹಾನ್ ಕೊಡುಗೆಯನ್ನೂ ಈ ನಾಡಿಗೆ ನೀಡಿದ.
*9) ಬೌದ್ಧಾವತಾರ :*
ದೈವತ್ವವನ್ನು ಮರೆತು, ಸ್ವಾರ್ಥ ಸಾಧಕರಾಗುತ್ತಿದ್ದ ಮನುಕುಲಕ್ಕೆ, ಸನ್ಮಾರ್ಗವನ್ನು ತೋರಲು ವಿಷ್ಣು ಎತ್ತಿದ ಅವತಾರವೇ ಬೌದ್ಧಾವತಾರ. ರಾಜ್ಯ, ಕೋಶ, ಅರಮನೆಯೆಲ್ಲವನ್ನೂ ತ್ಯಜಿಸಿ ಸನ್ಯಾಸಿಯಾಗಿ, ಆಸೆಯೇ ದುಃಖಕ್ಕೆ ಕಾರಣ ಎಂದು ಸಾರಿದ ಬುದ್ಧ , ಅಹಿಂಸೆಯೇ ಪರಮೋಧರ್ಮ ಎಂಬ ಮೂಲಭೂತ ತತ್ವಗಳನ್ನು ಸಾರಲು ನರರಲ್ಲಿ ನರನಾಗಿ ಹುಟ್ಟಿದ ಶ್ರೀಮನ್ನಾರಾಯಣ.
*10) ಕಲ್ಕಿ ಅವತಾರ :*
ತ್ರೇತಾಯುಗದಲ್ಲಿ ರಾಮನಾಗಿ, ದ್ವಾಪರದಲ್ಲಿ ಕೃಷ್ಣನಾಗಿ ಅವತರಿಸಿದ ನಾರಾಯಣ ಕಲಿಯುಗದಲ್ಲಿ ಕಲ್ಕಿಯಾಗಿ ಅವತಾರ ಎತ್ತುತಿಹನು. ಈ ಅವತಾರದ ಮೂಲ ಉದ್ದೇಶವೂ ದುಷ್ಟ ಶಿಕ್ಷಣೆ - ಶಿಷ್ಠ ರಕ್ಷಣೆಯೇ. ಕುದುರೆಯ ಮೇಲೆ ಕುಳಿತು, ಹಿರಿದ ಖಡ್ಗ ಹಿಡಿದ ಕಲ್ಕಿಯು ಕಲಿಯುಗದಲ್ಲಿಯೂ ಧರ್ಮ ಸಂಸ್ಥಾಪನೆ ಮಾಡಿಯೇ ಮಾಡುತ್ತಾನೆ ಎಂಬುದು ನಂಬಿಕೆ.
No comments:
Post a Comment