Monday, 8 June 2020
ಪೂರ್ವಕರ್ಮ
ನಾವು ಇಂತಹವರ ಮನೆಯಲ್ಲೇ ಜನಿಸಬೇಕೆಂದು ನಾವು ಹೊತ್ತು ತಂದ ಪೂರ್ವಕರ್ಮಗಳೇ ನಿರ್ಧರಿಸುತ್ತವೆಯಂತೆ. ಇಲ್ಲಿ ಜನಿಸಿದಮೇಲೆ ನಾವು ಬೆಳೆಸಿಕೊಳ್ಳುವ ಸಂಬಂಧಗಳು, ಸ್ನೇಹಗಳೂ ಸಹ ಆ ಪೂರ್ವಕರ್ಮದ ಪ್ರಭಾವದಿಂದಲೇ ಎನ್ನುತ್ತಾರೆ ಅರಿತವರು. ಅದು ಬಹಳಷ್ಟು ಮಟ್ಟಿಗೆ ನಿಜವೆನ್ನಿಸುತ್ತದೆ. ಏಕೆಂದರೆ, ನೋಡಿ ನಮ್ಮ ನಮ್ಮ ಜೀವನದಲ್ಲಿ ನಾವು ಹೇಗೆ ಮತ್ತೊಬ್ಬರೊಡನೆ ಬಂಧನಗಳನ್ನು ಬೆಳೆಸಿಕೊಳ್ಳುತ್ತೇವಲ್ಲ. ಯಾರದೋ ಸ್ನೇಹ ಉಂಟಾಗುತ್ತದೆ, ಯಾರದೋ ಬಿಟ್ಟುಹೋಗುತ್ತದೆ. ಯಾರಮೇಲೋ ಪ್ರೀತಿ, ಯಾರ ಮೇಲೋ ಕೋಪ, ಯಾರ ಮೇಲೋ ದ್ವೇಷ, ಯಾರಿಂದರೋ ತೊಂದರೆ, ಯಾರಿಗೋ ಉಪಕಾರ ಮಾಡುವುದು, ಯಾರಿಂದಲೋ ಸಹಾಯ ಪಡೆಯುವುದು ಇದು ನಿರಂತರವಾಗಿ ಸಾಯುವತಕನ ನಡೆಯುತ್ತಲೇ ಇರುತ್ತದೆ. ಯಾರದೋ ಮನೆಯಲ್ಲಿ ನಾವು ಊಟ ಮಾಡುತ್ತೇವೆ, ಯಾರೋ ನಮ್ಮಲಿ ಉಣ್ಣುತ್ತಾರೆ. ಕೆಲ ಸ್ನೇಹಿತರು ಒಂದಷ್ಟು ದಿನ ನಮ್ಮೊಡನೆ ಇರುತ್ತಾರೆ, ಕೆಲವರು ಕಳೆದೆ ಹೋಗುತ್ತಾರೆ ಎಷ್ಟು ಹುಡುಕಿದರೂ ಸಿಗುವುದಿಲ್ಲ, ಯಾರೋ ಹೊಸ ಹೊಸ ಸ್ನೇಹಿತರು ಸಿಗುತ್ತಾರೆ. ಹೀಗೆ ಸ್ನೇಹಗಳ, ಬಂಧುತ್ವದ, ಪ್ರೀತಿಯ ಪ್ರೇಮದ ಸಂಬಂಧಗಳು ನಮಗೆ ಈ ಜಗತ್ತಿನ ಯಾರ್ಯಾರೊಂದಿಗೋ ಉಂಟಾಗುತ್ತದೆ.ಇದೆಲ್ಲ ಏಕೆ ಆಗುತ್ತದೆ, ನಾವಂದುಕೊಳ್ಳುವುದು ಏನು, ಆಗುವುದು ಏನು ಇದಕ್ಕೆಲ್ಲ ಕಾರಣವೇನು, ಎಂದು ಹುಡುಕಿದರೆ ಖಂಡಿತ ನಮಗೆ ಸ್ಪಷ್ಟವಾದ ಉತ್ತರ ಸಿಗುವುದಿಲ್ಲ. ಏಕೆಂದರೆ ನಮ್ಮನ್ನು ನಿಯಂತ್ರಿಸುವ, ನಾವು ಕಾಣದ, ನಮಗರ್ಥವಾಗದ, ವಿಧಿಯು ನಮ್ಮ ಈ ಬಂಧಗಳನ್ನೂ, ಸಂಬಂಧಗಳನ್ನೂ ನಿಯಂತ್ರಿಸುತ್ತಿರುತ್ತದೆ. ” ಋಣ” ವೆಂದರೆ ನಾವು ಪಡೆದುಕೊಂಡದ್ದು ಮತ್ತು ಆರ್ಜಿಸಿದ್ದು ಎಂದು ಅರ್ಥಬರುತ್ತದೆ. ನಮ್ಮವರು “ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ” ಎಂದುಬಿಟ್ಟರು. ಸಕಲವನ್ನೂ ಇದರೊಳಗೆ ಸೇರಿಸಬೇಕಿತ್ತು. ಆದರೆ ಸಾಂಕೇತಿಕವಾಗಿ ಮೂರನ್ನೇ ಸೇರಿಸಿದ್ದಾರೆ. ನಮಗೆ ಆಗುವುದೆಲ್ಲವೂ ಈ ” ಋಣ” ಅಥವಾ ” ಪೂರ್ವ ಕರ್ಮ” ದ ಅನುಸಾರವಾಗಿ ಎಂದು ಮನದಟ್ಟು ಮಾಡಿಕೊಳ್ಳಬೇಕು. ನಮ್ಮ ಪ್ರಮೇಯ ಸ್ವಲ್ಪ ಮಾತ್ರ ಉಂಟು. ಹಾಗಾಗಿ ಏಕೆ, ಏನು. ಹೇಗೆ, ಹೀಗೇಕೆ, ಹಾಗೇಕೆ, ಎನ್ನುವ ಪ್ರಶ್ನೆಗಳಿಗೆ ಹೆಚ್ಚು ಮಹತ್ವ ಕೊಡದೆ ಶಾಂತವಾಗಿ ಬಂದದ್ದನ್ನು ಸಮಾಧಾನದಿಂದ ಅನುಭವಿಸುವುದೇ ಲೇಸು, ಏಕೆಂದರೆ ಇದೊಂದು ಬಲೆ, ಇದರೊಳಗೆ ನಮ್ಮ ಬದುಕು. ಇಲ್ಲಿ ಇರುವಷ್ಟು ದಿನವೂ ಈ ಬಂಧ ಸಂಬಂಧಗಳ ವಿಚಿತ್ರವನ್ನು ಅನುಭವಿಸಲೇ ಬೇಕು.
Subscribe to:
Post Comments (Atom)
No comments:
Post a Comment