Tuesday, 9 June 2020

*ಹನುಮಂತನನ್ನು ಆರಾಧಿಸುವುದಲ್ಲದೇ, ಅವನ ಈ ಗುಣಗಳನ್ನು ಅಳವಡಿಸಿಕೊಳ್ಳಬೇಕು...*

🕉 ಶ್ರೀ ಗುರುಭ್ಯೋ ನಮಃ 🕉    ‌         ‌                                         ‌   ‌      ‌       ‌                                                                                   *ಹನುಮಂತನನ್ನು ಆರಾಧಿಸುವುದಲ್ಲದೇ, ಅವನ ಈ ಗುಣಗಳನ್ನು ಅಳವಡಿಸಿಕೊಳ್ಳಬೇಕು...*

ಹಿಂದೂ ಧರ್ಮದಲ್ಲಿ ಎಲ್ಲಾ ದೇವ ದೇವತೆಗಳಿಗೂ ಪೂಜನೀಯ ಸ್ಥಾನವನ್ನು ನೀಡಿ ಗೌರವಿಸಲಾಗುತ್ತದೆ. ಕೋಟಿ ದೇವತೆಗಳು ಹಿಂದೂ ಧರ್ಮದಲ್ಲಿದ್ದರೂ ಹೆಚ್ಚು ಪ್ರಾಮುಖ್ಯತೆ ಪಡೆಯುವವನು ವಾಯುಪುತ್ರ ಆಂಜನೇಯ. ಬುದ್ಧಿ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮೊದಲು ನೆನೆಯುವಂತಹ ದೇವನು ಇವನೇ. ನಂಬಿಕೆಯ ಪ್ರಕಾರ ಈತನನ್ನು ಭಜಿಸುವುದರಿಂದ ಗ್ರಹದೋಷಗಳೂ ಸೇರಿದಂತೆ ಎಲ್ಲಾ ವಿಧದ ದುಷ್ಟ ಪ್ರಭಾವಗಳೂ ನಿರ್ಮೂಲನೆಗೊಳ್ಳುತ್ತವೆ ಎನ್ನಲಾಗುತ್ತದೆ.
 ‌                                                                                    *ಆಂಜನೇಯನ ವ್ಯಕ್ತಿತ್ವ*

ಪುರಾಣ ಕಥೆಗಳಲ್ಲಿ ಹನುಮಂತನು ದೇವರ ಅವತಾರ ಹಾಗೂ ಪವಾಡದ ವ್ಯಕ್ತಿತ್ವವುಳ್ಳವನಾದರೂ, ಹನುಮಂತನು ಜೀವನವನ್ನು ಗಮನಿಸಿದಾಗ ಕಂಡುಬರುವ ಅಂಶವೆಂದರೆ ಆಂಜನೇಯನ ವ್ಯವಸ್ಥಾಪಕತೆ, ತನ್ನ ಉದ್ದೇಶಗಳನ್ನು ಹೇಗೆ ಪೂರೈಸಬೇಕೆಂದು ತಿಳಿದಿಲ್ಲವಾದರೂ ಮಾನವ ಸಂಪನ್ಮೂಲಗಳನ್ನು ಹೇಗೆ ಬಳಸಬೇಕೆಂದು ಆಂಜನೇಯನಿಗೆ ತಿಳಿದಿತ್ತು. ಈ ರೀತಿಯಲ್ಲಿ ಆಂಜನೇಯನ ರೀತಿ-ನೀತಿಗಳು ಇಂದಿನ ವಾಸ್ತವ ಬದುಕಿಗೆ ಹತ್ತಿರವಾಗುತ್ತವೆ.
 ‌                                                                                                                   *ಜೀವನ ಪಾಠ ಕಲಿಸುವ ಪುರಾಣಗಳು*

ಹಿಂದೂ ಪುರಾಣಗಳು ಬರೀ ಕಥೆಯಲ್ಲ, ಅವು ಜೀವನ ಆದರ್ಶ ಹಾಗೂ ಜೀವನ ಪಾಠವನ್ನು ಕಲಿಸಿಕೊಡುವಂತಹ ಗ್ರಂಥಗಳು. ಮ್ಯಾನೇಜ್‌ಮೆಂಟ್‌ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕರು ಇಂದೂ ಕೂಡಾ ಮಹಾಬಲಿಯ ಸ್ವತಃ ನಿರ್ವಹಣಾ ಗುಣಗಳ ಬಗ್ಗೆ ಹಾಗೂ ರಾಮಚರಿತ ಮಾನಸದಲ್ಲಿರುವ ಉಲ್ಲೇಖಗಳ ಕುರಿತು ಉದಾಹರಣೆಯನ್ನು ನೀಡುತ್ತಾರೆ. ಈ ರೀತಿಯಾಗಿಯೇ ಪುರಾಣಗಳು ಬರಿಯ ಪೌರಾಣಿಕ ಕಥೆಗಳಾಗಿರದೆ, ಬದುಕನ್ನು ನಿರ್ವಹಿಸುವ ಕುರಿತೂ ಮಾರ್ಗದರ್ಶನ ನೀಡುತ್ತದೆ.

*ಗುಣಗಳು*

ಪೌರಾಣಿಕ ಕಥೆಗಳಲ್ಲಿ ಕಂಡುಬರುವಂತಹ ಕೆಲವು ಪಾತ್ರಗಳು ಅತ್ಯಂತ ಶಕ್ತಿಶಾಲಿಯಾದವುಗಳು, ತಮ್ಮ ಬಲದ ಮುಂದೆ ಯಾರೂ ನಿಲ್ಲಲು ಸಾಧ್ಯವಿಲ್ಲವೆಂದು ತಿಳಿದಿದ್ದರೂ, ತಮ್ಮ ಶಕ್ತಿಪ್ರದರ್ಶನವನ್ನು ಮಾಡದೇ ಬಲಕ್ಕಿಂತ ಹೆಚ್ಚಾಗಿ ಬುದ್ಧಿವಂತಿಕೆಯನ್ನು ಬಳಸಿದ ಅನೇಕ ಉದಾಹರಣೆಗಳಿವೆ. ಎಲ್ಲಿ ಬಾಗಬೇಕು, ಎಲ್ಲಿ ಸಮರ್ಥವಾಗಿ ಕೆಲಸ ಮಾಡಬೇಕು ಎನ್ನುವುದನ್ನು ಅರಿತು ಮುಂದೆ ಹೆಜ್ಜೆ ಇಟ್ಟವರು. ಆದರೆ ಇಂದು ತಾಳ್ಮೆಯನ್ನು ತೆಗೆದುಕೊಳ್ಳದೇ ಬುದ್ಧಿಯ ಬದಲಾಗಿ ಶಕ್ತಿ ಪ್ರದರ್ಶಿಸುತ್ತಾರೆ. ಹನುಮನನ್ನು ದೇವರಾಗಿ ಪರಿಗಣಿಸಿ ಆರಾಧಿಸುವುದರ ಮೂಲಕ ಹನುಮನ ಜೀವನವನ್ನು ಅರಿತುಕೊಂಡು, ಅವನ ಗುಣಗಳನ್ನು ಸಹ ಕಲಿಯುವುದು ಒಳ್ಳೆಯದು.

 ‌                                                                      *ಗುರಿಯನ್ನು ತಲುಪುವವರೆಗೂ ವಿಶ್ರಾಂತಿ ತೆಗೆದುಕೊಳ್ಳದಿರಿ*

ರಾಮಾಯಣದ ಕಥೆಯ ಪ್ರಕಾರ , ತನ್ನ ಶಕ್ತಿಯನ್ನು ಅರಿತುಕೊಂಡ ಹನುಮಂತನು ಸಮುದ್ರವನ್ನು ದಾಟಿ ಸೀತಾ ಮಾತೆಯನ್ನು ಹುಡುಕಲು ಸಿದ್ಧನಾಗುತ್ತಾನೆ. ಅವನು ಸಾಗುವಂತಹ ಹಾದಿಯಲ್ಲಿ ಅನೇಕ ಸಮಸ್ಯೆಗಳು ಎದುರಾದವು, ಎಲ್ಲಿ ತನ್ನ ಬಲವನ್ನು ಪ್ರದರ್ಶಿಸಬೇಕಾಗಿತ್ತೋ ಅಲ್ಲಿ ತನ್ನ ಬಲವನ್ನು ಪ್ರದರ್ಶಿಸಿದ, ಎಲ್ಲಿ ತನ್ನ ಬುದ್ಧಿಯನ್ನು ಪ್ರದರ್ಶಿಸಬೇಕಾಗಿತ್ತೋ ಅಲ್ಲಿ ಬುದ್ಧಿಯನ್ನು ಪ್ರದರ್ಶಿಸಿದ, ಸೀತಾಮಾತೆಯನ್ನು ನೋಡುವವರೆಗೂ ಸುಮ್ಮನೆ ಕುಳಿತಿರಲಿಲ್ಲ ಹನುಮ. ಹೀಗೆ ಜೀವನದಲ್ಲಿ ಕಷ್ಟಗಳು ಎದುರಾದರೂ, ಆ ಅಡೆತಡೆಗಳನ್ನು ಬುದ್ಧಿಯನ್ನು ಬಳಸಿ ನಿವಾರಿಸಿಕೊಂಡು ಮುನ್ನಡೆದು ಸೇರಬೇಕಾದ ಗುರಿಯನ್ನು ತಲುಪಬೇಕೆನ್ನುವುದು ಈ ಪ್ರಸಂಗದ ಒಳಾರ್ಥ.
         ‌                                                                                *ಸಂದರ್ಭ ಬಂದಾಗ ತಲೆಬಾಗಿ*

ಹನುಮನು ಸಮುದ್ರಲಂಘನ ಮಾಡುವಾಗ ಹನುಮಂತನ ಶಕ್ತಿಯನ್ನು ಪರೀಕ್ಷಿಸಲು ಸುರಾಸಾ ಎಂಬ ರಾಕ್ಷಸಿಯು ಎದುರಾಗುತ್ತಾಳೆ. ಹನುಮಂತನಿಗೆ 'ನೀನು ಧೀರನಾಗಿದ್ದರೆ ನನ್ನ ಬಾಯಿಯನ್ನು ಪ್ರವೇಶಿಸಿ ಹೊರಗೆ ಬರಬೇಕು' ಎಂದು ಹೇಳುತ್ತಾಳೆ. ಹನುಮಂತನು ಈಗ ಸಮಯವಿಲ್ಲವೆಂದರೂ, ಹಿಂತಿರುಗಿ ಬರುವಾಗ ಬಾಯಿಯನ್ನು ಪ್ರವೇಶಿಸುತ್ತೇನೆ ಎಂದರೂ ಕೇಳದಿದ್ದಾಗ, ಹನುಮಂತನು ದೊಡ್ಡದಾಗುತ್ತಾ ಹೋಗುತ್ತಾನೆ. ಅವನಂತೆ ಸುರಾಸಾ ಕೂಡಾ ಬಾಯಿಯನ್ನು ದೊಡ್ಡದಾಗಿಸುತ್ತಾಳೆ. ಸುರಸೆ ದೊಡ್ಡ ಬಾಯಿ ಹೊಂದಿದ್ದಾಗಲೇ ಹನುಮಂತನು ಶರೀರವನ್ನು ಕಿರಿದಾಗಿಸಿ ಬಾಯಿಯಿಂದ ಹೊರಬಂದನು. ಹನುಮಂತನ ಬುದ್ಧಿವಂತಿಕೆಗೆ ಬೆರಗಾದ ಸುರಸೆಯು ಸೀತೆಯನ್ನು ನೋಡುವ ಶಕ್ತಿ ನಿನಗಿದೆ, ಜಯವಾಗಲಿ ಎಂದು ಹಾರೈಸಿದಳು. ಹೀಗೆ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ ಹನುಮಂತನು ನೀವು ಸಾಗುವ ಹಾದಿಯಲ್ಲಿ ನೀವು ಯಾರಿಗಾದರೂ ತಲೆಬಾಗಬೇಕಾಗಿ ಬಂದರೂ ಅದು ನಿಮ್ಮ ಸೋಲೆಂದು ತಿಳಿದುಕೊಳ್ಳದೇ, ಗುರಿಯತ್ತ ಮುನ್ನುಗ್ಗಬೇಕು ಎನ್ನುವುದಾಗಿ ತಿಳಿಸಿಕೊಡುತ್ತಾನೆ.
 ‌                                                                                                                                                       *ಅಗತ್ಯವಿದ್ದಾಗ ಶಕ್ತಿ ಪ್ರದರ್ಶಿಸಿ*

ಹನುಮಂತನು ಲಂಕೆಯನ್ನು ಪ್ರವೇಶಿಸಿದಾಗ ಕೋಟೆಯನ್ನು ಕಾಯುವ ಲಂಕಿಣಿ ಎಂಬ ಲಂಕಾಧಿದೇವತೆ ತಡೆಯುತ್ತಾಳೆ. ಹನುಮಂತನು ವಿನಯದಿಂದ ' ನಾನು ಲಂಕೆಯನ್ನು ನೋಡಲು ಬಂದಿದ್ದೇನೆ, ನನ್ನನ್ನು ಒಳಗೆ ಹೋಗಲು ಬಿಡು' ಎಂದು ಹೇಳಿದರೂ ಸಿಟ್ಟಿನಿಂದ ಹನುಮಂತನನ್ನು ತಡೆಯುತ್ತಾಳೆ. ಲಂಕಿಣಿ ಹನುಮಂತನಿಗೆ ಒಂದು ಪೆಟ್ಟು ಕೊಟ್ಟಾಗ ಹನುಮಂತನಿಗೆ ಕೋಪ ಬಂದು ಅವಳ ತಲೆಗೆ ಗುದ್ದುತ್ತಾನೆ. ಆಗ ಲಂಕಿಣಿಗೆ ಬ್ರಹ್ಮನು ಕೊಟ್ಟಿದ್ದ ಶಾಪದ ನೆನಪಾಗಿ, 'ನೀನು ವಾನರ ಶ್ರೇಷ್ಠನೆಂದೂ, ಕೋಟೆಯನ್ನು ಪ್ರವೇಶಿಸಬಹುದೆಂದೂ' ಹನುಮಂತನನ್ನು ಕ್ಷಮೆ ಕೇಳುತ್ತಾಳೆ. ಹೀಗೆ ಹನುಮಂತನ ಬಲಪ್ರಯೋಗ ಮಾಡಬೇಕಾದಾಗ ಮಾತ್ರ ತನ್ನ ಬಲವನ್ನು ಪ್ರದರ್ಶಿಸುತ್ತಾನೆ. ಈ ಮೂಲಕ ಸಂದರ್ಭವನ್ನು ಹೇಗೆ ನಿಭಾಯಿಸಬೇಕೆಂದೂ ತಿಳಿಸಿಕೊಡುತ್ತಾನೆ.

No comments:

Post a Comment