ಇಂದು ಸಂಕಷ್ಟ ಹರ ಚತುರ್ಥಿ ವಿಶೇಷ ಆಲಂಕಾರಿಕ ಗಣೇಶ ದರ್ಶನ
|| ಮಾನವನ ದೇಹ ಮತ್ತು ಆತ್ಮ ||
ಒಬ್ಬ ಶಿಷ್ಯ ತನ್ನ ಗುರುವನ್ನು ಕೇಳಿದ ಪ್ರಶ್ನೆ ಹೀಗಿತ್ತು.
ಶಿಷ್ಯ :- ಗುರುಗಳೇ, ನಮ್ಮ ದೇಹ ನಶ್ವರ ಎಂಬುದು ತಿಳಿದಿದೆ, ಹಾಗಿದ್ದಲ್ಲಿ ದೇಹದೊಡನೆ ಇರುವ ಆತ್ಮಕ್ಕೆ ಮರಣವಿಲ್ಲ ಎಂಬುದು ಸರಿಯೇ, ಮತ್ತು ಆತ್ಮವೂ ಸಹಾ ದೇಹದೊಂದಿಗೆ ಮರಣ ಹೊಂದ ಬೇಕಲ್ಲವೇ...?
ಗುರುಗಳು :- ದೇಹ ಮತ್ತು ಆತ್ಮ ಎಂಬುದು ಒಟ್ಟಿಗೆ ಇದ್ದರೂ ಅವುಗಳು ಬೇರೆ, ಬೇರೆಯೇ. ಅದು ಹೇಗೆಂಬುದನ್ನು ನೋಡೋಣ.
1. ಗೋವು ನೀಡುವ ಹಾಲನ್ನು ನಾವು ಕೇವಲ ಒಂದು ದಿನ ಮಾತ್ರ ಕೆಡದೆ, ಹಾಳಾಗದಂತೆ ಕಾಪಾಡಬಹುದು.
2. ಅದಕ್ಕೆ ಸ್ವಲ್ಪ ಹುಳಿ ಮೊಸರು ಸೇರಿಸಿದಾಗ ಅದು ಮೊಸರಾಗಿ ಮತ್ತೊಂದು ದಿನ ಕಾಪಾಡ ಬಹುದು.
3. ಅದೇ ಮೊಸರನ್ನು ಕಡೆದು ಬೆಣ್ಣೆಯನ್ನು ತೆಗೆದಾಗ, ಬೆಣ್ಣೆಯು ಹಾಳಾಗದಂತೆ ಮತ್ತಷ್ಟು ದಿನ ಕಾಪಾಡ ಬಹುದು.
4. ಕೆಲವು ದಿನಗಳ ನಂತರ ಆ ಬೆಣ್ಣೆ ಸಹಾ ಕೆಟ್ಟು ಹಾಳಾಗುವುದು ಸಹಜ. ಆದರೆ, ಆ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿದಾಗ ಬಹಳಷ್ಟು ದಿನ ಕೆಡದಂತೆ ಕಾಪಾಡ ಬಹುದು.
ಅಂದರೆ ಹಾಲಿನಲ್ಲಿ ಇರುವ ತುಪ್ಪವು ಅಗೋಚರ ಪದಾರ್ಥ.
ತುಪ್ಪವು ಹಾಲಿನಲ್ಲಿನ ಒಂದು ಅಂಶವಾದರೂ, ಹಾಲಿನೊಂದಿಗೆ ಇದ್ದಾಗ ಹೆಚ್ಚು ದಿನ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ.
ಅದೇ ಹಾಲನ್ನು ಮೊಸರಾಗಿಸಿ,ಬೆಣ್ಣೆಯನ್ನು ತೆಗೆದು ತುಪ್ಪ ಮಾಡಿದಾಗ ಮಾತ್ರ ದೀರ್ಘಕಾಲ ಕಾಪಾಡಿ ಉಪಯೋಗಿಸಲು ಯೋಗ್ಯ.
ಹಾಗಾಗಿ ಹಾಲಿನಲ್ಲಿ ಅಡಗಿರುವ ತುಪ್ಪವು ನಮ್ಮ ಕಣ್ಣಿಗೆ ಕಾಣದ ವಸ್ತು ಅದು ಆತ್ಮವಿದ್ದಂತೆ, ಹಾಲು ದೇಹವಿದ್ದಂತೆ. ಹಾಲು ತಾನು ಹಾಲಿನ ಸ್ವರೂಪದಲ್ಲೇ ಇದ್ದಾಗ ಅದರಲ್ಲಿನ ತುಪ್ಪದ ಅಂಶ ಸಹಾ ಬೇಗನೆ ಹಾಳಾಗುವುದು ಸಹಜ. ಅದಕ್ಕೆ ಮತ್ತೊಂದು ತುಪ್ಪದ ರೂಪ ಕೊಟ್ಟಲ್ಲಿ ಅದರ ಬಾಳಿಕೆ ಅಧಿಕ.
ನಾವು ಭಗವಂತನ್ನು ಕುರಿತು ಪಠಿಸುವುದು, ಪ್ರಾರ್ಥಿಸುವುದು, ಆಚರಿಸುವುದು ನಮ್ಮ 'ದೇಹದ' ಭಾಗಗಳಾದ "ಬಾಯಿ" ಹಾಗೂ "ಕೈ"ಗಳ ಮುಖೇನವಾದರೂ ಸ್ಮರಣೆ ಮಾತ್ರ ಅಂತರಂಗದ ಆತ್ಮದಿಂದ ಮಾತ್ರ.
ಹೇಗೆ ಹಾಲಿನಲ್ಲಿ ಅಡಗಿರುವ ಅಗೋಚರ ತುಪ್ಪ ಹಾಲಿನಿಂದ ಬೇರ್ಪಡಿಸಿಕೊಂಡು, ಹೊಸ ರೂಪ ತಾಳಿ ಹೆಚ್ಚು ಸಮಯ ಉಳಿಯತ್ತದೆ. ಅದೇರೀತಿಯಲ್ಲಿ, ಆತ್ಮವೂ ಈ ನಶ್ವರ ದೇಹ ಮರಣಹೊಂದಿದಾಗ ಆತ್ಮವು ಹಾಲಿನಿಂದ ಬೇರ್ಪಟ್ಟ ತುಪ್ಪದಂತೆ ಬೇರ್ಪಟ್ಟು ಹೊಸರೂಪ ತಾಳಿ ದೀರ್ಘ ಸಮಯ ತನ್ನ ಅಸ್ತಿತ್ವವನ್ನು ಕಾಯ್ದುಕೊಳ್ಳುತ್ತದೆ.
ಇದೆಲ್ಲವನ್ನೂ ಮೀರಿ ಆತ್ಮವು ಭಗವಂತನಲ್ಲಿ ಐಕ್ಯವಾದಾಗ, ಅದುವೇ ಆತ್ಮಕ್ಕೆ ದೊರಕುವ ಮುಕ್ತಿ, ಆತ್ಮದ ಅಂತ್ಯ. ಅಲ್ಲಿಗೆ ದೇಹ ಮತ್ತು ಆತ್ಮ ಎರಡಕ್ಕೂ ಅಂತ್ಯ.
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
No comments:
Post a Comment