Monday, 16 December 2019

ಧುಂದುಕಾರಿ

ಮಾರ್ಗಶಿರ ಮಾಸ ಶುಕ್ಲಪಕ್ಷದ (ಐದನೇ ಏಕಾದಶಿ)ಯ #ಶ್ರೀಮದ್ಭಾಗವತದ_ಕಥೆ...

 ಹಿಂದಿನ ಕಥೆಯಲ್ಲಿ ಗೋವಿನ ಹೊಟ್ಟೆಯಿಂದ ಮನುಷ್ಯಾಕಾರದ ಜೀವಿ ಹುಟ್ಟಿದ ಗೋಕರ್ಣನ ಕಥೆಯನ್ನು ನೋಡಿದೆವು.  ಈಗ ಅದರ ಮುಂದಿನ ಕಥೆ ಪ್ರೇತಯೋನಿಯಿಂದ ಮುಕ್ತಿಯನ್ನು ಒದಗಿಸುವ ಕಥೆ ನೋಡೋಣ... 

     ಶೌನಕರೇ ತಂದೆಯು ಕಾಡಿಗೆ ಹೋದ ಮೇಲೆ ಧುಂಧುಕಾರಿಯು ಒಂದು ದಿನ ತನ್ನ ತಾಯಿಗೆ ತುಂಬಾ ಹೊಡೆದು ಕೇಳಿದನು. "ಧನವನ್ನು ಎಲ್ಲಿ ಇಟ್ಟಿರುವೆ ಹೇಳು.  ಇಲ್ಲದಿದ್ದರೇ ಉರಿಯುತ್ತಿರುವ ಕಟ್ಟಿಗೆಯಿಂದ ನಿನ್ನನ್ನು ಸಾಯಿಸಿಬಿಡುವೆನು" ಎಂದು.

ಅವನು ಹೀಗೆ ಗದರಿಸಲು ಹೆದರಿ, ಮಗನ ಉಪದ್ರವದಿಂದ ದುಃಖಿತಳಾಗಿ ಅವಳು ರಾತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು. 
ಯೋಗ ನಿಷ್ಠ ಗೋಕರ್ಣನು ತೀರ್ಥಯಾತ್ರೆಗೆ ಹೊರಟು ಹೋದನು.   ಅವನಿಗೆ ಈ ಘಟನೆಯಿಂದ ದುಃಖವಾಗಲೀ, ಸುಖವಾಗಲೀ ಆಗಲಿಲ್ಲ.   ಎಕೆಂದರೆ ಅವನಿಗೆ ಯಾರೂ ಮಿತ್ರರು, ಶತ್ರುಗಳು ಇರಲಿಲ್ಲ. 

     ಧುಂದುಕಾರಿಯು ವೇಶ್ಯೆಯರೊಂದಿಗೆ ಮನೆಯಲ್ಲಿಯೇ ಇರತೊಡಗಿದನು.   ಅವರಿಗಾಗಿ ಭೋಗ-ಸಾಮಗ್ರಿಗಳನ್ನು ಒದಗಿಸುವ ಚಿಂತೆಯಿಂದ ಅವನ ಬುದ್ಧಿಯು ನಷ್ಟವಾಯಿತು. ‌ ಅವನು ಅನೇಕ ರೀತಿಯ ಕ್ರೂರಕರ್ಮಗಳನ್ನು ಮಾಡತೊಡಗಿದ.   ಇವನ ಬಳಿಯಲ್ಲಿ ಅನೇಕ ಒಡವೆಗಳನ್ನು ಬೇಡಿದರು. ಅವನಾದರೋ ಕಾಮದಿಂದ ಕುರುಡನಾಗಿ ಹೋಗಿದ್ದನು.   ಸಾವಿನ ನೆನಪೇ ಅವನಿಗಿರಲಿಲ್ಲ.  ಸರಿ, ಒಡವೆಗಳನ್ನು ಒದಗಿಸಲು ಅವನು ಮನೆಯಿಂದ ಹೊರಬಿದ್ದನು.   ಅವನು ಅಲ್ಲಿ‌-ಇಲ್ಲಿ ಹೇರಳ ಧನವನ್ನು ಕದ್ದು ಮನೆಗೆ ಬಂದು, ಅವರಿಗೆ ಸುಂದರ ವಸ್ತ್ರ-ಒಡವೆಗಳನ್ನು ತಂದು ಕೊಟ್ಟನು.   ಕಳ್ಳತನದ ಅನೇಕ ವಸ್ತುಗಳನ್ನು ನೋಡಿ, ಆ ಸ್ತ್ರೀಯರು ರಾತ್ರಿ ವಿಚಾರ ಮಾಡಿದರು.   "ಇವನು ಪ್ರತಿದಿನ ಕಳ್ಳತನ ಮಾಡುತ್ತಾನೆ.   ಒಂದಲ್ಲ ಒಂದು ದಿನ ಖಂಡಿತವಾಗಿ ರಾಜನು ಇವನನ್ನು ಹಿಡಿದುಕೊಂಡು ಹೋದರೇ?  ಆಗ ರಾಜನು ಇವೆಲ್ಲ ಸಂಪತ್ತನ್ನು ಕಸಿದುಕೊಂಡು ಇವನಿಗೆ ಪ್ರಾಣದಂಡನೆ ವಿಧಿಸುವುದು ನಿಶ್ಚಿತ.   ಒಂದಲ್ಲ ಒಂದುದಿನ ಇವನಿಗೆ ಸಾಯುವುದೇ ಇದೆಯಾದರೇ ಧನದ ರಕ್ಷಣೆಗಾಗಿ ಗುಪ್ತವಾಗಿ ಇವನನ್ನು ನಾವೆ ಯಾಕೇ ಕೊಲ್ಲಬಾರದು? ಇವನನ್ನು ಕೊಂದು ನಾವು ಇವನ ಸಂಪತ್ತನ್ನೆಲ್ಲ ಎತ್ತಿಕೊಂಡು ಎಲ್ಲಾದರೂ ದೂರ ಹೊರಟು ಹೋಗೋಣ". ಹೀಗೆ ನಿಶ್ಚಯಿಸಿ ಅವರು ಮಲಗಿರುವ ಧುಂದುಕಾರಿಯನ್ನು ಹಗ್ಗದಿಂದ ಕಟ್ಟಿ, ಕತ್ತಿಗೆ ಉರುಳನ್ನು ಬಿಗಿದು ಸಾಯಿಸಲು ಪ್ರಯತ್ನಿಸಿದರು.  ಇದರಿಂದ ಅವನು ಬೇಗನೇ ಸಾಯದಿದ್ದಾಗ ಅವರಿಗೆ ಭಾರಿ ಚಿಂತೆಯಾಯಿತು.   ಆಗ ಅವರು ಅವನ ಬಾಯಲ್ಲಿ ಉರಿಯುವ ಕೆಂಡವನ್ನು ಸುರಿದರು.   ಇದರಿಂದ ಅವನು ಬೆಂಕಿಯ ಜ್ವಾಲೆಯಿಂದ ತುಂಬಾ ನರಳುತ್ತಾ ಸತ್ತು ಹೋದನು.   ಅವರು ಇವನ ಶರೀರವನ್ನು ಒಂದು ಹೊಂಡದಲ್ಲಿ ಹೂತುಬಿಟ್ಟರು.   ಅವರ ಈ ಕೃತ್ಯವು ಯಾರಿಗೂ ತಿಳಿಯದೇ ಹೋಯಿತು.  

     ಜನರು ಕೇಳಿದಾಗ "ನಮ್ಮ ಪ್ರಿಯತಮನು ಹಣದ ಲೋಭದಿಂದ ಈ ಬಾರಿ ಎಲ್ಲೋ ಬಹುದೂರ ಹೋಗಿರಬೇಕು.  ಇದೇ ವರ್ಷಾಂತ್ಯದಲ್ಲಿ ಬರುವನು" ಎಂದು ಹೇಳುತ್ತಿದ್ದರು. 

     ಆ ಕುಲಟೇಯರು ಧುಂದುಕಾರಿಯ ಸಂಪತ್ತೆಲ್ಲವನ್ನು ದೋಚಿಕೊಂಡು ಪರಾರಿಯಾದರು.   ಅವರಿಗೆ ಇಂತಹ ವಿಟರು ಎಷ್ಟಿದ್ದರೋ ಏನೋ ಯಾರು ಬಲ್ಲರು? ಧುಂದುಕಾರಿಯು ತನ್ನ ಕುಕರ್ಮದಿಂದಾಗಿ ಭಯಂಕರ ಪ್ರೇತ ಅದನು.   ಅವನು ಬಿರುಗಾಳಿಯಾಗಿ ಯಾವಾಗಲೂ ಹತ್ತು ದಿಕ್ಕುಗಳಲ್ಲಿ ಅಲೆಯುತ್ತಿದ್ದನು.   ಬಿಸಿಲು, ಛಳಿಯಿಂದಾಗಿ ಭಾರೀ ಕಷ್ಟಪಡುತ್ತಾ ಹಸಿವು ಬಾಯಾರಿಕೆಗಳಿಂದ ದುಃಖಿತನಾಗಿ "ಅಯ್ಯೋ ದೇವರೇ" ಎಂದು ಕೂಗುತ್ತಿದ್ದನು.   ಆದರೆ ಅವನಿಗೆ ಎಲ್ಲಿಯೂ, ಯಾವುದೇ ಆಸರೇ ದೊರೆಯಲಿಲ್ಲ.   ಕೆಲಕಾಲ ಕಳೆದ ಬಳಿಕ ಗೋಕರ್ಣನು ಧುಂದುಕಾರಿಯ ಮರಣ ಸಮಾಚಾರವನ್ನು ಕೇಳಿದನು.   ಆಗ ಅವನು ಅವನನ್ನು ಅನಾಥನೆಂದು ಗಯೆಯಲ್ಲಿ ಅವನ ಶ್ರಾದ್ಧವನ್ನು ಮಾಡಿದನು.   ಅವನು ಹೋದ ಎಲ್ಲ ತೀರ್ಥಗಳಲ್ಲಿಯೂ ಅವನ ಶ್ರಾದ್ಧವನ್ನು ಮಾಡುತ್ತಿದ್ದನು. 

     ಹೀಗೆ ತಿರುಗುತ್ತಾ ತಿರುಗುತ್ತಾ ಗೋಕರ್ಣನು ತನ್ನ ಊರಿಗೆ ಬಂದನು.  ರಾತ್ರಿಯಲ್ಲಿ ಬೇರೆಯವರ ಕಣ್ಣು ತಪ್ಪಿಸಿ ನೇರವಾಗಿ ತನ್ನ ಮನೆಯ ಅಂಗಳದಲ್ಲಿ ಮಲಗಲು ಬಂದನು.  ಅಲ್ಲಿ ತನ್ನ ತಮ್ಮನು ಮಲಗಿರುವುದನ್ನು ಕಂಡು ನಡುರಾತ್ರಿಯಲ್ಲಿ ಧುಂಧುಕಾರಿಯು ತನ್ನ ಭಾರೀ ವಿಕರಾಳ ರೂಪವನ್ನು ತೋರಿದನು.  ಅವನು ಕೆಲವೊಮ್ಮೆ ಆಡು, ಕೆಲವೊಮ್ಮೆ ಆನೆ, ಕೆಲವೊಮ್ಮೆ ಕೋಣನಾಗಿ ತೋರುತ್ತಿದ್ದನು.   ಈ ವಿಪರೀತ ಅವಸ್ಥೆಯನ್ನು ನೋಡಿ ಗೋಕರ್ಣನು ಇವನು ಯಾರೋ ದುರ್ಗತಿಯನ್ನು ಪಡೆದ ಜೀವಿಯಾಗಿದ್ದಾನೆ ಎಂದು ನಿಶ್ಚಯಿಸಿ ಅವನು ಅವನಲ್ಲಿ ಧೈರ್ಯದಿಂದ ಕೇಳಿದನು.

ಗೋಕರ್ಣನು:- "'ನೀನು ಯಾರು, ರಾತ್ರಿಯಲ್ಲಿ ಇಂತಹ ಭಯಾನಕ ರೂಪವನ್ನು ಏಕೆ ತೋರುತ್ತಿರುವೆ? ಇಂತಹ ಸ್ತೀತಿಯು ನಿನಗೆ ಹೇಗೆ ಉಂಟಾಯಿತು? ನೀನು ಪ್ರೆತವೋ, ಪಿಶಾಚಿಯೋ ಅಥವಾ ಯಾವುದಾದರೂ ರಾಕ್ಷಸನೋ?" ಎಂದು ಕೇಳಿದನು.

ಗೋಕರ್ಣನು ಹೀಗೆ ಕೇಳಿದಾಗ ಅವನು ಪದೇ ಪದೇ ಜೋರಾಗಿ ಅಳತೊಡಗಿದನು.  ಅವನಲ್ಲಿ ಮಾತನಾಡಲೂ ಶಕ್ತಿ ಇರಲಿಲ್ಲ. ಅದಕ್ಕಾಗಿ ಅವನು ಕೇವಲ ಸಂಕೇತ ಮಾತ್ರ ಮಾಡಿದನು.  ಆಗ ಗೋಕರ್ಣನು ಬೊಗಸೆಯಲ್ಲಿ ನೀರು ತುಂಬಿ, ಅದನ್ನು ಅಭಿಮಂತ್ರಿಸಿ ಅವನ ಮೇಲೆ ಪ್ರೋಕ್ಷಿಸಿನು.  ಇದರಿಂದ ಅವನ ಪಾಪಗಳು ಸ್ಚಲ್ಪ ಶಮನವಾಗಿ ಅವನು ಈ ರೀತಿ ಹೇಳತೊಡಗಿದನು.

ಪ್ರೇತವು:- "ನಾನು ನಿನ್ನ ಸಹೋದರನಾಗಿರುವೆನು.   ಧುಂಧುಕಾರಿಯೆಂದು ನನ್ನ ಹೆಸರು.   ನಾನು ನನ್ನದೇ ದೋಷಗಳಿಂದ ನನ್ನ ಬ್ರಾಹ್ಮಣತ್ವನನ್ನು ನಾಶಮಾಡಿಕೊಂಡೆ.   ನನ್ನ‌ ಕುಕರ್ಮಗಳು ಎಣಿಸಲಾರದಷ್ಟಿವೆ.   ನಾನು ಅಜ್ಞಾನದಲ್ಲಿ ತೊಳಲಾಡುತ್ತಿದ್ದೆ.   ಇದರಿಂದ ನಾನು ಜನರನ್ನು ತುಂಬಾ ಹಿಂಸಿಸಿದೆ.   ಕೊನೆಗೆ ಕುಲಟಿಯರಾದ ಸ್ತ್ರೀಯರು ನನ್ನನ್ನು ನರಳಾಡಿಸಿ ಕೊಂದುಬಿಟ್ಟರು.   ಇದರಿಂದ ಈಗ ಪ್ರೇತಯೋನಿ ಪಡೆದು ಈ ದುರ್ದಶೆಯನ್ನು ಅನುಭವಿಸುತ್ತಿದ್ದೇನೆ.   ಈಗ ದೈವವಶಾತ್ ಕರ್ಮಫಲವು ಉದಯಿಸಿದ್ದರಿಂದ ನಾನು ಕೇವಲ ಗಾಳಿಯನ್ನು ಕುಡಿಯುತ್ತಾ ಬದುಕುತ್ತಿದ್ದೇನೆ.   ಈಗ ಹೇಗಾದರೂ ಬೇಗನೇ ನನ್ನನ್ನು ಈ ಪ್ರೇತಯೋನಿಯಿಂದ ಬಿಡಿಸು" ಎಂದನು.

 ಗೋಕರ್ಣನು ದುಂದುಕಾರಿಯ ಎಲ್ಲ ಮಾತುಗಳನ್ನು ಕೇಳಿ ಅವನಲ್ಲಿ ಹೇಳಿದನು.

ಗೋಕರ್ಣನು:- "ಸಹೋದರ, ನಾನು ನಿನಗಾಗಿ ವಿಧಿಪೂರ್ವಕ ಗಯೆಯಲ್ಲಿ ಪಿಂಡದಾನ ಮಾಡಿದೆ.   ಆದರೂ ನೀನು ಪ್ರೇತಯೋನಿಯಿಂದ ಮುಕ್ತನಾಗಲಿಲ್ಲ ಏಕೆ ಎಂಬುದು ನನಗೆ ಆಶ್ಚರ್ಯವಾಗುತ್ತಿದೆ.   ಗಯಾ ಶ್ರಾದ್ಧದಿಂದಲೂ ನಿನ್ನ ಮುಕ್ತಿಯಾಗದಿದ್ದಾಗ ಇದಕ್ಕೆ ಬೇರೆ ಯಾವ ಉಪಾಯವೂ ಇಲ್ಲ.   ಸರಿ, ನೀನು ಎಲ್ಲಾ ಮಾತನ್ನು ಬಿಚ್ಚಿಹೇಳು, ಈಗ ನಾನು ಏನು ಮಾಡಬೇಕು?"

ಪ್ರೇತ:- "ನೂರಾರು ಗಯಾಶ್ರಾದ್ಧಗಳನ್ನು ಮಾಡಿದರೂ ನನ್ನ ಮುಕ್ತಿಯು ಆಗಲಾರದು.   ಈಗಲಾದರೂ ನೀನು ಇದಕ್ಕಾಗಿ ಬೇರೆ ಯಾವುದಾದರೂ ಉಪಾಯವನ್ನು ಯೋಚಿಸು". ಎಂದಿತು

  ಪ್ರೇತದ ಈ ಮಾತಮ್ನು ಕೇಳಿ ಗೋಕರ್ಣನಿಗೆ ಆಶ್ಚರ್ಯವಾಯಿತು.  ನೂರಾರು ಗಯಾ ಶ್ರಾದ್ಧದಿಂದಲೂ ನಿನ್ನ ಮುಕ್ತಿಯು ಆಗದಿದ್ದರೆ, ನಿನ್ನ ಮುಕ್ತಿಯು ಅಸಂಭವವೇಂದೇ ತೋರುತ್ತದೆ.    ಇರಲಿ, ಈಗ ನೀನು ನಿರ್ಭಯನಾಗಿ ನಿನ್ನ ಸ್ಥಾನದಲ್ಲಿ ಇರು. ನಾನು ವಿಚಾರ ಮಾಡಿ ನಿನ್ನ ಮುಕ್ತಿಗಾಗಿ ಯಾವುದಾದರೂ ಬೇರೆ ಉಪಾಯವನ್ನು ಮಾಡುವೆನು".

     ಗೋಕರ್ಣನ ಅಪ್ಪಣೆ ಪಡೆದು ಧುಂಧುಕಾರಿಯು ಅಲ್ಲಿಂದ ಹೊರಟು ತನ್ನ ಸ್ಥಾನಕ್ಕೆ ಹೋದನು.  ಇತ್ತ ಗೋಕರ್ಣನು ರಾತ್ರಿಯಿಡೀ ವಿಚಾರ ಮಾಡಿದರೂ ಅವನಿಗೆ ಯಾವ ಉಪಾಯವೂ ಹೊಳೆಯಲಿಲ್ಲ.   ಬೆಳಿಗ್ಗೆ ಅವನು ಬಂದಿರುವುದನ್ನು ಕಂಡು ಜನರು ಪ್ರೇಮದಿಂದ ಅವನನ್ನು ಭೇಟಿಯಾಗಲು ಬಂದರು.   ಆಗ ಗೋಕರ್ಣನು ರಾತ್ರಿಯಲ್ಲಿ ನಡೆದುದೆಲ್ಲವನ್ನು ಅವರಿಗೆ ತಿಳಿಸಿದನು.   ಅವರಲ್ಲಿದ್ದ ವಿದ್ವಂಸರು, ಯೋಗನಿಷ್ಠರೂ, ಜ್ಞಾನಿಗಳೂ, ವೇದಜ್ಞರೂ ಹೀಗೆ ಎಲ್ಲರೂ ಅನೇಕ ಶಾಸ್ತ್ರಗಳನ್ನು ತಿರುವಿ ಹಾಕಿದರು.   ಆದರೂ ಅವನ ಮುಕ್ತಿಯ ಉಪಾಯವು ಸಿಗಲಿಲ್ಲ.   ಕೊನೆಗೆ ಈ ವಿಷಯದಲ್ಲಿ ಭಗವಾನ್ ಭಾಸ್ಕರನು ಏನು ಆಜ್ಞೆಯನ್ನು ಕೊಡುವನೋ ಅದನ್ನೇ ಮಾಡುವುದೆಂದು ಎಲ್ಲರೂ ನಿಶ್ಚಯಿಸಿದರು.   ಗೋಕರ್ಣನು ತನ್ನ ತಪೊಬಲದಿಂದ ಸೂರ್ಯನ ಗತಿಯನ್ನು ತಡೆದುಬಿಟ್ಟನು.   ಅವನು ಸ್ತುತಿಸಿದನು. "ಭಗವಂತಾ ನೀನು ಜಗತ್ಸಾಕ್ಷಿಯಾಗಿರುವೆ.  ನಾನು ನಿನಗೆ ನಮಸ್ಕರಿಸುತ್ತೇನೆ. ನೀನು ದಯಾಮಾಡಿ ಧುಂಧುಕಾರಿಯ ಮುಕ್ತಿಯ ಸಾಧನೆಯನ್ನು ನನಗೆ ತಿಳಿಸು" ಎಂದು ಪ್ರಾರ್ಥಿಸಿದನು.

     ಗೋಕರ್ಣನ ಈ ಪ್ರಾರ್ಥನೆಯನ್ನು ಕೇಳಿ ಸೂರ್ಯನಾರಾಯನು ಸ್ಪಷ್ಟವಾಗಿ ಹೀಗೆ ಹೇಳಿದನು.
"ಶ್ರೀಮದ್ಭಾಗವತದಿಂದ ಮುಕ್ತಿಯಾಗಬಲ್ಲದು. ಅದರಿಂದ ನೀನು ಅದನ್ನು ಸಪ್ತಾಹ ವಿಧಿಯಿಂದ ಪಾರಾಯಣೆ ಮಾಡು" ಎಂದನು ಭಗವಾನ್ ಸೂರ್ಯದೇವನು.

      ಸೂರ್ಯನ ಈ ಧರ್ಮಮಯ ವಚನವನ್ನು ಎಲ್ಲರೂ ಕೇಳಿದರು.   ಆಗ‌ ಎಲ್ಲರೂ "ಈ ಸಾಧನೆಯು ತುಂಬಾ ಸರಳವಾಗಿದೆ.  ಇದನ್ನು ಪ್ರಯತ್ನ ಪೂರ್ವಕ ಮಾಡು" ಎಂದು ಹೇಳಿದರು. ಆದ್ದರಿಂದ ಗೋಕರ್ಣನು ಹಾಗೆಯೇ ನಿಶ್ಚಯಿಸಿ ಕಥೆಯನ್ನು ಹೇಳಲು ಸಿದ್ಧನಾದನು. 

     ಅನೆಕ ಊರುಗಳಿಂದ ಗ್ರಾಮಗಳಿಂದ ಅನೇಕ ಜನರು ಕಥೆ ಕೇಳಲು ಬಂದರು.  ಬಹಳಷ್ಟು ಕುಂಟರೂ, ಕುರುಡರು, ಮುದುಕರೂ, ಮಂದಬುದ್ಧಿಯವರೂ ಹೀಗೆ ತಮ್ಮ ಪಾಪಗಳನ್ನು ಕಳೆದುಕೊಳ್ಳುವ ಉದ್ದೇಶದಿಂದ ಅಲ್ಲಿ ಬಂದು ಸೇರಿದರು.  ಹೀಗೆ ಅಲ್ಲಿ ನೆರೆದ ಜನಸಂದಣಿಯನ್ನು ನೋಡಿ ದೇವತೆಗಳಿಗೂ ಆಶ್ಚರ್ಯವಾಯಿತು.  ಗೋಕರ್ಣನು ವ್ಯಾಸಪೀಠದಲ್ಲಿ (ವೇದಿಕೆಯಲ್ಲಿ) ಕುಳಿತು ಕಥೆ ಹೇಳಲು ತೊಡಗಿದಾಗ ಧುಂಧುಕಾರಿಯ ಪ್ರೇತವು ಅಲ್ಲಿಗೆ ಬಂದು ಕುಳಿತುಕೊಳ್ಳಲು, ಅಲ್ಲಿ-ಇಲ್ಲಿ ಜಾಗ ಹುಡುಕತೊಡಗಿತು.  ಅಷ್ಟರಲ್ಲಿ ಏಳು ಗಂಟುಗಳಿದ್ದ ಒಂದು ನೇರವಾದ ಬಿದರಿನ ಮೇಲೆ ಅವನ ದೃಷ್ಟಿ ಬಿತ್ತು. ಅದರ ಕೆಳಗಿನ ರಂದ್ರದಲ್ಲಿ ಹೊಕ್ಕು, ಅದು ಕಥೆ ಕೇಳಲು ಕುಳಿತುಕೊಂಡಿತು.  ಗಾಳಿಯ ರೂಪದಿಂದ ಇದ್ದ ಕಾರಣ ಅದಕ್ಕೆ ಹೊರಗೆಲ್ಲೂ ಕುಳಿತುಕೊಳ್ಳಲಾರದೇ ಬಿದಿರಿನಲ್ಲಿ ಹೊಕ್ಕಿತು. 

     ಗೋಕರ್ಣನು ಒಬ್ಬ ಬ್ರಾಹ್ಮಣನನ್ನು ಮುಖ್ಯಶ್ರೋತೃವಾಗಿಸಿ, ಪ್ರಥಮಸ್ಕಂಧದಿಂದಲೇ ಸ್ಪಷ್ಟವಾಗಿ, ಮಧುರ ಸ್ವರದಿಂದ ಕಥೆ ಹೇಳಲು ಪ್ರಾರಂಭಿಸಿದನು.   ಸಾಯಂಕಾಲ ಅಂದಿನ ಕಥೆಯನ್ನು ಮುಗಿಸಿದಾಗ ಒಂದು ವಿಚಿತ್ರವಾದ ಸಂಗತಿ ನಡೆಯಿತು. ಅಲ್ಲಿ ಸಭೀಗರು ನೋಡು ನೋಡುತ್ತಿರುವಂತೆ ಆ ಬಿದಿರಿನ ಒಂದು ಗಂಟು ಫಟಾರ್ ಎಂದು ಶಬ್ದ ಮಾಡುತ್ತಾ ಒಡೆದುಹೋಯಿತು.  ಹೀಗೆ ಎರಡನೆಯ ಸಂಜೆ ಎರಡನೆಯ ಗಂಟು, ಮೂರನೆಯ ಸಂಜೆ ಮೂರನೆಯ ಗಂಟು ಒಡೆದುಹೋಯಿತು. 
ಈ ವಿಧವಾಗಿ ಏಳು ದಿನಗಳಲ್ಲಿ ಏಳೂ ಗಂಟುಗಳು ಒಡೆದು ಧುಂದುಕಾರಿಯು ಹನ್ನೆರಡೂ ಸ್ಕಂದಗಳನ್ನು ಕೇಳಿದ್ದರಿಂದ ಪವಿತ್ರನಾಗಿ, ಪ್ರೇತಯೋನಿಯಿಂದ ಮುಕ್ತನಾಗಿ, ದಿವ್ಯ ರೂಪವನ್ನು ಧರಿಸಿ ಎಲ್ಲರೆದುರಿಗೆ ಪ್ರಕಟನಾದನು.  ಅವನ ಶರೀರವು ಮೇಘದಂತೆ 
ಶ್ಯಾಮಲವಾಗಿದ್ದು, ಪೀತಾಂಬರ ತುಳಸೀಮಾಲೆಗಳಿಂದ ಸುಶೋಭಿತವಾಗಿತ್ತು.  ತಲೆಯ ಮೇಲೆ ಮನೋಹರವಾದ ಕಿರೀಟವಿದ್ದು, ಕಿವಿಗಳಲ್ಲಿ ಕಮನೀಯ ಕುಂಡಲಗಳು ಓಲಾಡುತ್ತಿದ್ದವು.  

      ಕೂಡಲೇ ಸಹೋದರನಾದ ಗೋಕರ್ಣನಿಗೆ ವಂದಿಸಿದ, 
ಧುಂಧುಕಾರಿಯು:- "ಸೋದರಾ, ನೀನು ಕೃಪೆಗೈದು ನನ್ನನ್ನು ಪ್ರೇತಯೊನಿಯ ದುಃಖದಿಂದ ಬಿಡಿಸಿದೆ.  ಈ ಪ್ರೇತಪೀಡೆಯನ್ನು ನಾಶಗೊಳಿಸುವಂತಹ ಶ್ರೀಮದ್ಭಾಗವತ ಕಥೆಯು ಧನ್ಯವಾಗಿದೆ.  ಇದರ ಸಪ್ತಾಹ ಪಾರಾಯಣವೂ ಧನ್ಯವಾಗಿದೆ.  ಸಪ್ತಾಹ ಶ್ರವಣದ ಯೋಗವು ಒದಗಿದಾಗ ಎಲ್ಲ ಪಾಪಗಳು ನಡುಗಿ ಈಗ ಈ ಭಾಗವತದ ಕಥೆಯು ಬೇಗನೇ ನಮ್ಮನ್ನು ಮುಗಿಸಿಬಿಟ್ಟಿತು ಎಂದು ಹೆದರಿ ಓಡಿ ಹೋಗುವವು.  ಈ ಸಪ್ತಾಹ ಶ್ರವಣವು ಮನ-ವಚನ ಕರ್ಮಗಳ ಮೂಲಕ ಮಾಡಿದ ಎಲ್ಲ ಪ್ರಕಾರದದ ಸಣ್ಣ-ದೊಡ್ಡ ಪಾಪಗಳನ್ನು ಭಸ್ಮವಾಗಿಸಿ ಬಿಡುತ್ತದೆ".
  
     ದುಂಧುಕಾರಿಯು ಇದೆಲ್ಲವನ್ನು ಹೇಳುತ್ತಿರುವಾಗ ಅವನಿಗಾಗಿ ವೈಕುಂಠವಾಸೀ ಪಾರ್ಷದರ ಸಹಿತ ಒಂದು ದಿವ್ಯವಾದ ವಿಮಾನವು ಇಳಿದು ಬಂತು.  ಎಲ್ಲೆಡೆ ಅದರ ಪ್ರಕಾಶ ಮಂಡಲಾಕಾರವಾಗಿ ಹರಡಿಕೊಂಡಿತು.  ಎಲ್ಲರೆದುರಿಗೆ ಧುಂಧುಕಾರಿಯು ಆ ವಿಮಾನವನ್ನು ಹತ್ತಿದನು.   ಆಗ ಆ ವಿಮಾನದಲ್ಲಿ ಬಂದಿರುವ ಪಾರ್ಷದರನ್ನು ನೋಡಿ ಗೋಕರ್ಣನು ಹೀಗೆಂದನು.

ಗೋಕರ್ಣನು:- "ಓ ಭಗವಂತನ ಪ್ರಿಯ ಪಾರ್ಷದರೇ, ಇಲ್ಲಿ ನಮ್ಮ ಅನೇಕ ಶುದ್ಧಹೃದಯ ಶ್ರೋತೃಗಳಿದ್ದಾರೆ.  ಅವರೆಲ್ಲರಿಗಾಗಿ ನೀವು ಒಟ್ಟಿಗೆ ಅನೇಕ ವಿಮಾಗಳನ್ನು ಏಕೆ ತರಲಿಲ್ಲ? ಇಲ್ಲಿ ಎಲ್ಲರೂ ಸಮಾನವಾಗಿ ಕಥೆ ಕೇಳಿದರು.  ಇದನ್ನು ನಾವು ನೋಡುತ್ತಿದ್ದೇವೆ. ಹಾಗಿರುವಾಗ ಫಲದಲ್ಲಿ ಈ ಪ್ರಕಾರದ ಭೆದ ಏಕಾಯಿತು?" ತಿಳಿಸಿರಿ.

ಪಾರ್ಷದರು;- "ಎಲೈ ಮಾನ್ಯವರ್ಯನೇ, ಈ ಫಲಭೇದದ ಕಾರಣ ಇದರ ಶ್ರವಣದ ಭೇದವೇ ಆಗಿದೆ. ಶ್ರವಣವಾದರೋ ಎಲ್ಲರೂ ಮಾಡಿದರು ಸರಿಯೇ.  ಆದರೆ ಇವನಂತೆ ಮನನ ಮಾಡಲಿಲ್ಲ.  ಇದರಿಂದ ಒಟ್ಟಿಗೆ ಭಜನೆ ಮಾಡಿದರೂ ಅದೆ ಫಲಕದಲ್ಲಿ ಭೇದ ಉಳಿಯಿತು.   ಈ ಪ್ರೇತವು ಏಳು ದಿನಗಳವರೆಗೆ ನಿರಾಹಾರವಿದ್ದು ಶ್ರವಣಿಸಿತು.  ಕೇಳಿದ ವಿಷಯವನ್ನು ಸ್ಥರಚಿತ್ತದಿಂದ ತುಂಬಾ ಮನನ-ನಿಧಿಧ್ಯಾಸನವನ್ನು ಮಾಡುತ್ತಿತ್ತು.   ಹೀಗೆಯೇ ಲಕ್ಷಕೊಡದೇ ಇರುವುದರಿಂದ ಶ್ರವಣವು, ಸಂದೇಹದಿಂದ ಮಂತ್ರವು, ಚಿತ್ತವು ಅತ್ತ-ಇತ್ತ ಹರಿದಾಡುವುದರಿಂದ ಜಪವು ಫಲಿಸುವುದಿಲ್ಲ. 
ಅಪಾತ್ರನಿಗೆ ನೀಡಿದ ಶ್ರಾದ್ಧಭೋಜನ, ಶ್ರೋತ್ರಿಯಲ್ಲದವನಿಗೆ ಕೊಟ್ಟ ದಾನ, ಆಚಾರಹಿನ ಕುಲ, ಇವೆಲ್ಲವೂ ನಾಶವಾಗಿ ಹೋಗುತ್ತದೆ.  ಮನದ ದೋಷಗಳ ಮೇಲೆ ವಿಜಯ, ಕಥೆಯಲ್ಲಿ ಏಕಾಗ್ರಚಿತ್ತ ಮುಂತಾದ ನಿಯನಗಳನ್ನು ಪಾಲಿಸಿದರೇ ಶ್ರವಣದ ನಿಜವಾದ ಫಲಸಿಗುತ್ತದೆ‌.  ಈ ಶ್ರೊತೃಗಳು ಪುನಃ ಈ ಶ್ರೀಮದ್ಭಾಗವತದ ಕಥೆಯನ್ನು ಕೇಳಿದರೇ ನಿಶ್ಚಯವಾಗಿಯೂ ಇವರಿಗೆಲ್ಲ ವೈಕುಂಠ ಪ್ರಾಪ್ತವಾದೀತು.  ಎಲೈ ಗೋಕರ್ಣನೇ ನಿನಗಾದರೋ ಭಗವಂತನು ಸ್ವತಃ ಬಂದು ಗೋಲೋದ್ಧಾಮಕ್ಕೆ ಕೊಂಡು ಹೋಗುವನು".

   ಹೀಗೆ ಹೇಳಿ ಆ ಪಾರ್ಷದರೆಲ್ಲರೂ ಹರಿ ಕೀರ್ತನೆ ಮಾಡುತ್ತಾ ವೈಕುಂಠ ಲೋಕಕ್ಕೆ ಹೊರಟು ಹೋದರು.

     ಶ್ರಾವಣ ಮಾಸದಲ್ಲಿ ಗೋಕರ್ಣನು ಪುನಃ ಹಾಗೆಯೇ ಸಪ್ತಾಹ ಕ್ರಮದಿಂದ ಕಥೆ ಹೇಳಿದನು.  ಅದೇ ಶ್ರೋತೃಗಳು ಅದನ್ನು ಮತ್ತೆ‌ ಕೇಳಿದರು.   ಆಗ ಕೊನೆಯಲ್ಲಿ ಅಲ್ಲಿ ಭಕ್ತರಿಂದ ತುಂಬಿದ ವಿಮಾನಗಳಿಂದೊಡಗೂಡಿ ಭಗವಂತನು ಪ್ರಕಟನಾದನು.   ಎಲ್ಲೆಡೆ ಜಯ-ಜಯಕಾರ ನಡೆದು, ನಮಸ್ಕಾರಗಳ ಧ್ವನಿಗಳು ತುಂಬಿ ಹೋದವು.  ಭಗವಂತನು ಹರ್ಷಿತನಾಗಿ ತನ್ನ ಪಾಂಚಜನ್ಯವನ್ನು ಊದತೊಡಗಿದನು.  ಅವನು ಗೋಕರ್ಣನನ್ನು ಆಲಿಂಗಿಸಿಕೊಂಡು ತನ್ನಂತೆಯೇ ಮಾಡಿದನು.  ಅವನು ಕ್ಷಣಾರ್ಧದಲ್ಲಿ ಬೇರೆ ಎಲ್ಲ ಶ್ರೋತೃಗಳನ್ನು ಮೇಘಶ್ಯಾಮವರ್ಣ, ರೇಶ್ಮೆ ಪೀತಾಂಬರ, ಕಿರೀಟ, ಕುಂಡಲಾದಿಗಳಿಂದ ವಿಭೂಷಿತಗೊಳಿಸಿದನು.  ಆ ಊರಿನಲಿದ್ದ ನಾಯಿಗಳಿಂದ, ಚಾಂಡಾಲರವರೆಗಿನ ಜೀವಿಗಳೆಲ್ಲರನ್ನೂ ಗೋಕರ್ಣನ ಕೃಪೆಯಿಂದ ವಿಮಾನಗಳಲ್ಲಿ ಹತ್ತಿಸಿಕೊಳ್ಳಲಾಯಿತು.  ಯೋಗಿಗಳು ತಲುಪುವ ಭಗವದ್ಧಾಮಕ್ಕೆ ಅವರೆಲ್ಲರನ್ನೂ ಕಳಿಸಿಕೊಡಲಾಯಿತು.  ಹೀಗೆ ಭಕ್ತವತ್ಸಲ ಭಗವಾನ್ ಶ್ರೀಕೃಷ್ಣನು ಕಥಾಶ್ರವಣದಿಂದ ಪ್ರಸನನ್ನನಾಗಿ, ಗೋಕರ್ಣನನ್ನು ಜೊತೆಗೆ ಕರೆದುಕೊಂಡು ಗ್ವಾಲಬಾಲಕರ ಪ್ರಿಯವಾದ ಗೋಲೋಕಕ್ಕೆ ಹೊರಟು ಹೋದನು.  ಯಾವ ಲೋಕದಲ್ಲಿ ಸೂರ್ಯ-ಚಂದ್ರ ಸಿದ್ಧರೂಕೂಡ ಎಂದೂ ತಲುಪಲಾರರೋ, ಅಲ್ಲಿಗೆ ಅವರೆಲ್ಲರೂ "ಶ್ರೀಮದ್ಭಾಗವತ" ಶ್ರವಣದಿಂದ ಹೊರಟು ಹೋದರು. 

ನಾರದರೇ, ಸಪ್ತಾಹ ಯಜ್ಞದ ಮೂಲಕ ಕಥಾಶ್ರವಣ ಮಾಡುವುದರಿಂದ ಉಂಟಾಗುವ ಉಜ್ವಲವಾದ ಫಲವು ಸಂಚಿತವಾಗುತ್ತದೆ.  ಯಾರು ತಮ್ಮ ಕರ್ಣಪುಟದಿಂದ ಗೋಕರ್ಣನ ಮೂಲಕ ಹೇಳಿದ ಭಾಗವತ ಕಥೆಯ ಒಂದು ಅಕ್ಷರವನ್ನಾದರೋ ಪಾನಮಾಡಿದ್ದರೋ ಅವರಿಗೆ ಮತ್ತೆ ಗರ್ಭವಾಸ ಉಂಟಾಗಲಿಲ್ಲ.   ಜನರು ಗಾಳಿ, ನೀರು, ಎಲೆ ತಿಂದುಕೊಂಡು ಶರೀರವನ್ನು ಸೊರಗಿಸಿ ಅನೇಕ ಕಾಲದವರೆಗೆ ಮಾಡಿದ ಘೋರತಪಸ್ಸಿನಿಂದ ಯೋಗಾಭ್ಯಾಸದಿಂದ ಪಡೆಯಲಾರದ ಗತಿಯನ್ನು ಅವರು ಸಪ್ತಾಹ ಶ್ರವಣದಿಂದಲೇ ಸಹಜವಾಗಿಯೇ ಪಡೆದುಕೊಳ್ಳುತ್ತಾರೆ.  ಈ ಪವಿತ್ರ ಇತಿಹಾಸದ ಪಾರಾಯಣೆಯನ್ನು ಚಿತ್ರಕೂಟದಲ್ಲಿ ವಿರಾಜಮಾನ ಮುನೀಶ್ವರ ಶಾಂಡಿಲ್ಯರೂ ಬ್ರಹ್ಮಾನಂದದಲ್ಲು ಮಗ್ನರಾಗಿ ಮಾಡುತ್ತಿರುತ್ತಾರೆ.  ಈ ಕಥೆಯು ತುಂಬಾ ಪವಿತ್ರವಾಗಿದೆ.  ಒಮ್ಮೆ ಶ್ರವಣದಿಂದಲೇ ಸಮಸ್ತ ಪಾಪರಾಶಿಯನ್ನ ಸುಟ್ಟು ಬಿಡುತ್ತದೆ.  ಇವನ್ನು ಶ್ರಾದ್ಧದಲ್ಲಿ ಪಾರಾಯಣ ಮಾಡಿದರೆ ಇದರಿಂದ ಪಿತೃಗಳಿಗೆ ತುಂಬಾ ತೃಪ್ತಿಯಾಗುತ್ತದೆ.  ಪ್ರತಿ ದಿನವೂ ಪಾರಾಯಣ ಮಾಡುವುದರಿಂದ ಮೋಕ್ಷವು ಪ್ರಾಪ್ತಿಯಾಗುತ್ತದೆ.

                      -:ಶ್ರೀಕೃಷ್ಣಾರ್ಪಣಮಸ್ತು:-

ಬರಹ:- ಗಣೇಶ್ ಗೋಸಾವಿ...

No comments:

Post a Comment