Monday, 16 December 2019

ಶ್ರೀ ಕೃಷ್ಣ ಪರಮಾತ್ಮನ ನವಿಲು ಗರಿ

ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ ಶ್ರೀ ಕೃಷ್ಣನ ಅವತಾರವೂ ಕೂಡಾ ಒಂದು. 

ದ್ವಾಪರಯುಗದಲ್ಲಿ ಜನಿಸಿದ ಶ್ರೀಕೃಷ್ಣ ನು ಭುವಿಯ ಮೇಲೆ ಭಗವದ್ಗೀತೆಯನ್ನು ಮಾನವ ಕುಲ ಏಳಿಗೆಗಾಗಿ ಬೋಧಿಸಿದ.

 ಶ್ರೀ ಕೃಷ್ಣ ಪರಮಾತ್ಮನ ರೂಪ ನಯನ ಮನೋಹರ. ಮೇಘ ಶ್ಯಾಮನ ಮುಖಾರವಿಂದವನ್ನು ನೋಡಿದಾಗ, ಆತನ ಶಿರದಲ್ಲಿ, ಕಿರೀಟದಲ್ಲಿ ಇರುವ ಸುಂದರ ನವಿಲುಗರಿಯು ಎಲ್ಲರ ಗಮನವನ್ನು ಸೆಳಯುತ್ತದೆ. 

ನವಿಲು ಬರಿಯ ಇಲ್ಲದೆ ಶ್ರೀ ಕೃಷ್ಣ ಪರಮಾತ್ಮನ ಅಲಂಕಾರ ಪೂರ್ಣವಾಗುವುದಿಲ್ಲ. ಹಾಗಾದರೆ ನವಿಲು ಗರಿಯನ್ನು ಸದಾ ಅಲಂಕರಿಸಿಕೊಳ್ಳುತ್ತಿದ್ದರ ಹಿಂದೆ ಇರುವ ಕಾರಣವನ್ನು ನಾವು ತಿಳಿಯಬೇಕಲ್ಲವೆ?

ತ್ರೇತಾಯುಗದಲ್ಲಿ ಒಮ್ಮೆ ಶ್ರೀ ರಾಮ ಚಂದ್ರನು ಒಮ್ಮೆ ಸುತ್ತಾಡಲು ಹೋದಂತಹ ಸಂದರ್ಭದಲ್ಲಿ ಕಾಡಿನ ದಾರಿಯಲ್ಲಿ ಒಂದು ನವಿಲುಗಳ ಸಮೂಹವು ಶ್ರೀ ರಾಮಚಂದ್ರನು ಬರುವ ದಾರಿಯನ್ನು ತಮ್ಮ ಗರಿಗಳಿಂದ ಶುಭ್ರಗೊಳಿಸಿದವಂತೆ. 

ನವಿಲುಗಳ ಆ ನಿಷ್ಕಲ್ಮಶ ಭಕ್ತಿಗೆ ಮೆಚ್ಚಿ, ಅಂದು ರಾಮನ ಕೊಟ್ಟ ವರದಿಂದಾಗಿಯೇ, ದ್ವಾಪರಯುಗದಲ್ಲಿ ನವಿಲು ಗರಿಯನ್ನು ಶ್ರೀ ಕೃಷ್ಣನು ಮುಡಿಯಲಿ ಧರಿಸಿದನೆಂದು ಕೆಲವು ಕಥೆಗಳಿವೆ. 

ಇನ್ನೂ ಕೆಲವು ಕಡೆ ಸೀತೆಯ ಕೋರಿಕೆ ತೀರಿಸಲು ಶ್ರೀ ರಾಮನು ಅಂದು ಕೊಟ್ಟ ಮಾತನ್ನು ನೆರವೇರಿಸಲು , ಕೃಷ್ಣಾವತಾರದಲ್ಲಿ ಆಕೆಗೆ ನವಿಲು ಗರಿ ಧರಿಸಿದನೆಂದೂ ಹೇಳುತ್ತಾರೆ.

ಇದಲ್ಲದೆ ಇನ್ನೂ ಅನೇಕ ನಂಬಿಕೆಗಳು ಇದರೊಂದಿಗೆ ಬೆರೆತಿವೆ. ಶ್ರೀ ಕೃಷ್ಣನು ಬಾಲ್ಯದಲ್ಲಿ ಒಮ್ಮೆ ಕಾಡಿನಲ್ಲಿ ಇಂಪಾದ ನಾದವನ್ನು ತನ್ನ ಕೊಳಲಿನಿಂದ ಹೊಮ್ಮಿಸಿದಾಗ ಆ ಸಂಗೀತ ಕೇಳಿ ಪಶು, ಪಕ್ಷಿಗಳು ಕುಣಿದಾಡಿದವಂತೆ. 

ಆಗ ನವಿಲಿನ ರಾಜ ಶ್ರೀ ಕೃಷ್ಣನಿಗೆ ನವಿಲು ಗರಿಯನ್ನು ಕಾಣಿಕೆಯಾಗಿ ನೀಡಿದನೆಂದು, ಶ್ರೀ ಕೃಷ್ಣನು ಅದನ್ನು ತನ್ನ ಕಿರೀಟದಲ್ಲಿ ಧರಿಸುವುದಾಗಿ ನವಿಲುಗಳಿಗೆ ಮಾತು ಕೊಟ್ಟನೆಂಬುದು ಕೂಡಾ ಪ್ರತೀತಿ. 

ಇದು ನವಿಲು ಗರಿಯನ್ನು ಧರಿಸುವ ಹಿಂದೆ ಇರುವ ಕಾರಣವಾದರೆ, ಈ ನವಿಲು ಗರಿಯಲ್ಲಿ ವಿಶೇಷ ಅರ್ಥವೇ ಅಡಗಿದೆ

ನವಿಲು ಗರಿಯಲ್ಲಿ ಗಾಢವಾದ ಹಾಗೂ ಹಗುರವಾದ ಎರಡೂ ರೀತಿಯ ಬಣ್ಣಗಳಿವೆ. ನಮ್ಮ ಜೀವನ ಕೂಡಾ ಇಂತಹ ಬಣ್ಣಗಳಿಂದಲೇ ತುಂಬಿದೆ. ಕೆಲವೊಮ್ಮೆ ಬಣ್ಣಗಳು ಹೊಳೆದರೆ , ಕೆಲವೊಮ್ಮೆ ಕಳೆಗುಂದುತ್ತದೆ. 

ಜೀವನದಲ್ಲಿ ಕೂಡಾ ಇದೇ ರೀತಿ ಒಮ್ಮೆ ಸುಖವಿದ್ದರೆ, ಮತ್ತೊಮ್ಮೆ ಕಷ್ಟ ಎದುರಾಗುತ್ತದೆ. ಆದರೆ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದೇ ಜೀವನ. 

ಅದೇ ನವಿಲು ಗರಿಯ ಮೂಲಕ ಶ್ರೀ ಕೃಷ್ಣನು ನಮಗೆ ನೀಡುವ ಒಂದು ಅರ್ಥಪೂರ್ಣ ಸಂದೇಶವಾಗಿದೆ

ಹಿಂದೂ ಧರ್ಮದಲ್ಲಿ ಪ್ರಾಣಿಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಿಂದೂ ಧರ್ಮದಲ್ಲಿ ನಾವು ಹಸುವನ್ನು ಪೂಜಿಸುತ್ತೇವೆ. 

ಏಕೆಂದರೆ ಹಸುವಿನ ಒಂದೊಂದು ಭಾಗದಲ್ಲಿಯೂ ದೇವತೆಗಳು ನೆಲಿಸಿದ್ದಾರೆ ಎಂಬ ನಂಬಿಕೆಯಿದೆ ಆದ್ದರಿಂದ ಗೋಮಾತೆಯನ್ನು ತಾಯಿಯ ಸಮಾನವಾಗಿ ನೋಡುತ್ತೇವೆ. 

ಇನ್ನೂ ಪ್ರತಿಯೊಂದು ದೇವಾಲಯಗಳಲ್ಲಿ ಆ ದೇವರಿಗೆ ತುಂಬಾ ಆಪ್ತವಾದ ಪ್ರಾಣಿ-ಪಕ್ಷಿಯ ಶಿಲ್ಪವಿರುತ್ತದೆ. 

ಉದಾರಣೆಗೆ ಗಣಪನ ಮೂರ್ತಿಯ ಪಕ್ಕ ಮೂಸಿಕ ಇರುತ್ತದೆ, ಶಿವನ ಪಕ್ಕ ನಂದಿ. ದೇವರು ತಮ್ಮವಾಹನವಾಗಿ ಪ್ರಾಣಿ, ಪ್ಕಷಿಗಳನ್ನು ಬಳಸುತ್ತಿದ್ದರು , ಈ ಕುರಿತಂತೆ ಅನೇಕ ಕಥೆಗಳು ಪುರಾಣದಲ್ಲಿದೆ. 

ಇಲ್ಲಿ ನಾವು ಕೆಲವು ಪ್ರಾಣಿ-ಪಕ್ಷಿಗಳ ಬಗ್ಗೆ ಹೇಳಿದ್ದೇವೆ. ಈ ಪ್ರಾಣಿಗಳನ್ನು ದೇವತೆಗಳು ತಮ್ಮ ವಾಹನವಾಗಿ ಬಳಸಿದ್ದಿರ ಹಿಂದಿನ ಸಂಕೇತವೇನು ಎಂದು ನೋಡೋಣ ಬನ್ನಿ: 

ಇಲಿ 
ಮೂಷಿಕ ಗಣಪನ ವಾಹನವಾಗಿದ್ದು ಶತ್ರುಗಳನ್ನು ನಾಶ ಪಡಿಸುವುದರ ಸಂಕೇತ ಈ ಪ್ರಾಣಿ ಎಂದು ಪುರಾಣದಲ್ಲಿ ಹೇಳಲಾಗಿದೆ.  

ನಂದಿ

 ಶಿವನ ವಾಹನ ನಂದಿಯಾಗಿದೆ. ಪ್ರತಿಯೊಂದು ಶಿವ ದೇವಾಲಯದಲ್ಲಿ ನಂದಿಯ ಶಿಲ್ಪ ಇರುತ್ತದೆ. ಶಿವ ಹಾಗೂ ನಂದಿಗೆ ಸಂಬಂಧಿಸಿದ ಅನೇಕ ಕಥೆಗಳು ಪುರಾಣದಲ್ಲಿದೆ. ನಂದಿ ಸಂತಾನ ಭಾಗ್ಯದ ಸಂಕೇತವಾಗಿದೆ.

 ಹುಲಿ

 ಹುಲಿ ದುರ್ಗಾಮಾತೆಯ ಹಾಗೂ ಅಯ್ಯಪ್ಪ ಸ್ವಾಮಿಯ ವಾಹನವಾಗಿದೆ. ದುರ್ಗಾಮಾತೆ ದುಷ್ಟರ ಸಂಹಾರಕ್ಕೆ ಹುಲಿಯ ಮೇಲೆ ಬರುತ್ತಿದ್ದಳು, ಅಯ್ಯಪ್ಪ ಸ್ವಾಮಿ ಹುಲಿಯ ಹಾಲನ್ನು ತನ್ನ ಮಲತಾಯಿಗೆ ಕೊಡಲು ಹುಲಿಯ ಮೇಲೆ ಬಂದ ಎಂಬ ಕಥೆ ಇದೆ. ಹುಲಿ ಕರುಣೆ, ಕೋಪ, ಪ್ರತಿಷ್ಠೆಯ ಸಂಕೇತವಾಗಿದೆ. 

ನವಿಲು

 ನವಿಲು ಸರಸ್ವತಿ ಹಾಗೂ ಸುಬ್ರಮಣ್ಣಯ ಸ್ವಾಮಿಯ ವಾಹನವಾಗಿದೆ. ನವಿಲು ಬಾಹ್ಯ ಸೌಂದರ್ಯಕ್ಕಿಂತ, ಆಂತರಿಕ ಸೌಂದರ್ಯ ಅವಶ್ಯಕ ಅನ್ನುವುದರ ಸಂಕೇತವಾಗಿದೆ. 

ಗೂಬೆ

 ಗೂಬೆ ಲಕ್ಷ್ಮಿ ದೇವಿಯ ವಾಹನವಾಗಿದೆ. ಗೂಬೆ ಆಧ್ಯಾತ್ಮಿಕ ಜ್ಞಾನದ ಸಂಕೇತವಾಗಿದೆ. ಗೂಬೆಯ ಕುರುಡತನ ಪ್ರಪಂಚದಲ್ಲಿ ಐಶ್ವರ್ಯದ ಮದದಲ್ಲಿ ಆಧ್ಯಾತ್ಮಿಕ ಜ್ಞಾನವನ್ನು ಮರೆಯಬಾರದು ಅನ್ನುವುದರ ಎಚ್ಚರಿಕೆಯಾಗಿದೆ. 

ಹಂಸಾ 

ಹಂಸಾ ಬ್ರಹ್ಮಾ ದೇವರ ವಾಹನವಾಗಿದೆ. ಹಂಸಾ ಹಾಲು ಹಾಗೂ ನೀರನ್ನು ಪ್ರತ್ಯೇಕಿಸುವ ಸಾಮರ್ಥ್ಯವಿದೆ. ಇದು ಜ್ಞಾನ ದ ಸಂಕೇತವಾಗಿದೆ. 

ಆನೆ 

ಆನೆ ಇಂದ್ರನ ವಾಹನವಾಗಿದೆ. ಇದು ಘನತೆ, ಶಕ್ತಿ, ಐಶ್ವರ್ಯ, ಪ್ರತಿಷ್ಠೆಯ ಸಂಕೇತವಾಗಿದೆ. 

ಮೊಸಳೆ 

ಮೊಸಳೆ ವರುಣಾ ದೇವತೆಯ ವಾಹನವಾಗಿದೆ. ಮೊಸಳೆ ಘನತೆ, ಶಕ್ತಿ, ವೇಗ, ಧೈರ್ಯ, ಮೋಸ ಇವುಗಳ ಸಂಕೇತವಾಗಿದೆ. 

ಕುದುರೆ 

ಕುದುರೆ ದೇವತೆ ಸೂರ್ಯನ ವಾಹನವಾಗಿದೆ. ಸೂರ್ಯ ಏಳು ಕುದುರೆಗಳಲ್ಲಿ ಸವಾರಿ ಮಾಡುತ್ತಾನೆ. ಕಾಮನ ಬಿಲ್ಲು ಇದರ ಸಂಕೇತವೆಂದು ಹೇಳಲಾಗುತ್ತಿದೆ. 

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

No comments:

Post a Comment