ಬನ್ನಿ ಹಾಗಾದರೆ ಹಬ್ಬ-ಹರಿದಿನ, ಪೂಜೆ-ಹವನ ಮುಂತಾದ ದೇವಕಾರ್ಯಗಳಿರುವಾಗ ಅಡಿಗೆಯಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಗಳನ್ನು ಬಳಸುವಂತಿಲ್ಲ. ಇದರ ಹಿನ್ನಲೆಯನ್ನು ತಿಳಿಯೋಣ
ನಮ್ಮ ಪುರಾಣಗಳಲ್ಲಿ ‘ ಸಮುದ್ರ ಮಂಥನ’ ಪ್ರಸಂಗ ಸಾಮಾನ್ಯವಾಗಿ ನಿಮಗೆಲ್ಲ ಗೊತ್ತಿರುವ ವಿಷಯ. ಸಮುದ್ರ ಮಂಥನ ಕಾಲದಲ್ಲಿ ಹಲವಾರು ವಸ್ತುಗಳು ಸಮುದ್ರದಿಂದ ಉದ್ಬವಿಸುತ್ತವೆ. ಅವುಗಳಲ್ಲಿ ಒಂದಾದ ಅಮೃತ ಕಳಶದೊಂದಿಗೆ ಉದ್ಬವಿಸುತ್ತದೆ. ಹೀಗೆ ಉದ್ಬವಿಸಿದ ಅಮೃತವನ್ನು ಹಂಚಿಕೊಳ್ಳುವುದಕ್ಕೆ ದೇವತೆಗಳು ಮತ್ತು ರಾಕ್ಷರ ನಡುವೆ ಘೋರ ಯುದ್ಧ ನಡೆಯುತ್ತದೆ. ಆಗ ಅಮೃತ ಕಳಶವನ್ನು ಗರುಡನು ತೆಗೆದು ಕೊಂಡು ಹೋಗುತ್ತಾನೆ. ಆಗ ದೇವತೆಗಳು ನಾರಾಯಣನನ್ನು ಪ್ರಾರ್ಥಿಸಲು ನಾರಾಯಣನು ಮೋಹಿನಿ ರೂಪದಲ್ಲಿ ಬಂದು ಅಸುರರ ಕಣ್ಣು ತಪ್ಪಿಸಿ ದೇವತೆಗಳಿಗೆ ಅಮೃತವನ್ನು ಹಂಚುತ್ತಾಳೆ.
ಇದನ್ನರಿತ ಅಸುರ ರಾಹುಕೇತು ವೇಷ ಮರಸಿಕೊಂಡು ದೇವತೆಗಳ ಸಾಲಿನಲ್ಲಿ ಕುಳಿತು ಅಮೃತವನ್ನು ಪಡೆಯುತ್ತಾರೆ. ಇದನ್ನು ನೋಡಿದ ಸೂರ್ಯ ಚಂದ್ರರು ನಾರಾಯಣನಿಗೆ ಈ ವಿಷಯ ತಿಳಿಸಲು ಅವನು ರಾಹುವಿನ ತಲೆಯನ್ನು ಕತ್ತರಿಸುತ್ತಾನೆ. ಆದರೆ ಕುಡಿದ ಅಮೃತವು ರಾಹುವಿನ ಗಂಟಲಿನಿಂದ ಇಳಿದಿದ್ದರಿಂದ ರಾಹುವು ಸಾಯುವುದಿಲ್ಲ. ತಲೆ ಮಾತ್ರ ಇರುವ ದೇಹವನ್ನು ರಾಹು ಎಂದು ತಲೆ ಇಲ್ಲದ ದೇಹವನ್ನು ಕೇತುವೆಂದು ಕರೆಯುತ್ತಾರೆ. ಹೀಗೆ ಅವರ ಶಿರ ಕತ್ತರಿಸುವಾಗ ಅವರ ಬಾಯಲ್ಲಿದ್ದ ಅಮೃತ ಬಿಂದುವಿನಿಂದ ಈರುಳ್ಳಿ ಮತ್ತು ಬೆಳ್ಳುಳ್ಳಿ ಹುಟ್ಟಿಕೊಂಡವು.
ಹೀಗೆ ಅಮೃತ ಬಿಂದುವಿನಿಂದ ಹುಟ್ಟಿಕೊಂಡ ಈರುಳ್ಳಿ ಹಾಗೂ ಬೆಳ್ಳುಳ್ಳಿ ರಾಕ್ಷಸರ ಬಾಯಿಯ ಎಂಜಲೂ ಸೇರಿದ್ದರಿಂದ ದುರ್ಗಂಧ, ಹಾಗೂ ಅಪವಿತ್ರವೆಂದು ಇದನ್ನು ತಾಮಸಿಕ ಆಹಾರದ ಗುಂಪಿಗೆ ಸೇರಿಸಲಾಗಿದೆ. ಹಾಗಾಗಿ ದೇವಕಾರ್ಯಗಳಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಸೇವನೆ ವರ್ಜ್ಯವಾಗಿದೆ. ನಾವು ತಿನ್ನುವ ಆಹಾರ ನಮ್ಮ ಸ್ವಭಾವವನ್ನು ನಿರ್ಧರಿಸುತ್ತದೆ. ಸಾತ್ವಿಕ ಆಹಾರಗಳನ್ನು ಸೇವಿಸಿದರೆ ಸಾತ್ವಿಕರಾಗುತ್ತೇವೆ. ತಾಮಸಿಕ ಆಹಾರವನ್ನು ಸೇವಿಸಿದರೆ ತಾಮಸೀಪ್ರವೃತ್ತಿ ಬೆಳೆಯುತ್ತದೆ. ತಾಮಸಿಕ ಆಹಾರವನ್ನು ಆದಷ್ಟು ವರ್ಜಿಸುವಂತೆ ಆಹಾರನಿಯಮಗಳು ತಿಳಿಸುತ್ತವೆ.
ಈ ಕುರಿತು ಇನ್ನೊಂದು ಕಥೆಯಿದೆ.
ಪುರಾಣದ ಕಾಲದಲ್ಲಿ ತ್ರಿಶಂಕು ಮಹರಾಜ ಸಶರೀರವಾಗಿ ಸ್ವರ್ಗಕ್ಕೆ ಹೋಗಲು ಬಯಸುತ್ತಾನೆ. ಆಗ ರಾಜರ್ಶಿ ವಿಶ್ವಾಮಿತ್ರ ತನ್ನ ತಪೋಬಲದಿಂದ ಆತನನ್ನು ಸ್ವರ್ಗಕ್ಕೆ ಸಶರೀರವಾಗಿ ಕಳಿಸುತ್ತಾನೆ. ಅಲ್ಲಿ ಇಂದ್ರ ಮತ್ತು ಸ್ವರ್ಗ ದೂತರು ಇಲ್ಲಿಗೆ ಆತ್ಮಗಳು ಬರಲು ಅಷ್ಟೇ ಅವಕಾಶ ಯಾರೂ ಸಶರೀರವಾಗಿ ಬರುವಂತಿಲ್ಲ ಎಂದು ಕೆಳಕ್ಕೆ ತಳ್ಳಿಬಿಡುತ್ತಾರೆ. ಆಗ ವಿಶ್ವಾಮಿತ್ರ ಅವನನ್ನು ಮಧ್ಯದಲ್ಲಿಯೇ ತಡೆದು ಅವನಿಗಾಗಿ ಒಂದು ಸ್ವರ್ಗ ನಿರ್ಮಿಸುತ್ತಾನೆ. ಅಲ್ಲಿ ತ್ರಿಶಂಕುವಿಗಾಗಿ ಬೆಳೆದ ತರಕಾರಿಗಳು ಈರುಳ್ಳಿ, ಬೆಳ್ಳುಳ್ಳಿ, ಬದನೆಕಾಯಿ, ಟೊಮ್ಯಾಟೊ ಮೂಲಂಗಿ ಇತ್ಯಾದಿ . ಅವು ಮನುಷ್ಯ ನಿರ್ಮಿತ ದೈವನಿರ್ಮಿತವಲ್ಲ ಎಂಬ ಕಾರಣಕ್ಕಾಗಿ ದೇವತಾಕರ್ಯಗಳಲ್ಲಿ, ಈ ತರಕಾರಿಗಳನ್ನು ಬಳಸುವುದಿಲ್ಲ.
ಅಮೃತ ಬಿಂದುವಿನಿಂದ ಹುಟ್ಟಿಕೊಂಡ ಈರುಳ್ಳಿ ಹಾಗೂ ಬೆಳ್ಳುಳ್ಳಿಗೆ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ. ಅತಿಯಾದರೆ ಅಮೃತವೂ ವಿಷವೆಂಬಂತೇ ಈರುಳ್ಳಿ ಹಾಗೂ ಬೆಳ್ಳುಳ್ಳಿಗಳ ಅತಿಯಾದ ಸೇವನೆ ಒಳ್ಳೆಯದಲ್ಲ.
No comments:
Post a Comment