Saturday, 30 May 2020

ದೀಪಾವಳಿ ವಿಶೇಷ

ದೀಪಾವಳಿ ವಿಶೇಷ 

ಭಾರತ ದೇಶದಲ್ಲಿ ಅನಾದಿ  ಕಾಲದಿಂದಲೂ  ಅನೇಕ ಹಬ್ಬಗಳ ಆಚರಣೆಗಳು ರೂಢಿಯಲ್ಲಿವೆ.. ದಸರಾ ಹಬ್ಬದ ನಂತರದ 15 ದಿನಗಳ ಅವಧಿಯಲ್ಲಿ ಬರುವ ಹಬ್ಬವೇ  ದೀವಳಿಗೆ ಹಬ್ಬ.. ಈ ಹಬ್ಬದ  ಆಚರಣೆಗಳು  ಸಂತೋಷ ತರುವುದು..

ಜಲಪೂರ್ಣ ತ್ರಯೋದಶಿ 

ಈ ದಿನದ  ಮಹತ್ವ ಎಂದರೆ,  ಒಂದೆರಡು ಕೊಡ or ಬಿಂದಿಗೆಯಲ್ಲಿ ನೀರು ತುಂಬಿ,  ಅದಕ್ಕೆ ಅರಿಶಿನ  ಕುಂಕುಮದಿಂದ ಸಿಂಗರಿಸಿ ಪೂಜೆ ಮಾಡುವುದು,  ತುಪ್ಪದ  ದೀಪ ಬೆಳಗಿ,  ಅನ್ನ  ಪಾಯಸದ ನೈವೇದ್ಯ  ಮಾಡಿ,  ಗಂಗೆಗೇ  ಪೂಜೆ ಸಲ್ಲಿಸಿ ಇಡುವುದು..
ಮಾರನೇ  ಬೆಳಿಗ್ಗೆ ಇದೇ  ನೀರನ್ನು  ಸ್ನಾನಕ್ಕೆ  ಉಪಯೋಗ ಮಾಡುವುದು..ಸಂಜೆ ಸೂರ್ಯಾಸ್ತದ ನಂತರ ಅಪಮೃತ್ಯು ಬಾರದಿರಲಿ ಎಂದು  ದಕ್ಷಿಣ ದಿಕ್ಕಿಗೆ ದೀಪ ಹಚ್ಚಿ,  ಯಮದೇವಗೆ ಅಪಮೃತ್ಯುವಿನಿಂದ ಪಾರು ಮಾಡು ಎಂದು  ಪ್ರಾರ್ಥನೆ ಸಲ್ಲಿಸುವುದು... 

ನರಕ  ಚತುರ್ದಶಿ 

ಈ ದಿನದ ವಿಶೇಷ ಎಂದರೆ ಶ್ರೀ ಕೃಷ್ಣನು ನರಕಾಸುರ ಎಂಬ ರಕ್ಕಸನನ್ನು ಕೊಂದು,  ಅವನ ಅಧೀನದಲ್ಲಿದ್ದ ಕನ್ಯೆಯರನ್ನು ಬಿಡಿಸಿದ..  ಈ ದಿನ ತೈಲಾಭ್ಯಂಗ ಸ್ನಾನ ಮಾಡುವವರಿಗೆ ನರಕದ ಬಾಧೆ ತಟ್ಟದಿರಲಿ ಎಂದು ವರ ಕೇಳಿದ ಆ ಅಸುರ.. ರುಕ್ಮಿಣೀದೇವಿ ಶ್ರೀ ಕೃಷ್ಣನಿಗೆ ಆರತಿ ಎತ್ತಿ ಅರಮನೆಗೆ  ಸ್ವಾಗತಿಸಿ ತೈಲಾಭ್ಯಂಗ ಮಾಡಿಸುತ್ತಾಳೆ.. 

ಈ ಶುಭದಿನದಂದು ಎಲ್ಲರೂ ನಕ್ಷತ್ರಗಳು ಕಾಣುವ ವೇಳೆಯಲ್ಲಿ  ಅಂದರೆ ನಸುಕಿನ ಜಾವ 4 ಗಂಟೆಗೆ ಎದ್ದು ಪರಿಸರ ಶುದ್ದಿ ಮಾಡಿ ಬಾಗಿಲಿಗೆ ರಂಗೋಲಿ ಇಟ್ಟು,  ತುಳಸಿದೇವಿ ಮತ್ತು ದೇವರ ಕೋಣೆಯಲ್ಲಿ ದೀಪ ಬೆಳಗಿಸಿ, ಎಲ್ಲರೂ ಹೊಸ ವಸ್ತ್ರ ಧರಿಸಿ ಆರತಿ ಮಾಡಬೇಕು.. 

ಮನೆಯಲ್ಲಿ  ಪುರುಷರು,  ಹಿರಿಯರು, ಮಕ್ಕಳು ಎಲ್ಲರಿಗೂ ಮನೆಯ  ಹೆಣ್ಣುಮಕ್ಕಳು  ಆರತಿ ಎತ್ತಿ, ಚಿನ್ನದ ಉಂಗುರವನ್ನು ಕೊಬ್ಬರಿ ಎಣ್ಣೆಯಲ್ಲಿ ಅದ್ದಿ ಎಣ್ಣೆ ಹಚ್ಚಬೇಕು,,, ಆಮೇಲೆ ಎಲ್ಲರೂ ಅಭ್ಯಂಗ ಸ್ನಾನ ಮಾಡಬೇಕು 

ಅಮಾವಾಸ್ಯ 

ಅಮಾವಾಸ್ಯದಂದು ಮನೆಯನ್ನು ತಳಿರು ತೋರಣ ದೀಪಗಳಿಂದ  ಅಲಂಕರಿಸಿ,  ಲಕ್ಷ್ಮೀ ಕಟಾಕ್ಷ ಪಡೆಯಲು ವಿಷ್ಣು ಸಹಿತ  ಮಹಾಲಕ್ಷ್ಮೀದೇವಿಯ  ಪೂಜೆ ಮಾಡಬೇಕು..ಇದನ್ನು ಕುಬೇರ ಲಕ್ಷ್ಮೀ ಪೂಜೆ ಎಂತಲೂ ಕರೆಯುತ್ತಾರೆ... ಅಂಗಡಿ ಮುಂಗಟ್ಟುಗಳನ್ನು  ವಿವಿಧ ದೀಪಗಳಿಂದ ಅಲಂಕರಿಸಿ,  ಮಹಾಲಕ್ಷ್ಮೀ ಮತ್ತು ಸರಸ್ವತಿ ದೇವಿಯರ ಪೂಜೆ ಮಾಡುತ್ತಾರೆ,, ತಮ್ಮ ವ್ಯಾಪಾರ ವ್ಯವಹಾರ  ಅಭಿವೃದ್ಧಿ ಆಗಲೆಂದು ಪ್ರಾರ್ಥನೆ ಸಲ್ಲಿಸುತ್ತಾರೆ 

ಬಲಿಪಾಡ್ಯ

ಈ ದಿನ ಬಲೀಂದ್ರ ತನ್ನ ರಾಜ್ಯವನ್ನು ನೋಡಲು ಭುವಿಗೆ ಬರುವನೆಂದು ಮನೆಯ ಮುಂದೆ ಸುಂದರ ರಂಗೋಲಿ ಇಟ್ಟು ದೀಪಗಳಿಂದ ಅಲಂಕಾರ ಮಾಡಿ  ಬಲಿಂದ್ರನಿಗೆ ಪೂಜೆ ಸಲ್ಲಿಸಿ  ಸಂತೋಷ್ ಪಡುತ್ತಾರೆ.. 

ಅಲ್ಲದೆ ಸಗಣಿ or ಮಣ್ಣಿನಲ್ಲಿ  ಪಾಂಡವರ ಬೊಂಬೆಗಳನ್ನು ಮಾಡಿ ಉತ್ತರಣೆ ಗೆಲ್ಲಿನಿಂದ ಸಿಂಗರಿಸಿ ಪೂಜೆ ಮಾಡುತ್ತಾರೆ.. 

ಭಾವಬಿದಿಗೆ 

ಈ ದಿನದ ವಿಶೇಷ ಎಂದರೆ,  ಯಮನ ತಂಗಿ ಯಮುನೆ, ಅವನನ್ನು  ಮನೆಗೆ ಆಹ್ವಾನಿಸಿ,  ಆತಿಥ್ಯ ನೀಡಿದಳಂತೆ.. ಈ ದಿನ  ಅಣ್ಣ  ತಮ್ಮಂದಿರನ್ನು ಮನೆಗೆ ಕರೆದು ಭೋಜನ ಮಾಡಿಸಿ  ಕೈಲಾದ ಉಡುಗೊರೆ ಕೊಟ್ಟು  ಆರತಿ ಮಾಡಿ, ಅವರನ್ನು ಸಂತೋಷ್ ಪಡಿಸಬೇಕು.. ಈ ಆಚರಣೆಯಿಂದ ಅಣ್ಣ ತಂಗಿಯರ ಸಂಬಂಧ ಗಟ್ಟಿಗೊಳ್ಳುತ್ತೆ, ತವರಿನ ಬಾಂಧವ್ಯ  ಮೊದಲಿನ ಹಾಗೇ ಉಳಿಯುತ್ತೆ... 

ಅಕ್ಕನ ತದಿಗೆ 

ಈ ದಿನದ ವಿಶೇಷ ಅಂದ್ರೆ ಅಕ್ಕ  ತಂಗಿಯರನ್ನು ಅಣ್ಣ ತಮ್ಮಂದಿರು ಮನೆಗೆ ಆಹ್ವಾನಿಸಿ,  ಆತಿಥ್ಯ ನೀಡುತ್ತಾರೆ.  ಹೆಣ್ಣುಮಕ್ಕಳು ತಾವು ಹುಟ್ಟಿ ಬೆಳೆದ ತವರಿಗೆ ಹೋಗಲು ಬಹಳ ಕಾತುರರಾಗಿರುತ್ತಾರೆ.. ತವರೂರು ಎಂದರೆ ಅವರಿಗೆ ಅದೇನೋ ಹೇಳಿಕೊಳ್ಳಲಾಗದಷ್ಟು  ಸಂತೋಷ.   ತವರಿಗೆ ಬಂದ ಅಕ್ಕ ತಂಗಿಯರಿಗೆ  ಅವರಿಗಿಷ್ಟವಾದ ಖಾದ್ಯ ನೀಡಿ, ಉಡುಗೊರೆ ಕೊಟ್ಟು ಅವರನ್ನು ಸಂತೋಷ ಪಡಿಸುತ್ತಾರೆ 

ಅಮ್ಮನ ಚೌತಿ 

ಇಂದು ಅಮ್ಮನ ಉಪಕಾರ ನೆನೆಯುವ  ದಿನ.  ಅಮ್ಮನ  ಋಣ  ಎಂದಿಗೂ ತೀರಿಸಲಾಗದು.. ಅಮ್ಮನಿಗೆ ಆರತಿ ಮಾಡಿ, ಅವಳಿಗೆ  ಇಷ್ಟದ ಉಡುಗೊರೆ ಕೊಟ್ಟು  ಸಂತೋಷಪಡಿಸುವ ದಿನ 

ಹೀಗೇ ಸತತವಾಗಿ ಒಂದು ವಾರ ಕಾಲದ ಆಚರಣೆ ಈ ದೀಪಾವಳಿ ಹಬ್ಬ...

ಎಲ್ಲರೂ ಬಂಧು ಬಾಂಧವರಿಂದೊಡಗೂಡಿ 
ದೀಪಾವಳಿ ಹಬ್ಬ ಆಚರಿಸೋಣ.. 
ಸರ್ವರಿಗೂ  ದೀವಳಿಗೆ ಹಬ್ಬದ  ಹಾರ್ದಿಕ  ಶುಭೇಚ್ಛೆಗಳು.. 

✍️ ರೇಖಾ. ಮುತಾಲಿಕ್ 
🌹🌹🌸🌸🌺🌺🌷🌷🙏🏻🙏🏻🙏🏻🙏🏻🙏🏻🙏🏻

No comments:

Post a Comment