Tuesday, 26 May 2020

ಕಲಿಗಾಲದಲ್ಲಿ ದೇವರು ಬರುವುದಿಲ್ಲವೇಕೆ...!??


ಯುಗ-ಯುಗಗಳು ಕಳೆದು ಭೂಮಿಗೆ ಲಕ್ಷಕೋಟಿ ವರ್ಷಗಳೇ ಆಗಿವೆ. ಭೂಮಿಯ ಸೃಷ್ಟಿಯೇ ವಿಚಿತ್ರ. ಪಂಚಭೂತಗಳಾದ ನೀರು, ಮಣ್ಣು, ಬೆಂಕಿ, ಭೂಮಿ, ಆಕಾಶ ಇವುಗಳಿಗೆ ಅಂತ್ಯವೇ ಇಲ್ಲ. ಎಂದು ಈ ಭೂಮಿ ಕಣ್ಮರೆಯಾಗುತ್ತದೆಯೋ ಅಂದೆ ಈ ಪಂಚಭೂತಗಳು ಕೂಡ ಮರೆಯಾಗುತ್ತವೆ. ಸೃಷ್ಟಿಯ  ಬಗ್ಗೆ ಹೇಳುತ್ತಾ ಹೋದಷ್ಟು ನೂರಾರು ಪ್ರಶ್ನೆಗಳು, ಕಾರಣಗಳು ಅನುಮಾನಗಳು ಹುಟ್ಟುತ್ತಾ ಹೋಗುತ್ತವೆ.  ಹಾಗೂ ಒಂದು ಸೃಷ್ಟಿಯಿದ್ದಂತೆ ಮತ್ತೊಂದಿಲ್ಲ.
ಮರ-ಗಿಡ, ಪ್ರಾಣಿ-ಪಕ್ಷಿ, ಜಲಚರಗಳು, ಮನುಷ್ಯರು, ಪರ್ವತಗಳು, ಸಾಗರಗಳು, ನದಿಗಳು,ಮರುಭೂಮಿ, ಅರಣ್ಯಗಳು, ಬಗೆ-ಬಗೆಯ ಹೂ,ಹಣ್ಣುಗಳು. ಈ ಎಲ್ಲಾ ಸೃಷ್ಟಿಯ ಹಿಂದೆ ಯಾರೋ ಒಬ್ಬ ಸೃಷ್ಟಿಕರ್ತ ಇದ್ದೇ ಇರುತ್ತಾನೆ‌.ಅವನನ್ನೇ ದೇವರು ಎನ್ನುತ್ತೇವೆ. ಹಾಗಾಗಿಯೇ‌ ಭಾರತದಲ್ಲಿ ಪುರಾತನ‌‌ ಕಾಲದಿಂದಲೂ ನಿತ್ಯ ಪೂಜೆಗಳನ್ನು‌ ಮಾಡುತ್ತಾ ಮೂರ್ತಿ ರೂಪದಲ್ಲಿ ಅವನನ್ನೂ ಪೂಜಿಸುತ್ತಾ ದೇಗುಲಗಳನ್ನು  ಅನೇಕ ಪ್ರಖ್ಯಾತ ರಾಜ-ಮಹಾರಾಜರು ನಿರ್ಮಿಸಿದ್ದಾರೆ.

ಆದರೇ ಆ ದೇವರು ಈ ಕಲಿಗಾಲದಲ್ಲಿ ನಾವು ಎಷ್ಟೇ ಪೂಜೆ, ಹೋಮ, ಹವನಗಳನ್ನು ಮಾಡಿದರೂ ನಮ್ಮ ಬಳಿಗೆ ಬರುವುದಿಲ್ಲ. ಏಕೆಂದರೇ ಈ ಕಲಿಗಾಲ ಪಾಪಿಗಳ ಕಾಲ. ಪಾಪವನ್ನೇ ಮಾಡುವ, ಮಾಡಿಸುವ ಕಾಲ. ಮೊದಲು ದೇವರು ಮತ್ತು ರಾಕ್ಷಸರು ಮಾತ್ರ ಇದ್ದರೂ. ಒಳ್ಳೆಯ ಗುಣವುಳ್ಳವರನ್ನು ದೇವರು ಹಾಗೂ ಕೆಟ್ಟ ಗುಣವುಳ್ಳವರನ್ನು ರಾಕ್ಷಸರೆಂದು ಕರೆಯುತಿದ್ದರು.  ಆ ರಾಕ್ಷಸರ ಹೆಚ್ಚಿನ ಗುಣ ಮತ್ತು ದೇವರ ಅಲ್ಪಗುಣಗಳು ಸೇರಿ ಮನುಷ್ಯಾರಾಗಿ ಕಲಿಗಾಲದಲ್ಲಿ ಜನಿಸಿದ್ದೇವೆ. ಹೀಗಾಗಿಯೇ ನಮ್ಮ ಮನಸ್ಸು ಚಂಚಲವಾಗಿರುವುದು. ಮತ್ತು ಒಳ್ಳೆ ಕೆಲಸಗಳ ಬಿಟ್ಟು ಕೆಟ್ಟದರತ್ತಲೇ ಬೇಗ ಗಮನಕೊಡುವುದು. ಇದಕ್ಕೆಲ್ಲಾ ಕಾರಣ ಮನುಷ್ಯರ ಅಹಂಕಾರ, ಮದ, ಮತ್ಸರಗಳು ಮತ್ತು ಈ ಹಿಂದೆ ದುಷ್ಟರಾಗಿ ಮಾಡಿದ ಪಾಪ ಕರ್ಮಗಳು.  ಹಿಂದಿನ  ಜನ್ಮದ ಪಾಪ ಕರ್ಮದ ಫಲಗಳು ಈ ಜನ್ಮದಲ್ಲಿ ಹೆಚ್ಚಳವಾಗಿವೆ‌. ಹಾಗಾಗಿಯೇ ಮನುಷ್ಯ ಆಸೆಗಳ ದಾಸನಾಗಿ, ಕೊನೆಯಿಲ್ಲದೇ, ನೆಮ್ಮದಿಯಿಲ್ಲದೆ ಕೇವಲ ಭ್ರಮೆಯಲ್ಲಿಯೇ ಜೀವಿಸುತಿದ್ದಾನೆ. ಎಷ್ಟೇ ದೇವರ ಪೂಜೆ ಮಾಡಿದರೂ ಏನೆಲ್ಲಾ ಹೋಮ-ಹವನ ಮಾಡಿದರೂ ಕೇವಲ‌ ಇತರರ ಮುಂದೆ ತೋರಿಕೆಗಾಗಿಯೇ ವಿನಃ ಪರಮಾತ್ಮನ ಪ್ರೀತಿಗಾಗಿ ಅಲ್ಲ. 
ಕಾಮ-ಕ್ರೋಧಗಳು ಎಲ್ಲೆ ಮೀರುತ್ತಿವೆ. ಅನ್ಯಾಯ ಅತ್ಯಾಚಾರಗಳು ಅಸಂಖ್ಯವಾಗಿವೆ. ಭಕ್ತಿ, ಸತ್ಯ-ಧರ್ಮ, ದೇವರ ಆರಾಧನೆ ಪುಣ್ಯದ ಕೆಲಸಗಳು ಅಪರೂಪವಾಗಿವೆ. ಪ್ರಕೃತಿಯ ವೈಪರೀತ್ಯಗಳು ಹೆಚ್ಚಳವಾಗಿ, ವಾತಾವರಣವೇ ಕಲುಷಿತವಾಗಿದೆ. ಹಿಂದಿನ ಯುಗಗಳಾದ ಸತ್ಯಯುಗ, ತ್ರೇತಾಯುಗ,ದ್ವಾಪರಯುಗಗಳಲ್ಲಿ ಭಗವಂತ ತಾನೇ ಭೂಮಿಗೆ ಬಂದು ದುಷ್ಟರನ್ನ, ದೈತ್ಯರನ್ನ ಕೊಲ್ಲುತ್ತಿದ್ದ. ಹಾಗೂ ಭೂಮಿಯನ್ನ ಕಾಯುತ್ತಿದ್ದ. ಮತ್ಸ್ಯನಾಗಿ, ಕೂರ್ಮನಾಗಿ, ವರಾಹ, ನರಸಿಂಹನಾಗಿ, ವಾಮನನಾಗಿ, ಪರಶುರಾಮ,ರಾಮ, ಬಲರಾಮ,ಕೃಷ್ಣನಾಗಿ ಅವತಾರವನ್ನೆತ್ತಿ ಬಂದು ಈ ಭೂಮಿಯನ್ನು ಉದ್ದಾರ ಮಾಡಿದ್ದ ಹಾಗೂ ಎಲ್ಲೆಡೆಯೂ ದೇವರ ಸ್ತೋತ್ರಗಳು ಸದಾ ಕೇಳಿ ಬರುತಿದ್ದವು. ಧ್ಯಾನ, ಹೋಮಗಳು ನಿತ್ಯ ನಡೆಯುತಿದ್ದವು. ಅನೇಕ ಋಷಿಮುನಿಗಳು ವರ್ಷಗಟ್ಟಲೇ ಧೀರ್ಘ ತಪಸ್ಸು ಮಾಡುತಿದ್ದರು.  ಹಾಗಾಗಿ ಸತ್ಯವೆಂಬುದು, ಧರ್ಮವೆಂಬುದು ಸದಾ ಜೀವಿಸುತ್ತಿತ್ತು. ಆದರೇ ಈ ಕಲಿಗಾಲದಲ್ಲಿ ಅದೆಲ್ಲವೂ ಮಣ್ಣಾಗುತ್ತಾ ಹೋಗುತ್ತಿದೆ. ಸತ್ಯಕ್ಕೆ ಕಾಲವಿಲ್ಲದಂತಾಗಿದೆ. ಮೋಸ,ವಂಚನೆ,ಸುಳ್ಳುಗಳು ರುದ್ರತಾಂಡವವಾಡುತ್ತಿವೆ. ಇದೆಲ್ಲದರ ಮಧ್ಯೆಯೂ ಮನುಷ್ಯ ಕಷ್ಟ ಎಂದು ದೇವಸ್ಥಾನಗಳಿಗೆ ಹೋಗಿ, ದೇವರನ್ನ ಬೇಡಿದಾಗ ಅವನು ತಾನು ಬಾರದೇ  ಬೇರೆಯವರ ರೂಪದಲ್ಲಿ ಭಕ್ತರ ಕಷ್ಟವನ್ನು ತೀರಿಸುತ್ತಾನೆ. ಹಾಗಾಗಿಯೇ ನಾವು ಅವನನ್ನು ಕರುಣಾಮಯಿ ಎನ್ನುವುದು.

#ಶ್ರೀನಿ #Srini #Sriniwriteups

No comments:

Post a Comment